ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭವಿನಾ ಪಟೇಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.ಈ ಮೂಲಕ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನ್ನಿಸ್ನಲ್ಲಿ ಪದಕ ಗೆದ್ದ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ದಾಖಲೆ ಸೃಷ್ಟಿಸಿದ್ದಾರೆ.
ಭಾನುವಾರ ನಡೆದ ಮಹಿಳೆಯರ ಟೇಬಲ್ ಟೆನಿಸ್ ಕ್ಲಾಸ್ 4 ಫೈನಲ್ನಲ್ಲಿ ಚೀನಾದ ವಿಶ್ವ ನಂ.1 ಯಿಂಗ್ ಜ್ಸಾವು ವಿರುದ್ಧ 7-11 5-11 6-11ರಲ್ಲಿ ಪರಾಭವಗೊಂಡರು. ಈ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಭವಿನಾ ಪಟೇಲ್ ಅವರು ಶನಿವಾರ ಟೋಕಿಯೊದಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಈವೆಂಟ್ನಲ್ಲಿ, ವಿಶ್ವದ 3 ನೇ ಶ್ರೇಯಾಂಕಿತ ಚೀನಾದ ಜಾಂಗ್ ಮಿಯಾವೊ ವಿರುದ್ಧ ಗೆಲುವು ಸಾಧಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಅಂಕಣಕಾರ, ಲೇಖಕ ಸುರೇಶ್ ಕಂಜರ್ಪಣೆ ಭವಿನಾ ಪಟೇಲ್ ಮತ್ತು ದೇಶದಲ್ಲಿ ನಡೆದ ಪಲ್ಸ್ ಪೋಲಿಯೋ ಅಭಿಯಾನದ ಕುರಿತು ವಿವರವಾಗಿ ಬರೆದಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ ರೇಪ್: ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ- ನಟಿ ರಮ್ಯಾ ಆಕ್ರೋಶ
“ಈಕೆ ಭವಿನಾ ಪಟೇಲ್ … ಪ್ಯಾರಾ ಒಲಿಂಪಿಕ್ಸನ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ. ಈಕೆ ಹುಟ್ಟಿದ್ದು 1986ರಲ್ಲಿ. ಈಕೆ ಹುಟ್ಟಿದಾಗ ಅಂಗ ವೈಕಲ್ಯ ಇರಲಿಲ್ಲ. ಒಂದು ವರ್ಷದ ಹಸುಳೆಯಾಗಿದ್ದಾಗ ಈಕೆಗೆ ಪೋಲಿಯೋ ತಗುಲಿತು. ಭಾರತದಲ್ಲಿ ಲಕ್ಷಾಂತರ ಮಕ್ಕಳು ಪೋಲಿಯೋ ದವಡೆಗೆ ಸಿಲುಕುತ್ತಿದ್ದ ಕಾಲವಿತ್ತು. ಮೇಲುಕೋಟೆಯ ದಿ. ಸುರೇಂದ್ರ ಕೌಲಗಿಯವರು ಆರಂಭಿಸಿದ್ದ ಕರುಣಾ ಗೃಹದಲ್ಲಿ ಬಹುತೇಕ ಪೋಲಿಯೋ ಬಾಧಿತ ಮಕ್ಕಳೇ ಇದ್ದರು. ಅವರ ಆಶ್ರಯದಲ್ಲಿ ಕಲಿತು ಆತ್ಮವಿಶ್ವಾಸದಲ್ಲಿ ಜೀವನ ನಡೆಸುತ್ತಿರುವ ನೂರಾರು ಮಕ್ಕಳನ್ನು ನಾನು ನೋಡಿದ್ದೇನೆ (ಮಕ್ಕಳೇನು ಬಂತು, ಈಗ ಅವರೆಲ್ಲಾ ಮಧ್ಯವಯಸ್ಕರು)”.
’ಭಾರತ ಸರಕಾರ ಪಲ್ಸ್ ಪೋಲಿಯೋ ಲಸಿಕಾ ನೀಡಿಕೆ ಕಾರ್ಯಕ್ರಮವನ್ನು ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪರಮ ಬದ್ಧತೆಯೊಂದಿಗೆ ಆರಂಭಿಸಿದ್ದರ ಪರಿಣಾಮವಾಗಿ 2014 ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ದೇಶವೆಂದು ಘೋಷಿಸಲಾಯಿತು. ಅಂದರೆ 2009ರಿಂದ ದೇಶದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ವರದಿಯಾಗಲಿಲ್ಲ. ಈಗ ಪ್ರತಿಯೊಂದು ಮಗುವೂ ಕುಣಿದಾಡಿ ಓಡಾಡುವುದು ನೋಡುವಾಗ ಒಂದು ಧನ್ಯತಾ ಭಾವ ಆವರಿಸುತ್ತದೆ. ಸರಕಾರವೊಂದು ಬದ್ಧತೆಯಲ್ಲಿ, ಪ್ರಚಾರದ ಗೀಳಿಲ್ಲದೇ ಮಾಡಿದ ಕೆಲಸ ಇದು. ಅಮಿತಾಭ್ ಬಚ್ಚನ್ ಅವರ ಎರಡು ಹನಿ, ಜೀವ ಉಳಿಸಲು ಎಂಬ ಘೋಷ ವಾಕ್ಯದ ಜಾಹೀರಾತು ನೆನಪಿಸಿಕೊಳ್ಳಿ!’.
’ಆರೋಗ್ಯ ಕಾರ್ಯಕರ್ತರು ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಸಂತೆ, ಬಸ್ ಸ್ಟಾಂಡ್ ಹೀಗೆ ಎಲ್ಲೂ ಬಿಡದೇ ಅಲ್ಲಿ ಕಂಡ ಮಕ್ಕಳಿಗೆ ಎರಡು ಬಿಂದು ಬಾಯಿಗೆ ಲಸಿಕೆ ಹಾಕುವ ಶ್ರದ್ಧೆ ಈಗಲೂ ಕಣ್ಣಿಗೆ ಕಂಡಂತಿದೆ.
ಆಗಿನ ಸರಕಾರದವರು ಫೋಟೋ ಹಾಕಿಸಿಕೊಳ್ಳಲಿಲ್ಲ. ಅದು ಜನರದ್ದೇ ಕಾರ್ಯಕ್ರಮ ಎಂಬಂತೆ ಅನುಷ್ಠಾನಗೊಳಿಸಿದರು’.
’ಈ ಭವಿನಾ ಪಟೇಲ್ ಎಂಬ ಭರಪೂರ ಸ್ಥೈರ್ಯದ ಹೆಣ್ಣು ಮಗಳ ಸಾಧನೆ ಕಂಡಾಗ, ಇದು ನೆನಪಾಯಿತು. ನಮ್ಮಲ್ಲಿ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯ ರಕ್ತಹೀನತೆ, ಕುಪೋಶಣೆಯಲ್ಲಿ ಬಳಲುತ್ತಿರುವ ಮಕ್ಕಳು, ಹೆಣ್ಣು ಮಕ್ಕಳಿದ್ದಾರೆ. ವಿದ್ಯಾಭ್ಯಾಸದಲ್ಲಿ ಹೈಸ್ಕೂಲು ತಲುಪುವ ಮೊದಲೇ ಡ್ರಾಪ್ ಔಟ್ ಆಗುವ ಕೋಟ್ಯಂತರ ಮಕ್ಕಳಿದ್ದಾರೆ. ( ಇವರಲ್ಲಿ ಹಿಂದೂಗಳೇ ಹೆಚ್ಚು!!). ನಮ್ಮ ಈಗಿನ ಸರಕಾರಕ್ಕೆ ಇದೆಲ್ಲಾ ಮನಸ್ಸಿನೊಳಗೆ ಇಳಿದಿದ್ದರೆ ಈ ಆರೋಗ್ಯ, ಪೋಷಣೆ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿತ್ತು. ಮಕ್ಕಳು ನೀರಿಲ್ಲದ ಗಿಡದ ಎಲೆಗಳಂತೆ ಒಣಗಿ ಬೀಳುವ ಪರಿ ತಟ್ಟಬೇಕಿತ್ತು. ಇರಲಿ… ಈ ಭವಿನಾ ಬೆಳ್ಳಿ ಗೆದ್ದಿದ್ದಾಳೆ. ಈಕೆಯ ಆತ್ಮವಿಶ್ವಾಸ ಈ ದೇಶದ ಅವಕಾಶ ವಂಚಿತರಲ್ಲಿ ಕನಸು ಚಿಗುರೊಡೆಯುವಂತೆ ಮಾಡಲಿ” ಎಂದಿದ್ದಾರೆ.
ಇದನ್ನೂ ಓದಿ: ಹರಿಯಾಣ: ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್; 10 ಜನರಿಗೆ ಗಾಯ