’ರಾಜ್ಯದಲ್ಲಿ ಮುಂದನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲಿವೆ. ಆದರೂ ಜನ ಸಾಮಾನ್ಯರಿಗೆ ತೊಂದರೆಯಾಗಲು ಬಿಡುವುದಿಲ್ಲ. ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡುವುದಿಲ್ಲ” ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, “ಲಾಕ್ಡೌನ್ ಕಳೆದು ಹೋಗಿರುವ ನೀತಿ. ಸಾಂಕ್ರಾಮಿಕ ರೋಗದ ಬಗ್ಗೆ ಸ್ಪಷ್ಟತೆ ಇಲ್ಲದೆ ಇದ್ದಾಗ, ನಮಗೆ ಗೊತ್ತಿರದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರ ಅದು. ಆದರೆ, ಈಗ ನಮಗೆ 2 ವರ್ಷಗಳ ಅನುಭವವಿದೆ. ಸಾಂಕ್ರಾಮಿಕ ರೋಗದ ಸ್ವಭಾವ, ಒಬ್ಬರಿಗೆ ಪಾಸಿಟಿವ್ ಬಂದಾಗ ಯಾವ ಚಿಕಿತ್ಸೆ ಕೊಡಬೇಕು, ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಗೊತ್ತಿದೆ” ಎಂದಿದ್ದಾರೆ.
’ಈಗ ಕೊರೊನಾ ಮೂರನೇ ಅಲೆ ಬರ್ತಿದೆ. ನಾವು ಅಲೆ ಬಂದಿದೆ ಎಂದು ಅಲೆಗೆ ಎದುರಾಗಿ ಹೋಗಿಬೇಕಿಲ್ಲ. ಹೋರಾಡಬೇಕಿದೆ. ಬೆಂಗಳೂರಲ್ಲಿ ಪಾಸಿಟಿವಿಟಿ ರೇಟ್ ಜಾಸ್ತಿ ಇದೆ. ಇದು ಇನ್ನು ಜಾಸ್ತಿಯಾಗಲಿದೆ. ವೈರಾಣುವಿನ ಹರಡುವಿಕೆ ತಡೆಯುವುದು ಅಸಾಧ್ಯ’ ಎಂದಿದ್ದಾರೆ.
ಇದನ್ನೂ ಓದಿ: ಪಾದಯಾತ್ರೆ ತಡೆಯಲು ಗೃಹ ಸಚಿವರು ಮತ್ತೊಮ್ಮೆ ಹುಟ್ಟಿ ಬರಬೇಕು: ಡಿ.ಕೆ ಶಿವಕುಮಾರ್
’ಸೋಂಕು ಜಾಸ್ತಿಯಾದರೂ ಭಯಪಡಬೇಕಿಲ್ಲ. ನಾವು ರಾಜ್ಯದಲ್ಲಿ ಲಸಿಕಾ ಅಭಿಯಾನ ಸರಿಯಾಗಿ ಮಾಡಿರುವ ಕಾರಣ ಭಯ ಬೇಡ. ಸೋಂಕಿನ ತೀವ್ರತೆ ಅಷ್ಟಾಗಿ ಇರುವುದಿಲ್ಲ ಎಂದಿದ್ದಾರೆ ಆರೋಗ್ಯ ಸಚಿವ ಸುಧಾಕರ್.
ಲಾಕ್ಡೌನ್ ಕುರಿತು ಮಾಹಿತಿ ನೀಡಿರುವ ಸಚಿವ, “ರಾಜ್ಯದಲ್ಲಿ ಯಾವುದೇ ಲಾಕ್ಡೌನ್ ಜಾರಿ ಮಾಡುವ ಬಗ್ಗೆ ನಾವು ನಿರ್ಧಾರ ಮಾಡಿಲ್ಲ, ಲಾಕ್ಡೌನ್ ಬಗ್ಗೆ ಸ್ಪಷ್ಟತೆ ಇದೆ ನಮಗೆ. ಲಾಕ್ಡೌನ್ ಮಾಡುವುದಿಲ್ಲ. ಜನಸಾಮಾನ್ಯರಿಗೆ ತೊಂದರೆ ನೀಡದೇ ಜನರನ್ನು ರಕ್ಷಿಸುವ ಕೆಲಸಕ್ಕೆ ನಮ್ಮ ಸರ್ಕಾರ ಯತ್ನಿಸುತ್ತದೆ. ಲಾಕ್ಡೌನ್ ಜಾರಿ ಮಾಡುವುದಿಲ್ಲ” ಎಂದು ಸ್ಪಷ್ಟತೆ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 5,031 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಬೆಂಗಳೂರು ಒಂದರಲ್ಲೇ 4,324 ಪ್ರಕರಣಗಳಿವೆ.