ಬಾಂಗ್ಲಾದೇಶದ ಕೊಮಿಲ್ಲಾದ ದುರ್ಗಾ ಪೂಜಾ ಮಂಟಪದಲ್ಲಿ ಕುರಾನ್ಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಭುಗಿಲೆದ್ದ ಗಲಭೆಯಿಂದಾಗಿ ಮೂವರು ಹತ್ಯೆಯಾಗಿದ್ದರು. ಇದೀಗ ಅಲ್ಲಿನ ಪೊಲೀಸರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ 35 ವರ್ಷದ ಇಕ್ಬಾಲ್ ಹುಸೈನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಜೊತೆಗೆ ಇತರ ಮೂವರನ್ನು ಪೊಲೀಸರು ಪ್ರಕರಣದಲ್ಲಿ ಬಂಧಿಸಿದ್ದಾರೆ.
ಕೊಮಿಲ್ಲಾದ ದುರ್ಗಾ ಪೂಜಾ ಮಂಟಪದಲ್ಲಿ ಖುರಾನ್ ಇರಿಸಿದ್ದಾಗಿ ಇಕ್ಬಾಲ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಡಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಇಕ್ಬಾಲ್ ಹುಸೇನ್ ಸೇರಿದಂತೆ ಇತರ ಆರೋಪಿಗಳ ವಿಚಾರಣೆಗೆ ಏಳು ದಿನಗಳ ಕಾಲಾವಕಾಶವನ್ನು ನ್ಯಾಯಾಲಯವು ನೀಡಿದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ. ಈ ಗಲಭೆಯ ನಂತರ ದೇಶದ ಹಲವು ಕಡೆಗಳಲ್ಲಿ ಕೋಮುಗಲಭೆಗಳು ಭುಗಿಲೆದ್ದಿದ್ದವು.
ಇದನ್ನೂ ಓದಿ: ಕೋಮು ಹಿಂಸೆಗೆ ಪ್ರಚೋದಿಸುವವರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಿ: ಬಾಂಗ್ಲಾ ಗೃಹ ಸಚಿವರಿಗೆ ಪ್ರಧಾನಿ ಶೇಖ್ ಹಸೀನಾ
ಶನಿವಾರ ಮಧ್ಯಾಹ್ನ ಪೊಲೀಸರು ಶಂಕಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ರಿಮಾಂಡ್ಗೆ ವಿನಂತಿಸಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಈ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಎಂ ತನ್ವೀರ್ ಅಹ್ಮದ್ ದೃಢಪಡಿಸಿದ್ದಾರೆ.
ಕೊಮಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಫಾರೂಕ್ ಅಹ್ಮದ್, “ಕೊಮಿಲ್ಲಾ ಜಿಲ್ಲೆಯ ಸುಜಾನಗರದ ನಿವಾಸಿಯಾದ ಇಕ್ಬಾಲ್ ಹುಸೈನ್ ಅಕ್ಟೋಬರ್ 13 ರಂದು ನಾನುವಾ ದಿಘಿರ್ ಪರ್ ಪೂಜಾ ಮಂಟಪದಲ್ಲಿ ಕುರಾನ್ ಪ್ರತಿಯನ್ನು ಇರಿಸಿದ್ದನು” ಎಂದು ತಿಳಿಸಿದ್ದಾರೆ.
ಕುರಾನ್ನೊಂದಿಗೆ ಪೂಜಾ ಮಂಟಪಕ್ಕೆ ತೆರಳಿ ಹನುಮಂತ ವಿಗ್ರಹದ ಕೈಯ್ಯಲ್ಲಿ ಇರುವ ಗದೆಯನ್ನು ಕದ್ದಿದ್ದನು. ಈ ವೇಳೆ ಆತ ತನ್ನ ಕೈಯ್ಯಲ್ಲಿ ಇರುವ ಕುರಾನ್ ಅನ್ನು ಅದರ ಮಡಿಲಲ್ಲಿ ಇರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಇಕ್ಬಾಲ್ನ ಕುಟುಂಬ ಸದಸ್ಯರು, ಆತ ಮಾನಸಿಕ ಅಸ್ವಸ್ಥನಾಗಿದ್ದು, ಅವನ ಸ್ಥಿತಿಯನ್ನು ಬಳಸಿಕೊಂಡು ಬೇರೆ ಯಾರೊ ಕುರಾನ್ ಅನ್ನು ಇರಿಸುವಂತೆ ಮಾಡಿರಬಹುದು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ: ಹಿಂದೂಗಳಿಗೆ ಸೇರಿದ 29 ಮನೆಗಳಿಗೆ ಬೆಂಕಿ, 66 ಮನೆಗಳು ಧ್ವಂಸ
ಇಕ್ಬಾಲ್ ಪೂಜಾ ಸ್ಥಳದಲ್ಲಿ ಕುರಾನ್ ಅನ್ನು ಇರಿಸಿದ ನಂತರ, ಇದರ ಬಗ್ಗೆ ಪೊಲೀಸರಿಗೆ ತಿಳಿಸಲು ಇಕ್ರಾಮ್ ಎಂಬಾತ ಪೊಲೀಸರಿಗೆ ಕರೆ ಮಾಡಿದ್ದನು. ಪೊಲೀಸ್ ಅಧಿಕಾರಿ ಅನ್ವರುಲ್ ಅಜೀಂ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಸಾಮಾನ್ಯ ಉಡುಪಿನಲ್ಲಿ ಘಟನಾ ಸ್ಥಳಕ್ಕೆ ತಲುಪಿದ್ದರು.
ಮತ್ತೊಬ್ಬ ಸ್ಥಳೀಯ ವ್ಯಕ್ತಿಯಾದ ಫಯಾಜ್ ಅಹ್ಮದ್ ಇದನ್ನು ಇತರರಿಗೂ ತಿಳಿಸಲು ಫೇಸ್ಬುಕ್ನಲ್ಲಿ ಲೈವ್ ಸ್ಟ್ರೀಮಿಂಗ್ ಆರಂಬಿಸಿದ್ದಾನೆ. “ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಈ ವಿಷಯವನ್ನು ಪ್ರಸಾರ ಮಾಡಿದ್ದೇನೆ ಎಂದು ಫಯಾಜ್ ಪೊಲೀಸರಿಗೆ ಹೇಳಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನ್ನ ಕೃತ್ಯವನ್ನು ಎಸಗುವುದಕ್ಕೂ ಮೊದಲು ಮುಸ್ಲಿಂ ಧಾರ್ಮಿಕ ಕೇಂದ್ರದ ಇಬ್ಬರನ್ನು ಭೇಟಿಯಾಗಿದ್ದನು ಎಂಬುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಡಾಕಾ ಟ್ರಿಬ್ಯೂನ್ ದೃಡಪಡಿಸಿದೆ. ಪೊಲೀಸರು ಅವರಿಬ್ಬರನ್ನು ಬಂಧಿಸಿದ್ದಾರೆ. ಅವರ ಭೇಟಿಯ ನಂತರ ಆರೋಪಿ ಕುರಾನ್ ತೆಗೆದುಕೊಂಡು ಪೂಜಾ ಸ್ಥಳಕ್ಕೆ ತೆರಳಿದ್ದಾನೆ.
ಇದನ್ನೂ ಓದಿ: ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ: ಬಾಂಗ್ಲಾ ಪ್ರಧಾನಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಗಿ ನಗರದ ಹಲವಾರು ದೇವಸ್ಥಾನಗಳು ಮತ್ತು ಪೂಜಾ ಸ್ಥಳಗಳ ಮೇಲೆ ಮಧ್ಯಾಹ್ನ ದಾಳಿ ನಡೆದಿವೆ. ನಂತರ ಈ ಗಲಭೆ ದೇಶದ ಇತರ ಕಡೆಗೆಲ್ಲಾ ಹರಡಿ ಹಿಂಸಾಚಾರದಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಅನೇಕ ಹಿಂದೂಗಳ ಮನೆಗಳು ಮತ್ತು ವ್ಯಾಪಾರದ ಸ್ಥಳಗಳನ್ನು ಧ್ವಂಸಗೊಳಿಸಲಾಗಿತ್ತು.
Bangladesh: Police identify the person who put the Holy Quran inside Puja mandap in Cumilla
Read: https://t.co/sACTjodfxv pic.twitter.com/VblobUADiK
— DD News (@DDNewslive) October 21, 2021
ಕಾಕ್ಸ್ ಬಜಾರ್ನ ಶುಗಂಧಾ ಬೀಚ್ ಪ್ರದೇಶದಲ್ಲಿ ಗುರುವಾರ ರಾತ್ರಿ 10: 10 ರ ಸುಮಾರಿಗೆ ಪ್ರಮುಖ ಆರೋಪಿ ಇಕ್ಬಾಲ್ನನ್ನು ಬಂಧಿಸಲಾಗಿದೆ ಎಂದು ಕೊಮಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಫಾರೂಕ್ ಅಹ್ಮದ್ ತಿಳಿಸಿದ್ದರು.
ಈ ನಡುವೆ ಬಾಂಗ್ಲಾದೇಶದ ಕಮ್ಯುನಿಷ್ಟ್ ಪಕ್ಷಗಳು ಮತ್ತು ಎಡಪಂಥೀಯ ಸಂಘಟನೆಗಳು ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಗಳು ನಡೆಸಿವೆ. ಜೊತಗೆ ದೇಶದ ಹಲವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಪರವಾಗಿ ಹೋರಾಟ ನಡೆಸುತ್ತಿವೆ. ಇದರ ಜೊತೆಗೆ ಅಲ್ಲಿನ ಆಡಳಿತ ಪಕ್ಷ ಕೂಡಾ ಕೋಮುವಾದಿಗಳ ಹೆಡೆಮುರಿ ಕಟ್ಟುವವರೆಗೂ ಬೀದಿಯಲ್ಲಿ ಇರುತ್ತೇವೆ ಎಂದು ಹೇಳಿಕೆ ನೀಡಿದೆ.
ಇದನ್ನೂ ಓದಿ: ಗಾಂಧಿ ಕುಟುಂಬ ಸಿಂಗ್ ಅವರಿಗೆ ಅಗೌರವ ತೋರಿಸಿತ್ತೆ? ಹಳೆಯ ಪೋಟೋಗಳ ಅಸಲಿ ಕಥೆಯೇನು?