Homeಮುಖಪುಟಬಗರ್ ಹುಕುಂ ಸಾಗುವಳಿದಾರರಿಗೆ ಕಿರುಕುಳ: ಸುಳ್ಳು ಕೇಸುಗಳಲ್ಲಿ ಬಂಧಿಯಾಗುತ್ತಿದ್ದಾರೆ ಅನ್ನದಾತರು

ಬಗರ್ ಹುಕುಂ ಸಾಗುವಳಿದಾರರಿಗೆ ಕಿರುಕುಳ: ಸುಳ್ಳು ಕೇಸುಗಳಲ್ಲಿ ಬಂಧಿಯಾಗುತ್ತಿದ್ದಾರೆ ಅನ್ನದಾತರು

ಸುಮಾರು 10-15 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಗುಬ್ಬಿ ತಾಲೂಕು ಗಂಗಯ್ಯನಪಾಳ್ಯದ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿದ್ದ ಮೂವರು ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ.

- Advertisement -
- Advertisement -

ತುಮಕೂರು ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸುವ, ಬೆದರಿಕೆ ಹಾಕುವ ಮತ್ತು ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಪ್ರಕರಣಗಳು ಮುಂದುವರಿದಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸಾಗುವಳಿ ಜಮೀನಿನಲ್ಲಿ ರೈತರು ಕಟ್ಟಿಕೊಂಡಿದ್ದ ಗುಡಿಸಲು ಧ್ವಂಸ, ಬೆಳೆ ನಾಶ ಮಾಡಿದ್ದು ರೈತರ ಮೇಲೆ ಹಲ್ಲೆ, ದೌರ್ಜನ್ಯಗಳು ಕೂಡ ನಡೆಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಮಂದಿ ಬಗರ್ ಹುಕುಂ ಸಾಗುವಳಿದಾರರಿದ್ದು ಸರ್ಕಾರಕ್ಕೆ ಸಾಗುವಳಿ ಚೀಟಿ ನೀಡುವಂತೆ ಅರ್ಜಿ ಹಾಕಿಕೊಂಡಿದ್ದಾರೆ. ಫಾರಂ 57 ಅನ್ನು ಸಲ್ಲಿಸಿದ್ದಾರೆ. ಭೂಮಿ ಇಲ್ಲದೆ ಗೋಮಾಳದಲ್ಲಿ ಉಳುಮೆ ಮಾಡಿಕೊಂಡರೆ ಅರಣ್ಯ ಇಲಾಖೆ ಸಿಬ್ಬಂದಿಯ ಕಾಟ ತಪ್ಪಿಲ್ಲ. ಕೊರೊನಾ ಸಂಕಷ್ಟದಲ್ಲಿರುವ ರೈತರು ಭೂಮಿ ಉಳುಮೆ ಮಾಡಿಕೊಂಡು ಜೀವನ ಸಾಗಿಸಲು ಮುಂದಾದರೆ ಅರಣ್ಯ ಇಲಾಖೆ ಬಿಡುತ್ತಿಲ್ಲ.

ಸುಮಾರು 10-15 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಗುಬ್ಬಿ ತಾಲೂಕು ಗಂಗಯ್ಯನಪಾಳ್ಯದ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿದ್ದ ಮೂವರು ರೈತರ ಮೇಲೆ ಪ್ರಕರಣ ದಾಖಲಿಸಿದೆ. ತುಮಕೂರು ತಾಲೂಕು ಶಂಭೋನಹಳ್ಳಿಯ ಸರ್ವೇ ನಂಬರ್ 39, 40 ಮತ್ತು 41ರಲ್ಲಿ ಸಾಗುವಳಿ ಮಾಡುತ್ತಿದ್ದ 36 ಮಂದಿ ರೈತರ ಮೇಲೆ ಅರಣ್ಯ ಇಲಾಖೆ ಬೆಲೆ ಬಾಳುವ ಮರಗಳನ್ನು ಕಡಿದಿದ್ದಾರೆ ಎಂದು ಕೇಸ್ ದಾಖಲಿಸಿದೆ.

ಶಂಭೋನಹಳ್ಳಿಯ ಮೂರು ಸರ್ವೇ ನಂಬರ್‌ಗಳಲ್ಲಿರುವ ಗೋಮಾಳದಲ್ಲಿ 36 ರೈತರು ಕಳೆದ ಮೂರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಬಡ ರೈತರು ಜೀವನೋಪಾಯಕ್ಕಾಗಿ ಭೂಮಿ ಉಳುಮೆ ಮಾಡಿಕೊಂಡರೆ ಈಗ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಬಡ ರೈತರು ಹೆದರಿಕೊಂಡಿದ್ದಾರೆ. ಪೊಲೀಸರು ಗ್ರಾಮಕ್ಕೆ ಬಂದರೆ ರೈತರು ಬಚ್ಚಿಟ್ಟುಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸಂಸದ ಜಿ.ಎಸ್. ಬಸವರಾಜು ಕೋರ ಪೊಲೀಸರಿಗೆ ಹೇಳಿ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಶಂಭೋನಹಳ್ಳಿ ಗ್ರಾಮದ ಸರ್ವೇ ನಂಬರ್ 38ರಲ್ಲಿ ಬಲಾಢ್ಯರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಸಾಕಷ್ಟು ಜಮೀನು ಇರುವ ಭೂಮಾಲಿಕರಿಗೆ ಅಧಿಕಾರಿಗಳು ಲಂಚ ಪಡೆದು ಸಾಗುವಳಿ ಚೀಟಿ ನೀಡುತ್ತಿದ್ದಾರೆ. ಸ.ನ. 38ರಲ್ಲಿ ಒಂದೇ ಸಮುದಾಯದ ರೈತರಿಗೆ ಭೂಮಿ ಮಂಜೂರು ಮಾಡಿದೆ. ಹಾಗಾಗಿ ಹಿಂದುಳಿದವರು ಮತ್ತು ಪರಿಶಿಷ್ಟರು ಪಕ್ಕದಲ್ಲಿದ್ದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಂಸದರ ಮೇಲೆ ಒತ್ತಡ ತಂದು ಪ್ರಕರಣ ದಾಖಲಿಸುವಂತೆ ಮಾಡಲಾಗಿದೆ ಎಂದು ದೂರಲಾಗಿದೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ನಿರಂತರ ಹೋರಾಟದ ಫಲವಾಗಿ ಕೆಲವು ಕಡೆ ಸಾಗುವಳಿ ಚೀಟಿ ನೀಡಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುತುವರ್ಜಿಯಿಂದ ಕೆಲವು ರೈತರಿಗೆ ಸಾಗುವಳಿ ಚೀಟಿ ದೊರೆತಿವೆ.  ಚಿ.ನಾ.ಹಳ್ಳಿ, ಗುಬ್ಬಿ ಮತ್ತು ತುಮಕೂರು ತಾಲೂಕುಗಳಲ್ಲಿ 6-7 ಸಾವಿರ ಮಂದಿ ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ  ಆದರೆ  ಡಾ.ನಂಜುಂಡಪ್ಪ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕು ಗಳಾಗಿರುವ ಪಾವಗಡ, ಮಧುಗಿರಿ, ಶಿರಾ  ಕೊರಟಗೆರೆಯಲ್ಲಿ ಸಾಗುವಳಿ ಚೀಟಿ ನೀಡಿಲ್ಲ. ಜಮೀನು ಇರುವ ರೈತರಿಗೆ ಅಧಿಕಾರಿಗಳು ಸಾಗುವಳಿ ಭೂಮಿ ಮಂಜೂರು ಮಾಡುತ್ತಾರೆ. ಇದರಿಂದ ಭೂರಹಿತರಿಗೆ ಜಮೀನು ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹಸಿರುಶಾಲು ಹೊದ್ದುಕೊಂಡು ರೈತಪರವೆಂದು ಹೇಳಿಕೊಳ್ಳುತ್ತಾರೆ. ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಕೊರೊನಾ ಸಂದರ್ಭವನ್ನು ಬಳಸಿಕೊಂಡು ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆ ಬ್ಬಿಸುವುದು, ಪ್ರಕರಣ ದಾಖಲಿಸುತ್ತಿದ್ದರೂ ತಡೆಯುವ ಕೆಲಸ ಮಾಡುತ್ತಿಲ್ಲ. ಕೇವಲ ತೋರಿಕೆಗಾಗಿ ಹಸಿರು ಶಾಲು ಹಾಕಿಕೊಂಡರೆ ಅದರಿಂದ ರೈತರಿಗೆ ಏನೂ ಪ್ರಯೋಜನವಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಗರ್ ಹುಕುಂ ಸಾಗುವಳಿದಾರರ ಮೇಲೆ ನಡೆಯುತ್ತಿರುವ ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳ ದಾಳಿ ಮತ್ತು ಕಿರುಕುಳ ನಿಲ್ಲಿಸಬೇಕು. ಒಕ್ಕಲೆಬ್ಬಿಸುವುದನ್ನು ಬಿಟ್ಟು ಸಾಗುವಳಿ ಚೀಟಿ ಕೊಡಬೇಕು. ಪೊಲೀಸ್ ಠಾಣೆಗಳಲ್ಲಿ ಬಡವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕು ಎಂದು ಸಾಗುವಳಿದಾರರು ಒತ್ತಾಯಿಸಿದ್ದಾರೆ.  ರೌಡಿಗಳು, ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿರುವವರ ಮೇಲಿನ ಪ್ರಕರಣಗಳನ್ನು  ಕೈಬಿಡುವ ಸರ್ಕಾರ ಬಡವರ ಮೇಲೆ ಪ್ರಕರಣಗಳನ್ನು ದಾಖಲಿಸುತ್ತದೆ ಎಂಬ ಆಕ್ರೋಶ ವ್ಯಕ್ತವಾಗಿದೆ.


ಇದನ್ನೂ ಓದಿ: ಬಗರ್ ಹುಕುಂ ಸಾಗುವಳಿ ವಿವಾದ; ಮಹಿಳೆಯನ್ನು ಎಳೆದಾಡಿ, ಆಕೆಯ ಪತಿ ಕೈ ಕಚ್ಚಿದ ಫಾರೆಸ್ಟ್ ಗಾರ್ಡ್!

Also Read: Save India´on Quit India Day: Nationwide Farmers, Trade Unions protests

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...