ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ತಮ್ಮ ಮೈತ್ರಿಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಎಂದು ಹೆಸರಿಟ್ಟಿವೆ. ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಆ ಮೂಲಕ ಅಧಿಕಾರದ ಹುದ್ದೆಗೇರುತ್ತಿರುವ ಠಾಕ್ರೆ ಕುಟುಂಬದ ಮೊದಲ ವ್ಯಕ್ತಿ ಉದ್ಧವ್ ಠಾಕ್ರೆಯಾಗಿದ್ದಾರೆ. ಅವರ ಮಗ ಆದಿತ್ಯಾ ಠಾಕ್ರೆ ಕೂಡ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
“ಮಹಾರಾಷ್ಟ್ರ ವಿಕಾಸ್ ಅಘಾಡಿ”ಯ ಮೂವರು ಪ್ರತಿನಿಧಿಗಳು ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಉದ್ಧವ್ ಠಾಕ್ರೆಯವರು ಡಿಸೆಂಬರ್ 1 ರಂದು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ” ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಎನ್ಸಿಪಿಯ ಮಹಾರಾಷ್ಟ್ರದ ಮುಖ್ಯಸ್ಥ ಜಯಂತ್ ಪಾಟೀಲ್ ಅವರು ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಮುಖ್ಯಸ್ಥರಾಗಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಉದ್ಧವ್ ಠಾಕ್ರೆ ಹೆಸರನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಶಾಸಕ ಬಾಲಾಸಾಹೇಬ್ ಥೋರತ್ ಈ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ.
ಇದಕ್ಕೂ ಮೊದಲು ಶಿವಸೇನೆ ಮುಖಂಡ ಏಕನಾಥ ಶಿಂಧೆ ಮಹಾರಾಷ್ಟ್ರ ವಿಕಾಸ್ ಅಘಾಡಿ ರಚಿಸುವ ನಿರ್ಣಯವನ್ನು ಮಂಡಿಸಿದರು. ಮುಂಬೈ ಹೋಟೆಲ್ನಲ್ಲಿ ನಡೆದ ಮೂರು ಪಕ್ಷಗಳ ಸಭೆಯಲ್ಲಿ ಎನ್ಸಿಪಿಯ ನವಾಬ್ ಮಲಿಕ್ ಮತ್ತು ಕಾಂಗ್ರೆಸ್ ’ನಿತಿನ್ ರೌತ್ ಇದನ್ನು ಅನುಮೋದಿಸಿದ್ದಾರೆ.
ತ್ರಿಪಕ್ಷೀಯ ಸಭೆಗಾಗಿ ತನ್ನ ಮಗಳು ಸುಪ್ರಿಯ ಸುಳೆಯವರೊಂದಿಗೆ ಟ್ರೈಡೆಂಟ್ ಹೋಟೆಲ್ಗೆ ಎನ್ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಬಂದಾಗ, ಅವರನ್ನು “ಮಹಾರಾಷ್ಟ್ರದ ಏಕೈಕ ಹುಲಿ” ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.