ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ರಚನೆ ಕೊನೆಯ ಘಟ್ಟ ತಲುಪಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಸೇನಾ ನಾಯಕತ್ವದ ಸರ್ಕಾರ ರಚನೆಗೆ ಬೆಂಬಲ ನೀಡಲು ಒಪ್ಪಿಕೊಂಡಿವೆ. ಈಗಾಗಲೇ ಮೂರು ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅಂತಿಮಗೊಳಿಸಿದ್ದು, ಅನುಮೋದನೆ ನೀಡಿವೆ. ರಾಜಕೀಯ ವೈರುಧ್ಯಗಳನ್ನು ಬಿಟ್ಟು, ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಗೆ ಕಾಂಗ್ರೆಸ್ ಮತ್ತು ಎನ್ಸಿಪಿ ವೈರಿ ಪಕ್ಷ ಶಿವಸೇನೆ ಜತೆ ಕೈಜೋಡಿಸಲಿವೆ.
ಹಿಂದುತ್ವ ಅಜೆಂಡಾ ಹೊಂದಿರುವ ಶಿವಸೇನೆಯೊಂದಿಗೆ ಎನ್ಸಿಪಿ ಮತ್ತು ಕಾಂಗ್ರೆಸ್ ಹೊಸ ಮೈತ್ರಿ ಮಾಡಿಕೊಳ್ಳಲು ಸಿದ್ಧಗೊಂಡಿದೆ. ಅದಾಗ್ಯೂ ತಿಂಗಳಾಂತ್ಯದ ವೇಳೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ ವಕ್ತಾರ ಸಂಜಯ್ ರಾವತ್ ಮಾತನಾಡಿ, ನಮ್ಮ ಮೈತ್ರಿ ಭಾರತ ಸಂವಿಧಾನಕ್ಕೆ ಬದ್ಧವಾಗಿದೆ. ಜಾತ್ಯತೀತತೆಯ ಆಧಾರದ ಮೇಲೆ ಭಾರತ ರೂಪುಗೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಎನ್ಸಿಪಿ ಜತೆಗಿನ ಮೈತ್ರಿಗೆ ಜಾತ್ಯತೀತತೆ ಕಾರಣವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ರಾವತ್, ದೇಶ ಸಂವಿಧಾನವನ್ನು ಆಧಾರವನ್ನಾಗಿಸಿಕೊಂಡು ನಡೆಯುತ್ತಿದೆ. ಜಾತ್ಯತೀತತೆಯ ಆಧಾರದ ಮೇಲೆ ಸಂವಿಧಾನ ಮತ್ತು ದೇಶ ಮುನ್ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ರಕ್ಷಣಾ ಸಚಿವಾಲಯ ಸಂಸದೀಯ ಸಮಿತಿಗೆ ಸಾಧ್ವಿ ಪ್ರಗ್ಯಾ ಸಿಂಗ್ ನೇಮಕ: ಕೇಂದ್ರದ ನಿರ್ಧಾರಕ್ಕೆ ವಿರೋಧ
ರೈತರು, ಯುವಕರಿಗೆ ನೌಕರಿ, ಧರ್ಮ ಮತ್ತು ಜಾತಿ ಆಧಾರಿತವಾಗಿ ಇದ್ಯಾವುದೂ ಆಗಬಾರದು. ಶಿವಸೇನೆಯ ಸಂಸ್ಥಾಪಕ ಬಾಲಾ ಸಾಹೇಬ್ ಠಾಕ್ರೆ, ದೇಶದ ನ್ಯಾಯಾಲಯಗಳಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿಸುತ್ತಾರೆ. ಇದು ಜಾತ್ಯತೀತತೆಯೇ..? ಪ್ರಮಾಣ ಮಾಡಿಸುವುದಾದರೆ ಸಂವಿಧಾನ ಗ್ರಂಥವನ್ನು ಇರಿಸಿ, ಪ್ರಮಾಣ ಮಾಡಿಸುವಂತೆ ಮಾಡಲಿ. ಯಾಕೆಂದರೆ ನಮ್ಮ್ಉ ಜಾತ್ಯತೀತ ರಾಷ್ಟ್ರ ಎಂದಿದ್ದರು ಎಂದು ರಾವತ್ ತಿಳಿಸಿದರು.
ಸಾಮಾನ್ಯ ಕನಿಷ್ಠ ಕಾರ್ಕಕ್ರಮವನ್ನಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ರಚನೆಯಾಗಲಿದೆ. ಮೂರು ಪಕ್ಷಗಳು ಡಿಸೆಂಬರ್ 1 ರೊಳಗೆ ಸರ್ಕಾರ ರಚನೆ ಮಾಡಲಿವೆ. ಇದಕ್ಕೆ ಸಂಬಂಧಪಟ್ಟಂತೆ ಮೂರು ಪಕ್ಷಗಳು ಮುಂಬೈನಲ್ಲಿ ಸಭೆ ನಡೆಸಲಿವೆ. ಎನ್ಸಿಪಿ ಎರಡೂವರೆ ವರ್ಷ ಸಿಎಂ ಹುದ್ದೆಯನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ವೃಥಾ ಗೊಂದಲ ಸೃಷ್ಟಿಸಬೇಡಿ. ೩ ಪಕ್ಷಗಳು ಐದು ವರ್ಷಗಳವರೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಬಯಸುತ್ತೇವೆ ಎಂದು ರಾವತ್ ಹೇಳೀದರು.