ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಇತ್ತೀಚಿನ ಹೇಳಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾನನಷ್ಟ ಆರೋಪ ಮಾಡಿ ಎರಡು ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ ಲೀಗಲ್ ನೋಟಿಸ್ ನೀಡಿದ್ದು, ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು, ಪ್ರಸಾರ ಮಾಡಿರುವ ಸುದ್ದಿ, ವಿಡಿಯೋಗಳನ್ನು ತೆಗೆದುಹಾಕಬೇಕು ಮತ್ತು 100 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಚೆನ್ನೈ ಮೂಲದ ಕಾನೂನು ಸಂಸ್ಥೆಯ ಮೂಲಕ ಎರಡು ಚಾನೆಲ್ಗಳು (ಎನ್ಡಿಟಿವಿ ಮತ್ತು ಇಂಡಿಯಾ ಟುಡೇ ಎಂದು ವರದಿಯಾಗಿದೆ), ಅವುಗಳ ಮಾತೃ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ಆಗಸ್ಟ್ 6ರಂದು ಲೀಗಲ್ ನೋಟಿಸ್ಗಳನ್ನು ಕಳುಹಿಸಲಾಗಿದೆ.
ನೋಟಿಸ್ಗಳ ಪ್ರಕಾರ, ಎರಡು ಚಾನೆಲ್ಗಳು ಆಗಸ್ಟ್ 3ರಂದು ಉದಯನಿಧಿ ಅವರು ಮಾಡಿದ ಭಾಷಣವನ್ನು ತಪ್ಪಾಗಿ ಬಿಂಬಿಸಿ ಪ್ರಸಾರ ಮಾಡುವ ಮೂಲಕ ಅವರ ಹೆಸರಿಗೆ ಕಳಂಕ ತಂದಿವೆ. ಈ ಚಾನೆಲ್ಗಳು ಉದಯನಿಧಿ ಮಾತುಗಳನ್ನು ಅರ್ಥೈಸಿದ ರೀತಿಗೆ ಇತರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮ ಸಂಸ್ಥೆಗಳು ಕೂಡ ಪುಷ್ಠಿ ನೀಡಿವೆ ಎಂದು ಆರೋಪಿಸಲಾಗಿದೆ.
ಮಾಧ್ಯಮ ಸಂಸ್ಥೆಗಳು ತಮ್ಮ ಟೆಲಿವಿಷನ್ ಚಾನೆಲ್ಗಳಲ್ಲಿ ಪ್ರಸಾರ ಮಾಡುವ ಮೂಲಕ ಹಾಗೂ ತಮ್ಮ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ನೋಟಿಸ್ನಲ್ಲಿ ಆಗ್ರಹಿಸಿಲಾಗಿದೆ. ಅಲ್ಲದೆ, ಯೂಟ್ಯೂಬ್ ಮತ್ತು ಇತರ ಎಲ್ಲಾ ಅಧಿಕೃತ ಹಾಗೂ ವೈಯಕ್ತಿಕ ಸಾಮಾಜಿಕ ಜಾಲತಾಣ ವೇದಿಕೆಗಳಿಂದ ನಿರ್ದಿಷ್ಟ ವಿಡಿಯೋಗಳನ್ನು ತಕ್ಷಣವೇ ತೆಗೆದುಹಾಕುವಂತೆ ಒತ್ತಾಯಿಸಲಾಗಿದೆ.
ಇದರ ಜೊತೆಗೆ, ಭವಿಷ್ಯದಲ್ಲಿ ಯಾವುದೇ ರೂಪದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಈ ರೀತಿಯ ಸುದ್ದಿ ಪ್ರಕಟಿಸದಂತೆ ಅಥವಾ ಹರಡದಂತೆ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಲೀಗಲ್ ನೋಟಿಸ್ಗಳು 100 ಕೋಟಿ ರೂಪಾಯಿಗಳ ಪರಿಹಾರವನ್ನು ಸಹ ಕೋರಿದ್ದು, ಈ ಮೊತ್ತವು ವಸೂಲಿಯಾದರೆ, ಪ್ರಸ್ತುತ ಕೃಷಿ ಹಂಗಾಮಿನಲ್ಲಿ ಕುರುವೈ ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾದ ರೈತರಿಗೆ ದೇಣಿಗೆಯಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.
ಈ ಬೇಡಿಕೆಗಳನ್ನು ಈಡೇರಿಸಲು ಮಾಧ್ಯಮ ಸಂಸ್ಥೆಗಳಿಗೆ ಅಥವಾ ಚಾನೆಲ್ಗಳಿಗೆ 48 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ತಪ್ಪಿದಲ್ಲಿ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ.
ಆಗಸ್ಟ್ 3 ಮತ್ತು ಆಗಸ್ಟ್ 4 ರಂದು ಪ್ರಕಟವಾದ ವಿಡಿಯೋಗಳು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಈ ನೋಟಿಸ್ಗಳನ್ನು ನೀಡಲಾಗಿದ್ದು, ವಿವಾದಕ್ಕೆ ಕಾರಣವಾದ ನಿರ್ದಿಷ್ಟ ಯೂಟ್ಯೂಬ್ ಲಿಂಕ್ಗಳನ್ನು ಹಾಕಲಾಗಿದೆ.
ವರದಿಗಳ ಪ್ರಕಾರ, ಶುಕ್ರವಾರದ ವೇಳೆಗೆ ಕಾನೂನು ನೋಟಿಸ್ಗಳಿಗೆ ಸಂಬಂಧಿಸಿದಂತೆ ಚಾನೆಲ್ಗಳಿಂದ ಯಾವುದೇ ತಕ್ಷಣದ ಸಾರ್ವಜನಿಕ ಪ್ರತಿಕ್ರಿಯೆ ಬಂದಿಲ್ಲ.
ಈ ಪ್ರಕರಣ ಮತ್ತು ಲೀಗಲ್ ನೋಟಿಸ್ಗಳು ಸೋಮವಾರ (ಆ.3) ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ಉದಯನಿಧಿ ನೀಡಿದ ಹೇಳಿಕೆಗೆ ಸಂಬಂಧಿಸಿದೆ. ಇದೇ ವಿಚಾರವಾಗಿ ಉದಯನಿಧಿ ಮೇಲೆ ಪ್ರಕರಣಗೊಂಡು ಅವರ ಬಂಧನವೂ ಆಗಿತ್ತು.


