ಚುನಾವಣಾ ಆಯೋಗಕ್ಕೆ ಎಸ್ಬಿಐ ಚುನಾವಣಾ ಬಾಂಡ್ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಮಾಹಿತಿ ಪ್ರಕಾರ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ 6 ತಿಂಗಳ ನಂತರ 30 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ಖರೀದಿಸಿದೆ.
ಕಳೆದ ವರ್ಷ ನವೆಂಬರ್ನಲ್ಲಿ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಸುದ್ದಿಯಲ್ಲಿತ್ತು. ಉತ್ತರಾಖಂಡದ ಸಿಲ್ಕ್ಯಾರಾ-ಬರ್ಕೋಟ್ ಸುರಂಗದೊಳಗೆ 41 ಕಾರ್ಮಿಕರು 17 ದಿನಗಳ ಕಾಲ ಸಿಕ್ಕಿಬಿದ್ದಿದ್ದರು. ಈ ಸುರಂಗದ ಕಾಮಗಾರಿಯನ್ನು ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ವಹಿಸಿಕೊಂಡಿತ್ತು.
ಒಟ್ಟಾರೆಯಾಗಿ, ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಮೂರು ವರ್ಷಗಳ ಅವಧಿಯಲ್ಲಿ 55 ಕೋಟಿ ರೂ.ವರೆಗಿನ ಬಾಂಡ್ಗಳನ್ನು ಖರೀದಿಸಿದೆ ಎಂದು ಮಾರ್ಚ್ 14ರಂದು ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಬಹಿರಂಗವಾಗಿದೆ. ನವಯುಗ ಇಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ ವಿಶಾಖಪಟ್ಟಣಂನಲ್ಲಿ ಸ್ಥಾಪನೆಯಾಗಿದ್ದು, ಹೈದರಾಬಾದ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ನವಯುಗವು ಐಟಿ ಇಲಾಖೆ ತನ್ನ ಕಚೇರಿಗಳ ಮೇಲೆ ದಾಳಿ ನಡೆಸಿದ ಆರು ತಿಂಗಳ ನಂತರ, ಏಪ್ರಿಲ್ 18, 2019ರಂದು ತಲಾ ರೂ 1 ಕೋಟಿ ಮುಖಬೆಲೆಯ 30 ಬಾಂಡ್ಗಳನ್ನು ಖರೀದಿಸಿದೆ.
ತೆರಿಗೆ ಉಲ್ಲಂಘನೆ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 2018ರ ಅಕ್ಟೋಬರ್ನಲ್ಲಿ ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿರುವ ನವಯುಗ ಕಚೇರಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. 2012ರಲ್ಲೂ ಕಂಪನಿ ಮೇಲೆ ದಾಳಿ ನಡೆಸಲಾಗಿತ್ತು. ಜುಲೈ 2018ರಲ್ಲಿ ‘ಕಂಪನಿಗಳ ರಿಜಿಸ್ಟ್ರಾರ್ ಅಧಿಕಾರಿಗಳು’ ಹೈದರಾಬಾದ್ನ ನವಯುಗದ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸುಮಾರು 47 ಸಂಸ್ಥೆಗಳು ಒಂದೇ ವಿಳಾಸದಲ್ಲಿ ನೋಂದಾಯಿಸಲ್ಪಟ್ಟಿರುವುದು ಬಯಲಾಗಿತ್ತು.
ನವಯುಗ ಅಕ್ಟೋಬರ್ 10, 2022ರಂದು ತಲಾ 1 ಕೋಟಿ ಮೌಲ್ಯದ 25 ಬಾಂಡ್ಗಳನ್ನು ಖರೀದಿಸಿದೆ. ತೆಲಂಗಾಣದ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆ ಮತ್ತು ಪೋಲಾವರಂ ಯೋಜನೆಯಲ್ಲಿ ಬ್ಯಾರೇಜ್ ನಿರ್ಮಾಣ ಸೇರಿದಂತೆ ದೇಶದಾದ್ಯಂತ ಕಂಪನಿಯು ಹಲವು ಸರ್ಕಾರಿ ಗುತ್ತಿಗೆಗಳನ್ನು ಪಡೆದುಕೊಂಡಿದೆ. ಸೆಪ್ಟೆಂಬರ್ 2019ರಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರವು ನವಯುಗಕ್ಕೆ ನೀಡಿದ್ದ 3,200 ಕೋಟಿ ರೂಪಾಯಿಗಳ ಪೋಲವರಂ ಗುತ್ತಿಗೆಯನ್ನು ರದ್ದುಗೊಳಿಸಿದೆ. ನವಯುಗವು ಅಸ್ಸಾಂನಲ್ಲಿ ಬ್ರಹ್ಮಪುತ್ರಕ್ಕೆ ಅಡ್ಡಲಾಗಿ ಧೋಲಾ-ಸಾಡಿಯಾ ಸೇತುವೆಯನ್ನು ನಿರ್ಮಿಸುತ್ತಿದೆ, ಇದು ಭಾರತದ ಅತಿ ಉದ್ದದ ನದಿ ಸೇತುವೆ ಎಂದು ಹೇಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 2017ರಲ್ಲಿ ಸೇತುವೆಯನ್ನು ಉದ್ಘಾಟಿಸಿದ್ದರು.
ಚುನಾವಣಾ ಬಾಂಡ್ಗಳ ಕುರಿತ ಮಾಹಿತಿ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಮಹತ್ವದ ವಿಷಯಗಳು ಬಹಿರಂಗಗೊಂಡಿತ್ತು. ಕೋಟ್ಯಾಂತರ ರೂಪಾಯಿಯ ಬಾಂಡ್ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪೆನಿಗಳು, ಅದಕ್ಕೆ ಪ್ರತಿಯಾಗಿ ಲಾಭ ಪಡೆದಿರುವುದು ಬಯಲಾಗಿತ್ತು.
ಇದನ್ನು ಓದಿ: 4,002 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ: ಯಾಕೆ?