ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇಂದು 10 ದಿನಗಳ ಜೀವದಾನವನ್ನು ಪಡೆದಿದೆ. ಏಕೆಂದರೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರ ಒಂದು ನಿಮಿಷದ ಭಾಷಣದ ನಂತರ ವಿಧಾನಸಭೆ ಅಧಿವೇಶನವನ್ನು ಕೊರೊನ ಭೀತಿಯಿಂದಾಗಿ ಮಾರ್ಚ್ 26 ರವರೆಗೆ ಮುಂದೂಡಲಾಯಿತು. ಆಡಳಿತಾರೂಢ ಕಾಂಗ್ರೆಸ್ ಅನ್ನು ಉರುಳಿಸುವ ವಿಶ್ವಾಸದಲ್ಲಿರುವ ಪ್ರತಿಪಕ್ಷ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಬಜೆಟ್ ಅಧಿವೇಶನದ ಪ್ರಾರಂಭದ ದಿನವಾದ ಇಂದು ರಾಜ್ಯಪಾಲರು ತಮ್ಮ ಸಾಂಪ್ರದಾಯಿಕ ಭಾಷಣದ ಕೊನೆಯ ಪುಟವನ್ನು ಮಾತ್ರ ಓದಿದರು. ನಂತರ “ಸಂವಿಧಾನವನ್ನು ಅನುಸರಿಸಬೇಕೆಂದು” ಕಾಂಗ್ರೆಸ್ಗೆ ಒತ್ತಾಯಿಸಿದ ಅವರು ಸದನವನ್ನು ಗೌರವಿಸಿ ಎಂದು ಹೇಳಿ ವಿಧಾನಸಭೆಯಿಂದ ಹೊರನಡೆದರು.
“ಎಲ್ಲರೂ ಸಂವಿಧಾನದಡಿಯಲ್ಲಿ ನಿಯಮಗಳನ್ನು ಪಾಲಿಸಬೇಕು ಆದ್ದರಿಂದ ಮಧ್ಯಪ್ರದೇಶದ ಘನತೆ ಕಾಪಾಡಿಕೊಳ್ಳಬೇಕು” ಎಂದು ರಾಜ್ಯಪಾಲರು ಸ್ಪೀಕರ್ಗೆ ಪತ್ರ ಬರೆದಿದ್ದು, ಇಂದು ಕಮಲ್ ನಾಥ್ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಒತ್ತಾಯಿಸಿದ್ದರು.
ರಾಜ್ಯಪಾಲರು ಹೊರನಡೆದ ನಂತರ ಬಹಳ ಸಮಯದ ನಂತರ, ಕಾಂಗ್ರೆಸ್ ಶಾಸಕರು ಮತ್ತು ಪ್ರತಿಪಕ್ಷ ಬಿಜೆಪಿ ಶಾಸಕರು ಪರಸ್ಪರ ಘೋಷಣೆಗಳನ್ನು ಕೂಗಿದರು. ಬಿಜೆಪಿ ಶಾಸಕರು “ಹಮ್ ಹೊಂಗೆ ಕಾಮ್ಯಾಬ್ …” (ನಾವು ಗೆದ್ದೆ ಗೆಲ್ಲುವೆವು) ಹಾಡು ಹಾಡಿದ್ದಾರೆ.