ಉತ್ತರಾಖಂಡದ ಉತ್ತರಕಾಶಿಯಲ್ಲಿ ಆರಂಭವಾಗಿರುವ ಕೋಮು ಉದ್ವಿಗ್ನತೆಯ ನಡುವೆಯೂ ಕೋಮು ಪ್ರಚೋದನಾ ಹೇಳಿಕೆಗಳು ಮುಂದುವರಿದಿವೆ. ಕೋಮುವಾದಿ ಭಾಷಣ ಮಾಡಿದ ಆರೋಪ ಹೊತ್ತಿರುವ ದರ್ಶನ್ ಭಾರತಿ ಅವರ ನಿಕಟವರ್ತಿ ಸ್ವಾಮಿ ಆದಿ ಯೋಗಿ ಎಂಬುವವರು 2024 ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯು ಇಲ್ಲಿಯೇ (ಉತ್ತರಾಖಂಡ) ಪ್ರಾರಂಭವಾಗುತ್ತದೆ ಎಂಬ ಕೋಮು ಪ್ರಚೋದಕ ಹೇಳಿಕೆ ನೀಡಿದ್ದಾರೆ.
ಇನ್ನು ಉದ್ವಿಗ್ನತೆಯ ನಡುವೆಯೆ ಜೂನ್ 15ರಂದು ಮುಸ್ಲಿಮರ ವಿರುದ್ಧ ಮಹಾಪಂಚಾಯತ್ ಆಯೋಜಿಸುವುದಾಗಿ ಹಿಂದುತ್ವ ಗುಂಪುಗಳು ಬೆದರಿಕೆ ಹಾಕಿದ್ದರು. ಆದರೆ ಜಿಲ್ಲಾಡಳಿತವು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ, ನಿಷೇಧಾಜ್ಞೆ ವಿಧಿಸಿದೆ.
ದಿ ವೈರ್ ಜೊತೆ ಮಾತನಾಡಿರುವ ಆದಿ ಯೋಗಿ “ಈ ಭೂಮಿಯು ದೇವರುಗಳು, ಋಷಿಗಳು ಮತ್ತು ಸಂತರಿಗೆ ಸೇರಿದೆ. ಜನರು ಅವರ ಸೇವೆಗಾಗಿ ಇಲ್ಲಿಗೆ ಬಂದಿದ್ದಾರೆ, ಆದರೆ ಅವರು ಸೇವೆ ಮಾಡುವ ಬದಲಾಗಿ ಮಾಂಸವನ್ನು ಸೇವಿಸುತ್ತಿದ್ದಾರೆ ಮತ್ತು ನಮ್ಮ ಹೆಣ್ಣುಮಕ್ಕಳ ಮೇಲೆ ಅನಗತ್ಯ ನೋಟ ಬೀರುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಉತ್ತರಾಖಂಡದಲ್ಲಿ ಮುಸ್ಲಿಮರನ್ನು ಬಹಿಷ್ಕರಿಸುತ್ತೀರಾ ಎಂಬ ಪ್ರಶ್ನೆಗೆ “ಇಲ್ಲ, ನಾವು ಅದನ್ನು ಮಾಡುವುದಿಲ್ಲ. ಈ ಸ್ಥಳ ನಮಗೆ ಮೆಕ್ಕಾ ಇದ್ದಂತೆ. ಮೆಕ್ಕಾ ಪ್ರವೇಶಿಸಲು ನಮಗೆ ಅನುಮತಿ ಇದೆಯೇ? ಅದೇ ರೀತಿ ಇದು ನಮ್ಮ ಧಾರ್ಮಿಕ ಕ್ಷೇತ್ರವಾಗಿದ್ದು, 2024ರ ವೇಳೆಗೆ ಉತ್ತರಾಖಂಡವನ್ನು ಯಾವುದೇ ಜಿಹಾದಿ ಪ್ರಭಾವದಿಂದ ಮುಕ್ತಗೊಳಿಸುತ್ತೇವೆ, ರಾಜ್ಯದ ಎಲ್ಲಾ ಮಾಂಸಾಹಾರಗಳನ್ನು ಬಹಿಷ್ಕರಿಸಿ, ಅಂಗಡಿಗಳನ್ನು ಮುಚ್ಚುತ್ತೇವೆ. 2024 ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯು ಇಲ್ಲಿಯೇ ಪ್ರಾರಂಭವಾಗುತ್ತದೆ” ಎಂದಿದ್ದಾರೆ.
ಉತ್ತರಕಾಶಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಭಾರತಿ ಈ ಹಿಂದೆ “ನಾವು ರಾಜ್ಯದ ಪ್ರತಿಯೊಬ್ಬ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ‘ಲ್ಯಾಂಡ್ ಜಿಹಾದ್’ ವಿಷಯವನ್ನು ಚರ್ಚಿಸಿದ್ದೇವೆ ಮತ್ತು ಆ ಚರ್ಚೆಯ ನಂತರ ಅವರು ‘ಲ್ಯಾಂಡ್ ಜಿಹಾದ್’ ಕುರಿತು ಕಾನೂನುಗಳನ್ನು ಜಾರಿಗೆ ತಂದರು, ಇದರ ಪರಿಣಾಮವಾಗಿ 300 ಕ್ಕೂ ಹೆಚ್ಚು ಸಮಾಧಿಗಳನ್ನು ಬುಲ್ಡೋಜರ್ ಮಾಡಲಾಗಿದೆ” ಎಂದಿದ್ದರು.
ಉತ್ತರ ಕಾಶಿಯ ಪುರೋಲಾ ಪ್ರದೇಶದಲ್ಲಿ ಕಳೆದ ತಿಂಗಳು 14 ವರ್ಷದ ಹಿಂದೂ ಹುಡುಗಿಯನ್ನು ಇಬ್ಬರು ಪುರುಷರು – ಒಬ್ಬ ಮುಸ್ಲಿಂ ಮತ್ತು ಇನ್ನೊಬ್ಬ ಹಿಂದೂ ಅಪಹರಣ ಯತ್ನ ನಡೆಸಿದ ಆರೋಪದ ನಂತರ ಕೋಮು ದಾಳಿಗಳು ಹೆಚ್ಚಾಗಿವೆ. ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚುಬೇಕು ಎಂದು ಬೆದರಿಕೆ ಹಾಕುವ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಈ ಮಾರುಕಟ್ಟೆಯಲ್ಲಿ ಸರಿಸುಮಾರು 650-700 ಅಂಗಡಿಗಳಿದ್ದು, ಇವುಗಳಲ್ಲಿ ಸುಮಾರು 30-40 ಮುಸ್ಲಿಮರ ಅಂಗಡಿಗಳಿವೆ.
”ಲವ್ ಜಿಹಾದಿಗಳು ಜೂನ್ 15ರಂದು ಮಹಾಪಂಚಾಯತ್ಗೆ ಮುಂಚಿತವಾಗಿ ಅಂಗಡಿಗಳನ್ನು ಖಾಲಿ ಮಾಡಬೇಕು ಎಂದು ತಿಳಿಸಲಾಗಿದೆ. ಅವರು ಖಾಲಿ ಮಾಡದಿದ್ದರೆ, ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ‘ಭೂಮಿ ರಕ್ಷಣೆಗಾಗಿ ಅಭಿಯಾನಕ್ಕೆ ಕರೆ ನೀಡುತ್ತದೆ” ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಉತ್ತರಾಖಂಡ ಹೈಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ರಾಜ್ಯಕ್ಕೆ ಆದೇಶಿಸಿದೆ ಮತ್ತು ಉದ್ದೇಶಿತ ಮಹಾಪಂಚಾಯತ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಸದಂತೆ ಎಲ್ಲಾ ಪಕ್ಷಗಳಿಗೆ ಸೂಚನೆ ನೀಡಿದೆ.
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ದ್ವೇಷದ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಎಫ್ಐಆರ್ಗಳನ್ನು ದಾಖಲಿಸುವಂತೆ ಸೂಚಿಸಿದೆ. ಆದರೂ ಕಳೆದ 20 ದಿನಗಳಿಂದ ಉತ್ತರಕಾಶಿಯಲ್ಲಿ ಮುಸ್ಲಿಮರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಬದುಕುತ್ತಿದ್ದಾರೆ. ಪೊಲೀಸರು ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ
ಇದನ್ನೂ ಓದಿ; ಮಣಿಪುರದಲ್ಲಿ ಹೆಚ್ಚಾದ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿ!