Homeಮುಖಪುಟಟು ನೇಷನ್‌ ಥಿಯೆರಿ: ಯಾವುದು ’ರಾಷ್ಟ್ರ’? ಯಾರು ’ಪ್ರಜೆ’? - ಪ್ರೊ.ಕೆ.ಫಣಿರಾಜ್

ಟು ನೇಷನ್‌ ಥಿಯೆರಿ: ಯಾವುದು ’ರಾಷ್ಟ್ರ’? ಯಾರು ’ಪ್ರಜೆ’? – ಪ್ರೊ.ಕೆ.ಫಣಿರಾಜ್

ವಿಭಜನೆಯು ವಾಸ್ತವಿಕವಾಗುವುದು ಖಾತ್ರಿಯಾದ ನಂತರವೂ ಭಾರತದ ರಾಜಕೀಯ ಧಾರೆಗಳು ‘ಭಾರತದ ಪ್ರಭುತ್ವ’ವನ್ನು ‘ಎರಡು ರಾಷ್ಟ್ರ’ಗಳ ಸೈದ್ಧಾಂತಿಕ ಮಾದರಿಯಲ್ಲಿ ಕಟ್ಟಲು ನಿರಾಕರಿಸಿದವು;

- Advertisement -
- Advertisement -

ತಾಂತ್ರಿಕವಾಗಿ ನೋಡುವುದಾದರೆ (ಭಾರತೀಯ ಮುಸ್ಲಿಮರನ್ನೂ ಒಳಗೊಂಡು) ಭಾರತದ ನಾಗರಿಕರಿಗೆ ಹೊಸ ಪೌರತ್ವ ಕಾಯ್ದೆ ತಿದ್ದುಪಡಿಯಿಂದ ತೊಂದರೆಯಿಲ್ಲ. ಆದರೆ ಪರಿಣಾಮದಲ್ಲಿ ಏನಾಗಬಹುದು ಎಂಬುದಕ್ಕೆ ಹಲವು ವ್ಯಾಖ್ಯಾನಗಳಿವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸಾವರ್ಕರ್ ಮತ್ತು ಜಿನ್ನಾರ ಎರಡು ರಾಷ್ಟ್ರ ಸಿದ್ಧಾಂತಗಳನ್ನು ಒಪ್ಪದೇ ಭಾರತದ ಮುಂಚೂಣಿ ನಾಯಕರು ಅಪ್ಪಿಕೊಂಡ ‘ಎಲ್ಲರ ಭಾರತ’ ತಾತ್ವಿಕತೆಗೆ ಈ ತಿದ್ದುಪಡಿ ಕೊಡಲಿಪೆಟ್ಟು ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಖ್ಯಾತ ಚಿಂತಕ ಪ್ರೊ.ಕೆ.ಫಣಿರಾಜ್ ಅವರು ‘ಎರಡು ರಾಷ್ಟ್ರ ಸಿದ್ಧಾಂತ’ವನ್ನಷ್ಟೇ ಅಲ್ಲದೇ ಗಾಂಧಿ, ಟ್ಯಾಗೋರ್ ಮತ್ತು ಅಂಬೇಡ್ಕರರ ಚಿಂತನೆಯ ನೆಲೆಯಲ್ಲಿ ತಮ್ಮ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ.

“ಹಿಂದು ಮತ್ತು ಇಸ್ಲಾಂ ಒಂದಕ್ಕೊಂದು ವಿರುದ್ಧವಾದ ಸಂಹಿತೆ-ಸಂಸ್ಕೃತಿಗಳನ್ನು ಹೊಂದಿರುವ ಮತಗಳು ಎಂಬ ವಿಚಾರದ ವಿರುದ್ಧ ನನ್ನ ಇಡಿ ಆತ್ಮವು ಬಂಡೇಳುತ್ತದೆ. ಅಂತಹ ವಿಚಾರವನ್ನು ಒಪ್ಪಿದೆನಾದರೆ, ನಾನು ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಂತೆಯೇ ಸರಿ.” (ಮೋಹನದಾಸ ಕರಮಚಂದ್ ಗಾಂಧಿ, 1940ರಲ್ಲಿ ನಡೆಯುತ್ತಿದ್ದ ‘ಎರಡು ರಾಷ್ಟ್ರ’ ಗಳ ಸೈದ್ಧಾಂತಿಕ ಚರ್ಚೆಗೆ ಪ್ರತಿಕ್ರಿಯೆ)

“ರಾಷ್ಟ್ರ ಪ್ರೇಮವು ನಮಗೆ ಕ್ಷೇಮವೆಂದು ಅನಿಸುತ್ತಿಲ್ಲ. ಕೊನೆಗೂ ನಾನು ಆಶ್ರಯಿಸುವುದು ಮನುಷ್ಯರಿಗೆ ಹಿತವನ್ನುಂಟು ಮಾಡುವ ವಿಚಾರಗಳನ್ನು” (ರಬೀಂದ್ರನಾಥ ಠಾಕೂರ್, 1908ರಲ್ಲಿ ಅಬ್ಲಾ ಬೋಸ್ ಅವರು, ಸ್ವದೇಶಿ ಚಳವಳಿಯ ಬಗ್ಗೆ ರಬೀಂದ್ರರು ಉತ್ಸಾಹ ಕಳೆದುಕೊಂಡಿರುವುದನ್ನು ಪ್ರಶ್ನಿಸಿ ಬರೆದ ಪತ್ರಕ್ಕೆ ಕೊಟ್ಟ ಉತ್ತರದಲ್ಲಿ)

ರಾಜಕೀಯವನ್ನು ಬಲ್ಲ ಜನ “ಭಾರತದ ಜನರು” ಎಂಬ ಕಲ್ಪನೆಯನ್ನು ಅಸಡ್ಡೆಯಿಂದ ಕಂಡು,”ಭಾರತ ರಾಷ್ಟ್ರ”ದ ಬಗ್ಗೆ ಒಲವು ತೋರುತ್ತಿದ್ದ ದಿನಗಳು ನನಗಿನ್ನು ನೆನಪಿದೆ. ನನ್ನ ಪ್ರಕಾರ ನಾವು ಒಂದು ರಾಷ್ಟ್ರವಾಗಿದ್ದೇವೆ ಎನ್ನುವುದೇ ಒಂದು ಭ್ರಮೆ. ಜನ ಸಾವಿರಾರು ಜಾತಿಗಳಾಗಿ ಒಡೆದುಹೋಗಿರುವಾಗ ನಾವು ಒಂದು ರಾಷ್ಟ್ರವಾಗಲು ಹೇಗೆ ಸಾಧ್ಯ? ಸಾಮಾಜಿಕವಾಗಿ ಹಾಗು ಮಾನಸಿಕವಾಗಿ ನಾವಿನ್ನೂ ಒಂದು ರಾಷ್ಟ್ರವಾಗಿಲ್ಲ ಎಂದು ಎಷ್ಟು ಬೇಗ ಅರಿಯುತ್ತೇವೆಯೋ ಅಷ್ಟು ನಮಗೆ ಕ್ಷೇಮ… ಜಾತಿಯು ರಾಷ್ಟ್ರ ವಿರೋಧಿ. ಜಾತಿಯು ಸಾಮಾಜಿಕ ಬದುಕನ್ನು ಪ್ರತ್ಯೇಕಿಸುತ್ತದೆ, ಜಾತಿ ಜಾತಿಗಳ ನಡುವೆ ದ್ವೇಷಸೂಯೆಗಳನ್ನು ಬಿತ್ತುತ್ತದೆ ಎಂಬ ಕಾರಣಕ್ಕಾಗಿ ರಾಷ್ಟ್ರ ವಿರೋಧಿ. ನೈಜ ರಾಷ್ಟ್ರವಾಗಲು ನಾವು ಇದನ್ನೂ ಮೀರಲೇಬೇಕು. ರಾಷ್ಟ್ರವಿದ್ದಾಗ ಮಾತ್ರವೇ ಸಹೋದರತ್ವವು ಸಾಕಾರವಾಗುವುದು. ಸಹೋದರತ್ವ ಇರದೇ ಹೋದಲ್ಲಿ ಸ್ವಾತಂತ್ರ್ಯ, ಸಮಾನತೆಗಳು ತೋರಿಕೆಯ ಬಣ್ಣಗಳಷ್ಟೇ ಆಗಿರುತ್ತವೆ. (ಡಾ.ಬಿ.ಆರ್.ಅಂಬೇಡ್ಕರ್,ನವೆಂಬರ್ 25, 1949ರಂದು ಕಾನ್‍ಸ್ಟಿಟ್ಯುಯೆಂಟ್ ಅಸೆಂಬ್ಲಿಯಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ)

1923ರಲ್ಲಿ ಪ್ರಕಟವಾಗಿ, 1950ರಲ್ಲಿ ಭಾರತದ ಗಣರಾಜ್ಯದ ಸಂವಿಧಾನವನ್ನು ಅಂಗೀಕರಿಸುವಲ್ಲಿಗೆ ಮುಗಿದುಹೋಗಿದೆ ಎಂದುಕೊಂಡಿದ್ದ ‘ಎರಡು ರಾಷ್ಟ್ರ’ಗಳ ಸಿದ್ಧಾಂತವು, ’ಪೌರತ್ವ (ತಿದ್ದುಪಡಿ) ಕಾಯ್ದೆ’ಯ ಕುರಿತ ಪರ-ವಿರೋಧಗಳ ಈ ಹೊತ್ತಲ್ಲಿ, ಹೊಸ ರೂಪದಲ್ಲಿ ಪ್ರಕಟವಾಗಿದೆ. 1923ರಲ್ಲಿ ವಿ.ಡಿ.ಸಾವರ್ಕರ್ ತಮ್ಮ ‘ಹಿಂದುತ್ವ: ಯಾರು ಹಿಂದು ಆಗಿರುವರು? (ಹಿಂದುತ್ವ: ಹೂ ಇಸ್ ಎ ಹಿಂದು?)’ ಎಂಬ ಕಿರು ಹೊತ್ತಿಗೆಯನ್ನು ಪ್ರಕಟಿಸುವ ಮೂಲಕ ‘ಮತಾಧಾರಿತ ರಾಷ್ಟ್ರ’ದ ಪರಿಕಲ್ಪನೆಗೆ ಖಚಿತ ಆಕಾರ ಒದಗಿಸಿದರು. “ಯಾರು ಸಿಂಧು ನದಿಯ ತಟದಿಂದ ಸಾಗರದ ಅಂಚಿನವರೆಗೆ ಹಬ್ಬಿರುವ ವಿಶಾಲ ಭರತವರ್ಷವನ್ನು ತನ್ನ ಪಿತೃಭೂಮಿ ಹಾಗು ತನ್ನ ಮತದ ತೊಟ್ಟಿಲಾಗಿರುವ ಪವಿತ್ರಭೂಮಿ ಎಂದು ಮನ್ನಿಸುವರೋ, ಅವರೇ ಹಿಂದು” ಎಂಬ ನಿಖರ ಉದ್ಘೋಷ ಹೊಂದಿರುವ ಈ ಪ್ರಕಟಣೆಯಲ್ಲಿ, ‘(ಈ ಬಗೆಯಲ್ಲಿ) ಹಿಂದುಗಳಲ್ಲದವರು, ಹಿಂದುಗಳಿಗೆ ಅಡಿಯಾಳಾಗಿ, ಎರಡನೇ ದರ್ಜೆಯ ಸ್ಥಾನಮಾನ ಒಪ್ಪಿಕೊಂಡು ಬದುಕಬೇಕು’ ಎಂದೂ, ‘ಹಿಂದುತ್ವವು ಹಿಂದು ಮತಾಚರಣೆಗಳಿಗಿಂತ ಭಿನ್ನವಾದ ವಿಚಾರ’ ವೆಂದೂ ನಿರೂಪಿಸಲಾಗಿದೆ.

1925ರಲ್ಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ವು (ಆರ್.ಎಸ್.ಎಸ್.) ಸ್ಥಾಪನೆಯಾಗಿ, ತನ್ನನ್ನು ವಿ.ಡಿ.ಸಾವರ್ಕರರ ‘ಹಿಂದು ಮಹಾಸಭಾ’ದ ಜೊತೆ ನೇರ ಸಂಬಂಧವಿರದ ಸಂಘಟನೆ ಎಂದು ಗುರುತಿಸಿಕೊಂಡರೂ, ‘ರಾಷ್ಟ್ರ ಎಂದರೇನು?’ ಎಂಬ ಕಣ್ಣೋಟಕ್ಕೆ ಸಾವರ್ಕರರ ‘ಹಿಂದುತ್ವ ವಾದ’ವನ್ನೇ ಆಧಾರವಾಗಿಟ್ಟುಕೊಂಡಿತು. ಇದನ್ನು ಹೆಚ್ಚು ಸುಸ್ಪಷ್ಟಗೊಳಿಸಲು, ಆರ್.ಎಸ್.ಎಸ್.ನ ಸೈದ್ಧಾಂತಿಕ ಗುರುವೆಂದು ಮನ್ನಣೆ ಪಡೆದಿರುವ ಎಂ.ಎಸ್. ಗೋಲ್ವಾಲ್ಕರ್ ‘ನಾವು ಅಥವ ನಮ್ಮ ರಾಷ್ಟ್ರೀಯತೆಯ ಖಚಿತಾರ್ಥನಿರೂಪಣೆ (ವಿ ಆರ್ ಅವರ್ ನೇಷನ್‍ಹುಡ್ ಡಿಫೈನ್ಡ್)’ ಎಂಬ ಕೃತಿಯನ್ನು 1937ರಲ್ಲಿ ರಚಿಸಿ, 1939ರಲ್ಲಿ ಪ್ರಕಟಿಸಿದರು. ಗೋಲ್ವಾಲ್ಕರ್ ಸಾವರ್ಕರರ ಮೂಲ ಸಿದ್ಧಾಂತವನ್ನು ಮನ್ನಿಸಿಯೂ ಅದಕ್ಕೊಂದು ತಿರುವು ಕೊಟ್ಟರು; ಅದೇನೆಂದರೆ: ’ಹಿಂದು ರಾಷ್ಟ್ರ’ ವಿಚಾರವು ಬರಿ ಪ್ರಭುತ್ವ ಸ್ಥಾಪನೆಗೆ ಸಾಧನವಾಗುವ ಸಂಗತಿಯಾಗಿರದೇ, ‘ಆರ್ಯಾ ಸಂಸ್ಕೃತಿ’ಯ ಪ್ರಾಚೀನ ಆಸ್ಮಿತೆಯನ್ನು ಹೊಂದಿರುವ ಉತ್ಕೃಷ್ಟ ನಾಗರಿಕತೆಯನ್ನು ಗುರುತಿಸಿ, ಸಾಮಾಜಿಕ ಜೀವನವನ್ನು ನಿಯಂತ್ರಿಸುವ ಯಜಮಾನ ಸ್ವರೂಪದ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯಾಗಿದೆ. ಈ ನಿರೂಪಣೆಯ ಮೂಲಕ ಗೋಲ್ವಾಲ್ಕರ್ ಆರ್ಯಾ ಜನಾಂಗದ ವಿಶ್ವ ಸರ್ವಾಧಿಕಾರವನ್ನು ಘೋಷಿಸಿದ ‘ನಾಝಿವಾದ’ವನ್ನು ಮಾದರಿಯಾಗಿಯೂ ಎತ್ತಿ ಹಿಡಿದರು. ಗೋಲ್ವಾಲ್ಕರ್ ನಮೂನೆಯ ರಾಷ್ಟ್ರೀಯ ವಾದಕ್ಕೆ ಕಾಂಗ್ರೆಸ್ಸಿನಲ್ಲೂ ಬೆಂಬಲಿಗರಿದ್ದರೂ (ಕಾಂಗ್ರೆಸ್ಸಿಗರಾಗಿದ್ದು ’ಲೋಕ ನಾಯಕ’ ಎಂಬ ಖ್ಯಾತಿ ಹೊಂದಿದ್ದ ಆಣೆಯವರು ಗೋಲ್ವಾಲ್ಕರರ ಕೃತಿಗೆ ಸುದೀರ್ಘ ಮುನ್ನುಡಿ ಬರೆದಿರುವರು), ಅಂದಿನ ಕಾಂಗ್ರೆಸ್ಸಿನಲ್ಲಿ ಬಹಳ ಪ್ರಭಾವಿಯಾಗಿದ್ದ ‘ಭೌಗೋಳಿಕ ರಾಷ್ಟ್ರವಾದ’ದ ಮುಂದಾಳತ್ವವನ್ನು ನಿರಾಕರಿಸುವ ಸ್ಥಿತಿ ಇರಲಿಲ್ಲ.

1928ರಲ್ಲಿ ದೇಶಿಯ ಪ್ರಾತಿನಿಧಿಕ ಸರಕಾರ ರಚನೆಗೆ ಅವಶ್ಯಕವಾಗಿದ್ದ ಒಂದು ಕರಡು ಸಂವಿಧಾನವನ್ನು ಮೋತಿಲಾಲ್ ನೆಹರು ಅವರ ಆಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಆ ಸಂವಿಧಾನವು, ಸ್ಪಷ್ಟವಾಗಿ ‘ಭೌಗೋಳಿಕ ರಾಷ್ಟ್ರೀಯತೆ’ಯ ಪರಿಕಲ್ಪನೆಯ ಆಧಾರದಲ್ಲಿ, ಪಶ್ಚಿಮದ ದೇಶಗಳಲ್ಲಿ ಆಗಲೇ ಆಚರಣೆಯಲ್ಲಿ ಇದ್ದ ‘ಪ್ರಜಾಪ್ರಭುತ್ವ ಸಂವಿಧಾನ’ವಾಗಿತ್ತು. ಆ ಸಂವಿಧಾನವು, ಬ್ರಿಟಿಷ್ ವಸಾಹತುಶಾಹಿಯ ಆಡಳಿತದ ಅಡಿ ಇದ್ದ, ಬಲೂಚಿಸ್ಥಾನದಿಂದ ಪೂರ್ವ ಬಂಗಾಳದ ವರೆಗೆ ಹಾಗು ಹಿಮಾಲಯದಿಂದ ದಕ್ಷಿಣ ಸಾಗರದ ಅಂಚಿನವರೆಗೆ ಇದ್ದ ಅಖಂಡ ಭೂಪ್ರದೇಶವನ್ನು ‘ರಾಷ್ಟ್ರ’ವೆಂದು ಕಂಡುಕೊಂಡಿತ್ತು; ಈ ಭೂಪ್ರದೇಶದಲ್ಲಿ ಬದುಕಿರುವ ಪ್ರತಿಯೊಬ್ಬ ಮನುಷ್ಯನೂ ಜಾತಿ, ಮತ, ಲಿಂಗ, ಪ್ರದೇಶ, ಜನಾಂಗಗಳ ತರತಮವಿಲ್ಲದೇ, ಸಮಾನ ಹಕ್ಕು ಉಳ್ಳ ‘ಪೌರ’ನಾಗಿರುತ್ತಾಳೆ ಎಂದು ಖಚಿತವಾಗಿ ನಿರೂಪಿಸಿತ್ತು. ಆ ಬಗೆಯ ‘ರಾಷ್ಟ್ರೀಯತೆ ಹಾಗು ಪೌರತ್ವ’ದ ಕಲ್ಪನೆಯನ್ನು ಗೋಲ್ವಾಲ್ಕರ್ ತಮ್ಮ ‘ಹಿಂದು ರಾಷ್ಟ್ರ’ ನಿರೂಪಣೆಯಲ್ಲಿ ಖಂಡಿತವಾಗಿ ಅಯೋಗ್ಯವೆಂದು ನಿರಾಕರಿಸಿದ್ದರು. ಆದರೆ, ವಸಾಹತುಶಾಹಿ ವಿರೋಧಿ ಚಳುವಳಿಯಲ್ಲಿ ನೇರ ಭಾಗಿಯಾಗಿದ್ದ ಬಹುತೇಕ ವೈಚಾರಿಕ ತೊರೆಗಳಿಗೆ ‘ಭೌಗೋಳಿಕ ರಾಷ್ಟ್ರೀಯತೆ’ ಹಾಗು ‘ತಾರತಮ್ಯವಿಲ್ಲದ ಸಮಾನ ಪೌರತ್ವ ಹಕ್ಕಿನ ಪ್ರಜಾಪ್ರಭುತ್ವ ಸಂವಿಧಾನ’ ಆಧರಿತ ‘ರಾಷ್ಟ್ರ’ ಸ್ಥಾಪನೆಯ ಕುರಿತು ಸಹಮತವಿತ್ತು. ಹಾಗಾಗಿ, 1935ರ ಪ್ರಾದೇಶಿಕ ಸರಕಾರ ರಚನೆಗಾಗಿ ನಡೆದ ಚುನಾವಣೆಗಳ ರಾಜಕೀಯ ಪ್ರಚಾರವೂ, ಈ ರಾಷ್ಟ್ರ ವಿಚಾರಗಳ ಆಧಾರದಲ್ಲಿಯೇ ನಡೆಯಿತು.

ಈ ಚುನಾವಣೆ ಹಾಗು ಅದರ ಫಲಿತಾಂಶಗಳ ನಂತರದಲ್ಲಿ, ಮಹಮ್ಮದಾಲಿ ಜಿನ್ಹಾ ನೇತೃತ್ವದ ‘ಮುಸ್ಲಿಮ್ ಲೀಗ್’ಗೆ, ಕಾಂಗ್ರೆಸ್ಸಿನಲ್ಲಿ ‘ಹಿಂದು ಮತೀಯರ ಯಜಮಾನಿಕೆ’ ಇದ್ದು, ಹೊಸ ಪ್ರಭುತ್ವದಲ್ಲಿ ಮುಸ್ಲಿಮರಿಗೆ ಸಮಾನ ಪ್ರತಿನಿಧೀಕರಣ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ ಎಂಬ ಅಸಂತೃಪ್ತಿ ಹುಟ್ಟಿತ್ತು. ಅದರ ಪರಿಣಾಮವಾಗಿ, ಮುಸ್ಲಿಮರು ಬಹುಮತೀಯರಾಗಿದ್ದ ಪ್ರದೇಶಗಳಿಗೆ ಸ್ವಾಯತ್ತ ಅಧಿಕಾರ ವ್ಯವಸ್ಥೆಯ ಅಹವಾಲುಗಳನ್ನು ಮುಂದಿಡಲಾಯಿತು. ಈ ಪ್ರತಿನಿಧೀಕರಣದ ವಾಗ್ವಾದವೇ ಮುಂದುವರೆದು, ಜಿನ್ಹಾ 1940ರಲ್ಲಿ ತಮ್ಮ, ಮತವು ರಾಷ್ಟ್ರದ ಆಸ್ಮಿತೆಯಾಗಿದ್ದು, ಇಸ್ಲಾಮ್ ಮತಕ್ಕೆ ಪ್ರತ್ಯೇಕ ರಾಷ್ಟ್ರೀಯ ಆಸ್ಮಿತೆ ಇದೆ ಮತ್ತೂ ಅದು ಹಿಂದು ಮತ ಆಸ್ಮಿತೆಯ ರಾಷ್ಟ್ರಕ್ಕಿಂತ ಭಿನ್ನವಾಗಿದೆ, ಎಂಬ ‘ಎರಡು ರಾಷ್ಟ್ರ’ಗಳ ಸಿದ್ಧಾಂತವನ್ನು ಮುಂದಿಟ್ಟರು. ಇದು, ಬ್ರಿಟಿಷರಿಗೆ ವಸಾಹತುಶಾಹಿ ಆಳ್ವಿಕೆಯ ನಂತರವೂ, ದಕ್ಷಿಣ ಏಶಿಯಾ ರಾಜಕೀಯದಲ್ಲಿ ಒಂದು ನಿಯಂತ್ರಣ ಸೂತ್ರ ಸಿಕ್ಕಂತೆ ಭಾವಿಸಿ, ದೇಶ ವಿಭಜನೆಯ ಚಟುವಟಿಕೆಗಳಲ್ಲಿ ಕೊನೆಗೊಂಡಿತು ಎನ್ನುವುದು ಸರಿ; ಆದರೆ, ವಿಭಜನೆಯು ವಾಸ್ತವಿಕವಾಗುವುದು ಖಾತ್ರಿಯಾದ ನಂತರವೂ ಭಾರತದ ರಾಜಕೀಯ ಧಾರೆಗಳು ‘ಭಾರತದ ಪ್ರಭುತ್ವ’ವನ್ನು ‘ಎರಡು ರಾಷ್ಟ್ರ’ಗಳ ಸೈದ್ಧಾಂತಿಕ ಮಾದರಿಯಲ್ಲಿ ಕಟ್ಟಲು ನಿರಾಕರಿಸಿದವು; ಆ ಕಾರಣವಾಗಿ ಭಾರತದ ಪ್ರಭುತ್ವವು ‘ಸಮಾನ ಪೌರತ್ವ ಹಕ್ಕಿನ ಪ್ರಜಾಪ್ರಭುತ್ವ ಸಂವಿಧಾನ’ ಆಧಾರಿತ ರಾಷ್ಟ್ರವಾಗಿ ಕಟ್ಟಲಾಯಿತು; ಸ್ವತಂತ್ರ ‘ಗಣರಾಜ್ಯ ವ್ಯವಸ್ಥೆ’ಯ ಭಾರತದ ಸಂವಿಧಾನ ರಚನೆಯು, ಸ್ಪಷ್ಟವಾಗಿ ‘ಎರಡು ರಾಷ್ಟ್ರ’ ಸಿದ್ಧಾಂತವನ್ನೂ, ‘ಹಿಂದುತ್ವ ರಾಷ್ಟ್ರ’ದ ಪರಿಕಲ್ಪನೆಯನ್ನೂ ನಿರಾಕರಿಸಿತು. ಇಂತಾಗಿ, 1955ರ ಪೌರತ್ವ ಕಾಯ್ದೆಯು, ಭಾರತ ಸಂವಿಧಾನದ ‘ಸಮಾನ ಹಕ್ಕಿನ ಪೌರತ್ವ’ ತತ್ವದ ಆಧಾರದಲ್ಲಿ ನಿರೂಪಿತವಾಯಿತು.

ಇಲ್ಲಿಗೆ, ‘ರಾಷ್ಟ್ರ ಮತ್ತು ಪೌರತ್ವ’ ಕಲ್ಪನೆಯ ಸೈದ್ಧಾಂತಿ ವಾಗ್ವಾದಗಳು ಅಂತ್ಯಗೊಂಡವು ಎಂದು ಭಾವಿಸಿದ್ದೇ ಸ್ವತಂತ್ರೋತ್ತರ ಭಾರತದ ರಾಜಕೀಯ ಪ್ರಮಾದ. ತನ್ನ ಪ್ರಭಾವನ್ನು ಸ್ಥಾಪಿಸಲಾಗದ ‘ಹಿಂದುತ್ವ ರಾಷ್ಟ್ರ’ ವಾದವು ಸುಮ್ಮನೆ ಕೂಡದೆ ‘ರಾಷ್ಟ್ರ’ದ ಸ್ವರೂಪವನ್ನು ಬದಲಾಯಿಸುವ ರಾಜಕೀಯದಲ್ಲಿ ಸಕ್ರಿಯವಾಗಿ ಮುಂದುವರೆಯಿತು; ಹಾಗೆಯೇ, ಸ್ಥಾಪಿತವಾದ ‘ಸಂವಿಧಾನಬದ್ಧ ಭೌಗೋಳಿಕ ರಾಷ್ಟ್ರ’ವು ಸಶಕ್ತವಾಗಲು, ಒಳಗೊಳಗೇ ಉಳಿಸಿರುವ ಅನೇಕ ವೈಚಾರಿಕತೆಗಳನ್ನು ಸಂವಿಧಾನಿಕ ಆಚರಣೆಗಳಲ್ಲಿ ಗಟ್ಟಿಯಾಗಿ ಹೆಣೆಯುವ ರಾಜಕೀಯವು ನಡೆಯಲೇ ಇಲ್ಲ. ಈ ಸನ್ನಿವೇಶದಲ್ಲಿ, ‘ರಾಷ್ಟ್ರ’ದ ಕುರಿತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಿರೂಪಿತವಾದ ಮೂರು ವೈಚಾರಿಕತೆಗಳನ್ನು ನಾವು ಪುನಃ ಮನನ ಮಾಡಿಕೊಳ್ಳಬೇಕಿದೆ.

(1) ಅಂಬೇಡ್ಕರರು ಸತತವಾಗಿ ಎತ್ತಿ ಹೇಳುತ್ತಿದ್ದ ಸಹೋದರತ್ವವು ಸಹಜ ಮನೋಭಾವವಾಗಿರುವ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವ ರಾಜಕಾರಣ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು, ಅಧಿಕಾರಹೀನರಿಗೆ ಸಮಾಜ ಹಾಗು ಪ್ರಭುತ್ವದ ಎಲ್ಲ ವಲಯಗಳಲ್ಲಿ ಸಮಾನ ಪ್ರತಿನಿಧೀಕರಣ ಹಕ್ಕು ಮತ್ತು ಅದನ್ನು ಖಚಿತಗೊಳಿಸುವ ಸಂವಿಧಾನಿಕ ವ್ಯವಸ್ಥೆ.

(2) ಗಾಂಧೀಜಿಗೆ ‘ರಾಷ್ಟ್ರ’ಕ್ಕಿಂತ ‘ಪ್ರಜಾ ಸಮೂಹ’ವು ಮುಖ್ಯವಾಗಿತ್ತು. ಅವರಿಗೆ ಭಾರತದಲ್ಲಿ ಪರಂಪರಾನುಗತವಾಗಿ ಮತಗಳು ಒಂದನ್ನೊಂದು ಅರಿತು ಸಹಬಾಳ್ವೆ ನಡೆಸುವ ಸ್ಫೂರ್ತಿಯನ್ನು ತಮ್ಮ ಮತದ ಅಂತರಂಗದ ಆಧ್ಯಾತ್ಮದಿಂದ ಪಡೆದು ‘ಪ್ರಜಾ ಸಮೂಹ’ವಾಗಿರುವುದು, ಮಹಾನ್ ನಾಗರಿಕತೆಯ ಲಕ್ಷಣವಾಗಿ ಕಂಡಿತು. ಆ ನಾಗರಿಕತೆಯನ್ನು ಜತನದಿಂದ ಕಾಪಾಡುವ ಸಾಮಾಜಿಕ ರಾಜಕೀಯವಾದ ‘ಸ್ವರಾಜ್ಯ’ವನ್ನು ಅವರು ಪ್ರತಿಪಾದಿಸುತ್ತಿದ್ದರು.

(3) ರಬೀಂದ್ರನಾಥ ಠಾಕೂರ್, ‘ರಾಷ್ಟ್ರ’ವನ್ನು ಸಂಪೂರ್ಣವಾಗಿ ನಿರಾಕರಿಸಿ, ವಿಶ್ವಾತ್ಮಕವಾದ ಸಹೋದರ ಸಾಮಾಜಿಕ ಮನೋಭಾವವನ್ನು ರೂಢಿಸಿಕೊಳ್ಳುವುದಕ್ಕೆ ಒತ್ತು ಕೊಡುತ್ತಿದ್ದರು. ಆ ವಿಶ್ವಾತ್ಮಕತೆಗೆ ಪೂರಕವಾದ ದೇಶಿ ಸಾಮಾಜಿಕ ಜೀವನಮೌಲ್ಯಗಳನ್ನು ಹೆಣೆಯುವ ಬಗ್ಗೆ ಅವರ ಆಲೋಚನೆ ಇತ್ತು. ಅವರಿಗೆ ‘ರಾಷ್ಟ್ರ’ವೆಂಬುದು ಭೂಗಡಿ (ಮೃಣ್ಮಯ)ಯಾಗುವುದು ಸಮ್ಮತವಿರಲಿಲ್ಲ; ಅದು ವಿಶ್ವ ಮೌಲ್ಯಗಳನ್ನು ಆಚರಿಸುವ ಭಾವ (ಚಿನ್ಮಯ)ವಾಗಬೇಕು ಎಂಬ ಆದರ್ಶವಿತ್ತು.

ಈ ಮೂರು ಕಲ್ಪನೆಗಳನ್ನು ಪ್ರಾಯೋಗಿಕ ಆಚರಣೆಯ ರಾಜಕೀಯವನ್ನಾಗಿಸುವ ಸವಾಲು ಸ್ವೀಕರಿಸದೇ, ‘ಹಿಂದುತ್ವ ರಾಷ್ಟ್ರ’ವಾದವನ್ನು ಎದುರಿಸುವುದು ಕಠಿಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...