Homeಚಳವಳಿ(ರೈತ) ಚಳುವಳಿಯ ಬಿಕ್ಕಟ್ಟು : ಕೆ. ಪಿ. ಸುರೇಶ್

(ರೈತ) ಚಳುವಳಿಯ ಬಿಕ್ಕಟ್ಟು : ಕೆ. ಪಿ. ಸುರೇಶ್

ರೈತ ಚಳವಳಿ ಕೊನೆಗೂ ದಲಿತ ಚಳವಳಿಯನ್ನು ತಬ್ಬಿ ಸಾಗಲಾಗಲಿಲ್ಲ. ಭೂರಹಿತ ಕಾರ್ಮಿಕರ ಅತಂತ್ರ ಬದುಕಿನ ಆತಂಕಗಳನ್ನು ಗುರುತಿಸಲಿಲ್ಲ.

- Advertisement -
- Advertisement -

ವ್ಯವಸ್ಥೆಯ ಒರಟು ದಬ್ಬಾಳಿಕೆ ಹೆಚ್ಚಿದಷ್ಟು ಚಳವಳಿಯ ಕಾವು ಜಾಸ್ತಿ; ಆಡಳಿತಗಾರನ ದೃಷ್ಟಿ ಮಬ್ಬಾದಷ್ಟೂ ಚಳವಳಿಗಳ ಕಾರ್ಯಸೂಚಿ ಹೆಚ್ಚು ಸ್ಫುಟವಾಗಿರುತ್ತೆ ಅಂತ ಒಂದು ಮಾತಿದೆ. ಬಹುತೇಕ ಚಳವಳಿಗಳ ಯಶಸ್ಸು ಈ ಕಾರಣಗಳ ಮೇಲೆ ನಿಂತಿದೆ. ಆದರೆ ಈ ಎರಡನ್ನೂ ಇಂದ್ರಿಯಗ್ರಾಹ್ಯವಾಗಿ ಮಂಡಿಸುವ ನಾಯಕತ್ವ ಇಲ್ಲದಿದ್ದರೆ ಆಂಶಿಕ ಗ್ರಹಿಕೆಯಲ್ಲೇ ದಿನ ಹೋಗುತ್ತದೆ.

ಆಂಶಿಕ ಗ್ರಹಿಕೆ ಅಂದರೆ ಕಾಲಕಾಲಕ್ಕೆ ಪ್ರತ್ಯಕ್ಷವಾಗುವ ಸಂಕಷ್ಟಗಳು ಆಳುವವರ ನೀತಿಯ ಫಲ ಎಂಬ ಅರಿವಿಲ್ಲದೇ ಮೂಡುವ ಅನಿಸಿಕೆಗಳಷ್ಟೇ….

80ರ ದಶಕದ ರೈತ ಚಳವಳಿಯ ಹಿಂದೆ ಇಂದಿರಾ ಗಾಂಧಿ ಕಾಲದ ವಿಷಮ ಪರಿಸ್ಥಿತಿ ಇತ್ತು. ಯಾವ ಪ್ರತಿಕ್ರಿಯೆ/ ಪ್ರತಿರೋಧಕ್ಕೂ ಅವಕಾಶವಿಲ್ಲದ ಸ್ಥಿತಿಯಲ್ಲಿ ಒಂದು ಅಧಿಕಾರ ಕೇಂದ್ರದ ಬಗ್ಗೆ ಹುಟ್ಟುವ ಸಮಷ್ಠಿ ಪ್ರತಿರೋಧ ಹರಳುಗಟ್ಟಲು ಸಮಯ ಬೇಕು. ಕರ್ನಾಟಕದ ಮಟ್ಟಿಗೆ ದೇವರಾಜ ಅರಸು ಅವರಂಥಾ ಧೀಮಂತ ಇರುವಷ್ಟು ಕಾಲ ಇದು ಚಾಲನೆ ಪಡೆಯಲಿಲ್ಲ. ಸಮಾಜವಾದೀ ಆಶಯದ ಸೈದ್ಧಾಂತಿಕ ಭೂಮಿಕೆಯ ರಾಜಕಾರಣ ಕರ್ನಾಟಕದಲ್ಲಿದ್ದು ಸ್ವತಃ ಅರಸು ಅದನ್ನು ಅಷ್ಟಿಷ್ಟು ಪ್ರತಿಫಲಿಸಿದ್ದರು. ಗುಂಡೂರಾವ್ ಆಗಮನವಾಗಿದ್ದೇ ಆಡಳಿತ ಯಂತ್ರಕ್ಕೆ, ಆಡಳಿತದ ಚುಕ್ಕಾಣಿ ಹಿಡಿದವರಿಗೆ ಸೈದ್ಧಾಂತಿಕ ಭೂಮಿಕೆ ಮಾಯವಾಯಿತು. (ಇಂದು ಕಾಂಗ್ರೆಸ್ ಪಡುತ್ತಿರುವ ಸಂಕಷ್ಟದ ಬೀಜವನ್ನು ಅಲ್ಲೂ ನೋಡಬಹುದು.) ಗ್ರಾಮ ಭಾರತದ ಕೇಂದ್ರಭೂಮಿಕೆಯಲ್ಲಿದ್ದ ರೈತ ಮತ್ತು ಕೃಷಿಯ ಅವಗಣನೆ ಬಗ್ಗೆ ಅರಿವು ಮೂಡಿದ್ದೂ ಇದರ ಫಲಿತವೇ.

ಬಹುತೇಕ ಹೋರಾಟಗಳು ಸೈದ್ಧಾಂತಿಕ/ಸಾಂಸ್ಥಿಕ ನಾಯಕತ್ವ ವಹಿಸಿದವರ ನಿರ್ಧಾರದ ಕಾರಣಕ್ಕೇ ಉದ್ಘಾಟನೆ ಅಗಿಲ್ಲ. ಒಂದು ಸ್ಫೋಟದ ಕ್ಷಣ ಬಂದಾಗ ಪಾದರಸದ ಕಣಗಳು ಒಂದಾದಹಾಗೆ ವ್ಯಾಪಕ ಸಾಂಘಿಕ

ಕಸುವು ಹುಟ್ಟಿಕೊಳ್ಳುತ್ತೆ. ಈ ಕ್ಷಣವನ್ನು ನಿರೀಕ್ಷಿಸಿ ಕ್ರಿಯಾಶೀಲವಾಗಿ ಮುಂದೊಯ್ಯುವುದು ನಾಯಕತ್ವದ ಸಂಘಟನಾತ್ಮಕ ಕೌಶಲ. ಕರ್ನಾಟಕದಲ್ಲೂ ಆಗಿದ್ದು ಇದೇ. ೧೯೮೦ರ ಜುಲೈಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ಮಾಡಿ ಇಬ್ಬರು ಹುತಾತ್ಮರಾದದ್ದೇ, ಅದು ರಾಜ್ಯಾದ್ಯಂತ ವಿಸ್ತಾರ ಮತ್ತು ವೇಗ ಪಡೆದುಕೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಸುಂದರೇಶ್, ಬಳಿಕ ಪ್ರೊಫೆಸರ್ ನಂಜುಂಡಸ್ವಾಮಿ ಅವರು ಈ ಹೋರಾಟವನ್ನು ರಾಜ್ಯವ್ಯಾಪಿಗೊಳಿಸಿದ್ದು ಈಗ ಇತಿಹಾಸ. ಕರ್ನಾಟಕದ ಬಹುತೇಕ ಪ್ರಗತಿಪರರು ಈ ಚಳವಳಿಯ ಭಾಗವಾಗಿದ್ದರು, ಇಲ್ಲವೇ ಕೈಜೋಡಿಸಿದ್ದರು. ಇದೇ ವೇಳೆಗೆ ದಲಿತ ಚಳವಳಿಯೂ ಸ್ಫೋಟಗೊಂಡಿದ್ದು, ಈ ಎರಡೂ ಹೋರಾಟಗಳು ದೊಡ್ಡ ಸಾಮಾಜಿಕ ಸ್ಥಿತ್ಯಂತರದ ಕನಸು ಹೊತ್ತು ಕೆಲಸ ಮಾಡಬಹುದು ಎಂಬ ನಿರೀಕ್ಷೆಯನ್ನು ಹುಟ್ಟಿಸಿದ್ದು ಕೂಡಾ ಚಾರಿತ್ರಿಕವಾಗಿ ಬಲು ದೊಡ್ಡ ಸಾಧನೆ. 50ರ ದಶಕದ ಕಾಗೋಡು ಸತ್ಯಾಗ್ರಹ, ತದನಂತರದ ಎಡ ಪಕ್ಷಗಳ ದೊಡ್ಡಮಟ್ಟದ ಭೂಮಿ ಸಂಬಂಧ ಸ್ಥಳೀಯ ಹೋರಾಟಗಳು ಕಾಲದ ಓಟದಲ್ಲಿ ಅಷ್ಟೇ ದೊಡ್ಡದಾಗಿ ಹರಳುಗಟ್ಟಲಿಲ್ಲ. ಹೆಚ್ಚೆಂದರೆ ರಾಜಕೀಯವಾಗಿ ಒಂದೆರಡು ಅಸೆಂಬ್ಲಿ ಸೀಟು ಗೆಲ್ಲುವಷ್ಟರಮಟ್ಟಿಗೆ ಸಫಲವಾಗಿದ್ದವು. ಎಡಪಂಥೀಯ ಪಕ್ಷಗಳು ಗ್ರಾಮೀಣ ಕರ್ನಾಟಕದಲ್ಲಿ ಪ್ರಭಾವಿಯಾಗಿ ಶಾಸನಸಭಾ ಸ್ಥಾನಗಳನ್ನು ಗೆದ್ದಿದ್ದು ನೆನಪಿಸಿಕೊಳ್ಳಬೇಕು.

ರೈತಸಂಘವೂ ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟು ತನ್ನ ಸಾಧನೆಯನ್ನು, ನಿರ್ವಾಣವನ್ನೂ ಕಂಡಿತು ಎಂಬುದೇ ಇತಿಹಾಸದ ವ್ಯಂಗ್ಯ. ಚಳವಳಿಯೊಂದು ಔಪಚಾರಿಕ ಚುನಾವಣಾ ರಾಜಕೀಯಕ್ಕಿಳಿದಾಗ ಸೋಲು ಕಾಣುತ್ತೆ ಎಂಬುದು ಸಿದ್ಧ ಉತ್ತರ. ಹಾಗಿದ್ದರೆ ಸಮೂಹ ಅಸಹನೆ, ಆಕ್ರೋಶ, ಹಕ್ಕೊತ್ತಾಯದ ಅಭಿವ್ಯಕ್ತಿಗೆ ಸಂಘಟನಾತ್ಮಕ ರೂಪ ಕೊಟ್ಟು ಅದನ್ನು ಸಮುದಾಯ ಒಪ್ಪಿಕೊಂಡಾಗಲೂ ಅದು ಯಾಕೆ ಶಾಸನಾತ್ಮಕ ಅಧಿಕಾರ ಪಡೆಯುವ ಶಕ್ತಿಯಾಗಿ ರೂಪಾಂತರಗೊಳ್ಳುವುದಿಲ್ಲ? ಈ ಚಳವಳಿ ಕೇವಲ ಹಕ್ಕೊತ್ತಾಯದ ಸೀಮಿತ ಅಗತ್ಯಗಳ ಪೂರೈಕೆಗಿರುವ ಸಾಧನವೆಂದು ಜನ ಭಾವಿಸಿದ್ದಾರೆಯೇ? ಅಥವಾ ಜನ ಈ ರೀತಿ ಭಾವಿಸುವಂತೆ ಚಳವಳಿಯನ್ನು ಕಟ್ಟಲಾಗಿತ್ತೇ?

ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಬಹುಕಾಲ ಹಕ್ಕೊತ್ತಾಯದ ವಾಹಕವಾಗಿ, ವೇದಿಕೆಯಾಗಿಯೇ ಕೆಲಸ ಮಾಡಿದ್ದು. 1935ರಲ್ಲಿ ಅದು ಚುನಾವಣಾ ಆಖಾಡಾಕ್ಕೆ ಇಳಿಯಿತು. ಜನ ಅಲ್ಲಿ ಅದರ ರೂಪಾಂತರವನ್ನು ಗುರುತಿಸಿದರು ಅಲ್ಲವೇ?

ರೈತ ಚಳವಳಿ ಈ ರೀತಿಯ ಆದ್ಯಂತ ಪರ್ಯಾಯವಾಗಿ ಜನಕ್ಕೆ ಕಾಣಿಸಲಿಲ್ಲವೇ? ಆತ್ಮಗೌರವದ ಬಿಂಬವಾಗಿ ಧಾಡಸೀತನವನ್ನು ಮುಂದಿಟ್ಟ ಪ್ರೊಫೆಸರ್ ಅಂಥವರೂ ’ರೈತರನ್ನೂ ಒಳಗೊಂಡಂತೆ ಇಡೀ ಜನಸಮುದಾಯಗಳ ಬದುಕಿನ ಸಮಗ್ರ ಅಗತ್ಯಗಳೇನು ಎಂಬುದನ್ನು ಗ್ರಹಿಸಲಾಗಲಿಲ್ಲವೇ?

ಇದೆಲ್ಲಾ ಉತ್ತರ ಗೊತ್ತಿಲ್ಲದ ಸಂಗತಿಗಳಲ್ಲ. ರೈತ ಚಳವಳಿ ಕೊನೆಗೂ ದಲಿತ ಚಳವಳಿಯನ್ನು ತಬ್ಬಿ ಸಾಗಲಾಗಲಿಲ್ಲ. ಭೂರಹಿತ ಕಾರ್ಮಿಕರ ಅತಂತ್ರ ಬದುಕಿನ ಆತಂಕಗಳನ್ನು ಗುರುತಿಸಲಿಲ್ಲ. ರೈತ ಲೋಕದ ಸಂಕಷ್ಟಗಳು ಮೊದಲ ಆದ್ಯತೆಯಾಗಿರಲಿ; ಆದರೆ ಅವು ಗ್ರಾಮೀಣ ಲೋಕದ ಉಳಿದವರನ್ನು ಒಳಗೊಳ್ಳದೇ ಚಿಂತಿಸುವ ಸಂಗತಿಗಳಾದವೇ? ಉದಾ: ಉದ್ಯೋಗ ಖಾತರಿಯಂಥಾ ಯೋಜನೆ ಬಗ್ಗೆ ರೈತರಲ್ಲಿ ಕೇಳಿದರೆ ಅದರಿಂದ ಕೂಲಿಕಾರರು ಸಿಗದಂತಾಯ್ತು ಎನ್ನುವ ಉತ್ತರ ಸಿಗುತ್ತದೆ. ಈ ಭ್ರಾಮಕ ವಿವರವನ್ನು ಅವರ ತಲೆಗೆ ಯಾರು ತುಂಬಿದರು? ಉದ್ಯೋಗ ಖಾತರಿಯ 200 ಚಿಲ್ಲರೆ ಸಂಬಳಕ್ಕಿಂತ ಜಾಸ್ತಿ ಸಂಬಳಕ್ಕೆ ನಗರಗಳಿಗೆ ಹೋಗಿ ಉದ್ಯೋಗ ಖಾತರಿಯೇ ನಕಲಿ ಕಾರ್ಡುಗಳ ಆಡುಂಬೊಲವಾಗಿದ್ದು ಕಣ್ಣೆದುರಿಗೇ ಇದೆ. ಹಾಗೆಯೇ, ಪರಿಸರ ರಕ್ಷಣೆ ಮತ್ತು ಸುಸ್ಥಿರ ಕೃಷಿಯಂಥಾ ಪರಿಕಲ್ಪನೆ ರೈತ ಲೋಕದ ಶಾಶ್ವತ ಉಳಿವಿಗೆ ಮುಖ್ಯ ಅನ್ನಿಸಿದಾಗಲೂ ರಾಸಾಯನಿಕಗಳ ಕುರಿತಾದ ಹಕ್ಕೊತ್ತಾಯ, ನೀರಿನ ಮಿತವ್ಯಯ ಅನಿವಾರ್ಯ ಆದಾಗಲೂ ನೀರಾವರಿ ಬೆಳೆಯ ಕುರಿತಾದ ಅಸಹಜ ಪ್ರಮಾಣದ ಪ್ರಾಧಾನ್ಯ, ಅಂತರ್ಜಲ ಸೂರೆಗೆಂದೇ ಅವೈಜ್ಞಾನಿಕ ಬೆಳೆಗೆ ವಿದ್ಯುತ್ ಬೇಡಿಕೆ- ಹೀಗೆ ಪಟ್ಟಿ ಸಾಗುತ್ತದೆ.

ಮೂಲತಃ ಈ ಬೇಡಿಕೆಗಳೆಲ್ಲಾ ರೈತನ ನಿತ್ಯದ ದುಮ್ಮಾನಗಳು ನಿಜ. ಆದರೆ ಈ ಬೇಡಿಕೆಗಳ ವಿಪರ್ಯಾಸವೆಂದರೆ ಇದನ್ನು ಈಡೇರಿಸುವ ರಾಜಕೀಯ ಶಕ್ತಿ ಕೇಂದ್ರದ ಸನ್ನದು ಪಡೆದಿರುವ ಪಕ್ಷ ಇದರ ಕ್ರೆಡಿಟ್ ಪಡೆಯುತ್ತದೆ. ಜೆ.ಎಚ್.ಪಟೇಲರು ಈ ರೀತಿಯ ಹಕ್ಕೊತ್ತಾಯ ಮತ್ತು ಅದನ್ನು ಈಡೇರಿಸುವ ಸರಕಾರದ ಕ್ರಮಗಳ ಬಗ್ಗೆ, ’ಉಕ್ಕುವ ಹಾಲಿಗೆ ನೀರು ಚಿಮುಕಿಸಿದ ಹಾಗೆ’ ಎನ್ನುವ ರೂಪಕ ನೀಡಿದ್ದರು.

ಇದು ಚಳವಳಿಗಳ ನಾಯಕತ್ವದ ತಾತ್ವಿಕ ಧಾರಣ ಶಕ್ತಿಯ ಬಗ್ಗೆ. ಈ ವ್ಯಾಖ್ಯಾನವೂ ಗತ ಸನ್ನಿವೇಶಗಳ ಬಗ್ಗೆ.

ವರ್ತಮಾನದ ಸವಾಲು, ಅವಕಾಶಗಳೂ ಎರಡು ದಶಕಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ರೈತಲೋಕವೊಂದು ಭೌತಿಕವಾಗಿ ಹಾಗೇ ಇರುವಂತೆ ಭಾಸವಾದರೂ ಅದರ ಆಂತರ್ಯದಲ್ಲಿ ಆಳ ಬದಲಾವಣೆಗಳಾಗಿವೆ. ಸಮಸ್ಯೆ, ಬಿಕ್ಕಟ್ಟುಗಳ ಸ್ವರೂಪವೂ ಹೆಚ್ಚು ಬಾಹ್ಯ ನೀತಿ ಪ್ರೇರಿತ ಕಾರಣಕ್ಕಾಗಿ ಇನ್ನಷ್ಟು ಸಂಕೀರ್ಣವಾಗಿವೆ. ಪ್ರಭುತ್ವ ತನ್ನ ದಮನದ ಅನುಷ್ಠಾನದ ರೀತಿಯಲ್ಲಿ ಹೆಚ್ಚು ಅಮೂರ್ತವಾಗಿದೆ. ಅದರ ಹಿಡಿತವೂ ಹೆಚ್ಚು ಹೆಚ್ಚು ವ್ಯಕ್ತಿ ನಿರಸನದ ರೂಪ ಪಡೆದಿದೆ. ಆಧಾರ್ ಲಿಂಕ್ ಮಾಡುವುದರಿಂದ ಹಿಡಿದು, ನೇರ ನಗದು ವರ್ಗಾವಣೆಯಂಥಾದ್ದು ಇಂಥಾ ಒಂದು ಪ್ರಭುತ್ವದ ಶಕ್ತಿಯನ್ನು ಅನಾವರಣಗೊಳಿಸಿದೆ. ಇನ್ನೊಂದೆಡೆ ಈ ಹಿಂದೆ ಕರಪತ್ರ, ಗೋಡೆ ಬರಹಗಳ ಮೂಲಕ ಮಾಹಿತಿ ತಲುಪಿಸುವ ವಿಧಾನ ಫ್ಯಾಂಟಮ್ ಕತೆಯಲ್ಲಿ ಬರುವ ಡ್ರಮ್ ಬೀಟಿಂಗ್ ಮೂಲಕ ಸಂದೇಶ ಕಳಿಸುವಷ್ಟೇ ಪುರಾತನವಾಗಿ ಕಾಣಿಸುತ್ತಿದೆ. ಹೊಸ ಸಾಮಾಜಿಕ ಮಾಧ್ಯಮಗಳು ಜನರನ್ನು ಖಾಸಗಿಯಾಗಿ ತಲುಪುವ ವೇಗ ಹೇಗಿದೆಯೆಂದರೆ ಅದಕ್ಕೊಂದು ಸಮಷ್ಠಿಯ ಲಕ್ಷಣವೇ ಹೊರಟುಹೋಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಒಂದೊಂದು ನಿರ್ಬಂಧಿತ ಕಂಪಾರ್ಟ್‌ಮೆಂಟಾಗಿ ರೂಪಾಂತರಗೊಳಿಸಿದೆ. ಇಮೇಜುಗಳ ಮೂಲಕ, ಚಿಕ್ಕ ಸಂದೇಶಗಳ ಮೂಲಕ ಒಬ್ಬೊಬ್ಬ ವ್ಯಕ್ತಿಯನ್ನೂ ರೇಡಿಯೋ ಸ್ವೀಕರಣಾ ಟ್ರಾನ್ಸಿಸ್ಟರ್ ಮಟ್ಟಿಗೆ ಬದಲಾಯಿಸಿದೆ. ತನ್ನ ಬಯಕೆ, ಬೇಡಿಕೆ ಮತ್ತು ಅಗತ್ಯಗಳ ಮಧ್ಯೆ ಇದ್ದ ವ್ಯತ್ಯಾಸದ ತೆಳುಗೆರೆ ಅಳಿಸಿ ನಿತ್ಯದ ಮಾಹಿತಿ ವರ್ಷಾಘಾತಕ್ಕೆ ಬಲಿಯಾಗಿದ್ದಾನೆ. ಮಾಹಿತಿ ತಲುಪಿಸುವ ಈ ವಿಧಾನ ಅದ್ಭುತ ಅಸ್ತ್ರ. ಇದರ ಬಳಕೆಯ ವಿಜೃಂಭಣೆಯ ಆರಂಭಿಕ ಸಡಗರದ ಹಂತದಲ್ಲಿ ನಾವಿದ್ದೇವೆ. ಭಾಜಪ ಇದನ್ನು ಸಶಕ್ತವಾಗಿ ಬಳಸಿ ಮುಂಚೂಣಿಯಲ್ಲಿದೆ.

ನಮ್ಮ ರೈತ ಸಂಘಟನೆಗಳು ಇಂದಿಗೂ ಒಂದು ಸಭೆಯ ಲೈವ್ ನೀಡಲು ಏದುಸಿರು ಬಿಡುತ್ತಿವೆ. ಈ ಕಾಲಕ್ಕೆ ತಕ್ಕಂತೆ ಬದಲಾಗಿ ಸ್ಪಂದಿಸುವ ಗುಣ ಕಳಕೊಂಡರೆ ಸಂಘಟನೆಗಳೂ ಡಿನೋಸಾರಸ್ ತರಹ ಕಾಣತೊಡಗುತ್ತವೆ.

ಈ ಹಿಂದಿನ ಸೈದ್ಧಾಂತಿಕ ಅಸ್ಪಷ್ಟತೆ, ತಾತ್ವಿಕ ಬಿಕ್ಕಟ್ಟು, ಪರ್ಯಾಯಗಳ ಕುರಿತಾದ ಟೋಕನಿಸಮ್ ಇವೆಲ್ಲಾ ಹಾಗೇ ಇದೆ; ಜೊತೆಗೆ ಆಧುನಿಕ ಸಂವಹನದ ಪರಿಭಾಷೆಯ ಅನಕ್ಷರತೆಯೂ ಸೇರಿದೆ. ಇವು ಡೆಡ್ಲೀ ಕಾಕ್ ಟೈಲ್! ಕೃಷಿಲೋಕವು ಸಂಪೂರ್ಣ ಕಾರ್ಪೋರೇಟ್, ನವ ಉದಾರವಾದೀ ಹಿಡಿತದಲ್ಲಿರುವ ಆಳುವವರ ನೀತಿ ವಿಕೃತಿಗೆ ಬಲಿಯಾಗಿದೆ. ಇದು ಅರಿವಿಗೆ ಬಾರದಂತೆ ಕೋಮು ಧ್ರುವೀಕರಣ, ಭಾವನಾತ್ಮಕ ರಾಷ್ಟ್ರೀಯತೆಗಳ ಮೂಲಕ ಲಕ್ಷ್ಯ ಬೇರೆಡೆ ಹರಿಸುವ ರಾಜಕಾರಣ ಪರಿಪೂರ್ಣ ಕೌಶಲ್ಯ ಗಳಿಸಿದೆ.

ಪ್ರಸ್ತುತ ಅಭಿವೃದ್ಧಿಯ ಪರಿಕಲ್ಪನೆಯ ಚೌಕಟ್ಟನ್ನು ಪ್ರಶ್ನಿಸಿ ಪರ್ಯಾಯವನ್ನು ಅನುಷ್ಠಾನ ಯೋಗ್ಯ ಅನ್ನಿಸುವಂತೆ ಪ್ರಸ್ತುತಪಡಿಸದಿದ್ದರೆ ಮತ್ತೆ ಮತ್ತೆ ಹಕ್ಕೊತ್ತಾಯದ ಸೀಮಿತ ಖೆಡ್ಡಾಕ್ಕೆ ಬೀಳುವುದು ಮುಂದುವರಿಯುತ್ತದೆ.

ಗಾಂಧಿ ಬ್ರಿಟಿಶರ ವಿರುದ್ಧ ಹೋರಾಟವನ್ನು ಮುಂದೊತ್ತುವಾಗ, ಚರಕದಂಥಾ ಸ್ವಾವಲಂಬಿ ಪರ್ಯಾಯದ ರೂಪಕವೊಂದನ್ನು ಮನೆಮನೆಗೆ ತಲುಪಿಸಿದರು. ಯಾವುದು ಬೇಡ, ಯಾವುದು ಬೇಕು ಎಂಬುದು ಸಾಮಾನ್ಯ ಮನೆಗಳಲ್ಲೂ ಒಪ್ಪಿತವಾಗಿತ್ತು. ಬಹುತೇಕ ಅನಾಮಿಕ ಮಹಿಳೆಯರೇ ಈ ನೂಲು ತೆಗೆಯುವ ಕೆಲಸ ಮಾಡಿದರು. ಇವರೆಲ್ಲೂ ಚಳವಳಿಯಲ್ಲಿ ಕಾಣಿಸಲಿಲ್ಲ, ಆದರೆ ಬೇರುಗಟ್ಟಿಗೊಳಿಸುವ ಕೆಲಸ ಇವರೇ ಮಾಡಿದ್ದು.

ಯು.ಆರ್.ಅನಂತ ಮೂರ್ತಿಯವರು ಅಮೆರಿಕೆಯಿಂದ ಬರುವಾಗ, ’ಅಮ್ಮನಿಗೆ ತರುವಂಥಾದ್ದೇನೂ ಅಲ್ಲಿ ಇರಲಿಲ್ಲ/ಸಿಗಲಿಲ್ಲ ಎನ್ನುತ್ತಾರೆ. ಇದು ನಾಗರಿಕತೆಯೊಂದನ್ನು ನಿರಾಕರಿಸುವ ಬಗೆ.

ರೈತ ಚಳವಳಿಯೂ ಇಂಥಾ ನಿರಾಕರಣೆ ಮತ್ತು ಸ್ವಾವಲಂಬೀ ಪರ್ಯಾಯವೊಂದನ್ನು ತಾತ್ವಿಕವಾಗಿ ಗ್ರಹಿಸಿ, ಕಟ್ಟಿ, ಹರಡದಿದ್ದರೆ ಕಟ್ಟಿಹಾಕಿದ ನಾಯಿಯ ಆಹಾರಕ್ಕಾಗಿ ಬೊಗಳುವ ಕೆಲಸ ಮುಂದುವರೆಯುತ್ತೆ. ಚೈನು ಬಿಚ್ಚಿದರೂ ಮತ್ತೆ ಅಲ್ಲಿಗೇ ಬರುವ ಮಂಕು ನಾಯಿಗೆ ಕವಿದಿರುತ್ತೆ! ಸೀಮಿತ ಹಕ್ಕೊತ್ತಾಯದ ಮಿತಿ ಇದು. ವ್ಯವಸ್ಥೆಯ ಅರ್ಥಪೂರ್ಣ ಬದಲಾವಣೆಯ ಕಾಣ್ಕೆ ಅಲ್ಲಿ ಇರುವುದಿಲ್ಲ.

ಕೆ.ಪಿ.ಸುರೇಶ
ಇಂಗ್ಲಿಷ್ ಅಧ್ಯಾಪಕರಾಗಲು ಎಂ.ಎ ಓದಿದ್ದ ಕೆ.ಪಿ.ಸುರೇಶ ಅವರು ಕೃಷಿಯಲ್ಲಿ ತೊಡಗಲು ಸುಳ್ಯ ತಾಲೂಕಿನ ತಮ್ಮ ಊರಿಗೆ ಮರಳಿದ್ದರು. ತಮ್ಮ ಸ್ವಂತ ಅನುಭವ, ಅಧ್ಯಯನ ಹಾಗೂ ಒಳನೋಟಗಳ ಕಾರಣಕ್ಕೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ವಿಚಾರದಲ್ಲಿ ತಜ್ಞರಿಗೂ, ರೈತರಿಗೂ ಪಾಠ ಮಾಡಬಲ್ಲರು. ಅಪಾರ ಕೀಟಲೆಯ ಸ್ವಭಾವದ ಅವರು ಹಲವು ವಿಚಾರಗಳ ಕುರಿತು ಬರೆಯುತ್ತಿರುವ ಆಲ್‌ರೌಂಡರ್ ಕೂಡ.


ಇದನ್ನೂ ಓದಿ: ಬಗರ್ ಹುಕುಂ ಸಾಗುವಳಿದಾರರಿಗೆ ಕಿರುಕುಳ: ಸುಳ್ಳು ಕೇಸುಗಳಲ್ಲಿ ಬಂಧಿಯಾಗುತ್ತಿದ್ದಾರೆ ಅನ್ನದಾತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...