ಪೌರತ್ವ ಕಾಯ್ದೆ ವಿರೋಧಿಸಿ ನಡೆಯುವ ಪ್ರತಿಭಟನೆಯನ್ನು ತಡೆಯುವ ಉದ್ದೇಶಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ನಿನ್ನೆಯಿಂದಲೇ 144 ಸೆಕ್ಷನ್ ಜಾರಿಗೊಳಿಸಿತ್ತು. ಅದರಂತೆ ಬೆಳಿಗ್ಗೆ ಪೊಲೀಸರು ಸಿಕ್ಕಸಿಕ್ಕವರನ್ನು ಬಂಧಿಸಿದ್ದರು. ಆ ಮೂಲಕ ತಾವು ಗೆದ್ದವೆಂದು ಪೊಲೀಸರು ಭಾವಿಸಿದ್ದರು. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದ್ದು ಟೌನ್ಹಾಲ್ ಮುಂದೆ ಜನಸಾಗರವೇ ಹರಿದುಬಂದಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದಷ್ಟೂ ತೀವ್ರ ರೂಪ ಪಡೆದುಕೊಳ್ಳುತ್ತಿದೆ. ಮೂರು ಸಾವಿರಕ್ಕೂ ಹೆಚ್ಚು ಜನ ಟೌನ್ ಹಾಲ್ ಮುಂದೆ ಜಮಾಯಿಸಿ ಪ್ರತಿಭಟಿಸುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೇ, ಕಲಬುರಗಿ, ಮೈಸೂರು, ಹಾಸನ, ಬಳ್ಳಾರಿ, ಚಿಕ್ಕಮಗಳೂರು ಮುಂತಾದ ಕಡೆ ತೀವ್ರ ಪ್ರತಿಭಟನೆಗಳು ದಾಖಲಾಗಿವೆ.
ಇನ್ನು ಜನಸಾಗರ ಟೌನ್ಹಾಲ್ ಕಡೆ ಹರಿದುಬರುತ್ತಿದ್ದು ಪೊಲೀಸರು ಲಾಠಿ ಚಾರ್ಜ್ ಮಾಡುವ ಸಂಭವವಿದೆ. ಪ್ರತಿಭಟನಾಕಾರರು ಮಾತ್ರ ಶಾಂತಿ ಕಾಯ್ದುಕೊಂಡು ಘೋಷಣೆಗಳ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.