ಹಾಸನ ಸಂಸದ, ಎನ್ಡಿಎ ಎಂಪಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ‘ಪೆನ್ಡ್ರೈವ್’ ಸುದ್ದಿ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿರುವುದು, ಗೌಡ ಕುಟುಂಬಕ್ಕೆ ಹಾಗೂ ಮೈತ್ರಿ ಪಕ್ಷ ಬಿಜೆಪಿ ನಾಯಕರಿಗೆ ಮುಜುಗರ ಅನುಭವಿಸುವಂತೆ ಮಾಡಿದೆ. ಜೆಡಿಎಸ್ ಸಂಸದರ ಅಶ್ಲೀಲ ವಿಡಿಯೋ ಪ್ರಕರಣ ಚುನಾವಣೆಗೂ ಮೊದಲೇ ಉಭಯ ಪಕ್ಷಗಳಿಗೆ ನಾಯಕರಿಗೆ ಗೊತ್ತಿದ್ದರೂ, ಮುಚ್ಚಿಟ್ಟಿದ್ಯಾಕೆ ಎಂಬ ಪ್ರಶ್ನೆ ಮೂಡಿದೆ.
ಪ್ರಜ್ವಲ್ ಪೆನ್ಡ್ರೈವ್ಗೆ ಕುರಿತು ಚುನಾವಣೆಗೂ ಮೊದಲೇ ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದ ವಿಚಾರ ಇದೀಗ ಬಹಿರಂಗವಾಗಿದ್ದು, ಅವರು ‘ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ’ ಎಂದು ಹೇಳಿದ್ದರು. ಮೈತ್ರಿ ಮಾಡಿಕೊಂಡರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ಪತ್ರ ಬರೆದು ವಿನಂತಿಸಿದ್ದರು.
“ಅಶ್ಲೀಲ ವಿಡಿಯೋ ಪ್ರಕರಣ ಚುನಾವಣೆಗೆ ಎರಡು ದಿನ ಮುನ್ನವೇ ಗೊತ್ತಿತ್ತು” ಎಂದು ಬಿಜೆಪಿಯ ಮಾಜಿ ಶಾಸಕ ಸಿ.ಟಿ ರವಿ ಕೂಡ ಇಂದು ಬಾಯಿ ಬಿಟ್ಟಿದ್ದಾರೆ.
‘ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಮಾಹಿತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಗೊತ್ತಿತ್ತು’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಲೈಂಗಿಕ ಹಗರಣದ ಕುರಿತು ಮಾತನಾಡಿರುವ ಸಿಟಿ ರವಿ, “ಈ ಕೇಸ್ ಬಗ್ಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟವಾಗಿ ಮಾತನಾಡಿದ್ದಾರೆ. ಮಾಜಿ ಶಾಸಕರು ಪತ್ರ ಬರೆದಿರುವ ವಿಚಾರ ನಮಗೆ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಟ್ಟಿರುವುದು ಜೆಡಿಎಸ್, ನಾವಲ್ಲ” ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
‘ಪ್ರಜ್ವಲ್ ಲೈಂಗಿಕ ಹಗರಣವು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮಿತ್ ಶಾಗೂ ಗೊತ್ತಿತ್ತು: ಹೆಬ್ಬಾಳ್ಕರ್
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಮಾಹಿತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಗೊತ್ತಿತ್ತು. ಆದರೂ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
‘ಇದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ನಾಚಿಕೆಗೇಡಿನ ಕೃತ್ಯ. ಇಡೀ ರಾಜ್ಯ ತಲೆ ತಗ್ಗಿಸುವ ಕೆಲಸ ಪ್ರಜ್ವಲ್ ರೇವಣ್ಣ ಮಾಡಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ ಮೈಸೂರಿಗೆ ಬಂದಾಗ ಪ್ರೀತಂಗೌಡ ಈ ಎಲ್ಲ ವಿಷಯಗಳನ್ನು ಹೇಳಿದ್ದರು. ಅಮಿತ್ ಶಾ ಅವರಿಗೆ ಎಲ್ಲ ಗೊತ್ತಿದ್ದರೂ ಬಿಜೆಪಿಯವರು ಮೈತ್ರಿ ಮಾಡಿಕೊಂಡರು” ಎಂದು ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ; ಹಾಸನ ಲೈಂಗಿಕ ಹಗರಣ: ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತಿಗೆ ಶಾಸಕ ಶರಣಗೌಡ ಆಗ್ರಹ