Homeಮುಖಪುಟತುಮಕೂರು: ನಿರ್ವಹಣೆಯಿಲ್ಲದ ಘನತ್ಯಾಜ್ಯ ವಿಲೇವಾರಿ ಘಟಕ - ಭೂಮಿ ಸೇರುತ್ತಿದೆ ವಿಷ!

ತುಮಕೂರು: ನಿರ್ವಹಣೆಯಿಲ್ಲದ ಘನತ್ಯಾಜ್ಯ ವಿಲೇವಾರಿ ಘಟಕ – ಭೂಮಿ ಸೇರುತ್ತಿದೆ ವಿಷ!

ಕಸದಿಂದ ಗೊಬ್ಬರ, ವಿದ್ಯುತ್ ಉತ್ಪಾದನೆ ಮಾಡಲು ಸ್ಥಳೀಯರನ್ನೊಳಗೊಂಡ ಸೊಸೈಟಿ ಸ್ಥಾಪನೆ ಮಾಡಿದರೆ ಜನರಿಗೆ ಉದ್ಯೋಗವೂ ದೊರೆಯುತ್ತದೆ. ಅಂತಹ ಕೆಲಸಕ್ಕೆ ಘಟಕದಲ್ಲಿ ಅವಕಾಶ ಮಾಡಿಕೊಟ್ಟಿಲ್ಲ.

- Advertisement -
- Advertisement -

ತುಮಕೂರು ಸಮೀಪದ ಅಜ್ಜಗೊಂಡನಹಳ್ಳಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಕಸದಲ್ಲಿನ ವಿಷ ಭೂಮಿಯಲ್ಲಿನ ನೀರು ಸೇರುತ್ತಿದೆ. ಘಟಕದಲ್ಲಿ ಯಾವುದೇ ವೈಜ್ಞಾನಿಕ ಮಾದರಿ ಅಳವಡಿಸಿಕೊಳ್ಳದೇ ಇರುವುದರಿಂದ ಇಡೀ ಪರಿಸರ ದುರ್ನಾತ ಬೀರುತ್ತಿದೆ. ವಾರ್ಷಿಕ ಕೋಟಿ ಕೋಟಿ ರೂಪಾಯಿ ಹಣ ವೆಚ್ಚ ಮಾಡುತ್ತಿದ್ದರೂ ಅದು ಹೇಗೆ ವ್ಯಯವಾಗುತ್ತಿದೆ ಎಂಬುದಕ್ಕೆ ಲೆಕ್ಕವೂ ಇಲ್ಲ; ಬುಕ್ಕೂ ಇಲ್ಲ. ಸಮೃದ್ಧ ಪರಿಸರದ ನಡುವೆ ಅವೈಜ್ಞಾನಿಕವಾಗಿ ಘಟಕ ನಿರ್ಮಾಣ ಮಾಡಿದ್ದು ಭೂಮಿಯೊಳಗಿನ ಜಲ ನಿಧಾನವಾಗಿ ವಿಷದ ಕೂಪವಾಗುತ್ತಿದೆ. ಆದರೂ ಇದರ ಬಗ್ಗೆ ಪರಿಸರವಾದಿಗಳು ಸೇರಿದಂತೆ ಯಾರೂ ತುಟಿ ಬಿಚ್ಚುತ್ತಿಲ್ಲ. ಘಟಕದ ಸುತ್ತಮುತ್ತಲ ಜನರು ಮಾತ್ರ ಉಸಿರುಗಟ್ಟಿದ ವಾತಾವರಣದಲ್ಲಿ ನರಳುತ್ತ ಬದುಕುತ್ತಿದ್ದಾರೆ.

ಹೌದು, ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿ ದಶಕ ಕಳೆಯುತ್ತಾ ಬರುತ್ತಿದೆ. ಫಲವತ್ತಾದ 42 ಎಕರೆ ಪ್ರದೇಶದಲ್ಲಿ ಘಟಕಕ್ಕೆ ಆರಂಭದ ದಿನಗಳಲ್ಲಿ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮುಂದೆ ನಿಂತು, ಜನರ ಮೇಲೆ ಪೊಲೀಸರು ಲಾಠಿ ಬೀಸುವಂತೆ ಮಾಡಿದರು. ಹೋರಾಟವನ್ನು ಹತ್ತಿಕ್ಕಿ ಘಟಕ ನಿರ್ಮಿಸಲಾಯಿತು. ಹೋರಾಟಗಾರರ ಮೇಲೆ ಕೇಸು ಜಡಿದರು. ಕೇಸಿನಲ್ಲಿ ಸಿಕ್ಕಿಕೊಂಡವರು ಹಲವು ವರ್ಷಗಳು ನ್ಯಾಯಾಲಯಕ್ಕೆ ಅಲೆದರು. ತೀವ್ರ ಒತ್ತಡ ಬಂದ ನಂತರ ಕೇಸ್ ವಾಪಸ್ ಪಡೆಯಲಾಯಿತು. ಈಗ ಅದು ಇತಿಹಾಸ.

ಘಟಕ ನಿರ್ಮಾಣಗೊಂಡಾಗಿನಿಂದಲೂ ತುಮಕೂರು ನಗರದ ಎಲ್ಲ ಕಸವನ್ನು ಆ ಘಟಕದಲ್ಲಿ ಸುರಿದರು. ಕೆಲವು ದಿನಗಳ ಕಾಲ ಬೆಂಕಿ ಹಚ್ಚಿದರು. ಗುಂಡಿ ತೋಡಿ ಮುಚ್ಚಿದ್ದೂ ಆಯಿತು. ನಂತರ ಕಸ ವಿಂಗಡಿಸುವ ಯಂತ್ರಗಳು ಬಂದವು. ವೇಬ್ರಿಜ್ ನಿರ್ಮಾಣವಾಯಿತು. ಸಿಸಿಟಿವಿ ಅಳವಡಿಸಿದರು. ಎಲ್ಲಾ ವೈಜ್ಞಾನಿಕ ಯಂತ್ರಗಳು ಬಂದರೂ ಅವು ನೆಪಮಾತ್ರಕ್ಕೆ ಎಂಬಂತಾದವು. ಕೋಟಿ ಕೋಟಿ ವೆಚ್ಚದಲ್ಲಿ ವರ್ಷ ಚೀನಾ, ಬ್ರೆಜಿಲ್ ಮಾದರಿ ಯಂತ್ರಗಳನ್ನು ಖರೀದಿ ಮಾಡುತ್ತಿದ್ದರೂ ಅವು ಧೂಳಿಡಿದು ಕೂತಿವೆ. ಆ ಯಂತ್ರಗಳನ್ನು ಚಾಲನೆ ಮಾಡಬೇಕಾದ ತಂತ್ರಜ್ಞರೇ ಘಟಕದಲ್ಲಿ ಇಲ್ಲ. ಸಿಸ್ಟಮ್ ನಿರ್ವಹಣೆ ಮಾಡುತ್ತಿಲ್ಲ. ಯಂತ್ರಗಳು ರನ್ ಆಗದೆ ನಿಂತಿವೆ. ಕಸ ಮಾತ್ರ ಬಂದು ಬೀಳುತ್ತಲೇ ಇದೆ.

ಉಮೇಶ್ ಡಮರುಗ

ಸ್ಥಳೀಯ ಸಾಮಾಜಿಕ ಹೋರಾಟಗಾರ ಉಮೇಶ್ ಡಮರುಗ ಅವರನ್ನು ನಾನುಗೌರಿ.ಕಾಂ ಮಾತಾಡಿಸಿತು. ಅವರು “‘ಘಟಕದಲ್ಲಿ ಯಾವುದೂ ನೆಟ್ಟಗಿಲ್ಲ. ಎಲ್ಲ ಯಂತ್ರಗಳು ಧೂಳಿಡಿದು ಕೂತಿವೆ. ಬೇಲಿಂಗ್ ಮಿಷನ್ ನಾಲ್ಕು ಇವೆ. ಅವು ಒಂದು ದಿನವೂ ಬಳಕೆ ಆಗುತ್ತಿಲ್ಲ. ತುಮಕೂರು ನಗರದಲ್ಲಿ ಕಸ ಎಷ್ಟು ಉತ್ಪತ್ತಿ ಆಗುತ್ತೆ? ಎಷ್ಟು ಟನ್ ಆಗುತ್ತೆ ಎಂಬ ಬಗ್ಗೆ ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ಲೆಕ್ಕಕ್ಕೆ 110 ಟನ್ ಎಂದು ಹೇಳುತ್ತಿದ್ದಾರೆ. ಕಸ ತೂಕ ಹಾಕಲು ವೇಬ್ರಿಜ್ ಇದೆ. ಅಲ್ಲಿ ಸಿಸಿಟಿವಿ ಇದೆ. ವೇಬ್ರಿಜ್‌ನಲ್ಲಿ ಕಸ ತೂಕ ಹಾಕುವುದಿಲ್ಲ. ಸಿಸಿಟಿವಿ ಕೆಲಸ ಮಾಡೊಲ್ಲ. ಒಂದು ಗಂಟೆ ಪೂಟೇಜ್ ಸಿಕ್ಕಲ್ಲ. ಅಂದ್ರೆ ದಿನಪೂರ್ತಿ ಓಡಾಡುವ ವಾಹನಗಳೆಷ್ಟು ಎಂದು ಹೇಗೆ ತಿಳಿಯುತ್ತದೆ. ಬಾಳೆಎಲೆ ಕಸ, ಚರಂಡಿ ಕಸ, ಪ್ಲಾಸ್ಟಿಕ್ ಕಸ ಎಷ್ಟು ಬರುತ್ತಿದೆ ಎಂಬುದಕ್ಕೆ ಲೆಕ್ಕವಿಲ್ಲ. ರಾಮ ಲೆಕ್ಕ-ಕೃಷ್ಣನ ಲೆಕ್ಕ ಎರಡೂ ಇದೆ. ದಿನಕ್ಕೆ 5 ಸಾವಿರ ಲೀಟರ್ ಡೀಸೆಲ್ ಲೆಕ್ಕ ತೋರಿಸಲಾಗುತ್ತಿದೆ ಅಂದರೆ ಎಷ್ಟು ಲೂಟಿ ಆಗುತ್ತಿದೆ ಎಂದು ಊಹಿಸಿ. ಅಬ್ಬಾ ಭ್ರಷ್ಟಚಾರದ ಕೂಪ” ಎನ್ನುತ್ತಾರೆ.

ತುಮಕೂರು ನಗರದ ಎಲ್ಲಾ 35 ವಾರ್ಡುಗಳ ಕಸ ಟ್ರ‍್ಯಾಕ್ಟರ್‌ಗಳ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನೆಯಾಗುತ್ತಿದೆ. ಲೆಕ್ಕಕ್ಕೆ ಮಾತ್ರ 110 ಟನ್. ಆದರೆ ಹೆಚ್ಚು ಕಸ ಉತ್ಪತ್ತಿ ಆಗುತ್ತಿರುವುದಂತೂ ಸತ್ಯ. ಯಾವ ಗಾಡಿಯಲ್ಲಿ ಎಷ್ಟು ಟನ್ ಇದೆ ಎಂಬುದನ್ನು ನಿತ್ಯವೂ ತೂಕ ಮಾಡುವುದಿಲ್ಲ. ಪರಿಸರ ಇಂಜಿನಿಯರ್ ಬರೆದದ್ದೇ ಅಂತಿಮ. ಸಿಸಿಟಿವಿಯಲ್ಲಿ ಕೇವಲ 2 ಗಂಟೆಯಷ್ಟು ಪೂಟೇಜ್ ರೆಕಾರ್ಡ್ ಆಗುತ್ತದೆ. ರ‍್ಯಾಮ್ ಸಾಮರ್ಥ್ಯ ಕಡಿಮೆ ಇದೆ ಅನ್ನುತ್ತಾರೆ. ಹಾಗಿದ್ದ ಮೇಲೆ ತೂಕ ಮಾಡದಿದ್ದರೆ ವೇಬ್ರಿಜ್ ಏಕೆ? ಸಿಸಿಟಿವಿ ಅಳವಡಿಸಿದ್ದು ಏಕೆ? ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಅಧಿಕಾರಿಗಳಿಂದ ಉತ್ತರವಿಲ್ಲ.

ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ ಬಂದಮೇಲೆ ಶೇ.10ರಷ್ಟು ಕಸದ ವಿಂಗಡಣೆ ಕೆಲಸ ನಡೆಯುತ್ತಿದೆ. ಇನ್ನುಳಿದ 90ರಷ್ಟು ಕಸ ಹಾಗೆಯೇ ಉಳಿಯುತ್ತದೆ. ಘಟಕದಲ್ಲಿ ಕಸ ಸುರಿದ ಮೇಲೆ ಅದರಲ್ಲಿ ದುರ್ನಾತ ಬೀರುವ ಕೊಳಕು ನೀರು ಘಟಕದಿಂದ ಹೊರ ಹರಿಯುತ್ತಿದೆ. ಕಪ್ಪಾದ ದುರ್ನಾತ ಬೀರುವ ನೀರು ಘಟಕದ ಎಡಭಾಗದಲ್ಲಿರುವ ಕಟ್ಟೆಗೆ ಹರಿಯುತ್ತದೆ. ಹಾಗಾಗಿ ಆ ನೀರಿನ ದುರ್ವಾಸೆಯನ್ನು ಕಟ್ಟಿಗೇಹಳ್ಳಿ, ಅಳಕಟ್ಟೆ, ಕೋರಾ, ಅಮಾನಿಕೆರೆ ಮೊದಲಾದ ಹಳ್ಳಿಯ ಜನರು ನಿತ್ಯವು ಸೇವನೆ ಮಾಡಬೇಕಾಗಿದೆ. ಅವರಿಗೆ ಶುದ್ದ ಗಾಳಿಯೇ ಇಲ್ಲವೆಂಬಂತಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಘಟಕದ ಪಕ್ಕದ ಕಟ್ಟೆ ತುಂಬುತ್ತಿದ್ದಂತೆಯೇ ಅದೇ ನೀರನ್ನು ಕಸದರಾಶಿಯ ಮೇಲೆ ಪಂಪ್ ಮಾಡಲಾಗುತ್ತಿದೆ. ಆ ನೀರು ಭೂಮಿ ಒಡಲು ಸೇರುತ್ತಿದೆ.

ಕರ್ನಾಟಕ ಪ್ರಾಂತ ರೈತಸಂಘ ಸಂಚಾಲಕ ಬಿ.ಉಮೇಶ್ ಹೇಳುವುದು ಹೀಗೆ. ‘ವಿಷಯುಕ್ತ ನೀರು ಭೂಮಿ ಸೇರಿದರೆ ಅದು ಹೆಬ್ಬಾಳ ಕೆರೆಯ ಮೂಲಕ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯವರೆಗೂ ಇರುವ ‘ಜಲಪಟ್ಟಿ’ಯಲ್ಲಿ ಸೇರಿ ಹೋಗುತ್ತದೆ. ಇಡೀ ಆ ಪರಿಸರವೇ ವಿಷಯುಕ್ತ ನೀರು ಜಲಚರಗಳು, ಮನುಷ್ಯರು ಮತ್ತು ಪ್ರಾಣಿಗಳು ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಂದೆ ಆಗುವ ಇಂತಹ ಅನಾಹುತದ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಕೆಲವು ಜನಪ್ರತಿನಿಧಿಗಳು ಒಳಗೊಳಗೆ ಶಾಮೀಲಾಗಿ ಹಣ ಲೂಟಿ ಮಾಡುತ್ತಿದ್ದಾರೆ. ಈ ‘ಕೂಟ’ದ ಕರಾಮತ್ತಿನಿಂದ ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ. ಇದನ್ನು ಕೇಳುವವರೂ ಇಲ್ಲ; ಹೇಳುವವರೂ ಇಲ್ಲ ಎಂಬಂತಾಗಿದೆ.

ಘಟಕವನ್ನು 39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರೂ ವೈಜ್ಞಾನಿಕವಾಗಿಲ್ಲ. ಆಧುನಿಕ ಯಂತ್ರಗಳನ್ನು ತಂದಿರುವುದು ಬಿಟ್ಟರೆ ಅವುಗಳ ಬಳಕೆ ಯಾರಿಗೂ ಗೊತ್ತಿಲ್ಲ. ಇದರಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಯಂತ್ರಗಳು ಧೂಳು ಹಿಡಿದಿದ್ದು ಅವುಗಳ ಧೂಳನ್ನು ಹೊಡೆಯುವವರೂ ಇಲ್ಲ. ಘಟಕದಲ್ಲಿ ಸಾವಯವ ಗೊಬ್ಬರ ಮಾಡಲಾಗುತ್ತಿದೆ ಎಂದು ಲೆಕ್ಕ ತೋರಿಸಲಾಗುತ್ತಿದೆ. ಹಾಗಾದರೆ ಆ ಗೊಬ್ಬರ ಯಾರಿಗೆ ಕೊಟ್ಟಿದ್ದಾರೆ ಎಂಬ ಬಗ್ಗೆ ಒಂದು ರಸೀದಿಯೂ ಇಲ್ಲವೆನ್ನುತ್ತವೆ ಮೂಲಗಳು. ಕಸದಿಂದ ಗೊಬ್ಬರ ಮಾಡಿದರೆ ತಾನೆ ರಸೀದಿಗಳು ಸಿಗುವುದು! ಯಾರಾದರೂ ಪರಿಶೀಲನೆಗೆ ಬಂದಾಗ ಮಾತ್ರ ನೆಪಮಾತ್ರಕ್ಕೆ ಎಂಬಂತೆ ಸ್ವಲ್ಪ ಗೊಬ್ಬರವನ್ನು ತೋರಿಸಲಾಗುತ್ತಿದೆ.

ತುಮಕೂರಿನಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ವಿಂಗಡಿಸಬೇಕು. ಆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಕಸದಿಂದ ಗೊಬ್ಬರ, ವಿದ್ಯುತ್ ಉತ್ಪಾದನೆ ಮಾಡಲು ಸ್ಥಳೀಯರನ್ನೊಳಗೊಂಡ ಸೊಸೈಟಿ ಸ್ಥಾಪನೆ ಮಾಡಿದರೆ ಜನರಿಗೆ ಉದ್ಯೋಗವೂ ದೊರೆಯುತ್ತದೆ. ಅಂತಹ ಕೆಲಸಕ್ಕೆ ಘಟಕದಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಮನೆಗಳಲ್ಲೇ ಕಸ ವಿಂಗಡಿಸಿದರೆ ಸರ್ಟಿಫಿಕೇಟ್ ನೀಡುವ ಮತ್ತು ತೆರಿಗೆ ವಿನಾಯಿತಿ ಕೊಡುವ ಪ್ರಸ್ತಾಪ ಮಾಡಿದರೆ ಜನರು ಅದಕ್ಕೆ ಹೊಂದಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಅಂತಹ ಕೆಲಸಕ್ಕೆ ನಗರಪಾಲಿಕೆ ಮುಂದಾಗಿಲ್ಲ. ತುಮಕೂರು ಸಂಸದ ಬಸವರಾಜು, ನಗರ ಶಾಸಕ ಜ್ಯೋತಿಗಣೇಶ್ ಜನರ ಕಷ್ಟಗಳನ್ನು ಕೇಳಲು ಇತ್ತ ತಿರುಗಿಯೂ ನೋಡುತ್ತಿಲ್ಲ. ಇವರು ಬಂದರೆ ಕೆಲಸವನ್ನಾದರೂ ಮಾಡುತ್ತಾರೆ ಎಂದು ಆರಿಸಿದರೆ ‘ಅಪ್ಪಮಗ’ ಮತ ಹಾಕಿದ ಮತದಾರರನ್ನೇ ಮರೆತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಒಟ್ಟಾರೆ ‘ಹುಚ್ಚು ಮುಂಡೆ ಮದ್ವೇಲಿ ಉಂಡೋನೇ ಜಾಣ’ ಅನ್ನುವಂತಾಗಿವೆ ಘನತ್ಯಾಜ್ಯ ವಿಲೇವಾರಿ ಘಟಕದ ಸ್ಥಿತಿ. ಕಸದಲ್ಲಿಯೂ ಉಂಡು ತೇಗುತ್ತಿದ್ದಾರೆ. ನೋವು ಅನುಭವಿಸುವವರು ಅನುಭವಿಸುತ್ತಲೇ ಇದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...