ಇಸ್ರೇಲ್ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಭಾನುವಾರ (ಮಾ.31) ರಾತ್ರಿ ಜೆರುಸಲೆಮ್ನ ನೆಸೆಟ್ (ಇಸ್ರೇಲಿ ಸಂಸತ್ತು) ಎದುರು ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ದಿ ಗಾರ್ಡಿಯನ್ ಪ್ರಕಾರ, ಕಳೆದ ನಾಲ್ಕು ದಿನಗಳಿಂದ, ಇಸ್ರೇಲ್ನ ಟೆಲ್ ಅವಿವ್, ಜೆರುಸಲೆಮ್, ಹೈಫಾ, ಬೀರ್ ಶೆವಾ ಮತ್ತು ಸಿಸೇರಿಯಾದಲ್ಲಿ ನೆತನ್ಯಾಹು ವಿರುದ್ದ ಪ್ರತಿಭಟನೆಗಳು ನಡೆದಿವೆ.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ್ದಾಗ ಹಲವು ಮಂದಿಯನ್ನು ಕರೆದೊಯ್ದು ಒತ್ತೆಯಾಳಾಗಿಟ್ಟುಕೊಂಡಿವೆ. ಅವರನ್ನು ರಕ್ಷಿಸುವ ವಿಷಯದಲ್ಲಿ ನೆತನ್ಯಾಹು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿಲ್ಲ. ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನೆತನ್ಯಾಹು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕರಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಹಮಾಸ್ ವಶದಲ್ಲಿರುವವರ ಕುಟುಂಬಸ್ಥರೂ ಭಾಗವಹಿಸಿದ್ದರು.
“ಒತ್ತೆಯಾಳುಗಳ ವಿಚಾರ ಎಲ್ಲಕ್ಕಿಂತ ದೊಡ್ಡದು. ಇದರಲ್ಲಿ ರಾಜಕೀಯ ಇಲ್ಲ. ಆದರೆ, ನನ್ನ ಸಹೋದರ ಮನೆಗೆ ಹಿಂದಿರುಗಲು ನಾನು ಸರ್ಕಾರಿ ಅಧಿಕಾರಿಗಳ ವಿರುದ್ದ ಹೋರಾಡಬೇಕಾಗುತ್ತದೆ ಎಂದು ನಂಬಿರಲಿಲ್ಲ ಎಂದು ಹಮಾಸ್ ವಶದಲ್ಲಿರುವ ವ್ಯಕ್ತಿ ಎಲಾಡ್ ಎಂಬ ವ್ಯಕ್ತಿಯ ಸಹೋದರ ಕಾರ್ಮಿಟ್ ಪಾಲ್ಟಿ ಕಾಟ್ಜಿರ್ ಹೇಳಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್, ಸರ್ಕಾರದ ಸಚಿವರ ವಿರುದ್ದ ಮತಚಲಾಯಿಸಿ ಅವರನ್ನು ಮನೆಗೆ ಕಳುಹಿಸಿ. ಈ ಕಲೆ ಅವರ ಜೀವನದುದ್ದಕ್ಕೂ ಅಂಟಿಕೊಂಡಿರುತ್ತದೆ. ನಾವು ಯುದ್ಧವನ್ನು ಕೊನೆಗೊಳಿಸಲು ಬಯಸಿದ್ದೇವೆ. ನಮಗೆ ಬೇರೆ ಸರ್ಕಾರ ಬೇಕು ಎಂದಿದ್ದಾರೆ.
ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗಾಗಿ ಸರ್ಕಾರವು ಹಮಾಸ್ನೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಟೆಲ್ ಅವಿವ್ ನಗರದಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ, ನೆತನ್ಯಾಹು ಸರ್ಕಾರ ನಾವು ಯುದ್ದವನ್ನು ಮುಂದುವರೆಸುತ್ತೇವೆ ಎಂದಿದೆ.
ಇದುವರೆಗೆ ಇಸ್ರೇಲ್ ಆಕ್ರಮಣ 70 ಒತ್ತೆಯಾಳುಗಳ ಸಾವಿಗೆ ಕಾರಣವಾಗಿವೆ ಎಂದು ಹಮಾಸ್ ಹೇಳಿಕೊಂಡಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್ನ ಮುಂದುವರಿದ ಆಕ್ರಮಣದಿಂದ ಇದುವರೆಗೆ ಸುಮಾರು 30 ಜನರನ್ನು ಕೊಂದಿವೆ ಮತ್ತು ಉಳಿದಿರುವವರು ತೀವ್ರ ಆಹಾರ, ನೈರ್ಮಲ್ಯ ಮತ್ತು ಆರೋಗ್ಯ ರಕ್ಷಣೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ’10 ವರ್ಷದ ದುರಾಡಳಿತದ ನಂತರ ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದೀರಿ..; ಮೋದಿ ವಿರುದ್ಧ ಕಿಡಿಕಾರಿದ ಮಲ್ಲಿಕಾರ್ಜುನ ಖರ್ಗೆ