ಚಳಿಗಾಲದ ಅಧಿವೇಶನ ವೇಳೆ ಡಿಸೆಂಬರ್ 14ರಿಂದ 19ರವರೆಗೆ ಸಂಸತ್ನಿಂದ ಅಮಾನತ್ತಾದ ಪ್ರತಿಪಕ್ಷಗಳ 141 ಸಂಸದರಿಗೆ ಲೋಕಸಭೆಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಈ ಸುತ್ತೋಲೆಯ ಪ್ರಕಾರ, ಅಮಾನತುಗೊಂಡ ಸಂಸದರು, ಸಂಸತ್ ಭವನದ ಚೇಂಬರ್, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
Lok Sabha Secretariat issues circular barring suspended MPs from entering Parliament chamber, lobby, galleries
Read @ANI Story | https://t.co/oeTDAUWj5z#ParliamentSuspended #Circular #MPs #LokSabha pic.twitter.com/vsTLgdT4yw
— ANI Digital (@ani_digital) December 20, 2023
“ಅಮಾನತುಗೊಂಡ ಸಂಸದರು ಸಂಸತ್ ಭವನದ ಚೇಂಬರ್, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ. ಅವರು ಸದಸ್ಯರಾಗಿರುವ ಸಂಸದೀಯ ಸಮಿತಿಗಳ ಸಭೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅಮಾನತುಗೊಂಡವರ ಯಾವುದೇ ವಿಷಯಗಳು ಸಂಸತ್ನ ವ್ಯವಹಾರ ಪಟ್ಟಿಯಲ್ಲಿ ಇರುವುದಿಲ್ಲ” ಎಂದು ಲೋಕಸಭೆಯ ಕಾರ್ಯದರ್ಶಿಯ ಸುತ್ತೋಲೆ ಹೇಳಿದೆ.
“ಅಮಾನತು ಅವಧಿಯಲ್ಲಿ ಸಂಸದರು ಮಂಡಿಸಿದ ಯಾವುದೇ ಸೂಚನೆಗಳು ಸ್ವೀಕಾರಾರ್ಹವಲ್ಲ. ಸಮಿತಿಗಳ ಚುನಾವಣೆಯಲ್ಲಿ ಮತ ಹಾಕುವಂತಿಲ್ಲ. ಅಧಿವೇಶನದ ಉಳಿದ ಅವಧಿಗೆ ಸದನದ ಸೇವೆಯಿಂದ ಅಮಾನತುಗೊಂಡರೆ ಅಮಾನತು ಅವಧಿಯ ದೈನಂದಿನ ಭತ್ಯೆಗೆ ಅವರು ಅರ್ಹರಾಗಿರುವುದಿಲ್ಲ. ಏಕೆಂದರೆ, 1954 ರ ಭತ್ಯೆಗಳು ಮತ್ತು ಪಿಂಚಣಿಗಳ ಸಂಸತ್ತಿನ ಕಾಯ್ದೆ ಪ್ರಕಾರ, ಅಮಾನತುಗೊಂಡ ಸಂಸದರು ಕರ್ತವ್ಯದ ಸ್ಥಳದಲ್ಲಿ ಇರುವುದನ್ನು ಸೆಕ್ಷನ್ 2(ಡಿ) ಅಡಿಯಲ್ಲಿ ಕರ್ತವ್ಯದ ನಿವಾಸವೆಂದು ಪರಿಗಣಿಸಲಾಗುವುದಿಲ್ಲ” ಎಂದು ಸುತ್ತೋಲೆ ತಿಳಿಸಿದೆ.
ದೇಶವ್ಯಾಪಿ ಪ್ರತಿಭಟನೆ: ಮಲ್ಲಿಕಾರ್ಜುನ ಖರ್ಗೆ
ಸಂಸತ್ನಿಂದ ಅತ್ಯಧಿಕ ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಇಂಡಿಯಾ ಒಕ್ಕೂಟ ಡಿಸೆಂಬರ್ 22ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಸದರನ್ನು ಅಮಾನತು ಮಾಡಿರುವುದು ತಪ್ಪು. ಇದರ ವಿರುದ್ದ ನಾವು ಡಿ.22ರಂದು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತೇವೆ. ಸರ್ವಾಧಿಕಾರಿ ಧೋರಣೆಯ ವಿರುದ್ಧ ನಾವು ಹೋರಾಡುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 14ರಿಂದ 18ರವರೆಗೆ ಸಂಸತ್ತಿನ ಉಭಯ ಸದನಗಳಿಂದ ಒಟ್ಟು 141 ಸಂಸದರನ್ನು ಅಮಾನತು ಮಾಡಲಾಗಿದೆ.
ಡಿಸೆಂಬರ್ 14ರಂದು ರಾಜ್ಯಸಭೆಯ ಒಬ್ಬರು ಮತ್ತು ಲೋಕಸಭೆಯ 13 ಜನರು ಸೇರಿ ಒಟ್ಟು 14 ಸಂಸದರನ್ನು ಅಮಾನತು ಮಾಡಲಾಗಿತ್ತು. ಡಿ.18 ಸೋಮವಾರ ರಾಜ್ಯಸಭೆಯಿಂದ 45 ಮತ್ತು ಲೋಕಸಭೆಯಿಂದ 33 ಸಂಸದರು ಸೇರಿ 78 ಮಂದಿಯನ್ನು ಅಮಾನತು ಮಾಡಲಾಗಿತ್ತು. ಈ ಮೂಲಕ ಅಮಾನತ್ತಾದ ಒಟ್ಟು ಸಂಸದರ ಸಂಖ್ಯೆ 92 ಆಗಿತ್ತು. ನಿನ್ನೆ(ಡಿ.19) ಉಭಯ ಸದನಗಳಿಂದ 49 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಅಮಾನತ್ತಾದ ಸಂಸದರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.
ಡಿ.13ರಂದು ಸಂಸತ್ನಲ್ಲಿ ಸಂಭವಿಸಿದ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿದ್ದಕ್ಕೆ ಸ್ಪೀಕರ್ ಕ್ರಮ ಕೈಗೊಂಡಿದ್ದಾರೆ.
ಗೃಹ ಸಚಿವರ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳ ಬೇಡಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, “ಸಂಸತ್ತಿನ ಒಳಗಿನ ಭದ್ರತೆಯು ಸೆಕ್ರೆಟರಿಯೇಟ್ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರವು ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ಡಿ.13ರಂದು ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಮಾಡಿದ್ದರು. 2001ರ ಸಂಸತ್ ದಾಳಿಯ 22ನೇ ವರ್ಷದ ದಿನದಂದೇ ಈ ಭದ್ರತಾ ಲೋಪ ಸಂಭವಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 6 ಮಂದಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಂಸತ್ನಿಂದ ಮತ್ತೆ 49 ಸಂಸದರ ಅಮಾನತು: ಒಟ್ಟು ಸಂಖ್ಯೆ 141ಕ್ಕೆ ಏರಿಕೆ