ಆಂದ್ರಪ್ರದೇಶದ ತಿರುಪತಿಯಲ್ಲಿರುವ ಜಗತ್ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಮೌಲ್ಯ 2.5 ಲಕ್ಷ ಕೋಟಿ ರೂ. ಎಂದು ವರದಿಯಾಗಿದೆ. ಇದು ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಯಾದ ಆಯಿಲ್ ಆಂಡ್ ನೇಚರ್ ಗ್ಯಾಸ್ ಕಾರ್ಪೊರೇಷನ್ (ONGC) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC)ನ ಮಾರುಕಟ್ಟೆ ಬಂಡವಾಳೀಕರಣಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯಾಗಿದೆ.
ತಿರುಪತಿಯ ಪ್ರಧಾನ ದೇವರಿಗೆ ಸಮರ್ಪಿತವಾದ ದೇವಾಲಯದ ‘ತಿರುಮಲ ತಿರುಪತಿ ದೇವಸ್ಥಾನಂ’ ತನ್ನ ನಿವ್ವಳ ಮೌಲ್ಯವನ್ನು 1933 ರಲ್ಲಿ ಮೊದಲ ಬಾರಿಗೆ ಘೋಷಿಸಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇವಸ್ಥಾನದ ಆಸ್ತಿಯಲ್ಲಿ ಬ್ಯಾಂಕ್ಗಳಲ್ಲಿ 10.25 ಟನ್ ಚಿನ್ನದ ಠೇವಣಿ ಮತ್ತು 2.5 ಟನ್ ಚಿನ್ನಾಭರಣ ಇವೆ. ಸುಮಾರು 16 ಸಾವಿರ ಕೋಟಿ ರೂ. ಬ್ಯಾಂಕ್ಗಳಲ್ಲಿ ಠೇವಣಿ ಇದ್ದು, ದೇವಸ್ಥಾನಕ್ಕೆ ಭಾರತದಾದ್ಯಂತ 960 ಆಸ್ತಿಗಳು ಇವೆ. ಇವೆಲ್ಲದರ ಒಟ್ಟು ಮೌಲ್ಯ 2.5 ಲಕ್ಷ ಕೋಟಿ ರೂ.ಗೂ ಹೆಚ್ಚು ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: 10% ಮೀಸಲಾತಿ: ಆರ್ಎಸ್ಎಸ್ ಮಂದಿ ಹಬ್ಬಿಸಿರುವ 100% ಸುಳ್ಳುಗಳು!
ಪ್ರಸ್ತುತ ವ್ಯಾಪಾರಿ ಬೆಲೆಯಲ್ಲಿ ಹೇಳಬಹುದಾದರೆ, ತಿರುಪತಿ ದೇವಸ್ಥಾನದ ನಿವ್ವಳ ಮೌಲ್ಯವು ಭಾರತದ ಹಲವಾರು ದೊಡ್ಡ ಕಾರ್ಪೋರೇಟ್ ಕಂಪೆನಿಗಳಿಗಿಂತ ಹಚ್ಚಿನದ್ದಾಗಿದೆ ಎಂದು ಎನ್ಡಿಟಿವಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಶುಕ್ರವಾರದ ವಹಿವಾಟಿನ ಮುಕ್ತಾಯಕ್ಕೆ ಬೆಂಗಳೂರು ಮೂಲದ ವಿಪ್ರೋ 2.14 ಲಕ್ಷ ಕೋಟಿ ರೂ. ಗಳಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಅಲ್ಟ್ರಾಟೆಕ್ ಸಿಮೆಂಟ್ 1.99 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಸ್ವಿಸ್ ಬಹುರಾಷ್ಟ್ರೀಯ ಆಹಾರ ಮತ್ತು ಪಾನೀಯದ ಪ್ರಮುಖ ಸಂಸ್ಥೆಯಾದ ನೆಸ್ಲೆಯ ಭಾರತದ ಘಟಕವು 1.96 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ತಿರುಪತಿಯ ಆಸ್ತಿಗಿಂತ ಕಡಿಮೆ ಮೌಲ್ಯವನ್ನು ಹೊಂದಿದೆ.
ಇದನ್ನೂ ಓದಿ: ಸಂಪತ್ತು ಅನುಭವಸಿದವರೇ ಮೀಸಲಾತಿ ವಿರೋಧಿಸುತ್ತಿದ್ದಾರೆ: ಸಿದ್ದರಾಮಯ್ಯ ವಿಷಾದ
ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಯಾದ ಆಯಿಲ್ ಆಂಡ್ ನೇಚರ್ ಗ್ಯಾಸ್ ಕಾರ್ಪೊರೇಷನ್ (ONGC) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಸಹ ದೇವಾಲಯದ ಟ್ರಸ್ಟ್ಗಿಂತ ಕಡಿಮೆ ಮೌಲ್ಯವನ್ನು ಹೊಂದಿವೆ.
ದೇಶದಲ್ಲಿ ಕೇವಲ ಎರಡು ಡಜನ್ ಕಂಪನಿಗಳು ಮಾತ್ರ ದೇವಾಲಯದ ಟ್ರಸ್ಟ್ನ ಒಟ್ಟು ಮೌಲ್ಯಕ್ಕಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ. ಇವುಗಳಲ್ಲಿ ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (17.53 ಲಕ್ಷ ಕೋಟಿ ರೂ.), ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ರೂ. 11.76 ಲಕ್ಷ ಕೋಟಿ), ಎಚ್ಡಿಎಫ್ಸಿ ಬ್ಯಾಂಕ್ (ರೂ. 8.34 ಲಕ್ಷ ಕೋಟಿ), ಇನ್ಫೋಸಿಸ್ (ರೂ. 6.37 ಲಕ್ಷ ಕೋಟಿ), ಐಸಿಐಸಿಐ ಬ್ಯಾಂಕ್ (ರೂ. 6.31 ಲಕ್ಷ ಕೋಟಿ), ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ (5.92 ಲಕ್ಷ ಕೋಟಿ ರೂ.), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (5.29 ಲಕ್ಷ ಕೋಟಿ ರೂ.), ಭಾರ್ತಿ ಏರ್ಟೆಲ್ (ರೂ. 4.54 ಲಕ್ಷ ಕೋಟಿ) ಮತ್ತು ಐಟಿಸಿ (ರೂ. 4.38 ಲಕ್ಷ ಕೋಟಿ) ಸೇರಿವೆ.
ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಮತ್ತೆ ಮತ್ತೆ ಶ್ರೀಮಂತವಾಗಿ ಬೆಳೆಯುತ್ತಿದ್ದು, ದೇವಸ್ಥಾನದಲ್ಲಿ ಭಕ್ತರು ನೀಡುವ ನಗದು ಮತ್ತು ಚಿನ್ನದ ಕಾಣಿಕೆಗಳು ಹೆಚ್ಚುತ್ತಲೇ ಇವೆ. ಬಡ್ಡಿದರಗಳ ಹೆಚ್ಚಳದ ದೃಷ್ಟಿಯಿಂದ ಬ್ಯಾಂಕ್ಗಳಲ್ಲಿನ ಸ್ಥಿರ ಠೇವಣಿಗಳು ಕೂಡಾ ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಜಾರಿಯಾಗದಿರಲು ‘ಉತ್ತರ ಭಾರತದ ಮನಸ್ಥಿತಿಯೆ’ ಕಾರಣ: ಶರದ್ ಪವಾರ್
ಟಿಟಿಡಿ ಒಡೆತನದ ಆಸ್ತಿಗಳಲ್ಲಿ ಭೂಮಿ, ಕಟ್ಟಡಗಳು, ಬ್ಯಾಂಕ್ಗಳಲ್ಲಿನ ನಗದು ಮತ್ತು ಚಿನ್ನದ ಠೇವಣಿಗಳು ಸೇರಿವೆ, ಇದನ್ನು ಭಕ್ತರು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡುತ್ತಾರೆ.
ಭಕ್ತರಿಗೆ ಸೌಕರ್ಯಗಳನ್ನು ಒದಗಿಸುವ ಏಳು ಬೆಟ್ಟಗಳ ಮೇಲಿನ ಕಾಟೇಜ್ಗಳು ಮತ್ತು ಅತಿಥಿ ಗೃಹಗಳು ಸೇರಿದಂತೆ ಬೆಲೆಬಾಳುವ ಪುರಾತನ ಆಭರಣಗಳು ಮತ್ತು ಆಸ್ತಿಗಳಿಗೆ ಮೌಲ್ಯವನ್ನು ನಿಗದಿಪಡಿಸುವುದು ತಪ್ಪುದಾರಿಗೆಳೆಯುವಂತಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ತಾರವಾದ ಏಳು ಬೆಟ್ಟಗಳನ್ನು ಭಕ್ತರು ಪವಿತ್ರ ಮತ್ತು ವೆಂಕಟೇಶ್ವರನ ವಾಸಸ್ಥಾನವೆಂದು ಪರಿಗಣಿಸುತ್ತಾರೆ. ಫೆಬ್ರವರಿಯಲ್ಲಿ ಮಂಡಿಸಿದ 2022-23ರ ಸುಮಾರು 3,100 ಕೋಟಿ ರೂ. ವಾರ್ಷಿಕ ಬಜೆಟ್ನಲ್ಲಿ, ಟಿಟಿಡಿ ಬ್ಯಾಂಕ್ಗಳಲ್ಲಿನ ನಗದು ಠೇವಣಿಗಳಿಂದ ಬಡ್ಡಿಯ ರೂಪದಲ್ಲಿ 668 ಕೋಟಿ ರೂ. ಗಿಂತ ಹೆಚ್ಚಿನ ಆದಾಯವನ್ನು ಯೋಜಿಸಿದೆ. ಅಲ್ಲದೆ, ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ ಸುಮಾರು 2.5 ಕೋಟಿ ಭಕ್ತರಿಂದ ನಗದು ಕಾಣಿಕೆ ರೂಪದಲ್ಲಿ 1,000 ಕೋಟಿ ರೂ. ಆದಾಯ ಬರಲಿದೆ.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ
ಟಿಟಿಡಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಒಡಿಶಾ, ಹರಿಯಾಣ, ಮಹಾರಾಷ್ಟ್ರ ಮತ್ತು ನವದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳನ್ನು ನಿರ್ವಹಿಸುತ್ತದೆ.