“ಸ್ಪೀಕರ್ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಲು ರಾಜ್ಯಪಾಲರ ವ್ಯಾಪ್ತಿಯಲ್ಲಿ ಬರುವುದಿಲ್ಲ” ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ರವರು ರಾಜ್ಯಪಾಲ ಲಾಲ್ಜಿ ಟಂಡನ್ ಅವರಿಗೆ ಪತ್ರ ಬರೆದಿದ್ದಾರೆ.
ಇಂದೇ ಬಹುಮತ ಸಾಬೀತುಪಡಿಸಬೇಕು ಮತ್ತು ಅದು ಬಟನ್ ಒತ್ತುವುದರ ಮೂಲಕವೇ ನಡೆಯಬೇಕು ಎಂದು ರಾಜ್ಯಪಾಲರು ಸ್ಪೀಕರ್ಗೆ ಸೂಚಿಸಿದ್ದರು. ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ.
ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಕಾಂಗ್ರೆಸ್ ಶಾಸಕರು ಅಧಿವೇಶನ ಪ್ರಾರಂಭವಾಗುವ ಮುನ್ನ ವಿಧಾನಸಭೆಗೆ ಪ್ರವೇಶಿಸುತ್ತಿದ್ದಂತೆ ನಗು ಮತ್ತು ವಿಜಯದ ಚಿಹ್ನೆಗಳನ್ನು ತೋರಿಸಿದ್ದಾರೆ.
ಕಳೆದ ವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರ ಅನುಯಾಯಿಗಳಾದ 22 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಕಮಲ್ ನಾಥ್ ಸರ್ಕಾರವು ಕುಸಿತದ ಅಂಚಿಗೆ ಬಂದಿದೆ. ಹಾಗಾಗಿ ರಾಜ್ಯಪಾಲರು ಸೋಮವಾರವೇ ವಿಶ್ವಾಸಮತ ಯಾಚನೆ ನಡೆಸುವಂತೆ ಸ್ಪೀಕರ್ ಅವರನ್ನು ಕೇಳಿದ್ದರು.
ರಾಜ್ಯ ವಿಧಾನಸಭೆಯನ್ನು ನಿರ್ದೇಶಿಸಲು ಸಾಧ್ಯವಿಲ್ಲದ ಕಾರಣ ರಾಜ್ಯಪಾಲರ ಪತ್ರವು ಯಾವುದೇ ಸಾಂವಿಧಾನಿಕ ಮಾನ್ಯತೆಯನ್ನು ಹೊಂದಿಲ್ಲ ಎಂದು ವಾದಿಸಿ ರಾಜ್ಯ ಸಚಿವ ಸಂಪುಟ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಈ ಕುರಿತು ಘೋಷಿಸುವಂತೆ ಭಾನುವಾರ ಕೋರಿತ್ತು.
ಒಂದು ವೇಳೆ ಇಂದು ಸರ್ಕಾರವು ಬಹುಮತ ಸಾಬೀತುಪಡಿಸದಿದ್ದರೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ “ಅವಿಶ್ವಾಸ ನಿರ್ಣಯ” ವನ್ನು ಮಂಡಿಸಬಹುದು.