ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ವಿಶಾಲ್ ಪಹುಜಾ ಅವರನ್ನು ದೆಹಲಿ ಹೈಕೋರ್ಟ್ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ರೌಸ್ ಅವೆನ್ಯೂದಲ್ಲಿರುವ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ವಿಶಾಲ್ ಪಹುಜಾ ಎಂ.ಜೆ. ಅಕ್ಬರ್ ಅವರ ಮಾನಹಾನಿ ಪ್ರಕರಣವನ್ನು ವಿಶೇಷ ಸಂಸದ/ಶಾಸಕ ನ್ಯಾಯಾಲಯದಿಂದ ವರ್ಗಾಯಿಸಲು ನಿರಾಕರಿಸಿದ್ದರು. ಪ್ರಸ್ತುತ ಪ್ರಕರಣವು ಅಂತಿಮ ವಿಚಾರಣೆಯ ಹಂತದಲ್ಲಿದೆ.
ಇದನ್ನೂ ಓದಿ: ಕ್ರಿಮಿನಲ್ ಎಂಪಿ, ಎಂಎಲ್ಎಗಳ ವಿರುದ್ಧ ನ್ಯಾಯಾಲಯ ಸೆಟೆದು ನಿಲ್ಲಲಿ: ಎಚ್.ಎಸ್ ದೊರೆಸ್ವಾಮಿ
ಎಂ. ಜೆ. ಅಕ್ಬರ್ 17 ಅಕ್ಟೋಬರ್ 2018 ರವರೆಗೆ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ #ಮೀಟೂ ಅಭಿಯಾನ ಸಮಯದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ದ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಈ ಆರೋಪವನ್ನು ನಿರಾಕರಿಸಿದ್ದ ಅಕ್ಬರ್ ಪತ್ರಕರ್ತೆಯ ವಿರುದ್ದವೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ರೌಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯದಲ್ಲಿರುವ ವಿಶೇಷ ಸಂಸದ/ಶಾಸಕ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಗಿರುವ ವಿಶಾಲ್ ಪಹುಜಾ ಅವರನ್ನು ಈಗ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕಾರ್ಕಾರ್ಡೂಮಾ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ರಿಜಿಸ್ಟ್ರಾರ್ ಜನರಲ್ ಮನೋಜ್ ಜೈನ್ ಅವರು ಈ ಆದೇಶವನ್ನು ಹೊರಡಿಸಿದ್ದು, ಅದರಲ್ಲಿ ವರ್ಗಾವಣೆಯಾದ 168 ನ್ಯಾಯಾಧೀಶರು ಮತ್ತು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿರುವ 47 ನ್ಯಾಯಾಂಗ ಅಧಿಕಾರಿಗಳ ಹೆಸರುಗಳಿವೆ. ಇದರಲ್ಲಿ ನ್ಯಾಯಾಧೀಶ ವಿಶಾಲ್ ಪಹುಜಾ ಅವರ ಹೆಸರು ಕೂಡಾ ಸೇರಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನಿರ್ದೇಶನವನ್ನೇ ಮೀರಿದ ಸಿಬಿಐ ನ್ಯಾಯಾಲಯದ ಬಾಬ್ರಿ ತೀರ್ಪು