Homeಮುಖಪುಟಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT

ಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT

SIT ಯು ಕಾರು ಹರಿಸಿ ಕೊಂದ 13 ಆರೋಪಿಗಳ ವಿರುದ್ಧ ಶಸಸ್ತ್ರ ಕಾಯ್ದೆಯಡಿಯಲ್ಲಿ ಕೊಲೆಯತ್ನ ಸೇರಿ ನಾಲ್ಕು ಹೊಸ ಸೆಕ್ಷನ್‌ಗಳನ್ನು ಸೇರಿಸಲು CJM ಮುಂದೆ ಅರ್ಜಿ ಸಲ್ಲಿಸಿದೆ.

- Advertisement -
- Advertisement -

ನಾಲ್ವರು ರೈತರು ಸೇರಿದಂತೆ ಒಟ್ಟು 8 ಜನರ ಅಮಾನುಷ ಸಾವಿಗೆ ಕಾರಣವಾದ ಅಕ್ಟೋಬರ್ 3 ರ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಹತ್ಯಾಕಾಂಡವು ಯೋಜಿತವಾದ ಮತ್ತು ಉದ್ದೇಶಪೂರ್ವಕ ಕೃತ್ಯವಾಗಿದೆಯೆ ಹೊರತು ನಿರ್ಲಕ್ಷತನದಿಂದ ಆಗಿದ್ದಲ್ಲ ಎಂದು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಿಳಿಸಿದೆ.

ಹಾಗಾಗಿ SIT ಯು ಕಾರು ಹರಿಸಿ ಕೊಂದ 13 ಆರೋಪಿಗಳ ವಿರುದ್ಧ ಶಸಸ್ತ್ರ ಕಾಯ್ದೆಯಡಿಯಲ್ಲಿ ಕೊಲೆಯತ್ನ ಸೇರಿ ನಾಲ್ಕು ಹೊಸ ಸೆಕ್ಷನ್‌ಗಳನ್ನು ಸೇರಿಸಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ಮುಂದೆ ಅರ್ಜಿ ಸಲ್ಲಿಸಿದೆ.

ಈಗಾಗಲೇ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಾಗಿದೆ. ನಂತರದ ತನಿಖೆಯ ಸಂದರ್ಭದಲ್ಲಿ ಹೊಸ ಸಾಕ್ಷ್ಯಗಳು ಸಿಕ್ಕಿದ್ದರಿಂದ ಈಗ ಎಲ್ಲಾ 13 ಆರೋಪಿಗಳ ಮೇಲೆ ಕೊಲೆಯತ್ನ ಪ್ರಕರಣ ಸೇರಿಸಲು ಮನವಿ ಮಾಡಿದೆ. ಜೊತೆಗೆ ಆರೋಪಿಗಳ ವಿರುದ್ಧದ ಮೂರು ಆರೋಪಗಳನ್ನು ಕೈಬಿಡುವಂತೆ ಸಹ ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಅವುಗಳೆಂದರೆ ಐಪಿಸಿ ಸೆಕ್ಷನ್‌ 279 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ), 338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ).

ಅವುಗಳ ಬದಲಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಯ ಯತ್ನ), 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಸೇರಿಸಲು ವಿನಂತಿಸಲಾಗಿದೆ.

ರೈತರು ಮತ್ತು ಪತ್ರಕರ್ತನ ಮೇಲೆ ಯೋಜನಾಬದ್ದವಾಗಿ ಮತ್ತು ಕೊಲ್ಲುವ ಉದ್ದೇಶದಿಂದಲೇ ಎಸ್‌ಯವಿ ಕಾರುಗಳು ಹರಿದಿವೆ ಎಂದು ಎಸ್‌ಐಟಿ ತಿಳಿಸಿದೆ.

ಅಕ್ಟೋಬರ್ 3 ರಂದು, ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸೇರಿದ ಎಸ್‌ಯುವಿ ಮತ್ತು ಇತರ ಎರಡು ಬೆಂಗಾವಲು ವಾಹನಗಳು ಶಾಂತಿಯುತ ಪ್ರತಿಭಟನೆ ನಡೆಸಿ ತೆರಳುತ್ತಿದ್ದ ರೈತರ ಮೇಲೆ ಹರಿದವು. ಈ ಹತ್ಯಾಕಾಂಡದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು. ಪ್ರಕರಣದ ಆರೋಪಿಗಳಾಗಿ ಆಶಿಶ್ ಮಿಶ್ರಾ, ಲುವ್ಕುಶ್, ಆಶಿಶ್ ಪಾಂಡೆ, ಶೇಖರ್ ಭಾರ್ತಿ, ಅಂಕಿತ್ ದಾಸ್, ಲತೀಫ್, ಶಿಶುಪಾಲ್, ನಂದನ್ ಸಿಂಗ್, ಸತ್ಯಂ ತ್ರಿಪಾಠಿ, ಸುಮಿತ್ ಜೈಸ್ವಾಲ್, ಧರ್ಮೇಂದ್ರ ಬಂಜಾರಾ, ರಿಂಕು ರಾಣಾ ಮತ್ತು ಉಲ್ಲಾಸ್ ತ್ರಿವೇದಿ ಅವರನ್ನು ಎಸ್‌ಐಟಿ ಇದುವರೆಗೆ ಬಂಧಿಸಿದೆ.

ಅವರನ್ನು ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ನಡುವೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಆಶಿಶ್ ಮಿಶ್ರಾನ ಜಾಮೀನು ಅರ್ಜಿಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.


ಇದನ್ನೂ ಓದಿ: ನೆಲಮಂಗಲ: ತಮಟೆ ಬಾರಿಸಿದ್ದಕ್ಕೆ ದಲಿತನಿಗೆ ಥಳಿತ; ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read