26 ಪ್ರತಿಪಕ್ಷಗಳು ಒಗ್ಗಟ್ಟಾಗಿರುವುದಕ್ಕೆ ಬೆದರಿರುವ ಪ್ರಧಾನಿ ಮೋದಿ ಕೂಡಲೇ ಎನ್ಡಿಎ ಬಗ್ಗೆ ಚಿಂತಿತರಾಗಿ ಸಭೆ ಕರೆದಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಹೊತ್ತಿರುವ ಜೈರಾಂ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ ವಿಪಕ್ಷಗಳ 2ನೇ ಸಭೆ ಕುರಿತು ಮಾತನಾಡಿರುವ ಅವರು, “ಪಾಟ್ನಾದಲ್ಲಿ 24 ಪಕ್ಷಗಳು ಸೇರಿ ಫಲಪ್ರದವಾದ ಸಭೆ ನಡೆಸಿದೆವು. ಈಗ ಬೆಂಗಳೂರಿನಲ್ಲಿ 26 ಪಕ್ಷಗಳು ಸೇರುತ್ತಿದ್ದೇವೆ. ಇದು ಮೋದಿಗೆ ನಡುಕ ಹುಟ್ಟಿಸಿದೆ” ಎಂದಿದ್ದಾರೆ.
ಇಷ್ಟು ದಿನ ಸುಮ್ಮನಿದ್ದ ಮೋದಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ಬೆಚ್ಚಿ ಎನ್ಡಿಎ ಕುರಿತು ಚಿಂತಾಕ್ರಾಂತರಾಗಿದ್ದಾರೆ. ಹಾಗಾಗಿ ಜುಲೈ 18ರಂದೇ ಅದರ ಸಭೆ ಕರೆದಿದ್ದಾರೆ, ಇದು ನಮ್ಮ ವಿಪಕ್ಷಗಳ ಒಗ್ಗಟ್ಟಿನ ಫಲಿತಾಂಶ ಎಂದು ಜೈರಾಂ ರಮೇಶ್ ಹೇಳಿದ್ದಾರೆ.
ಶರದ್ ಪವಾರ್ ಸಭೆಗೆ ಗೈರು ಹಾಜರಾಗುತ್ತಿರುವುದರ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೆಲ ಮುಖಂಡರು ಕೆಲಸದ ನಿಮಿತ್ತ ಇಂದಿನ ಸಭೆಗೆ ಹಾಜರಾಗುತ್ತಿಲ್ಲ. ಆದರೆ ಅವರೆಲ್ಲ ನಾಳಿನ ಸಭೆಗೆ ಖಂಡಿತ ಹಾಜರಾಗುತ್ತಾರೆ ಎಂದು ತಿಳಿಸಿದ್ದಾರೆ.
ವಿಪಕ್ಷಗಳ ಸಭೆ ಗೇಮ್ ಚೇಂಜರ್ ಆಗಲಿದೆ – ಕೆ.ಸಿ ವೇಣುಗೋಪಾಲ್
ವಿಪಕ್ಷಗಳ ಮಹಾ ಒಗ್ಗಟ್ಟಿನ ಈ ಸಭೆಯು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಎಐಸಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಲು ಬಿಜೆಪಿ ಬಯಸುತ್ತಿದ್ದು, ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಹುಲ್ ಗಾಂಧಿಯವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದು ಅದಕ್ಕೆ ದೊಡ್ಡ ಉದಾಹರಣೆಯಾಗಿದೆ. ಅದಕ್ಕೆ ಪ್ರತಿಯಾಗಿ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸಹ ಮೋದಿ ಜನರ ನೋವು ಕೇಳಲಿಲ್ಲ. ದೇಶದಾದ್ಯಂತ ಬೆಲೆ ಏರಿಕೆ ಆಗುತ್ತಿದೆ. ನಿರುದ್ಯೋಗ ಕಾಡುತ್ತಿದೆ. ಆದರೂ ಆಳುವವರಿಗೆ ಅವು ತಟ್ಟುತ್ತಿಲ್ಲ ಎಂದು ಅವರು ಕಿಡಿಕಾರಿದರು.
ನಮ್ಮ ಸಭೆಯಲ್ಲಿ ದೇಶಾದಾದ್ಯಂತ ಸುಮಾರು 400 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಹಾಕಿ ಬಿಜೆಪಿ ಸೋಲಿಸುವ ಗುರಿ ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; ಬೆಂಗಳೂರಿನಲ್ಲಿ ಇಂದಿನಿಂದ ವಿಪಕ್ಷಗಳ ಸಮಾವೇಶ; ಆಪ್ ಸೇರಿ 26 ರಾಜಕೀಯ ಪಕ್ಷಗಳು ಭಾಗಿ