ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ, ವಿಡಿಯೊ ತೆಗೆಯುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿ ನಗೆಪಾಟಲಿಗೀಡಾಯಿತು. ಶುಕ್ರವಾರ ತಡರಾತ್ರಿ ಆದೇಶವನ್ನು ರದ್ದು ಮಾಡಿಯೂ ಆಯಿತು. ನಂತರದಲ್ಲಿ ಮಾಧ್ಯಮಗಳ ಮುಂದೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, “ನನ್ನ ಗಮನಕ್ಕೆ ಬಾರದೆ ನಿರ್ಬಂಧ ಆದೇಶ ಹೊರಬಿದ್ದಿದೆ” ಎಂದು ಹೇಳಿಕೆ ನೀಡಿದ್ದರು.
ನಂತರದ ಬೆಳವಣಿಗೆಯಲ್ಲಿ, “ಸಿಎಂ ಸೂಚನೆಯ ಮೇರೆಗೆಯೇ ಆದೇಶ ಹೊರಡಿಸಲಾಗಿದೆ” ಎಂಬ ಸಂಗತಿ ಹೊರಬಿದ್ದಿದೆ.
ಈ ಕುರಿತು ವರದಿ ಮಾಡಿರುವ ‘ದಿ ಫೈಲ್’ ತನಿಖಾ ಜಾಲತಾಣ, “ಆಡಳಿತ ಸುಧಾರಣಾ ಇಲಾಖೆಯು ಶುಕ್ರವಾರ ಹೊರಡಿಸಿದ್ದ ಆದೇಶವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನದಲ್ಲಿತ್ತು” ಎಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಮನವಿ ಮೇರೆಗೆ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಷ್ಟಸಮಿತಿಯ ಕಾರ್ಯಕರ್ತರು ಜಿಲ್ಲಾ ತಾಲೂಕು ಕಚೇರಿ, ಪೊಲೀಸ್ ಠಾಣೆ, ಜಿಲ್ಲಾ ತಾಲೂಕು ಆಸ್ಪತ್ರೆಗಳಿಗೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ವಿಡಿಯೋ ಲೈವ್ ಮಾಡುತ್ತಿರುವುದನ್ನೂ ಆಲಮಟ್ಟಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದಲ್ಲಿ ಪ್ರಸ್ತಾಪಿಸಿರುವ ಷಡಕ್ಷರಿ ಅವರು ಮುಖ್ಯಮಂತ್ರಿಯವರೊಂದಿಗೆ ಇದನ್ನು ಪ್ರಸ್ತಾಪಿಸಿದ್ದರು. ಹಾಗೆಯೇ ಅವರ ಗಮನಕ್ಕೆ ತಂದೇ ಆದೇಶ ಹೊರಡಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಲಮಟ್ಟಿಯಲ್ಲಿ ನಡೆದಿದ್ದ ಸ್ವಚ್ಛತಾ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಮುಖ್ಯಮಂತ್ರಿಯೊಂದಿಗೆ ಕಾರಿನಲ್ಲಿ ಹೋಗುವಾಗ ಈ ವಿಚಾರವನ್ನು ಅವರ ಗಮನಕ್ಕೆ ತಂದು ಆದೇಶ ಮಾಡಿಸಲಾಗಿದೆ ಎಂದು ನೌಕರರ ಕಾರ್ಯಕ್ರಮ ಭಾಷಣದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ‘ದಿ ಫೈಲ್’ ಹಾಗೂ ‘ವಾರ್ತಾ ಭಾರತಿ’ಯಲ್ಲಿ ವರದಿಯಾಗಿದೆ.
ಆಡಿಯೋದಲ್ಲೇನಿದೆ?
“ಈಗೊಂದು ಆರ್ಡರ್ ಮಾಡಿಸ್ದೆ. ಈಗಸ್ಟೇ ವಾಟ್ಸ್ಅಪ್ನಲ್ಲಿ ಬಂತು. ಕಳೆದ ಒಂದು ತಿಂಗಳಿಂದಲೂ ನಿರಂತರ ಪ್ರಯತ್ನ ಮಾಡಿದ್ದೇನೆ. ಇನ್ಮುಂದೆ ನಮ್ಮ ರಾಜ್ಯದ ಯಾವುದೇ ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಯಾವುದೇ ಖಾಸಗಿ ವ್ಯಕ್ತಿ ಬಂದು ಫೋಟೋ ತೆಗಿಯಂಗಿಲ್ಲ. ವಿಡಿಯೋ ಶೂಟ್ ಮಾಡಂಗಿಲ್ಲ. ಮೇಲಾಧಿಕಾರಿಗಳ ಅನುಮತಿ ಇಲ್ಲದೆಯೇ ಯಾವುದೇ ಕಚೇರಿಗಳಿಗೆ ಹೋಗಿ ಆ ರೀತಿಯ ಪ್ರಕ್ರಿಯೆಗಳನ್ನು ಮಾಡಬಾರದು ಎಂದು ಸರ್ಕಾರ ನಿರ್ಬಂಧಿಸಿ ಆದೇಶ ಮಾಡಿದೆ” ಎನ್ನುತ್ತಾರೆ ಷಡಕ್ಷರಿ.
ಇದನ್ನೂ ಓದಿರಿ: ಇದು ‘ಮಧ್ಯರಾತ್ರಿ’ ಆದೇಶವಲ್ಲ, ‘ಮದ್ಯರಾತ್ರಿ’ ಆದೇಶ: ಸರ್ಕಾರದ ಎಡವಟ್ಟಿಗೆ ಜನರ ವ್ಯಂಗ್ಯ
“ಬಹುಶಃ ಯೋಚನೆ ಮಾಡಿ. ಬಹಳಷ್ಟು ಹೆಣ್ಮಕ್ಳು ಹೆಡ್ಪೀಸ್ಗಳಲ್ಲಿ, ತಾಲೂಕು ಆಫೀಸ್ಗಳಲ್ಲಿ ಜಿಲ್ಲಾ ಪಂಚಾಯ್ತಿಗಳಲ್ಲಿ, ರೆವಿನ್ಯೂ ಅಫೀಸ್ಗಳಲ್ಲಿ, ಜಿಲ್ಲಾ ಕಚೇರಿಗಳಲ್ಲಿ ಕೆಎಸ್ಆರ್ ಪಾರ್ಟಿ, ಸಂಘ ಸಂಸ್ಥೆಗಳು, ವ್ಯಕ್ತಿ ಆಧರಿತ ಸಂಘಟನೆಗಳು ಬರ್ತಾವೆ. ಫೋಟೋ ತೆಗಿತಾರೆ, ವಿಡಿಯೋ ಮಾಡ್ತಾರೆ. ಸ್ವಾಭಿಮಾನದ ಹಕ್ಕುಗಳನ್ನು ಕಿತ್ಕೊಳ್ಳುವಂತ ಕೆಲ್ಸಗಳು ಆ ಸಂದರ್ಭದಲ್ಲಿ ಆಗ್ತಾವೆ. ಲಾಸ್ಟ್ ವೀಕ್ನಲ್ಲಿ ನಾನು ಮುಖ್ಯಮಂತ್ರಿ ಜತೆ ಕಾರಿನಲ್ಲಿ ಹೋಗುವಾಗ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡ್ಡೆ. ಸಾರ್ ಈ ಆದೇಶ ಮಾಡೇಕು. ಮುಜುಗರ ಆಗ್ತಾ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗ್ತಾ ಇದೆ ಎಂದಾಗ ಮಾನ್ಯ ಮುಖ್ಯಮಂತ್ರಿಗಳು, ಆದೇಶ ಮಾಡಿದ್ರು” ಎಂದು ಭಾಷಣದಲ್ಲಿ ದಾಖಲಾಗಿದೆ. ಷಡಕ್ಷರಿಯವರ ಮಾತುಗಳಿಗೆ ಪ್ರೇಕ್ಷಕರು ಚಪ್ಪಾಳೆಯನ್ನೂ ಹೊಡೆದಿದ್ದಾರೆ.
“ಹಾಗಾದರೆ ಮುಖ್ಯಮಂತ್ರಿಯವರು ಮಾಧ್ಯಮಗಳ ಎದುರು ಸುಳ್ಳು ಹೇಳಿದರೆ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.