ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ‘ದಿ ಕೇರಳ ಸ್ಟೋರಿ’ ವಿವಾದಿತ ಸಿನಿಮಾ ಪ್ರದರ್ಶನವನ್ನು ಮಾಡಿದ್ದು, ಈ ವೇಳೆ ಪ್ರತಿಭಟಿಸಿದ ಆರೋಪದಲ್ಲಿ ಕೇರಳದ ಇಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ಭಾನುವಾರ ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ದಿವಂಗತ ಗೋವಾದ ಲೇಖಕ ಮತ್ತು ಮಾಜಿ ಶಾಸಕ ವಿಷ್ಣು ಸೂರ್ಯ ವಾಘ್ ಅವರ ಜಾತಿ ತಾರತಮ್ಯದ ಕುರಿತ ಸುಧೀರ್ ಸೂಕ್ತ ಕವನ ಸಂಕಲನದ ಕವಿತೆಯನ್ನು ಪ್ರಕಟಿಸಿರಲಿಲ್ಲ. ಸೃಜನಶೀಲ ಕಾರಣಗಳಿಗಾಗಿ ತೆಗೆದುಕೊಂಡ ಸಂಪಾದಕೀಯ ನಿರ್ಧಾರ ಎಂದು IFFI ಹೇಳಿತ್ತು. ಆದರೆ ಇದೀಗ ದಿ ಕೇರಳ ಸ್ಟೋರಿ ಚಲನ ಚಿತ್ರವನ್ನು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ವಿವಾದಕ್ಕೆ ಕಾರಣವಾಗಿದೆ.
ಕೇರಳದ ಶ್ರೀನಾಥ್ ಮತ್ತು ಅರ್ಚನಾ ರವಿ ಎಂಬ ಇಬ್ಬರು ಕಳೆದ ಒಂದು ವಾರದಿಂದ ಚಲನಚಿತ್ರೋತ್ಸವಕ್ಕೆ ಹಾಜರಾಗಿದ್ದರು. ಸೋಮವಾರ ಸಂಜೆ ಪಣಜಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಅವರಲ್ಲಿದ್ದ ಕಾರ್ಯಕ್ರಮದ ಪಾಸ್ಗಳನ್ನು ಮುಟ್ಟುಗೋಲು ಹಾಕಿಕೊಂಡು ಉತ್ಸವದಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕೇರಳ ಸ್ಟೋರಿ ಸುಳ್ಳು ಪ್ರಚಾರದ ಚಲನಚಿತ್ರವಾಗಿದ್ದು, ಅದರ ವಿರುದ್ಧ ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೇವೆ. ಅಲ್ಲಿ ನಾವು ಯಾವುದೇ ಘೋಷಣೆಗಳನ್ನು ಕೂಗಲಿಲ್ಲ. ಅದು ಪ್ರತಿಭಟನೆಯೂ ಆಗಿರಲಿಲ್ಲ. ನಾವು ಆ ಚಿತ್ರದ ಕುರಿತು ಎ4 ಅಳತೆಯೆ ಮೀಮ್ವೊಂದನ್ನು ಮುದ್ರಿಸಿ, ಅದನ್ನು ನಮ್ಮ ಟಿ-ಶರ್ಟ್ಗಳಿಗೆ ಅಂಟಿಸಿಕೊಂಡಿದ್ದೆವು ಎಂದು ಅರ್ಚನಾ ಅವರು ಹೇಳಿದ್ದಾರೆ.
ಅರ್ಚನಾ ಟಿ-ಶರ್ಟ್ ಧರಿಸಿ ಸ್ನೇಹಿತೆಯೊಬ್ಬರ ಜೊತೆ ಪೋಟೋ ಕ್ಲಿಕ್ಕಿಸುವಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಇದು ಪ್ರತಿಭಟನೆಯ ಸ್ಥಳವಲ್ಲ ಎಂದು ಪೊಲೀಸರು ಅವರಿಗೆ ಹೇಳಿದ್ದಾರೆ.
ಪಣಜಿ ಪೊಲೀಸ್ ಠಾಣೆಗೆ ನಮ್ಮನ್ನು ಕರೆದೊಯ್ದು ಅಧಿಕಾರಿಗಳು ಫೋನ್ಗಳು, ಐಡಿಗಳು ಮತ್ತು ಉತ್ಸವದ ಪಾಸ್ಗಳನ್ನು ತೆಗೆದುಕೊಂಡರು. ಉತ್ಸವಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ. ಅವರು ನಮ್ಮ ಕರೆ ದಾಖಲೆಗಳನ್ನು ಪರಿಶೀಲಿಸಿದರು ಮತ್ತು ನನ್ನ ಟೀ ಶರ್ಟ್ ಕಿತ್ತುಕೊಂಡರು. 45 ನಿಮಿಷಗಳ ನಂತರ ನಮ್ಮನ್ನು ಬಿಡುಗಡೆ ಮಾಡಲಾಯಿತು ಎಂದು ಸಾಕ್ಷ್ಯಚಿತ್ರ ನಿರ್ಮಾಪಕ ಶ್ರೀನಾಥ್ ಹೇಳಿದ್ದಾರೆ.
ಐಎಫ್ಎಫ್ಐನಂತಹ ಪ್ರತಿಷ್ಠಿತ ಉತ್ಸವದಲ್ಲಿ ಕೇರಳ ಸ್ಟೋರಿಯಂತಹ ವಿವಾದಾತ್ಮಕ ಚಲನಚಿತ್ರವನ್ನು ಪ್ರದರ್ಶಿಸಿರುವುದು ನಿರಾಶಾದಾಯಕವಾಗಿದೆ. ಇದೊಂದು ಪ್ರಚಾರದ ಸಿನಿಮಾವಾಗಿದ್ದು, ಇದು ಜನರನ್ನು ಕೆಣಕುತ್ತದೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಶ್ರೀನಾಥ್ ಹೇಳಿದ್ದಾರೆ.
ದಿ ಕೇರಳ ಸ್ಟೋರಿ ನಿರ್ದೇಶಕ ಸುದೀಪ್ತೋ ಸೇನ್ ಕಾರ್ಯಕ್ರಮದ ಸಂದರ್ಭದಲ್ಲಿ ಅರ್ಚನಾ ರವಿಯೊಂದಿಗೆ ಮಾತನಾಡುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ನೀವು ಚಲನಚಿತ್ರವನ್ನು ನೋಡಿದ್ದೀರಾ? ಸಿನಿಮಾ ನೋಡದ ಹೊರತು ಅದರ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ. ನೀವು ಚಿತ್ರ ನೋಡಿದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ ಎಂದು ವೀಡಿಯೊದಲ್ಲಿ ಸೇನ್ ಹೇಳುವುದು ಸೆರೆಯಾಗಿದೆ.
ದಿ ಕೇರಳ ಸ್ಟೋರಿ ಚಲನ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದು, ವಿಪುಲ್ ಅಮೃತ್ಲಾಲ್ ಶಾ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ತೆರೆಕಂಡಿದೆ. ಅದರಲ್ಲಿ ಕೇರಳದಲ್ಲಿ32 ಸಾವಿರ ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ನಂತರ ಈ ಮಹಿಳೆಯರನ್ನು ಭಯೋತ್ಪಾದಕರು ಐಸಿಸ್ ಆಳ್ವಿಕೆಯ ಸಿರಿಯಾಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕಾಲ್ಪನಿಕವಾಗಿ ಹೇಳಲಾಗಿತ್ತು. ಈ ಚಲನ ಚಿತ್ರ ಬಿಡಗಡೆಗೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು.
ದಿ ಕೇರಳ ಸ್ಟೋರಿ ಸಿನಿಮಾ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಸಿನಿಮಾದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ನಿಕೃಷ್ಟವಾಗಿ ತೋರಿಸಲಾಗಿದೆ. ಈ ಚಿತ್ರಕ್ಕೆ ನಿಷೇಧ ಹೇರಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಆದರೆ ದಿ ಕೇರಳ ಸ್ಟೋರಿ ಸಿನಿಮಾಗೆ ಈಗಾಗಲೇ ಸೆನ್ಸಾರ್ ಮಂಡಳಿಯ ಗ್ರೀನ್ ಸಿಗ್ನಲ್ ನೀಡಿತ್ತು. ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೊಟ್ಟಿರುವ ಕೇಂದ್ರ ಸೆನ್ಸಾರ್ ಮಂಡಳಿ, 10 ದೃಶ್ಯಗಳಿಗೆ ಕತ್ತರಿ ಹಾಕಲು ಹೇಳಿ ಚಿತ್ರ ಪ್ರದರ್ಶನಕ್ಕೆ ಅನುಮತಿಯನ್ನೂ ಕೊಟ್ಟಿದೆ. ಹೀಗಾಗಿ ಈ ವಿಚಾರದಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಇದನ್ನು ಓದಿ: ಗೋವಾ: ಚಲನಚಿತ್ರೋತ್ಸವದಲ್ಲಿ ಕೈಬಿಟ್ಟ ಜಾತಿ ತಾರತಮ್ಯದ ಕುರಿತ ಕವಿತೆ; ವಿವಾದ