“ಸಮಾಜ ಸುಧಾರಕ ನಾರಾಯಣಗುರು ಅವರ ಪಠ್ಯವನ್ನು ಸಮಾಜ ವಿಜ್ಞಾನ ವಿಷಯಕ್ಕೆ ವರ್ಗಾಯಿಸಿ” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ಕುಮಾರ್ ಪತ್ರ ಬರೆದಿದ್ದಾರೆ.
ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ನಾರಾಯಣಗುರುಗಳ ಪಾಠವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿ ತೆಗೆದಿದ್ದರಿಂದ ಕರಾವಳಿ ಭಾಗದಲ್ಲಿ ಬಿಲ್ಲವ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸುನಿಲ್ಕುಮಾರ್ ಪತ್ರ ಬರೆದಿದ್ದಾರೆ.
ಬಿಲ್ಲವ ಸಮಾಜದ ನಿರಂತರ ಪ್ರತಿರೋಧದ ಹೊರತಾಗಿಯೂ ಈ ಕುರಿತು ಸರ್ಕಾರ ಮೌನ ವಹಿಸಿತ್ತು. ಕನ್ನಡ ಭಾಷಾ ವಿಷಯದಲ್ಲಿ ನಾರಾಯಣಗುರುಗಳ ಪಾಠವಿದೆ ಎಂದು ಸಬೂಬು ಹೇಳುತ್ತಿತ್ತು. ಆದರೆ ಸಮಾಜ ವಿಜ್ಞಾನದಲ್ಲಿ ಪಾಠವಿದ್ದರೆ ಎಲ್ಲ ವಿದ್ಯಾರ್ಥಿಗಳು ಓದಲು ಸಾಧ್ಯವಾಗುತ್ತದೆ ಎಂದು ಸಮುದಾಯದ ಮುಖಂಡರು ಹೇಳುತ್ತಲೇ ಬಂದಿದ್ದರು. ಹೆದ್ದಾರಿ ಬಂದ್ ಸೇರಿದಂತೆ ಪಾದಯಾತ್ರೆ ನಡೆಸುವ ಮೂಲಕ ಬೃಹತ್ ಹೋರಾಟ ನಡೆಸುವುದಾಗಿ ಬಿಲ್ಲವ ಸಮುದಾಯ ಹೇಳಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಹಿಂದೆ ಗಣರಾಜ್ಯೋತ್ಸವ ಟ್ಯಾಬ್ಲೋ ವಿಚಾರದಲ್ಲಿಯೂ ನಾರಾಯಣಗುರುಗಳಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿತ್ತು. ಇದರ ನಡುವೆ ಪಠ್ಯ ಕೈಬಿಡಲಾಗಿತ್ತು. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯನವರ ಹೆಸರಿಡಬೇಕು, ಬಿಲ್ಲವ ಅಭಿವೃದ್ದಿ ಮಂಡಳಿ ರಚಿಸಬೇಕು, ಬಿಲ್ಲವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿ ಹಲವು ಸೌಲಭ್ಯಗಳಿಗಾಗಿ ಬಿಲ್ಲವ ಸಮಾಜ ಹೋರಾಟ ಮಾಡುತ್ತಲೇ ಬಂದಿದೆ. ಆದರೆ ಇವೆಲ್ಲಕ್ಕೂ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಬಿಲ್ಲವ ಮುಖಂಡರನ್ನು ಕೆರಳಿಸಿತ್ತು. ಹಾಗಾಗಿ ಬಿಲ್ಲವ ಸಂಘ ಸಂಸ್ಥೆಗಳು ರಿಲೇ ರೀತಿಯ ಪಾದಯಾತ್ರೆ, ಹೆದ್ದಾರಿ ಬಂದ್ ಸೇರಿದಂತೆ 50 ದಿನಗಳವರೆಗೆ ನಿರಂತರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದವು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಕಂಕನಾಡಿ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಿತ್ತರಂಜನ್ ಕೆ, ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶೈಲೇಂದ್ರ ಬೈ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಸೇರಿದಂತೆ ನೂರಾರು ಹೋರಾಟಗಾರರು, ಮುಖಂಡರು ಸರ್ಕಾರದ ವಿರುದ್ಧ ಗುಡುಗಿದ್ದರು. ಈ ಹಿನ್ನೆಲೆಯಲ್ಲಿ ಸಚಿವರ ಪತ್ರ ಹೊರಬಿದ್ದಿದೆ.
ಸಚಿವರು ಹೇಳಿರುವುದೇನು?
“ಈ ಬಾರಿ, ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ಗುರುನಾರಾಯಣ ಗುರುಗಳ ಕುರಿತಂತೆ ಅಳವಡಿಸಲಾಗಿದ್ದ ವಿಷಯಗಳ ಬಗ್ಗೆ, ಗೊಂದಲಗಳು ನಿರ್ಮಾಣವಾಗಿದ್ದು, ಈ ಕುರಿತು ಹಲವರು ನಮ್ಮ ಬಳಿ ಚರ್ಚೆಯನ್ನು ಮಾಡಿರುತ್ತಾರೆ. ಬ್ರಹ್ಮ ಶ್ರೀ ನಾರಾಯಣಗುರುಗಳ ವಿಷಯಗಳು ಈ ಹಿಂದೆ ಸಮಾಜ ವಿಜ್ಞಾನ ವಿಷಯದಲ್ಲಿ ಇದ್ದು, ಅದನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಈ ವರ್ಷದಿಂದ ಅದನ್ನು ಕನ್ನಡ ವಿಷಯಕ್ಕೆ ವರ್ಗಾಯಿಸಲಾಗಿದೆ. ಕನ್ನಡ ವಿಷಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಸೇರಿಸಿರುವುದರ ಬಗ್ಗೆ ಹಲವು ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ” ಎಂದು ಸುನಿಲ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿರಿ: ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ…
“ಕನ್ನಡದ ಬದಲು ಸಮಾಜ ವಿಜ್ಞಾನದಲ್ಲಿದ್ದರೆ ಎಲ್ಲಾ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮತ್ತು ಅದು ಸರ್ವ ಸಮ್ಮತವಾಗಿರುತ್ತದೆ ಎಂಬುದು ವಿವಿಧ ಸಂಘಟನೆಗಳ ಹಾಗೂ ರಾಜ್ಯದ ಗಣ್ಯರ ಅಭಿಪ್ರಾಯವಾಗಿದೆ. ಕನ್ನಡ ಭಾಷಾ ವಿಷಯವನ್ನು ಎಲ್ಲರೂ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಬೇರೆ ಭಾಷಾ ಮಾಧ್ಯಮದ ವಿದ್ಯಾರ್ಥಿಗಳು ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯದಿಂದ ವಂಚಿತರಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
“ಈ ಹಿನ್ನೆಲೆಯಲ್ಲಿ ಎಲ್ಲಾ ಭಾಷಾ ಮಾಧ್ಯಮದ ವಿದ್ಯಾರ್ಥಿಗಳಿಗೆ ನಾರಾಯಣಗುರುಗಳ ತನ್ನ ಆದರ್ಶಗಳು ತಿಳಿಯಬೇಕೆಂದಾದಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ಸೇರಿಸುವುದು ಸೂಕ್ತವೆಂಬುದು ನಾಡಿನ ಅನೇಕ ಶೈಕ್ಷಣಿಕ ತಜ್ಞರ ಹಾಗೂ ಹಿರಿಯರ ಒತ್ತಾಸೆಯಾಗಿದೆ. ಆದುದರಿಂದ, ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಸಮಾಜ ವಿಜ್ಞಾನ ವಿಷಯಕ್ಕೆ ವರ್ಗಾಯಿಸಲು ಅದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು” ಎಂದು ವಿನಂತಿ ಮಾಡಿದ್ದಾರೆ.