ಮುಂಬರುವ ಲೋಕಸಭಾ ಚುನಾವಣೆಗೆ ಎನ್ಡಿಎ ಒಕ್ಕೂಟವನ್ನು ಸೇರಲು ರಾಜ್ಯದ ಪ್ರದೇಶಿಕ ಪಕ್ಷ ಜೆಡಿಎಸ್ ಸಿದ್ದತೆ ನಡೆಸಿದೆ ಎನ್ನುವ ಚರ್ಚೆಗೆ ಮುನ್ನಲೆಗೆ ಬಂದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕುಮಾರಸ್ವಾಮಿಗೆ ನಿಜವಾಗಿಯೂ ಬಿಜೆಪಿ ವಿರುದ್ಧ ಹೋರಾಡುವ ಮನಸ್ಸಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಡೆಯುತ್ತಿರುವ ವಿರೋಧ ಪಕ್ಷಗಳ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಅವರು, ”ವಿರೋಧ ಪಕ್ಷಗಳು ಜೆಡಿಎಸ್ ಅನ್ನು ಅವರ ಭಾಗವೆಂದು ಪರಿಗಣಿಸಿಯೇ ಇಲ್ಲ. ಹಾಗಾಗಿ, ಜೆಡಿಎಸ್ ಯಾವುದೇ ಮಹಾಘಟಬಂಧನದ ಭಾಗವಾಗುವ ಪ್ರಶ್ನೆಯೇ ಇಲ್ಲ” ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದ್ದರು.
ಕುಮಾರಸ್ವಾಮಿ ಅವರ ಈ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ”ಕುಮಾರಸ್ವಾಮಿಗೆ ನಿಜವಾಗಿಯೂ ಬಿಜೆಪಿ ವಿರುದ್ಧ ಹೋರಾಡುವ ಮನಸ್ಸಿದ್ದರೆ ಆ ಕುರಿತಂತೆ ಅಜೆಂಡಾದಲ್ಲಿ ಚರ್ಚೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.
”ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುವ ಯಾರು ಬೇಕಾದರೂ ನಮ್ಮ ಕೈ ಜೋಡಿಸಬಹುದು. ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ” ಎಂದು ವಿರೋಧ ಪಕ್ಷಗಳ ಸಭೆಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡದಿರುವ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ.
”ಜೆಡಿಎಸ್ನವರು ತಮ್ಮ ನಿಲುವು ಏನು ಎಂಬುದನ್ನು ಕಳೆದ ವರ್ಷವೇ ಸಾಬೀತುಪಡಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎನ್ಡಿಎ ಮೈತ್ರಿಕೂಟ ಸೇರಲು ಜೆಡಿಎಸ್ ಸಜ್ಜು?
ಎನ್ಡಿಎ ಮೈತ್ರಿ ಕುರಿತು ಹೆಚ್ಡಿಕೆ ಹೇಳಿದ್ದೇನೆ?
”ರಾಷ್ಟ್ರ ರಾಜಕಾರಣದ ಕುರಿತು ನನಗೆ ಯಾವುದೇ ಒಲವಿಲ್ಲ. ಎನ್ಡಿಎ ಜೊತೆ ಜೆಡಿಎಸ್ ಮೈತ್ರಿ ವಿಚಾರ ಮತ್ತು ಕೇಂದ್ರದಲ್ಲಿ ನನ್ನನ್ನು ಸಚಿವನನ್ನಾಗಿ ಮಾಡು ವಿಚಾರವೂ ಗೊತ್ತಿಲ್ಲ. ವಿರೋಧ ಪಕ್ಷದ ಸ್ಥಾನವೂ ನನಗೆ ಬೇಕಿಲ್ಲ” ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಾನೊಬ್ಬ ಸಾಮಾನ್ಯ ವಿಧಾನಸಭಾ ಸದಸ್ಯನಾಗಿ ರಾಜ್ಯದ ಜನರ ಪರ ಕೆಲಸ ಮಾಡುತ್ತೇನೆ” ಎಂದರು.
”ಕೆಲವು ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂಬ ಸುದ್ದಿ ಯಾಕೆ ಚರ್ಚೆಯಾಗುತ್ತಿದೆ ಎಂಬುದು ಗೊತ್ತಿಲ್ಲ. ನನಗೆ ಮಹಾಘಟಬಂಧನ ಮತ್ತು ಎನ್ಡಿಎ ಎರಡರಿಂದಲೂ ಆಹ್ವಾನವಿಲ್ಲ. ಆಹ್ವಾನ ಬಂದಾಗ ಏನು ಮಾಡಬೇಕು ಎಂಬುದನ್ನು ಪಕ್ಷದ ಇತರ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ” ಎಂದು ಹೇಳುವ ಮೂಲಕ ತಾವು ಎನ್ಡಿಎ ಸೇರುವ ಹಾಗೂ ಮಹಾಘಟಬಂಧನದ ಭಾಗವಾಗುವ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕನನ್ನು ಬೇಗ ನೇಮಕ ಮಾಡಿ: ಬಿಜೆಪಿ ಹೆಚ್ಡಿಕೆ ಮನವಿ
ಈ ವೇಳೆ ವಿರೋಧ ಪಕ್ಷದ ನಾಯಕನ ಸ್ಥಾನಮಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ”ನಾಡಿನ ಜನತೆ ನನ್ನನ್ನು ಸ್ಥಾನಮಾನದಿಂದ ಗುರುತಿಸಿಲ್ಲ. ಎಲ್ಲೇ ಹೋದರೂ ನನ್ನ ವೈಯಕ್ತಿಕ ವರ್ಚಸ್ಸಿನಿಂದ ಗುರುತಿಸುತ್ತಾರೆ. ಸ್ಥಾನಮಾನಗಳಿಂದ ವರ್ಚಸ್ಸು ಗಳಿಸಬೇಕಿಲ್ಲ. ನಾನೂ ಈಗಲೂ ಬಿಜೆಪಿ ನಾಯಕರಲ್ಲಿ ಮನವಿ ಮಾಡುತ್ತೇನೆ. 65 ಸ್ಥಾನ ಗೆದ್ದಿರುವ ಆ ಪಕ್ಷದಲ್ಲಿ ಹಲವು ಹಿರಿಯ ನಾಯಕರಿದ್ದಾರೆ. ಒಬ್ಬ ಸಮರ್ಥ ನಾಯಕನನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿ. ಈ ವಿಚಾರದಲ್ಲಿ ಕಾಲಹರಣ ಮಾಡಬೇಡಿ ಎಂದು ಆ ಪಕ್ಷದ ದೆಹಲಿ ನಾಯಕರಿಗೂ ಮನವಿ ಮಾಡುತ್ತೇನೆ” ಎಂದರು.
”ಮೈತ್ರಿ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ಸೇರಿದಂತೆ, ನಮ್ಮ ಪಕ್ಷದಿಂದ ಯಾವುದೇ ಬೇಡಿಕೆ ಇಲ್ಲ. ಆ ಕುರಿತು ಮಾತುಕತೆಯೂ ಆಗಿಲ್ಲ. ನಾವು 19 ಸ್ಥಾನ ಗೆದ್ದಿದ್ದೇವೆ, ಬಿಜೆಪಿ 65 ಸ್ಥಾನ ಗೆದ್ದಿದೆ. ಅಲ್ಲಿಯೂ ಮಾಜಿ ಮುಖ್ಯಮಂತ್ರಿ ಸೇರಿ ಅನೇಕ ಮಾಜಿ ಸಚಿವರಿದ್ದಾರೆ. ಹಾಗಾಗಿ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲಿ” ಎಂದು ಸಲಹೆ ನೀಡಿದ್ದಾರೆ.