ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಲ್ಲಿಸಿದ್ದ ದೂರನ್ನು ವಾಪಸ್ ಪಡೆಯಲು ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ಬರೆದಿದ್ದ ಪತ್ರಕ್ಕೆ ಉತ್ತರಿಸಿರುವ ಪೊಲೀಸರು, ದೂರು ಹಿಂಪಡೆಯಲು ಠಾಣಾ ಮಟ್ಟದಲ್ಲಿ ಅವಕಾಶವಿಲ್ಲವೆಂದು ಹೇಳಿದ್ದಾರೆ. ಜೊತೆಗೆ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ನೀಡಲು ಕಬ್ಬನ್ ಪಾರ್ಕ್ ಪೊಲೀಸರು ಚಿಂತನೆ ನಡೆಸಿದ್ದಾರೆ.
’ದೂರು ವಾಪಸ್ ಪಡೆದುಕೊಳ್ಳೊದಕ್ಕೆ ಆಗಲ್ಲ. ಮತ್ತೆ ದಿನೇಶ್ ಅವರನ್ನು ವಿಚಾರಣೆಗೆ ಕರೆಯಲಾಗುತ್ತೆ. ವಿಚಾರಣೆ ವೇಳೆ ದೂರು ವಾಪಸ್ ಪಡೆದುಕೊಳ್ಳೊದಕ್ಕೆ ಕಾರಣವೇನು ಎಂಬುದನ್ನು ಪ್ರಶ್ನಿಸಲಾಗುತ್ತದೆ ಎಂದು ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಜಾರಕಿಹೊಳಿ ಸಿಡಿ ಪ್ರಕರಣ: ದೂರು ವಾಪಸ್ ಪಡೆಯಲು ಮುಂದಾದ ದಿನೇಶ್ ಕಲ್ಲಹಳ್ಳಿ
ವಿಚಾರಣೆಯಲ್ಲಿ, ಬೆದರಿಕೆ ಕರೆಗಳು ಬರ್ತಾ ಇರೋದಕ್ಕೆ ದೂರು ವಾಪಸ್ ಪಡೆದುಕೊಳ್ಳುತ್ತಿದ್ದೀರಾ? ರಾಜಕೀಯ ಒತ್ತಡದಿಂದ ದೂರು ವಾಪಸ್ ಪಡೆಯುತ್ತಿದ್ದೀರಾ? ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ..? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮತ್ತೆ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ಕೊಟ್ಟು ಕರೆಸಲು ಪೊಲೀಸರ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ’ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದುಕೊಳ್ಳೊದಕ್ಕೆ ಆಗಲ್ಲ. ದೂರಿನ ಅರ್ಜಿ ಕ್ಲೋಸ್ ಮಾಡ್ಬೇಕೋ, ಬೇಡವೋ ಅನ್ನೋದು ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅವರು ದೂರು ಹಿಂಪಡೆಯಲು ಅರ್ಜಿ ನೀಡಿದ್ದಾರೆ ಅದನ್ನ ಸ್ವೀಕಾರ ಮಾಡಿದ್ದೇವೆ ಅಷ್ಟೇ. ಅರ್ಜಿ ಕೊಟ್ಟಿರುವ ಕಾರಣ ಅವರ ವಿಚಾರಣೆ ಕೂಡ ಆಗುತ್ತದೆ. ದೂರು ವಾಪಸ್ ಪಡೆದೆ ಎಂದು ಹೇಳಿದರೇ ಪ್ರಕರಣ ಮುಕ್ತಾಯ ಆಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿ ಅವರು ದೂರು ಹಿಂಪಡೆಯಲು ಸಲ್ಲಿಸಿದ್ದ ಅರ್ಜಿ ಇಲ್ಲಿದೆ.
ಇತ್ತ, ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯಲು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ನಕಲಿ ಸಿಡಿ ವಿಚಾರವಾಗಿ ಗಂಭಿರವಾದ ವಿಷಯಗಳನ್ನು ಪ್ರಕಟಿಸಲು ಸುದ್ದಿಗೋಷ್ಠಿ ಕರೆದಿರುವುದಾಗಿ ಚಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ
’ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಮಹಿಳೆಯನ್ನು ಸಂತ್ರಸ್ತ ಮಹಿಳೆ ಎಂದು ಕರೆಯಬೇಡಿ. ದಿನೇಶ್ ಕಲ್ಲಹಳ್ಳಿ ದೂರು ಕೊಡುವುದಕ್ಕೂ ಮುನ್ನವೇ ಈ ವೀಡಿಯೋವನ್ನು ರಷ್ಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕಾಗಿಯೇ 17 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಇದರ ಹಿಂದೆ ಒಬ್ಬ ಮಹಿಳೆ ಇದ್ದಾರೆ. ಇದರ ಹಿಂದೆ ನಾಲ್ಕು ಜನ ಇದ್ದಾರೆ, ಈ ನಾಲ್ವರ ಹಿಂದೆ ಮೂವರ ಟೀಮ್ ಇದೆ’ ಎಂದು ಆರೋಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ಹೆಸರನ್ನು ಹಾಳುಮಾಡಬೇಕು ಎಂದು ಈ ರೀತಿಯ ಷಡ್ಯಂತ್ರ ಮಾಡಿದ್ದಾರೆ. ಬಿಜೆಪಿಗೆ ಹಾಗೂ ರಮೇಶ್ ಕುಟುಂಬಕ್ಕೆ ಮುಜುಗರ ತರಲು ಷಡ್ಯಂತ್ರ ಮಾಡಿದ್ದಾರೆ. ಕೇವಲ ರಾಜಕೀಯ ಅಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಇರುವವರು ಇದರ ಹಿಂದೆ ಇದ್ದಾರೆ. ಇದರ ಸಮಗ್ರ ತನಿಖೆ ಆಗಬೇಕು. ಇದಕ್ಕಾಗಿ ರಮೇಶ್ ಜಾರಕಿಹೊಳಿ ದಯಮಾಡಿ ಹೊರಗಡೆ ಬಂದು ಸಿಎಂಗೆ ದೂರು ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿ ಅವರನ್ನು ಈ ತಂಡ ಬಳಸಿಕೊಂಡಿರಬಹುದು. ಅವರನ್ನು ಮಿಸ್ ಗೈಡ್ ಮಾಡಿರಬಹುದು. ಇದೊಂದು ಹನಿ ಟ್ರ್ಯಾಪ್ ಪ್ರಕರಣ ಆಗಿದೆ. ವೀಡಿಯೋ ಕಾಲ್, ವಿಡಿಯೋ ಎಲ್ಲವೂ ನಕಲಿ. ಹನಿಟ್ರ್ಯಾಪ್ ತಂಡದ ಮೊಬೈಲ್ ಸೇರಿದಂತೆ ಅವರ ಎಲ್ಲ ಮಾಹಿತಿ ಕೂಡ ಪೊಲೀಸರ ಬಳಿ ಇದೆ. ಈಗ ತನಿಖೆ ನಡೆಯುತ್ತಿರುವ ವೇಳೆ ನಾನು ಅದನ್ನೆಲ್ಲಾ ಬಹಿರಂಗ ಪಡಿಸೋಕೆ ಆಗುವುದಿಲ್ಲ’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಇದನ್ನೂ ಓದಿ: ‘ಇನ್ಮುಂದೆ ಕೈಗೆಟಕುವಂತಿಲ್ಲ’: ಐಟಿ ದಾಳಿ ಕುರಿತು ತಾಪ್ಸಿ ಪನ್ನು ಟ್ವೀಟ್