Homeದಲಿತ್ ಫೈಲ್ಸ್ದಲಿತರು ಕುಡಿಯುವ ನೀರಿನಲ್ಲಿ ಮಲ ಬೆರೆಸಿದ ಪ್ರಕರಣ: ಸಂತ್ರಸ್ತರಿಗೆ ಪೊಲೀಸರಿಂದ ಬೆದರಿಕೆ- ಪ.ರಂಜಿತ್ ಆರೋಪ

ದಲಿತರು ಕುಡಿಯುವ ನೀರಿನಲ್ಲಿ ಮಲ ಬೆರೆಸಿದ ಪ್ರಕರಣ: ಸಂತ್ರಸ್ತರಿಗೆ ಪೊಲೀಸರಿಂದ ಬೆದರಿಕೆ- ಪ.ರಂಜಿತ್ ಆರೋಪ

- Advertisement -
- Advertisement -

“ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ದುಷ್ಕರ್ಮಿಗಳು ಮಲವನ್ನು ಬೆರೆಸಿದ್ದಾರೆ ಎಂದು ಕಳೆದ ತಿಂಗಳು ದೂರು ನೀಡಿದ್ದ ವೆಂಗವಾಯಲ್ ಗ್ರಾಮಸ್ಥರಿಗೆ ಪುದುಕ್ಕೋಟೈ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ” ಎಂದು ಖ್ಯಾತ ಸಿನಿಮಾ ನಿರ್ದೇಶಕ ಪ.ರಂಜಿತ್‌ ಶುಕ್ರವಾರ ಆರೋಪಿಸಿದ್ದಾರೆ.

“ಈ ಅಪರಾಧ ಕೃತ್ಯವನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾರೆ. ಈ ಅಪರಾಧದ ಹಿಂದೆ ಸಂತ್ರಸ್ತರೇ ಇರುವುದಾಗಿ ಪೊಲೀಸರು ಆರೋಪಿಸುತ್ತಿದ್ದಾರೆ” ಎಂದು ರಂಜಿತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಮನಿತ ಸಮುದಾಯಗಳ ಪರವಾಗಿ ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಾಣವನ್ನೂ ಮಾಡುವ ಮೂಲಕ ದಲಿತ ಅಸ್ಮಿತೆಗೆ ಒತ್ತು ನೀಡಿರುವ ಅಂಬೇಡ್ಕರ್‌ವಾದಿ ರಂಜಿತ್‌, “ಸಾಮಾಜಿಕ ಅನ್ಯಾಯ ಇನ್ನೂ ಮುಂದುವರಿದಿದೆ” ಎಂದಿದ್ದಾರೆ.

“ಸಾಮಾಜಿಕ ಅನ್ಯಾಯ ಇನ್ನೂ ಮುಂದುವರಿದಿದೆ. ಪುದುಕ್ಕೋಟೈನ ವೆಂಗವಯಲ್ ಗ್ರಾಮದಲ್ಲಿ ಮನುಷ್ಯರ ಮಲವನ್ನು ಬೆರೆಸಿದ ಪ್ರಕರಣದಲ್ಲಿ ದುಷ್ಕರ್ಮಿಗಳನ್ನು ಗುರುತಿಸಲು ಪ್ರಯತ್ನಿಸದೆ ತಮಿಳುನಾಡು ಪೊಲೀಸ್ ಇಲಾಖೆಯು ತನಿಖೆಯ ಹೆಸರಿನಲ್ಲಿ ಸಂತ್ರಸ್ತರನ್ನೇ ಟಾರ್ಗೆಟ್ ಮಾಡುತ್ತಿದೆ. ಈ ಕೃತ್ಯವನ್ನು ಒಪ್ಪಿಕೊಳ್ಳುವಂತೆ ಸಂತ್ರಸ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

“ದಲಿತರೇ ಹೆಚ್ಚಾಗಿರುವ ಗ್ರಾಮದ ನಿವಾಸಿಗಳನ್ನು ಭೇಟಿಯಾಗಿ ಘಟನೆಯ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಶಾಸಕರು ಮತ್ತು ಆದಿ ದ್ರಾವಿಡ ಕಲ್ಯಾಣ ಸಚಿವರಿಗೆ ಧೈರ್ಯವಿಲ್ಲ” ಎಂದು ಅವರು ಟೀಕಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಕೆಲವು ಮಕ್ಕಳು ಅಸ್ವಸ್ಥತೆ ಅನುಭವಿಸಿದ ನಂತರ ಅನ್ನವಾಸಲ್ ಬ್ಲಾಕ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಗ್ರಾಮಕ್ಕೆ ಪೂರೈಕೆಯಾಗುವ ನೀರು ಕಲುಷಿತವಾಗಿದೆಯೇ ಎಂದು ಪರಿಶೀಲಿಸುವಂತೆ ಅವರ ಪೋಷಕರಿಗೆ ತಿಳಿಸಿದರು. ಆಗ ನೀರಿನಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಟ್ಯಾಂಕ್‌ ಪರಿಶೀಲಿಸಿದಾಗ ಅದರಲ್ಲಿ ಮಲಮೂತ್ರ ಪತ್ತೆಯಾಗಿತ್ತು.

ಈ ಘಟನೆಯು ಆಕ್ರೋಶಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿ ಕವಿತಾ ರಾಮು ಮತ್ತು ಎಸ್ಪಿ ವಂದಿತಾ ಪಾಂಡೆ ಅವರು ಪ್ರಕರಣದ ಕುರಿತು ಗಮನ ಹರಿಸಿದ ನಂತರ ಐಪಿಸಿ ಸೆಕ್ಷನ್ 277 (ಯಾವುದೇ ಸಾರ್ವಜನಿಕ ಟ್ಯಾಂಕ್‌ ಅಥವಾ ಜಲಾಶಯದ ನೀರನ್ನು ಕಲುಷಿತಗೊಳಿಸುವುದು), 328 (ಅಪರಾಧದ ಉದ್ದೇಶದೊಂದಿಗೆ ವಿಷವನ್ನು ಬಳಸುವ ಮೂಲಕ ನೋವುಂಟು ಮಾಡುವುದು) ಮತ್ತು ಎಸ್‌ಸಿ/ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಿಡಿಗೇಡಿಗಳನ್ನು ಶೀಘ್ರದಲ್ಲೇ ಹಿಡಿಯಲಾಗುವುದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದರು.

ಇದನ್ನೂ ಓದಿರಿ: ಭಾರತದ ವಿಜ್ಞಾನ ಕ್ಷೇತ್ರದಲ್ಲಿ ದಲಿತರಿಗಿಲ್ಲ ಹೆಚ್ಚಿನ ಪ್ರಾತಿನಿಧ್ಯ: ‘ನೇಚರ್‌’ ವರದಿ

ಎರಡು ದಿನಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸದನದಲ್ಲಿ ಮಾತನಾಡುತ್ತಾ, “ರಾಜ್ಯವು ಕೋಮು ವಿಭಜಕ ಮತ್ತು ಸಮಾಜ ವಿರೋಧಿ ಶಕ್ತಿಗಳನ್ನು ಗಟ್ಟಿಯಾಗಿ ಎದುರಿಸಲಿದೆ” ಎಂದು ಹೇಳಿದ್ದರು. ಘಟನೆಯ ಕುರಿತು ಶಾಸಕರು ವಿಶೇಷ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸ್ಟಾಲಿನ್, “ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆ ಇನ್ನೂ ಚಾಲ್ತಿಯಲ್ಲಿದೆ ಎಂಬುದನ್ನು ಈ ಘಟನೆ ಸೂಚಿಸುತ್ತದೆ. ವಿಶೇಷ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ. ಇದುವರೆಗೆ 70 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ಹೇಳಿದ್ದರು.

“7 ಲಕ್ಷ ರೂ. ವೆಚ್ಚದಲ್ಲಿ ಹೊಸ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. 2 ಲಕ್ಷ ರೂ.ವೆಚ್ಚದಲ್ಲಿ ಗ್ರಾಮದ ಎಲ್ಲಾ 32 ಮನೆಗಳಿಗೆ ಹೊಸ ಕುಡಿಯುವ ನೀರಿನ ಪೈಪ್ ಸಂಪರ್ಕವನ್ನು ನೀಡಲಾಗುವುದು. ನೈರ್ಮಲ್ಯ ನಿರೀಕ್ಷಕರ ಮೇಲ್ವಿಚಾರಣೆಯಲ್ಲಿ ದಿನಕ್ಕೆ ಎರಡು ಬಾರಿ ಟ್ರಕ್‌ಗಳನ್ನು ಬಳಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ” ಎಂದು ಮುಖ್ಯಮಂತ್ರಿ ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...