ಮಹಾರಾಷ್ಟ್ರದ ಪ್ರಮುಖ ರಾಜಕೀಯ ಬೆಳವಣಿಗೆಗಳಲ್ಲಿ ಪ್ರಕಾಶ್ ಅಂಬೇಡ್ಕರ್ರವರ ವಂಚಿತ್ ಬಹುಜನ ಆಘಾಡಿಯೊಂದಿಗೆ ಉದ್ಧವ್ ಠಾಕ್ರೆಯವರ ಶಿವಸೇನೆ ಪಕ್ಷವು ಮೈತ್ರಿಗೆ ಮುಂದಾಗಿದೆ. ಭೀಮಶಕ್ತಿ ಮತ್ತು ಶಿವಶಕ್ತಿ ಜೊತೆಗೂಡಿದ್ದು ಇದು ಮುಂಬರುವ ಬಿಎಂಸಿ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
“ಉದ್ಧವ್ ಠಾಕ್ರೆ ಕೆಲವು ದಿನಗಳ ಹಿಂದೆ ಚುನಾವಣಾ ಪೂರ್ವ ಮೈತ್ರಿ ವಿಷಯ ಪ್ರಸ್ತಾಪಿಸಿದ್ದರು. ನಮ್ಮ ವಂಚಿತ್ ಬಹುಜನ್ ಅಘಾಡಿಯಲ್ಲಿ ಎಚ್ಚರಿಕೆಯಿಂದ ಚರ್ಚಿಸಿದ ನಂತರ ನಾವು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಜೊತೆ ಮೈತ್ರಿ ಹೊಂದಲು ನಿರ್ಧರಿಸಿದ್ದೇವೆ.” ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
ಆದರೂ ಈ ಮೈತ್ರಿ ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎಂಬುದು ಉದ್ಧವ್ ಠಾಕ್ರೆಯವರ ನಡೆಯ ಮೇಲೆ ನಿಂತಿದೆ. ಏಕೆಂದರೆ ಮಹಾ ವಿಕಾಸ್ ಅಘಾಡಿಯ ನಾಲ್ಕನೇ ಪಕ್ಷವಾಗಿ ನಮ್ಮ ವಂಚಿತ್ ಬಹುಜನ್ ಅಘಾಡಿ ಸೇರಿಕೊಳ್ಳುತ್ತದೆಯೊ ಅಥವಾ ಎನ್ಸಿಪಿ, ಕಾಂಗ್ರೆಸ್ ಬಿಟ್ಟು ಕೇವಲ ಶಿವಸೇನೆ ಮತ್ತು ನಾವು ಮೈತ್ರಿ ಮಾಡಿಕೊಳ್ಳುತ್ತೇವೆಯೋ ಎಂಬುದನ್ನು ಅವರೆ ಹೇಳಬೇಕು. ಏಕೆಂದರೆ ಸೀಟು ಹಂಚಿಕೆ ಸೇರಿದಂತೆ ಹಲವು ಕ್ಲಿಷ್ಟ ವಿಷಯಗಳು ಇಲ್ಲಿ ಅಡಗಿವೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆಗ ಬಿಜೆಪಿ 105, ಶಿವಸೇನೆ-56 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಎನ್.ಸಿ.ಪಿ 54, ಕಾಂಗ್ರೆಸ್ 44 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದ್ದವು. ಆದರೆ ಮುಖ್ಯಮಂತ್ರಿ ಯಾರಾಗಬೇಕೆಂಬ ವಿವಾದದಿಂದಾಗಿ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಸೇರಿ ಮಹಾ ವಿಕಾಸ್ ಅಘಾಡಿ ರಚಿಸಿತ್ತು.
ಆದರೆ 2022ರ ಜೂನ್ನಲ್ಲಿ ಶಿವಸೇನೆ ಬಣದಲ್ಲಿನ ಕೆಲವನ್ನು ಆಪರೇಷನ್ ಮಾಡಿದ ಬಿಜೆಪಿ ಕೊನೆಗೂ ಏಕನಾಥ್ ಶಿಂಧೆಯ ಶಿವಸೇನೆ ಬಣದೊಂದಿಗೆ ಸೇರಿ ಅಧಿಕಾರ ಹಿಡಿದಿದೆ. ಇದು ಉದ್ಧವ್ ಠಾಕ್ರೆ ನೇತೃತ್ವದ ಬಲ ಕುಂದಿಸಲು ಬಿಜೆಪಿ ಮಾಡಿದ ಯತ್ನ ಎನ್ನಲಾಗುತ್ತಿತ್ತು. ಅದಕ್ಕೆ ಪ್ರತಿಯಾಗಿ ಉದ್ಧವ್ ದಲಿತರ ಬೆಂಬಲವಿರುವ ಪ್ರಕಾಶ್ ಅಂಬೇಡ್ಕರ್ ಜೊತೆ ಮೈತ್ರಿಗೆ ಮುಂದಾಗಿದ್ದಾರೆ.
ವಂಚಿತ್ ಬಹುಜನ್ ಅಘಾಡಿಯ ಶಕ್ತಿ
ಪ್ರಕಾಶ್ ಅಂಬೇಡ್ಕರ್ರವರ ವಂಚಿತ್ ಬಹುಜನ್ ಅಘಾಡಿ ಒಬ್ಬ ಸಂಸದ ಅಥವಾ ಒಬ್ಬ ಶಾಸಕನನ್ನೂ ಸಹ ಹೊಂದಿಲ್ಲ. ಆದರೂ ಅದು 2019ರ ಲೋಕಸಭಾ ಚುನಾವಣೆಯಲ್ಲಿ ಶೇ.6.92 ರಷ್ಟು ಮತಗಳನ್ನು ಪಡೆದಿತ್ತು. ಇದರಿಂದಾಗಿ ಎನ್ಸಿಪಿ, ಕಾಂಗ್ರೆಸ್ನ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಸೋಲು ಅನುಭವಿಸಿದ್ದರು. ಸದ್ಯ ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವ ಅವರು ಜಾತ್ಯಾತೀತ ಶಕ್ತಿಗಳ ಜೊತೆ ಮೈತ್ರಿಗೆ ಮುಂದಾಗಿದ್ದಾರೆ.
ಇತ್ತೀಚೆಗೆ ಶಿವಸೇನೆ ಸಂಸ್ಥಾಪಕ ಉದ್ಧವ್ ಠಾಕ್ರೆಯವರ ತಾತ ಪ್ರಬೋಧಂಕರ್ ಠಾಕ್ರೆಯವರ ನೆನಪಿನಲ್ಲಿ ಪ್ರಬೋಧಂಕರ್.ಕಾಂ ವೆಬ್ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಮತ್ತು ಪ್ರಕಾಶ್ ಅಂಬೇಡ್ಕರ್ ಜೊತೆ ಸೇರಿದ್ದರು. ಆಗ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, “1950ರ ದಶಕದಲ್ಲಿ ನಮ್ಮ ತಾತ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಉದ್ಧವ್ರವರ ತಾತ ಪ್ರಬೋಧಂಕರ್ ಠಾಕ್ರೆ ಜೊತೆಗೂಡಿ, ಅಸ್ಪೃಶ್ಯತೆ, ಜಾತೀಯತೆ ಮತ್ತು ವರದಕ್ಷಿಣೆಯಂತಹ ಪಿಡುಗುಗಳ ವಿರುದ್ಧ ಹೋರಾಡಿದ್ದರು. ಈಗ ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಸಮಾಜಕ್ಕೆ ಮಾರಕವಾಗಿರುವ ಬಿಜೆಪಿ ವಿರುದ್ಧ ಹೋರಾಡುತ್ತೇವೆ” ಎಂದಿದ್ದರು.
ನಮ್ಮ ವಂಚಿತ್ ಬಹುಜನ್ ಅಘಾಡಿ ಪಕ್ಷವು ಅಂಚಿಗೆ ತಳ್ಳಲ್ಪಟ್ಟವರ ಮತ್ತು ಹಿಂದುಳಿದ ಜಾತಿ, ಧರ್ಮಗಳ ದನಿಯಾಗಿದೆ. ನಾವು ಬಡವರನ್ನು ಪ್ರತಿನಿಧಿಸುತ್ತೇವೆ. ನಮ್ಮ ಮೈತ್ರಿಗೆ ಮತ ಪರಿವರ್ತಿಸುವ ಶಕ್ತಿ ನಮಗೆ. ಅದು ಮುಂದಿನ ಬಿಎಂಸಿ ಚುನಾವಣೆಯಲ್ಲಿ ಸಾಬೀತಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕೈವಾಡದ ಆರೋಪ: ಕರ್ನಾಟಕದ 27 ಲಕ್ಷ ಮತದಾರರ ಹೆಸರು ಕೈಬಿಟ್ಟಿದ್ದು ಹೇಗೆ?