ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಮಲ್ ಗುಟ್ಕಾ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುವವರೆಲ್ಲರೂ ಹೊರ ರಾಜ್ಯದವರೇ ಆಗಿದ್ದಾರೆ. ವಿಎನ್ ಮತ್ತು VSNನ ಐದು ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಇದರಲ್ಲಿ ಸುಮಾರು ಬೆರಳೆಣಿಕೆಯಷ್ಟು ಜನ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ. 20 ಜನ ಮಂದಿ ಸ್ಥಳೀಯರು ಅಂದರೆ ಕರ್ನಾಟಕದವರು ಕೆಲಸ ನಿರ್ವಹಿಸುತ್ತಿದ್ದು ಇವರನ್ನು ಚರಂಡಿ ಸ್ವಚ್ಚಗೊಳಿಸಲು ಮಾತ್ರ ಬಳಿಸಕೊಳ್ಳಲಾಗುತ್ತಿದೆ. ಗುಟ್ಕಾ ತಯಾರಿಕೆ ಮತ್ತ ಪಾನ್ ಮಸಾಲಾ ತಯಾರಿಕೆ ಘಟಕಗಳು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿಗೆ ನೂರು ಕಿಲೋಮೀಟರ್ ದೂರದಲ್ಲಿದ್ದರೂ ಕನ್ನಡಿಗರಿಗೆ ಮಾತ್ರ ಕೆಲಸ ನೀಡದೆ ದ್ರೋಹ ಎಸಗಲಾಗಿದೆ.
ವಿಎನ್ ಮತ್ತು ವಿ.ಎಸ್.ಎನ್ ಗುಟ್ಕಾ ಮತ್ತು ಪಾನ್ ಮಸಾಲ ತಯಾರಿಕಾ ಘಟಕಗಳು ದೆಹಲಿಯ ಮುಖೇಶ್ ಎಂಬ ಮಾರ್ವಾಡಿಗೆ ಸೇರಿದವು. ತುಮಕೂರಿನಿಂದಲೇ ಇಡೀ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ವಿಎನ್, ವಿಎನ್ಎಸ್ ಗುಟ್ಕಾ ಮತ್ತು ಪಾನ್ ಮಸಾಲಾ ಪೂರೈಕೆ ಮಾಡುವ ಅತ್ಯಂತ ದೊಡ್ಡ ಕಂಪನಿ ಇದಾಗಿದೆ ಗುಟ್ಕಾ ಮತ್ತು ಪಾನ್ ಮಸಾಲವನ್ನು ದಕ್ಷಿಣದವರಿಗೆ ತಿನ್ನಿಸಿ ಕರ್ನಾಟದ ಕನ್ನಡಿಗರಿಗೆ ಕೆಲಸವನ್ನು ನೀಡದೆ ಇಲ್ಲಿಂದ ಹಣವನ್ನು ದೋಚುತ್ತಿದ್ದಾರೆ. ಪ್ರಮುಖ ಹುದ್ದೆಗಳೆಲ್ಲ ಉತ್ತರಭಾರತೀಯರ ಪಾಲಾಗಿದೆ. ಕೇವಲ ಕಸ ಗುಡಿಸುವ, ಚರಂಡಿ ಶುಚಿಗೊಳಿಸುವಂತಹ ಕೆಲಸಗಳನ್ನು ಸ್ಥಳೀಯರಿಗೆ ನೀಡಿದ್ದರೂ ಯಾರು ದನಿ ಎತ್ತುತ್ತಿಲ್ಲ.
ಯಾವುದೇ ಕಂಪನಿ ಆರಂಭಿಸಿದರೂ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ನಿಯಮವಿದೆ. ಡಾ.ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಬೇಕು. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿರುವ ಕಂಪನಿ ಮಾಲಿಕ ಮುಖೇಶ್ ರಾಜ್ಯದ ನೆಲ, ಜಲ, ವಿದ್ಯುತ್ ಎಲ್ಲವನ್ನೂ ಕರ್ನಾಟಕ ಸರ್ಕಾರದಿಂದಲೇ ಪಡೆದುಕೊಂಡಿದ್ದರೂ ಇಲ್ಲಿ ಕನ್ನಡಗರನ್ನು ಉದ್ಯೋಗಕ್ಕೆ ತೆಗೆದುಕೊಳ್ಳದೆ ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಐದು ಘಟಕಗಳಲ್ಲಿ ಸುಮಾರು 1000 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಉದ್ಯೋಗಗಳೆಲ್ಲವೂ ಉತ್ತರ ಭಾರತೀಯರ ಪಾಲಾಗಿವೆ. ಬೆರಳೆಣಿಕೆಯಲ್ಲಿರುವ ಕನ್ನಡಿಗರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಮುಖೇಶ್ ದೆಹಲಿಯ ದೊಡ್ಡ ಕುಳ. ಈತ ಪ್ರಧಾನಿ ನರೇಂದ್ರ ಮೋದಿಯ ಆಪ್ತರಲ್ಲೊಬ್ಬ. ಇದೇ ಕಾರಣಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತ ಪ್ರಧಾನಿ ಪಕ್ಕದಲ್ಲೇ ಇದ್ದುದು ಗಮನಿಸಬೇಕಾದ ಸಂಗತಿ. ಕರ್ನಾಟಕದ ಉಪಮುಖ್ಯಮಂತ್ರಿಗಳಿಗೆ ಪ್ರಧಾನಿ ಪಕ್ಕ ಕುಳಿತುಕೊಳ್ಳಲು ಮತ್ತು ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗದೇ ಇರುವಾಗ ಒಬ್ಬ ಉದ್ಯಮಿ ಅದೂ ವಿಮಲ್ ಗುಟ್ಕಾ ಮತ್ತು ಪಾನ್ ಮಸಾಲಾ ಕಂಪನಿಯ ಮಾಲಿಕ ಪ್ರಧಾನಿ ಜೊತೆ ವೇದಿಕೆ ಏರುತ್ತಾನೆ ಎಂದರೆ ಆತನ ಪ್ರಭಾವ ಎಷ್ಟಿರಬೇಕೆಂಬುದನ್ನು ಊಹಿಸಿಕೊಳ್ಳಿ. ಸ್ಪೆಷಲ್ ಪ್ರೊಟಕ್ಷನ್ ಗ್ರೂಪ್ ರಾಜ್ಯದ ಘಟಾನುಘಟಿ ನಾಯಕರನ್ನೇ ಕ್ಯಾರೇ ಅನ್ನದಿದ್ದಾಗ ಮುಖೇಶ್ ಪ್ರಧಾನಿಯ ಆಪ್ತರಲ್ಲಿ ಗುರುತಿಸಿಕೊಂಡು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು.
ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ವಿಎನ್ ಮತ್ತು ವಿ.ಎಸ್.ಎನ್ ಕಂಪನಿ ಇಡೀ ದಕ್ಷಿಣ ಭಾರತದ ಗುಟ್ಕಾ ಮತ್ತು ಪಾನ್ ಮಸಾಲಾ ಪೂರೈಕೆದಾರ ಎಂದರೆ ಈತ ಆದಾಯ ಎಷ್ಟಿರಬೇಡ. ನೂರಾರು ಕೋಟಿಗಳ ವಹಿವಾಟು ತಿಂಗಳಲ್ಲಿ ನಡೆದುಹೋಗುತ್ತದೆ. ಇಂತಹ ದೊಡ್ಡ ಕುಳ ಪ್ರಧಾನಿ ಭಾಗವಹಿಸಿದ್ದ ವೇದಿಕೆಯಲ್ಲಿ ಮಿಂಚಿಹೋದರು. ಬಿಜೆಪಿಗೆ ಫಂಡು ನೀಡುವಲ್ಲಿ ಈತನೂ ಒಬ್ಬ ಎನ್ನುತ್ತವೆ ಮೂಲಗಳು. ಅದೇ ಕಾರಣಕ್ಕೆ ವೇದಿಕೆಯಲ್ಲಿ ಎಲ್ಲರಿಗಿಂತ ಹೆಚ್ಚು ಕಾಣಿಸಿಕೊಂಡಿದ್ದು ಮುಖೇಶ್. ಈತನ ಕಂಪನಿಯಲ್ಲಿ ಕನ್ನಡಿಗರು ಕಸ ಹೊಡೆಯುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಅಂದರೆ ಅವರಿಗೆ ಸಂಬಳವೆಂದು ಬರುವುದು ಆರೇಳು ಸಾವಿರ. ಇಂತಹ ತಾರತಮ್ಯಕ್ಕೆ ಸ್ಥಳೀಯ ಕಾರ್ಮಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ನಿತ್ಯವೂ ಕೋಟ್ಯಂತರ ವಹಿವಾಟು ನಡೆಯುತ್ತಿದ್ದರೂ ಸೇಲ್ ಟ್ಯಾಕ್ಸ್ ಅಧಿಕಾರಿಗಳು ಮೌನ ವಹಿಸಿ ಕುಳಿತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ. ವಾರಕ್ಕೊಮ್ಮೆಯಾದರೂ ಭೇಟಿ ನೀಡಿ ಸೆಲ್ಸ್ ಟ್ಯಾಕ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಆದರೆ ಬಂದ ಅಧಿಕಾರಿಗಳಿಗೆ “ಒಳ್ಳೆಯ” ಊಟ, ಚಹ ಕೊಟ್ಟು ಮೇಲೆ ಅಧಿಕಾರಿಗಳು ಮತ್ತು ಗಮ್ಮತ್ತಿನಿಂದ ಹಿಂದಿರುಗುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ನೌಕರರು ಹೇಳುತ್ತಾರೆ.
ಮೊನ್ನೆಮೊನ್ನೆ ಚಿಕ್ಕಬಳ್ಳಾಪುರದಲ್ಲಿ ಗುಟ್ಕಾ ಚೀಲಗಳು ದೊರೆತಿದ್ದು ಆ ಗುಟ್ಕಾ ಮೌಲ್ಯ ಸುಮಾರು 50 ಸಾವಿರ ರೂಪಾಯಿಗೂ ಹೆಚ್ಚು. ಗುಟ್ಕಾದ ಮಾಲಿಕ ಅಲ್ಲಿಯೇ ಇದ್ದ. ಅವುಗಳನ್ನು ತನ್ನವು ಎಂದರೆ ಟ್ಯಾಕ್ಸ್ ಕಟ್ಟಬೇಕಾಗಿದೀತು ಎಂಬ ಕಾರಣಕ್ಕೆ ಆತ ಅಧಿಕಾರಿಗಳ ಮುಂದೆ ಬಂದಿಲ್ಲ ಎನ್ನುತ್ತಾರೆ ಗುಟ್ಕಾ ಮತ್ತು ಪಾನ್ ಮಸಾಲ ತಯಾರಿಕೆಯನ್ನು ಹತ್ತಿರದಿಂದ ಬಲ್ಲವರು.
ವಿಎನ್ ಮತ್ತು ವಿ.ಎಸ್.ಎನ್ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ ಘಟಕಗಳು ತುಮಕೂರು ಬಿಟ್ಟರೆ ಅಹಮದಾಬಾದ್ ಮತ್ತು ನೋಯಿಡಾದಲ್ಲಿಯೂ ಇವೆ ಎಂದು ಹೇಳಲಾಗುತ್ತಿದೆ. ಕಂಪನಿ ಕರ್ನಾಟಕದಲ್ಲಿದ್ದರೂ ಕನ್ನಡಿಗರಿಗೆ ಕೆಲಸ ಸಿಕ್ಕಿಲ್ಲ. ಕಂಪನಿ ಸ್ಥಾಪಿಸುವಾಗ ಸ್ಥಳೀಯರಿಗ ಉದ್ಯೋಗ ಕೋಡುತ್ತೇನೆ ಎಂದು ಬೂಸಿ ಬಿಟ್ಟಿದ್ದ ಈತ ಕನ್ನಡಿಗರು ಕೆಲಸ ಕೇಳಿದರೂ ಕೊಡದೇ ವಂಚಿಸುತ್ತಿದ್ದಾರೆ.