ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟದ ಮುಂದುವರೆದ ಭಾಗವಾಗಿ ನಿನ್ನೆ (ಶುಕ್ರವಾರ) ಶಿಗ್ಗಾಂವಿಯಲ್ಲಿ ಹೋರಾಟಗಾರರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಸಮುದಾಯದ ನಾಯಕರು ವಾಗ್ಧಾಳಿ ನಡೆಸಿದರು.
ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, “ಬಸವರಾಜ ಬೊಮ್ಮಾಯಿ ಅವರ ನಿಷ್ಕಾಳಜಿಯಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುವ ಅವಕಾಶ ತಪ್ಪಿದೆ. ಈ ಹಿಂದೆ ನಾವು ನಮ್ಮ ಹೋರಾಟ ತೀವ್ರಗೊಳಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಮಾಡಿದ್ದೆವು. ಆಗ ಬೊಮ್ಮಾಯಿಯವರು, ನಿಮಗೆ 2ಎ ಮೀಸಲಾತಿ ಕೊಟ್ಟೇಕೊಡ್ತೀವಿ ಎಂದು ತಾಯಿಯ ಮೇಲೆ ಆಣೆ ಮಾಡಿದ್ದರು. ಆಗ ನಾವು ನಂಬಿಕೆ ಇಟ್ಟು ಹೋರಾಟವನ್ನು ಸ್ಥಗಿತಗೊಳಿಸಿದೆವು. ಆದರೆ ದುರ್ದೈವದ ಸಂಗತಿಯೆಂದರೆ ತಾಯಿ ಮೇಲೆ ಆಣೆ ಪ್ರಮಾಣ ಮಾಡಿಯೂ ನೀವು ಮಾತು ತಪ್ಪಿದ್ದೀರಿ. ಈ ಬಾರಿ ನಾವು ಸುಮ್ಮನೆ ಇರಲ್ಲ. ನಿಮ್ಮ ಮೇಲೆ ಯಾವ ನಂಬಿಕೆಯೂ ನಮ್ಮ ಸಮುದಾಯಕ್ಕೆ ಇಲ್ಲ, ನಿಮ್ಮಿಂದ ಅನ್ಯಾಯ ಆಗಿದೆ. ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಮ್ಮ ಬೇಡಿಕೆ ಈಡೇರಬೇಕು” ಎಂದು ಆಗ್ರಹಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದೇ ವೇಳೆ ಸರ್ಕಾರದ ಮಂತ್ರಿಯೊಬ್ಬರು ಎಂದು ಸಂಬೋಧಿಸಿ ಹೆಸರು ಹೇಳದೇ, “ಪಿಂಪ್ ಮಂತ್ರಿಯೊಬ್ಬ ನನಗೆ ಟಿಕೆಟ್ ಕೊಡದಂತೆ ಮಾಡ್ತೀನಿ ಎಂದು ಹೇಳುತ್ತಾನೆ. ಮೊದಲು ಅವನು ತನ್ನ ಬಗ್ಗೆ ಯೋಚಿಸಲಿ, ಸ್ವಾಮೀಜಿಗಳಿಗೆ ದುಡ್ಡು ಕೊಟ್ಟು ಮುಖ್ಯಮಂತ್ರಿಯವರ ಮೇಲೆ ಒತ್ತಡ ತಂದು ಮಂತ್ರಿಯಾದವನು ಅವನು” ಎಂದು ಹೇಳಿದ್ದರು. ಯತ್ನಾಳ್ ಮತ್ತು ಮುರಗೇಶ್ ನಿರಾಣಿ ನಡುವೆ ಜಿದ್ದಾಜಿದ್ದಿ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ ಯತ್ನಾಳ್ ವಾಗ್ದಾಳಿ ನಡೆಸಿದ್ದು ನಿರಾಣಿ ಮೇಲೇಯೇ ಎಂಬುದು ಸ್ಪಷ್ಟ.
ಇದಕ್ಕೆ ಪ್ರತಿಯಾಗಿ ಸರ್ಕಾರದ ಭಾಗಿಯಾಗಿರುವ ಲಿಂಗಾಯತ ಸಮುದಾಯದ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, “ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡಿರುವುದನ್ನು ನಾವು ಖಂಡಿಸುತ್ತೇನೆ. ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೂಡಿ ಸ್ವಾಮೀಜಿಗಳು ಹಾಗೂ ಯತ್ನಾಳ ಅವರು ಹೋರಾಟ ನಡೆಸುತ್ತಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಸ್ವಾಮೀಜಿಗಳಾಗಲಿ, ಕಾಂಗ್ರೆಸ್ನಲ್ಲಿರುವ ಪಂಚಮಸಾಲಿ ನಾಯಕರು ಮೀಸಲಾತಿಗೆ ಧ್ವನಿ ಎತ್ತಲಿಲ್ಲ. ಆದರೆ ನಮ್ಮ ಸರ್ಕಾರ 2ಸಿ, 2ಡಿ ಪ್ರವರ್ಗ ಸೃಷ್ಟಿಸಿ ಮೀಸಲಾತಿ ಹೆಚ್ಚಿಸುವ ನಿರ್ಧಾರಕ್ಕೆ ಬಂದಿತ್ತು. ಆದರೆ ಈ ಹೋರಾಟಗಾರರಿಗೆ ಸಮಾಧಾನವಿಲ್ಲ. ಇವರ ಹೋರಾಟ ಮೀಸಲಾತಿಗಾಗಿ ಎನ್ನುವುದಕ್ಕಿಂತ ಬಿಜೆಪಿ ವಿರುದ್ಧ ಎನ್ನುವಂತಾಗಿದೆ” ಎಂದು ಆರೋಪ ಮಾಡಿದರು.
ಈ ಬಗ್ಗೆ ಸಚಿವ ಮುರಗೇಶ್ ನಿರಾಣಿ ಮಾತನಾಡಿದ್ದು, “ನಮ್ಮ ಸರ್ಕಾರಕ್ಕೆ 2ಎ ಮೀಸಲಾತಿ ಕೊಡುವ ಬಗ್ಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ ಬೇರೆ ಸಮುದಾಯಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ 2ಸಿ, 2ಡಿ ಪ್ರವರ್ಗ ಸೃಷ್ಟಿ ಮಾಡಿ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಯವರು ನಿರ್ಧಾರ ಮಾಡಿದ್ದಾರೆ. ಆದರೂ ಕೂಡ ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದರೆ ಇದು ರಾಜಕಾರಣದ ಹೊರತಾಗಿ ಮತ್ತೇನು ಅಲ್ಲ. ಈ ಹೋರಾಟದ ಮುಂಚೂಣಿಯ ನಾಯಕರು ಲಿಂಗಾಯತವನ್ನು ಒಡೆಯುವಂತಹ ಪ್ಲ್ಯಾನ್ ಮಾಡಿದ್ದಾರೆ” ಎಂದು ಆರೋಪಿಸಿದರು.
ನಿರಾಣಿ ಕೂಡ ಹೆಸರು ಹೇಳದೇ ವಿಜಯಪುರದ ನಾಯಕ ಎಂದು ಸಂಬೋಧಿಸಿ, “ಅವನದ್ದು ಎಲುಬಿಲ್ಲದ ನಾಲಿಗೆ, ದೀಪ ಆರುವ ಮುನ್ನ ಹೆಚ್ಚು ಉರಿಯುತ್ತದೆ. ಹಾಗಾಗಿ ಆತನ ಮಾತು ಮಿತಿಮೀರುತ್ತಿದೆ. ಆತ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ಆ ರೀತಿಯಲ್ಲಿ ಮಾತಾಡ್ತಿರಲಿಲ್ಲ. ಪಿಂಪ್ ಕೆಲಸ ಅವರೇ ಯಾರಾದ್ರೂ ಮಾಡಿರಬಹುದು. ಅದಕ್ಕೆ ಆ ಪದ ಬಳಸುತ್ತಿದ್ದಾರೆ. ಹೀಗೆ ನೀನು ನಾಲಿಗೆ ಹರಿಬಿಟ್ಟರೆ ನಿನ್ನ ನಾಲಿಗೆ ಕತ್ತರಿಸುವಂತ ಸಮಯ ಬರುತ್ತೆ ಹುಷಾರ್” ಎಂದು ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ
“ಅವನೊಬ್ಬ (ಯತ್ನಾಳ) ಢೋಂಗಿ ಮನುಷ್ಯ, ಮುಸ್ಲಿಂ ಸಮುದಾಯದ ಜೊತೆ ಹೋದ್ರೆ ಟೋಪಿ ಹಾಕಿಕೊಂಡು ಟಿಪ್ಪುವನ್ನು ಹೊಗಳುವುದು, ಹಿಂದೂ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವಿರುದ್ಧ ಮಾತನಾಡುವುದು- ಇದೇನು ನಾಟಕ ಕಂಪನಿನಾ? ಇಲ್ಲಿಯವರೆಗೂ ನಮ್ಮ ಪಕ್ಷದ ನಾಯಕರು ನಿಮ್ಮ ಬಗ್ಗೆ ಸಹನೆಯಿಂದ ಇದ್ದಾರೆ. ಹೀಗೆ ಮುಂದುವರಿದರೆ ಪರಿಸ್ಥಿತಿ ಬೇರೆಯೇ ಆಗತ್ತದೆ” ಎಂದು ಯತ್ನಾಳ್ಗೆ ನಿರಾಣಿ ಎಚ್ಚರಿಕೆ ನೀಡಿದರು.
“ನಮ್ಮ ಪಕ್ಷದ ಮೇಲೆ ನಮ್ಮ ನಾಯಕರ ಮೇಲೆ ನಿನಗೆ ಗೌರವ ಇಲ್ಲ ಎನ್ನುವುದಾದರೆ. ನಮ್ಮ ಪಕ್ಷದಲ್ಲಿ ಯಾಕೆ ಇದ್ದೀಯಾ? ರಾಜೀನಾಮೆ ಕೊಟ್ಟು ಹೊರನಡೆದು ಮಾತನಾಡು” ಎಂದು ನಿರಾಣಿ ಆಕ್ರೋಶ ಹೊರಹಾಕಿದರು.
ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಬೇಕು ಎಂದು ಕೆಲವು ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರದ ಭಾಗವಾಗಿರುವ ಪಂಚಮಸಾಲಿ ಸಮುದಾಯದ ನಾಯಕರು, ಈ ಹೋರಾಟ ಬಿಜೆಪಿಯ ಹೋರಾಟ ಎಂದು ಬಿಂಬಿಸುತ್ತಿದ್ದಾರೆ. ಅದರಲ್ಲೂ ಯತ್ನಾಳ ಹಾಗೂ ನಿರಾಣಿ ವೈಯಕ್ತಿಕ ದಾಳಿಯಲ್ಲಿ ನಿರತರಾಗಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟ ಸಮುದಾಯದ ನಾಯಕರಲ್ಲಿ ವಾಗ್ಯುದ್ಧಕ್ಕೆ ಕಾರಣವಾಗಿದೆ. ಇದರಿಂದ ಸಮುದಾಯದ ಮೇಲೆ ಯಾವ ಪರಿಣಾಮ ಉಂಟು ಮಾಡಬಹುದೆಂಬುದು ಸದ್ಯದ ಕುತೂಹಲವಾಗಿದೆ.