Homeಮುಖಪುಟ21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

“ಲಾಕ್‌ಡೌನ್‌ ” ಭಾಗಶಃ ಈ ಪದವನ್ನು ಈ ಹಿಂದೆ ಭಾರತೀಯರು ಎಂದಿಗೂ ಕೇಳಿರಲಿಕ್ಕಿಲ್ಲವೇನೋ? ಆದರೆ ಕಳೆದ 10 ದಿನಗಳಿಂದ ಈ ಪದವನ್ನು ಕೇಳುವುದಿರಲಿ, ಲಾಕ್‌ಡೌನ್‌ ನೀಡುತ್ತಿರುವ ಎಫೆಕ್ಟ್‌ಗೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನಿನ್ನೆ ಮೊನ್ನೆವರೆಗೆ ಆಫೀಸು, ಕೆಲಸ, ಮೋಜು ಮಸ್ತಿ ಎಂದು ಕೈಲಿ ಬೈಕ್-ಕಾರು ಹಿಡಿದು ಜಾಲಿ ರೌಂಡ್ ಹೊಡೆಯುತ್ತಿದ್ದವರು ಇಂದು ಮೈ ಮುದುಡಿ ಮನೆಯಲ್ಲೇ ಕೂರುವಂತಾಗಿದೆ.

- Advertisement -
- Advertisement -

ಮನೆಯಲ್ಲಿ ಇದ್ದು ಬೇಸರವಾಗಿ ರೌಂಡ್ ಹೊಡೆಯಲು ಹೊರ ಬಂದವರಿಗೆ ಪೊಲೀಸರು ಬೀಸುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 176. ಆದರೆ ಕಳೆದ 10 ದಿನದ ಅವಧಿಯಲ್ಲಿ ಪೊಲೀಸರ ಲಾಠಿ ರುಚಿ ಕಂಡವರ ಸಂಖ್ಯೆ 5600 ನ್ನೂ ಮೀರುತ್ತಿದೆ. ಅಲ್ಲದೆ ಸಿಎಂ ಸ್ವಕ್ಷೇತ್ರ ಶೀಕಾರಿಪುರದಲ್ಲಿ ಪೊಲೀಸರ ಏಟು ತಾಳಲಾರದೆ ಸುರೇಶ್ ನಾಯ್ಕ ಎಂಬ ಓರ್ವ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

130 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತದಂತಹ ದೇಶದಲ್ಲಿ ದಿಢೀರನೆ ಲಾಕ್ಡೌನ್ ಘೋಷಣೆ ಮಾಡಿದರೆ ಜನ ಹೇಗೆ ನಲುಗಬಹುದು ಎಂಬುದು ಭಾರತೀಯರಿಗೆ ಈಗ  ಅರ್ಥವಾಗಿರಬೇಕು. ಆದರೆ ಕಳೆದ 70 ವರ್ಷಗಳಲ್ಲಿ ಕಾಶ್ಮೀರದಲ್ಲಿ ಎಷ್ಟು ಬಾರಿ ಲಾಕ್‌ಡೌನ್‌ ಮಾಡಲಾಗಿದೆ. ಕಳೆದ ವರ್ಷ ಕಲಂ 370 ರದ್ದು ಪಡಿಸುವ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಸತತ 6 ತಿಂಗಳ ಕಾಲ ಲಾಕ್‌ಡೌನ್‌ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅಲ್ಲಿನ ಜನ ಹೇಗೆ ಕಷ್ಟಪಟ್ಟಿರಬೇಕು? ಜನ ಜೀವನ ಎಷ್ಟರ ಮಟ್ಟಿಗೆ ನಲುಗಿರಬೇಕು? ಆ 6 ತಿಂಗಳ ಅವಧಿಯಲ್ಲಿ ಅಲ್ಲಿನ ವ್ಯಾಪಾರ ವಹಿವಾಟು ಎಷ್ಟು ನಷ್ಟ ಅನುಭವಿಸಿರಬೇಕು? ಇದ್ಯಾವುದರ ಬಗ್ಗೆಯಾದರೂ ನಮಗೆ ಮಾಹಿತಿ ಇದೆಯಾ? ಈ ಕುರಿತು ಯೋಚಿಸುವ ಗೋಜಿಗೂ ನಾವು ಹೋಗಿರಲಿಕ್ಕಿಲ್ಲವೇನೋ? ಆದರೆ ಈಗ ಆ ಸಂದರ್ಭ ಎದುರಾಗಿದೆ. ಕಾಶ್ಮೀರದ ಆ 180 ದಿನದ ಲಾಕ್‌ಡೌನ್‌ ಎಂಬ ಕಪ್ಪು ದಿನದ ಕತೆಗಳನ್ನು ಹಾಗೂ ಅಲ್ಲಿನ ಬದುಕನ್ನು ಯೋಚಿಸಬೇಕಿದೆ.

6 ತಿಂಗಳು ಮನೆಯಲ್ಲೇ ಬಂದಿ

ಕೊರೋನಾ ಕಾರಣಕ್ಕೆ ಭಾರತದಲ್ಲಿ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಈ 21 ದಿನಗಳ ಕಾಲ ನಾವು ಮನೆಯಲ್ಲಿ ಕೂರುವುದೇ ನಮಗೆ ಕಷ್ಟವಾಗಿದೆ. ಆದರೆ, ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನ ಕಲಂ 370ನ್ನು ರದ್ದುಗೊಳಿಸಿದ ನಂತರ ಕಳೆದ ಆಗಸ್ಟ್ 05ರ ನಂತರ 6 ತಿಂಗಳು ಕಣಿವೆ ರಾಜ್ಯದ ಜನ ಮನೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಯಿತು.

ಅಗತ್ಯ ವಸ್ತುಗಳ ಖರೀದಿ ಹೊರತಾಗಿ ಬೇರೆ ಯಾವುದೇ ವಿಚಾರಕ್ಕೆ ಅವರು ಮನೆಯಿಂದ ಹೊರ ಬರುವಂತಿರಲಿಲ್ಲ. ರಾಜ್ಯದಲ್ಲಾದರೂ ಲಾಕ್‌ಡೌನ್‌ ಪಾಲನೆಗೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ, ಕಾಶ್ಮೀರದಲ್ಲಿ ಮಿಲಿಟರಿಯನ್ನೇ ನೇಮಕ ಮಾಡಲಾಗಿತ್ತು ಎಂದರೆ ಮನೆಯಿಂದ ಹೊರ ಬಂದವರಿಗೆ ಶಿಕ್ಷೆ ಹೇಗಿರುತ್ತಿತ್ತು ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.

ಕಣಿವೆ ರೈತರ ಗೋಳು ಕೇಳುವರ್ಯಾರು?

ದೇಶದಲ್ಲಿ ಯಾವುದೇ ಮೂಲೆಯಲ್ಲಿ ಓರ್ವ ರೈತ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಅದು ರಾಷ್ಟ್ರೀಯ ಸುದ್ದಿ. ಇನ್ನು ರಾಜ್ಯದಲ್ಲಿ ಓರ್ವ ರೈತ ಸತ್ತರೆ ಆಡಳಿತ ಪಕ್ಷದ ಕಾಲೆಳೆಯಲು ಟೀಕಿಸಲು ವಿರೋಧ ಪಕ್ಷಕ್ಕೆ ಸಿಕ್ಕ ದೊಡ್ಡ ಆಯುಧ. ಇನ್ನು ಮಾಧ್ಯಮಗಳಿಗೆ ಅದು ಹಾಟ್ ಬ್ರೇಕಿಂಗ್ ನ್ಯೂಸ್.

ಆದರೆ, ಕಾಶ್ಮೀರದಲ್ಲಿ ರೈತರು ಇಲ್ಲವೇ? ಅವರಿಗೆ ಸಾಲ ಇಲ್ಲವೇ? ಅಲ್ಲಿನ ರೈತರೂ ಮನುಷ್ಯರಲ್ಲವೇ? ಕಾಶ್ಮೀರದಲ್ಲಿ ಸಾಲದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವ ರೈತರ ಕುರಿತು ನಾವು ಮರುಗುವುದು ಬೇಡ, ಎಂದಾದರೂ ಈ ಕುರಿತು ಕನಿಷ್ಟ ಯೋಚನೆ ಮಾಡಿದ್ದೇವೆಯೇ ಎಂದು ನಮ್ಮ ಆತ್ಮಸಾಕ್ಷಿಯನ್ನು ನಾವು ಪ್ರಶ್ನೆ ಮಾಡಿಕೊಂಡರೆ ಉತ್ತರ ದಕ್ಕುತ್ತದೆ.

ಅಸಲಿಗೆ ಕಾಶ್ಮೀರದ ಪ್ರಮುಖ ಬೆಳೆ ಸೇಬು ಮತ್ತು ಕೇಸರಿ. ಭಾರತಕ್ಕೆ ಶೇ.90 ರಷ್ಟು ಸೇಬಿನ ಹಣ್ಣು ಕಣಿವೆ ರಾಜ್ಯ ಕಾಶ್ಮೀರದಿಂದಲೇ ಲಭ್ಯವಾಗುತ್ತದೆ. ಇನ್ನು ಶೇ.100 ರಷ್ಟು ಕೇಸರಿ ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ಕಾಶ್ಮೀರದ ಕೇಸರಿಗೆ ವಿಶ್ವದಾದ್ಯಂತ ಡಿಮ್ಯಾಂಡ್ ಇದೆ. ವಿಶ್ವದ ಕೇಸರಿ ಉತ್ಪಾದನೆಯಲ್ಲಿ ಕಾಶ್ಮೀರದ ಪಾಲು ಶೇ.07 ರಷ್ಟು. ಕಾಶ್ಮೀರದ ಸೇಬು ಸಹ ಸಾಕಷ್ಟು ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತದೆ.

2019ರಲ್ಲಿ ಕೇಸರಿ ಮತ್ತು ಸೇಬಿನ ಬೆಳೆ ಕಾಶ್ಮೀರಿ ರೈತರಿಗೆ ಉತ್ತಮವಾಗಿಯೇ ಕೈಸೇರಿತ್ತು. ಆದರೆ ಈ ಬೆಳೆ ಮಾರುಕಟ್ಟೆಗೆ ಸೇರುವ ಹೊತ್ತಿಗೆ ಲಾಕ್‌ಡೌನ್‌ ಘೋಷಿಸಿಯಾಗಿತ್ತು. ಪರಿಣಾಮ ಕಾಶ್ಮೀರ ಸೇಬು ಉದ್ಯಮ ಆಗಸ್ಟ್‌ನಿಂದ ಅಕ್ಟೋಬರ್ ವರೆಗಿನ ಕೇವಲ ಎರಡು ತಿಂಗಳಿನಲ್ಲಿ ಅನುಭವಿಸಿದ ನಷ್ಟ ಬರೋಬ್ಬರಿ 12,000 ಕೋಟಿ ಎನ್ನುತ್ತಿವೆ ಆರ್ಥಿಕ ವಿಶ್ಲೇಷಣೆಗಳು.

ಅಕ್ಟೋಬರ್ ನಂತರ ಕೇಂದ್ರ ಸರ್ಕಾರವೇ ನೇರ ಸೇಬು ಕೊಳ್ಳಲು ಮುಂದಾದರೂ ಅಷ್ಟರೊಳಗಾಗಲೇ ಶೇ. 60ಕ್ಕೂ ಹೆಚ್ಚು ಸೇಬು ಕೊಳೆತು ಅನುಪಯುಕ್ತವಾಗಿ ಹೋಗಿತ್ತು. ಆಕ್ಟೋಬರ್ ನಂತರವೂ ಅಲ್ಲಿನ ರೈತನ ಪರಿಸ್ಥಿತಿ ಸುಧಾರಿಸಿರಲಿಲ್ಲ.

ಇನ್ನೂ ಕುರಿ ಸಾಕಾಣಕೆ ಮತ್ತು ಉತ್ಕೃಷ್ಟ ಉಣ್ಣೆ ತಯಾರಿಕೆ ಇಲ್ಲಿನ ಉಪ ಕಸುಬು. ವರ್ಷಕ್ಕೆ ಸಾವಿರಾರು ಕೋಟಿ ಹಣ ಸಂಚಯಿಸುವ ಮತ್ತೊಂದು ದೊಡ್ಡ ಉದ್ಯಮವೇ ಸರಿ. ಆದರೆ, ಸತತ 6 ತಿಂಗಳ ಲಾಕ್‌ಡೌನ್‌ ಇಲ್ಲಿನ ಉಣ್ಣೆ ಉದ್ಯಮವನ್ನೂ ಇನ್ನಿಲ್ಲದಂತೆ ಕಾಡಿತ್ತು, ಅತ್ತ ಪ್ರಮುಖ ಉದ್ಯಮವಾದ ಸೇಬು ಕೇಸರಿಯೂ ಕೈಕೊಟ್ಟಿತ್ತು, ಇತ್ತ ಉಪ ಕಸುಬು ಇಲ್ಲದೆ ಇಲ್ಲಿನ ರೈತ ಸಂಕಷ್ಟಕ್ಕೆ ಒಳಗಾದದ್ದು ಹೊರ ಜಗತ್ತಿಗೆ ತಿಳಿಯಲೇ ಇಲ್ಲ.

ಪ್ರವಾಸೋದ್ಯಮವೂ ಮಕಾಡೆ ಮಲಗಿತ್ತು

ಪ್ರವಾಸೋದ್ಯಮ ಕಣಿವೆ ರಾಜ್ಯದ ಪ್ರಮುಖ ಉದ್ಯಮಗಳಲ್ಲೊಂದು. ಇಲ್ಲಿನ ಜನ ಅತಿಹೆಚ್ಚು ಅವಲಂಬಿತವಾಗಿರುವುದು ಪ್ರವಾಸೋದ್ಯಮವನ್ನೆ. ಪ್ರವಾಸೋದ್ಯಮ ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಮ್ಲ ಜನಕ ಎಂದರೂ ತಪ್ಪಾಗಲಾರದು. ಪ್ರವಾಸೋದ್ಯಮವನ್ನೇ ನಂಬಿ ಇಲ್ಲಿ ಸಾವಿರಾರು ಕುಟುಂಬಗಳು ಬದುಕುತ್ತಿವೆ.

ಆದರೆ, ದಿಢೀರನೆ ಬಂದೆರಗಿದ ಲಾಕ್ಡೌನ್ ಈ ಭಾಗದಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದವರ ಬದುಕನ್ನೇ ಕಸಿದಿತ್ತು. ಭಾರತದಲ್ಲೇ ಅತಿಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕಾಶ್ಮೀರವೂ ಒಂದು. ನಿರುದ್ಯೋಗದ ಜೊತೆಗೆ ಲಾಕ್‌ಡೌನ್‌‌ನಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕಿದ್ದವರ ಬದುಕು ಬೀದಿಗೆ ಬಂದದ್ದು ಈ ಕಾಲಾವಧಿಯಲ್ಲಿ, ಅಲ್ಲಿನ ಬಡತನ ರೇಖೆಗಿಂತ ಕೆಳಗಿದ್ದ ಶೇ.21.63 ರಷ್ಟು ಜನ ಅನುಭವಿಸಿದ ಕಷ್ಟವನ್ನು ಯಾವ ಅಂತಾರಾಷ್ಟ್ರೀಯ ಮಾಧ್ಯಮಗಳೂ ಸೆರೆ ಹಿಡಿಯಲೇ ಇಲ್ಲ.

ಲಾಕ್‌ಡೌನ್‌ ನೆಪದಲ್ಲಿ ಇಂಟರ್ನೆಟ್ ತಡೆ

ಭಾರತದಲ್ಲಿ ಇದೀಗ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಲಾಕ್‌ಡೌನ್‌ ನಡುವೆಯೂ ಎಲ್ಲಾ ಜನರಿಗೆ 4ಜಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಜನ ಮನೆಯಲ್ಲೇ ಇದ್ದೂ ವಿಶ್ವದ ಆಗುಹೋಗುಗಳನ್ನು ತಿಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಆದರೆ ಲಾಕ್‌ಡೌನ್‌ ಸಮಯದಲ್ಲಿ ಕಾಶ್ಮೀರದಲ್ಲಿ ಇಂಟರ್ನೆಟ್ ಮತ್ತು ಟೆಲಿಫೋನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು. ಪರಿಣಾಮ ಕಣಿವೆ ರಾಜ್ಯ 50 ವರ್ಷಗಳಷ್ಟು ಹಿಂದುಳಿಯುವಂತಾಗಿತ್ತು.

ಶಾಲಾ ಕಾಲೇಜುಗಳನ್ನು ಸತತ 6 ತಿಂಗಳು ಬಂದ್ ಮಾಡಲಾಗಿತ್ತು. ಮಕ್ಕಳಿಗೆ ಶಿಕ್ಷಣವೂ ದೂರ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಕ್ಡೌನ್ ತೆರವಾದ ನಂತರವೂ ಕಾಶ್ಮೀರಕ್ಕೆ ಸಮರ್ಪಕ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ. ಪರಿಣಾಮ ಅಲ್ಲಿನ ಶಾಲಾ ಬಾಲಕನೊಬ್ಬ ದಯವಿಟ್ಟು ಇಂಟರ್ನೆಟ್ ಕೊಡಿ ಇಲ್ಲಿ ಶಾಲೆಯೂ ಇಲ್ಲ ಇಂಟರ್ನೆಟ್ ಸಹ ಇಲ್ಲದೆ ನಾವು ಏನನ್ನೂ ಕಲಿಯಲಾಗುತ್ತಿಲ್ಲ. ದಶಕಗಳಷ್ಟು ಹಿಂದುಳಿದಂತೆ ಭಾಸವಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಭಾಗಶಃ ಯಾರೂ ಮರೆತಿರಲು ಸಾಧ್ಯವಿಲ್ಲ.

ಕಳೆದ 70 ವರ್ಷಗಳ ಅವಧಿಯಲ್ಲಿ ಎರಡು ರಾಷ್ಟ್ರಗಳ ರಾಜಕೀಯ ಲಾಭಕ್ಕೆ ಇಲ್ಲಿನ ಜನ ಬಲಿಯಾಗಿದ್ದಾರೆ, ಇಲ್ಲಿನ ಜನರ ಬದುಕು ಹರಿದು ಮೂರಾಬಟ್ಟೆಯಾಗಿದೆ ಎಂಬುದೂ ಎಷ್ಟು ಸತ್ಯವೋ, ಅಲ್ಲಿನ ಜನರ ಬದುಕಿನ ಕುರಿತು ದೇಶದ ಯಾವ ಭಾಗದ ಜನರಿಗೂ ಅಷ್ಟಾಗಿ ಆಸಕ್ತಿ ಇಲ್ಲ ಎಂಬುದು ಅದಕ್ಕಿಂತ ದೊಡ್ಡ ಸತ್ಯ.

ಭಾರತದ 21 ದಿನಗಳ ಲಾಕ್‌ಡೌನ್‌ ನೆಪದಲ್ಲಿ ಈಗಲೂ ನಾವು ಕಾಶ್ಮೀರದ ವ್ಯಥೆಯನ್ನು, ಕಪ್ಪು ಇತಿಹಾಸವನ್ನು, ಇಲ್ಲಿನ ಜನರ ಬದುಕಿನೊಳಗೆ ನುಸುಳಿ ಬದುಕನ್ನೇ ಹರಿದು ಹಾಕಿದ ಸ್ವಾರ್ಥ ರಾಜಕಾರಣದ ಕುರಿತು ಅವಲೋಕಿಸದಿದ್ದರೆ ಇನ್ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಶ್ಟೊ ಇಶ್ಟೋ ಪ್ಯಾಕೇಜ್ ಕರೋನಾ ಪ್ಯಾಕೇಜ್ ಸಾರಲಾಗಿದೆ.
    ಅಲ್ಲಿ!

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...