ನಾಳೆ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ತಪ್ಪದೇ ಮತದಾನ ಮಾಡಿ ಎಂದು ಬಹುತೇಕರೂ ಸಲಹೆ ಕೊಟ್ಟಿದ್ದಾರೆ. ಅದರಂತೆ ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೊರಟ ಪ್ರಯಾಣಿಕರಿಗೆ ಬಸ್ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.
ಚುನಾವಣಾ ಕರ್ತವ್ಯಕ್ಕೆಂದು ಕೆಎಸ್ಆರ್ಟಿಸಿ 3700 ಬಸ್ಗಳನ್ನು ನಿಯೋಜಿಸಿದೆ. ಆದರೆ ಜನರು ಊರುಗಳಿಗೆ ಹೋಗಲು ಪರ್ಯಾಯ ವ್ಯವಸ್ಥೇ ಮಾಡದ ಕಾರಣ ಜನರು ತಮ್ಮ ತಮ್ಮ ಊರುಗಳಿಗೆ ಹೋಗಲಾಗದೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಾಲ ದೂಡುತ್ತಿರುವ ಅಮಾನವೀಯ ಪರಿಸ್ಥಿತಿ ಉಂಟಾಗಿದೆ.
ಈಗಾಗಲೇ ಖಾಸಗಿ ಬಸ್ಗಳು ಮತ್ತು ಟ್ರೈನ್ಗಳ ಸೀಟುಗಳು ಮುಗಿದ ಕಾರಣದಿಂದ ಅನಿವಾರ್ಯವಾಗಿ ಕೆಎಸ್ಆರ್ಟಿಸಿ ಬಸ್ನಲ್ಲಿ ಉತ್ತರ ಕರ್ನಾಟಕದ ಊರುಗಳಿಗೆ ತೆರಳಿದ್ದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಳಿಗ್ಗೆಯಿಂದ ಕಾದರೂ ಒಂದೂ ಬಸ್ ಸಿಗದೇ ನಿರಾಶರಾದ ಹಲವರು ಊರಿಗೆ ಹೋಗುವ ಯೋಚನೆಯನ್ನೇ ಕೈಬಿಟ್ಟಿದ್ದಾರೆ. ಇನ್ನು ಕೆಲವರು ಅಲ್ಲಿನ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿರುವ ದೃಶ್ಯಗಳು ಕಂಡುಬಂದಿವೆ.
ಬಹಳ ಮುಖ್ಯ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮಗಿಷ್ಟ ಬಂದ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶವನ್ನೇ ಕಿತ್ತುಕೊಂಡಂತೆ ಆಗಿದೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿಯೂ ಈ ರೀತಿಯ ದುಸ್ಥಿತಿ ಉಂಟಾಗುತ್ತದೆ. ಇದನ್ನು ಅರಿತು ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದ್ದು ಕೆಎಸ್ಆರ್ಟಿಸಿ ಸಂಸ್ಥೆಯ ಜವಾಬ್ದಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಕೂಡಲೇ ಬಸ್ ವ್ಯವಸ್ಥೆ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಸ್ನಿಲ್ದಾಣಗಳಲ್ಲಿ ಜಾಹೀರಾತು: ಬಿಜೆಪಿ ಪರ ಚುನಾವಣಾ ಆಯೋಗಕ್ಕೆ ಮೃದು ಧೋರಣೆ ಏಕೆ?; ಕಾಂಗ್ರೆಸ್ ಪ್ರಶ್ನೆ