Homeಅಂಕಣಗಳುನಾಗಸುಧೆ ಜಗಲಿಯಿಂದಪರಕಾಯ ಪ್ರವೇಶದ ತಲ್ಲಣದ ಸಾಲುಗಳು - ಪ್ರಕಾಶ ಕಡಮೆ

ಪರಕಾಯ ಪ್ರವೇಶದ ತಲ್ಲಣದ ಸಾಲುಗಳು – ಪ್ರಕಾಶ ಕಡಮೆ

ಉಮಾರವರ ಕವಿತೆಯಲ್ಲಿ ದಿನ ನಿತ್ಯದ ಆಗು-ಹೋಗುಗಳ ಅಭಿವ್ಯಕ್ತಿ ಇದೆ. ಇವೆಲ್ಲವೂ ಬದುಕಿನ ಅನುಭವದಿಂದ ಪುಟಿದೆದ್ದ ಸಾಲುಗಳು...

- Advertisement -
- Advertisement -

ಉಮಾ ಮುಕುಂದ ಕನ್ನಡ ಸಾಹಿತ್ಯಕ್ಕೆ ಒಂದು ಸಾಂಸ್ಕೃತಿಕ ಮನೆಯ ಕೊಡುಗೆ. ಗಂಡ ಮಗ ಇಬ್ಬರೂ ನಾಡಲ್ಲಿ ಹೆಸರು ಮಾಡುತ್ತಿದ್ದಾಗ, ತಮ್ಮ ಬದುಕಿನ ಐದು ದಶಕಗಳ ನಂತರ ಸದ್ದು ಗದ್ದಲವಿಲ್ಲದೇ ಹೊಸ ಕವಿತೆಯ ಸಾಲುಗಳಂತೇ ಸಾಹಿತ್ಯಲೋಕವನ್ನು ಅಧಿಕೃತವಾಗಿ ಪ್ರವೇಶಿಸಿದವರು. ಹಾಗೆಂದ ಮಾತ್ರಕ್ಕೆ ಕಾವ್ಯದ ಅರಿವಿಲ್ಲದವರಂತಲ್ಲ ಇವರು. ತಮ್ಮ ಬದುಕಿನ ಎಲ್ಲಾ ಅನುಭವಗಳನ್ನೂ ಮನದೊಳಗೇ ಹುದುಗಿಸಿಟ್ಟು ಕುದಿಸಿ ತಡೆಲಾರದೇ ಶಾಂತವಾಗಿ ಹೊರಹಾಕಿ, “ಕಡೇ ನಾಲ್ಕು ಸಾಲು” ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿರುವರು.

ಬೆಂಗಳೂರಿನ “ಬಹುರೂಪಿ” ಈ ಪುಸ್ತಕ ಪ್ರಕಾಶಿಸಿರುವರು. ಈ ಸಂಕಲನದಲ್ಲಿ ಹಸಿ ಹಸಿಯ ತಾಜಾತನದಿಂದ ಕೂಡಿದ 36 ಸರ್ವಕಾಲಿಕ ಸತ್ಯದ ಕವಿತೆಗಳಿವೆ. ತಮ್ಮ ಸಂಗಾತಿ ಮುಕುಂದಗೆ ಈ ಲವಲವಿಕೆಯ ಅಕ್ಷರದ ಸಾಲುಗಳ ಪದಪುಂಜವನ್ನು ಉಮಾ ಅರ್ಪಿಸಿರುವರು.

ಪೆಚ್ಚಾಗಿ ನಿಂತವಳು ಎಚ್ಚರಾಗಿ
ಒಳಗೆ ಬಂದು ಬಾಗಿಲು ಹಾಕಿದರೆ
ಅವಳ ನಗೆಯ ಘಮಲು ಹೊದ್ದ ಸೊಪ್ಪಿಗೆ
ದಟ್ಟ ನೋವಿನ ವಾಸನೆ

ಎಂದು “ಸೊಪ್ಪಿನವಳು” ಕವಿತೆಯ ಮೂಲಕ ದುಡಿಯುವ ವರ್ಗದ ಮಹಿಳೆಯ ಮೂಕ ವೇದನೆಯನ್ನು ಅವರ ಮನದೊಳಗೆ ನಿಂತು ಬಿಂಬಿಸಿರುವರು. ಸೊಪ್ಪಿನ ಆ ಹೆಂಗಸು ‘ಸೊಪ್ಪಮ್ಮೋ ಸೊಪ್ಪು’ ಎಂದು ಕೂಗುವಾಗ ಅವಳ ಬದುಕಿನ ನೋವೆಲ್ಲಾ ಗಂಟಲಿಗೆ ಬಂದಂತಿರುತ್ತದೆ. ಬದುಕಿನ ಗಾಯದ ಕುರಿತು ಕೇಳಿದರೆ ಏನನ್ನೂ ತೋರ್ಪಡದೇ ಸುಮ್ಮನೇ ನಕ್ಕುಬಿಡುವ ಇವರು ನೋವೆಲ್ಲಾ ನುಂಗಿಕೊಂಡು, ಕೇಳಿದ ಪ್ರಶ್ನೆಗೆ ಪ್ರಶ್ನೆಯಾಗಿಯೇ ಉಳಿದು, ನಗೆಯ ಘಮಲು ಸೊಪ್ಪಿಗೆ ನೋವಿನ ವಾಸನೆ ಸೂಸುತಿತ್ತು ಎಂದು ಕವಿ ಹೆಣ್ಣಿನ, ದುಡಿಯುವ ವರ್ಗದ ಜನರ, ಶೋಷಿತರ ಮನೋವೇದನೆಯನ್ನು ಇಲ್ಲಿ ನಿರೂಪಿಸಿರುವರು.

“ಪುಟ್ಟಕ್ಕನ ಓಲೆ” ಕವನದಲ್ಲಿ

ಬಿಟ್ಟು ಹೋದ ಗಂಡನ ಬಗ್ಗೆ
ಕೆಟ್ಟ ಮಾತಾಡದೇ
ಹುಟ್ಟಿದೆರಡು ಮಕ್ಕಳಿಗಾಗಿ
ಎಂಟುಮನೆ ಕೆಲಸಮಾಡಿ
ಕೊಟ್ಟ ತಿನಿಸು ಕಟ್ಟಿಕೊಂಡು
ಮುಚ್ಚಟೆಯಾಗಿ ಬದುಕುವ
ಮೂವತ್ತರ ಕಪ್ಪು ಚೆಲುವೆ
ಪುಟ್ಟಕ್ಕನೆಂಬೋ ಈ ವಿಶ್ವ ಸುಂದರಿ
ನನಗೊಂದು ಅಚ್ಚರಿ

ಎಂದು ಶೋಷಿತ, ಬಾಯಿಸತ್ತ ಹೆಣ್ಣಿನ ಮನದಾಳದ ಭಾವನೆಗಳನ್ನು ಬಿಚ್ಚಿಟ್ಟಿರುವರು. ಅವಳ ಮೂವತ್ತನೇ ವಯಸ್ಸಿಗೇ ನಡೆಯಬಾರದೆಲ್ಲಾ ನಡೆದುಹೋಗಿದೆ. ಗಂಡ ಬಿಟ್ಟುಹೋಗುವ ಮೊದಲೇ ಮಕ್ಕಳೆರಡನ್ನು ಕೊಟ್ಟು ಹೋಗಿರುವನು. ತನಗೆ ಬಾಳು ಬೇಡವಾದರೂ ಮಕ್ಕಳಿಗಾದರೂ ಬದುಕಿ ಮನೆಗೆಲಸ ಮಾಡಿ ತಾನು ತಿನ್ನಬೇಕಾದ್ದುದನ್ನೇ ಕಂದಮ್ಮಗಳಿಗೆ ಕಟ್ಟಿಟ್ಟು ಜೀವ ಸಹಿಸುವ ಬಡ ಹೆಣ್ಣಿನ ದೈನಂದಿನ ಬದುಕು ದಮನೀಯವಾಗಿದೆ. ಇವಳು ತಾನು ಕಷ್ಟದಲ್ಲಿದ್ದೇನೆ ಎಂದು ಎಂದಿಗೂ ಪರಿತಪಿಸದೇ, ಇಡೀ ಬದುಕಲಿ ಜೀವಸವೆದ ಹಣ, ಒಡವೆ ಎಲ್ಲವನೂ ಮಕ್ಕಳಿಗಾಗಿ ಎಂದು ಹೊಳಪ ಕಣ್ಣ ಪಿಳುಕಿಸುವ ತಾಯಿ ಹೃದಯದ, ಚಿತ್ರಣ ಕವಿ ಇಲ್ಲಿ ಚಿತ್ರಸಿ ಇವಳು ನನಗೊಂದು ಅಚ್ಚರಿ ಎಂದು ದಮನಿತರ ಪರ ನಿಲ್ಲುವರು.

ಜಿ.ಎನ್.ಮೋಹನ್ ‘ಕಾಫಿ ಡೇ’ಯ ಕೆಪುಚಿನೊ ಅಲ್ಲ ಎನ್ನುತ್ತಾ ‘ಉಮಾ ರವರ ಕವಿತೆಗಳು ಸಹಜವಾಗಿ, ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ-ಪಾಯಸ ಬರುತ್ತಿರುವದನ್ನು ಗೊತ್ತು ಮಾಡಿಕೊಳ್ಳುತ್ತದೆ. ಅಬ್ಬರದ ನಗುವಿನ ಮಧ್ಯೆ ಬಿಕ್ಕುಗಳನ್ನು ಹುಡುಕುತ್ತದೆ, ಇವರ ಕವಿತೆಗೆ ಕಾಲುದಾರಿಯೂ ಗೊತ್ತು, ಹೈವೇಯೂ ಗೊತ್ತು. ಇಲ್ಲಿ ಎಲ್ಲವೂ ಇದೆ. ಕಂಡದ್ದು, ಕೇಳಿದ್ದು, ಸುತ್ತಿದ್ದು, ನಕ್ಕಿದ್ದು, ಹರಟಿದ್ದು’ ಎಂದಿರುವರು.

ಚಿಂದಿ ಹಾಸಿ ಹಸಿವ ಮರೆಸಿ
ತಟ್ಟಿ ತಟ್ಟಿ ಲಾಲಿ ಹಾಡಿ
ಬೆಟ್ಟ ಕಣಿವೆ ಕಡಲು ಮುಗಿಲು
ಹೂವು ಹೊನಲು ಹಕ್ಕಿ ಕುಕಿಲು
ಬಾಡಿನೂಟ ಬಣ್ಣದರಿವೆ
ಪದಗಳಲ್ಲೆ ಹೆಣೆದು ಹೊದಿಸಿ
ಕನಸ ಕದವ ತೆರೆದಳು

ಎಂದು “ಹಸಿವು” ಕವಿತೆಯಲ್ಲಿ ತಾಯಿಯ ಕನಸನ್ನು ಮನಮುಟ್ಟುವಂತೆ ಸಾಲುಗಳಲ್ಲಿ ಹಿಡಿದಿಟ್ಟು ತಮ್ಮ ಕಾವ್ಯ ಕಟ್ಟುವಿಕೆ ಬಗೆಯನ್ನು ಪ್ರದರ್ಶಿಸಿರುವರು. ಕವಿತೆ ಓದುತ್ತಿದ್ದಂತೆ ಸು.ರಂ.ಎಕ್ಕುಂಡಿಯವರ ಕಥನ ಕಾವ್ಯ ಕಣ್ಣಿಗೆ ಕಟ್ಟಿದಂತಾಗುತ್ತದೆ. ಈ ಕವಿತೆಯಲ್ಲಿ ಅರ್ಥಗರ್ಭಿತವಾಗಿ ಪ್ರಾಸಗಳು ಬಂದು ಇಡೀ ಕವಿತೆಯ ಮೌಲ್ಯ ವೃದ್ಧಿಸಿದೆ. ತಾಯಿಯ ನಿಸ್ವಾರ್ಥ ಬದುಕು, ತನ್ನ ಮಗುವಿಗಾಗಿ ತನ್ನದೆಲ್ಲವನ್ನೂ ತ್ಯಾಗಮಾಡಿ, ಹಸಿವಿನಿಂದ ಬಳಲಿದರೂ ತೋರ್ಪಡಿಸದೇ, ನೀರನಷ್ಟೂ ಸುರುವಿಕೊಂಡು ಹೊಟ್ಟೆತುಂಬ ಕುಡಿದಳು ಎಂದು ತಾಯಿಯ ಮಮತೆ ಇಲ್ಲಿ ವ್ಯಕ್ತವಾಗಿದೆ. ಬಾಡಿನೂಟ ಬಣ್ಣದರಿವೆ ಪದಗಳಲ್ಲೇ ಹೆಣೆದು ಹೊದಿಸಿ ಕನಸ ಕದವ ತೆರೆದಳು ಎಂದು ಬಡ ತಾಯಿ ಮಗುವಿಗೆ ಮಲಗಿಸುವಾಗ ಅದ್ಭುತವಾದ ವರ್ಣನೆಯಲ್ಲಿ ಚಿತ್ರಿಸಿದ್ದು ಇವರ ಕಾವ್ಯ ಶಕ್ತಿಯ, ಕಾವ್ಯ ಕಟ್ಟುವಿಕೆಯ ನಿದರ್ಶನವಾಗಿದೆ.

“ಬೇರೆ ಬೇರೆ” ಕವನದಲ್ಲಿ

ಅದೇ ಸೂರ್ಯ ಅದೇ ಬೆಳಗು
ಬೆಳಕಿನಾಟ ಬೇರೆ ಬೇರೆ
ಅದೇ ನಾನು ಅದೇ ಅವನು
ಅನುದಿನದ ಸಾಂಗತ್ಯ
ಬೇರೆ ಬೇರೆ ಬೇರೆ

ಎಂದು ನಮ್ಮ ಅನುದಿನದ ಹೊಚ್ಚ ಹೊಸ ಬದುಕಿನ ರೀತಿ-ನೀತಿಗಳನ್ನು ಚಿತ್ರಿಸಿರುವರು. ದಿನದಿನವೂ ಅದೇ ಸೂರ್ಯ, ಪ್ರಕೃತಿ, ಹಕ್ಕಿ, ಹಾಡು, ಉಡುಗೆ ತೊಡುಗೆಯಿದ್ದರೂ ನಿತ್ಯವೂ ನವನವೀನ. ಸತಿ ಪತಿಗಳ, ಪ್ರೇಮಿಗಳ ಒಡನಾಟವು ಒಂದೇ ಇದ್ದರೂ ಬದುಕು ದಿನ-ದಿನವೂ ಬಗೆ ಬಗೆಯದಾಗಿದ್ದು ನಿನ್ನೆಯಂತಿರದೇ ಹೊಸ ಹೊಸ ಕಾಮನಬಿಲ್ಲಿನಂತೆ ಎಂದು ಹೊಸ ಆಶಾಕಿರಣಕೆ ದಾರಿಮಾಡಿ ಕೊಟ್ಟಿರುವರು.

ಆನ್‌ಲೈನ್ ಮೂಲಕ ಕೃತಿ ಬಿಡುಗಡೆ ಸಂದರ್ಭ

ಸಂಕಲನಕೆ, ಒಳಗು-ಹೊರಗು : ಬೆರಗು-ಕೊರಗು ಎಂದು ಬೆನ್ನುತಟ್ಟಿದ ನಾಡಿನ ಹಿರಿಯ ಬರಹಗಾರರಾದ ಎಚ್.ಎಸ್.ರಾಘವೇಂದ್ರರಾವ್ ‘ಇವರ ಕವಿತೆಯು ಗಹನವಾದ ತಾತ್ವಿಕ ಸಂಗತಿಗಳ ಅನುಸಂಧಾನ ಮಾಡುವ ದಿಕ್ಕಿನಲ್ಲಿ ಚಲಿಸುವದಿಲ್ಲ. ದಿನನಿತ್ಯದ ಬದುಕಿನಲ್ಲಿಯೇ ಮೂಡಿ ಮುಳುಗುವ ತಂಪು, ಬಿಸುಪುಗಳನ್ನು, ಬಯಕೆ-ಭ್ರಮನಿರಸನಗಳನ್ನು ಅನುಭವಿಸುವ ಹಂಚಿಕೊಳ್ಳುವ ಹಂಬಲ ಇವರದು. ತಮ್ಮ ಸರಳತೆಯಲ್ಲಿ ಮತ್ತು ನಮ್ಮ ನಿಮ್ಮಂತ ಸಾಮಾನ್ಯರ ಬದುಕಿನ ಬಗ್ಗೆ ಇರುವ ತೀವ್ರವಾದ ಆಸಕ್ತಿಯಲ್ಲಿ. ಅಂಥ ಕಿರು ಹಣತೆ ಬೆಳಕಿನಲ್ಲಿಯೇ ತಾತ್ವಿಕತೆಯೊಂದು ಸಹಜವಾಗಿಯೇ ಮೂಡಿಬರುತ್ತದೆ. ಇವರ ಕವಿತೆಗಳಲ್ಲಿ ಸವಾಲಾಗಬಹುದಾದ ರೂಪಕ, ಪ್ರತಿಮೆಗೂ ಎಲ್ಲರ ತೆಕ್ಕೆಗೂ ನಿಲುಕುತ್ತದೆ’ ಎಂದಿರುವರು.

ಬೀದಿ ಬದಿ ಕಟ್ಟೆ ನಾಗರಕಲ್ಲಿಗೆ
ಭರಪೂರ ಹಾಲು ತುಪ್ಪದ ಅಭಿಷೇಕ
ಸಿಡಿಲ ಈಡುಗಾಯಿ ಚೂರಿನಾಸೆಗೆ
ಓಡೋಡಿ ಬಂದ ಕೊಳಕು ಲಂಗದ ಪೋರಿ
ಮೈ ತಾಗಿಸಿದಳೆಂದು ಛೀಮಾರಿ ಮಾಡಿ
ದುಡುದುಡು ನಡೆವ ಮಡಿ ಸೀರೆಯವಳು

ಎಂದು “ನಾಗರಪಂಚಮಿ” ಕವಿತೆಯಲ್ಲಿ ಇಂದಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ವಿವರಿಸುತ್ತಾ ಬಡತನದ ತಲ್ಲಣಗಳಿಗೆ ರೋಸಿ ಹೋಗಿರುವರು. ದೇಶದ ಸ್ಥಿತಿಗತಿಯೇ ಹಾಗಿದೆ, ಶ್ರೀಮಂತ ಬಡವರ ನಡುವಿನ ಕಂದಕ ಕಣ್ಮುಟ್ಟದಂತಾಗಿದೆ. ಹೊತ್ತಿನ ತುತ್ತು ಅನ್ನಕ್ಕಾಗಿ ಬಡವ ಪರಿತಪಿಸುತ್ತಿದ್ದರೆ ಶ್ರೀಮಂತರ ಅಟ್ಟಹಾಸ, ವೈಭವದ ಜೀವನ ಮುಗಿಲು ಮುಟ್ಟಿದೆ. ಕಲ್ಲ ನಾಗರಿಗೆ ಅಭಿಷೇಕದ ಮಹಾಪೂರ, ಹಸಿವೆಯಿಂದ ಬಸವಳಿದ ಮಗುವಿಗೆ ತೊಟ್ಟು ಹಾಲು ನೀಡದೇ ವೈಭವದಲಿ ಮೆರೆಯುವ ಮಂದಿಯ ಧರ್ಮ, ಶಾಸ್ತ್ರಗಳು ಸಾಂಗೋಪಾಂಗವಾಗಿ ನಡೆಯುತಿದೆ. ಇಷ್ಟಾಗಿಯೂ ಹಾಲುಣಿಸುತ್ತ ಹೂಮಾರಿ ಬದುಕ ನಡೆಸುವ ಜನರೊಂದಿಗೂ ಚೌಕಾಸಿಯ ವ್ಯವಹಾರ. ಈ ಕವಿತೆಯಲ್ಲಿ ಪರಿಸ್ಥಿತಿಗೆ ರೋಸಿಹೋಗಿ ಕವಿ ಹಸಿದ ಕಂದಮ್ಮಗಳಿಗೆ ಹೊಟ್ಟೆ ತುಂಬಾ ಹಾಲು ಸಿಗಲಿ ಎಂದು ಕರುಣಾಮಯಿಯಾಗಿ ಬೇಡಿಕೊಳ್ಳುವರು.

ನಾಡಿನ ಹೆಸರಾಂತ ಲೇಖಕಿ ವೈದೇಹಿಯವರು, ‘ನಿನ್ನುಸಿರ ನಾನಾ ಬಗೆಯ ಉಸಿರಾಟ’ ಎಂಬ ಹಿಂಬರಹದಲ್ಲಿ ಉಮಾರಿಗೆ ಆತ್ಮೀಯವಾಗಿ ಬರೆಯುತ್ತಾ ‘ನಿನ್ನ ಸಂವೇದನೆಯ ಸ್ವರೂಪ ಸ್ಪಷ್ಟವಾಗಿ ಕಂಡದ್ದರಿಂದಲೋ ಏನೋ ಈ ಕವಿತೆಗಳು ಎಲ್ಲಿಯೂ ಕವಿತೆಯಾಗಬೇಕೆಂದು ಹುಟ್ಟಿದವಲ್ಲ. ಅಲ್ಲಲ್ಲೇ ಹೂವಿನಂತೆ ಅರಳಿಕೊಂಡಂಥವು ಅಂತನಿಸಿತು. ಒಳಮಾತಿನ, ಹೊರಮಾತಿನ, ಬದುಕಿನ ವಿವಿಧ ತಲ್ಲಣ ತಳಮಳದ, ಸಹಸ್ಪಂದನ, ವಿಸ್ಮಯದ, ತಾಳುವಿಕೆ ಎಂಬ ತಪದ, ವಿಷಾದವಿದ್ದೂ ಅದರಲ್ಲಿ ಅದ್ದಿ ಹೋಗದ ಈ ಕವನಗಳು ನಿಜಕ್ಕೂ ನನಗೆ ಒಂದುರೀತಿಯಲ್ಲಿ ನಿನ್ನುಸಿರ ನಾನಾ ಬಗೆಯ ಉಸಿರಾಟಗಳಾಗಿಯೇ ಕೇಳಿಸಿದವು ಎನ್ನುತ್ತಾ, ಅಲ್ಲಲ್ಲೇ ಏಳುವ ಉರಿಗಾಳಿಯನ್ನು ಸಹಿಸಿ ಶಮನಿಸುತ್ತ ಪ್ರೀತಿಯ ಅಂತರ್ದೀಪ ಆರದಂತೆ ಕಾಪಾಡಿಕೊಂಡು ಬರುವ ದೃಢ ನಡೆಯ ಚಿತ್ರಣ ಇಲ್ಲಿದೆ’ ಎಂದಿರುವರು.

“ಪಯಣ” ಕವಿತೆಯಲ್ಲಿ

ಎಲ್ಲೋ ಹುಟ್ಟಿದ ಅವನು
ಮತ್ತೆಲ್ಲೋ ಹುಟ್ಟಿದ ನಾನು
ಹೇಗೋ ಬೆಸೆದ ಬಂಧ
ಶುರುವಾದ ಪಯಣ
ಸಾಗಿದೆ ಮೂರು ದಶಕಗಳಿಂದ

ಎನ್ನುತ್ತಾ, ಬದುಕಿನ ಸಾಮರಸ್ಯಕ್ಕೆ ಬೆಳಕು ಚೆಲ್ಲಿರುವರು. ಒಂದು ಗಂಡು, ಒಂದು ಹೆಣ್ಣು ಮದುವೆಯ ಪೂರ್ವದಲಿ ಯಾರೋ ಏನೋ ಅವರ ಆಚಾರ, ವಿಚಾರ, ನಂಬಿಕೆಗಳೇ ಬೇರೆ, ಇವರದ್ದೂ ಎಲ್ಲವೂ ವಿಭಿನ್ನ. ಆದರೂ ಒಂದಾಗಿ ಬದುಕ ಕಟ್ಟಿ ಜೀವಿಸಬೇಕು. ಆದರೆ ನಡುವೆ ಜಗಳ, ಸಿಟ್ಟು, ಸೆಡವು ಇದ್ದದ್ದೇ. ಇವೆಲ್ಲಾ ತಾತ್ಕಾಲಿಕ. ಜಗಳದ ನಡುವೆಯೂ ಮಾನವೀಯತೆಯ ತಳಹದಿಯ ಮೇಲೆ ನಾವೆಲ್ಲಾ ಬದುಕಬೇಕಾಗಿದೆ ಎಂದು ಕವಿ ಸಾಮರಸ್ಯದ ಹಾಡು ಹಾಡಿರುವರು, ತಮ್ಮ ಬದುಕನ್ನು ನೆನೆಯುತ್ತಾ.

ಸಂಕಲನದ ಕವಿ ಉಮಾ ಮುಕುಂದ ತಮ್ಮ ಕಾವ್ಯ ಪಯಣ ನೆನೆಯುತ್ತಾ ‘ಮಗುವೊಂದು ನಿಧನಿಧಾನವಾಗಿ ನಡಿಗೆ ಕಲಿಯುವಂತೆ ನನ್ನ ಎರಡು ಸಾಲು, ನಾಲ್ಕು ಸಾಲುಗಳಿಂದ ಕಾವ್ಯ ಲೋಕಕ್ಕೆ ಅಡಿ ಇಟ್ಟೆ. ಇದರಿಂದಾಗಿ ನನಗೆ ಗೊತ್ತಿಲ್ಲದಂತೆಯೇ ನನಗೊಂದು ಹೊಸ ಅಸ್ಮಿತೆಯೂ ದೊರಕಿತು. ಕವಿತೆಯೊಂದು ಬರೆದಾಗ ಆಗುವಷ್ಟು ಸಂತೋಷ, ಬೆರಗು ಇತ್ಯಾದಿ ದಿನ ನಿತ್ಯದ ಬದುಕಿನಲ್ಲಿ ತೊಡಗಿಸಿಕೊಂಡಾಗಲೂ ಅನಿರೀಕ್ಷಿತವಾಗಿ ದಕ್ಕುತ್ತಿರುತ್ತದೆ’ ಎನ್ನುತ್ತಾ ‘ಒಂದು ರೀತಿಯಲ್ಲಿ ನಾನು ಫೇಸ್ಬುಕ್ ಕವಿಯೇ. ಹೀಗೆ ಗುರುತಿಸಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದಿರುವರು.

ಹಗಲಿರುಳೆನ್ನದೆ ಬೆನ್ನು ಹತ್ತಿದೆ
ಬಿರಿದೆದ್ದ ನಿನ್ನ ಪಾದ
ಒಂದೇ ಒಂದು ಕಾಳು ಬೆಳೆಯದ ನಾನು
ಕಾದ ನೆಲದ ಮೇಲೆ ಕಾಲಿಡದ ನಾನು,
ಬೆವರು ಬಸಿದ ನೀ ಬೆಳೆದ
ಮೂಟೆ ಮೂಟೆ ಅಕ್ಕಿ ಮುಕ್ಕಿ
ಸೊಕ್ಕಿಬೆಳೆದ ನಾನು
…………………..
ಅನ್ನ ಕಲೆಸಿ ಉಣಿಸಬೇಕು

ಎಂದು “ಪಾದ ಕಾರಣ” ಕವಿತೆಯಲ್ಲಿ ನಾಡಿಗಾಗಿ, ದೇಶದ ಜನರಿಗಾಗಿ ದುಡಿವ ಮಣ್ಣಿನ ಮಕ್ಕಳ ತ್ಯಾಗವ ನೆನೆನೆನೆದು ನಾವು ಬರೀ ಸ್ವಾರ್ಥಿಗಳಾಗಿ ಅವರು ಬೆಳೆದ ಮೂಟೆ ಮೂಟೆ ಅಕ್ಕಿಗಳನು ಮುಕ್ಕುತಿದ್ದೇವೆಯೇ ಹೊರತು ಅವರ ಸ್ಥಿತಿಗತಿಗಳ ಕುರಿತೆಂದೂ ಯೋಚಿಸುವದೇ ಇಲ್ಲ. ಅವರ ಬದುಕಿಗೆ ನಾವು ಕಣ್ಣಾಗಬೇಕು, ಅವರ ದುಃಖ ದಲಿ ನಾವೂ ಪಾಲುದಾರರಾಗಿ ನಮ್ಮ ಸಂತೋಷವನ್ನು ಅವರಿಗೂ ಹಂಚಬೇಕು ಎಂಬ ಮಾನವ ಪರ ಧೋರಣೆಯೊಂದಿಗೆ ಬಡ ಜನರ, ದುಡಿಯುವ ಕೈಗಳಿಗೆ ಶಕ್ತಿಯಾಗಬೇಕು ಎನ್ನುತ್ತಾ ನಮ್ಮ ಇಂದಿನ ಸಿರಿ ಸಂಪತ್ತಿಗೆ ನಿಮ್ಮ ಬೊಕ್ಕೆ ಎದ್ದ ಪಾದಗಳೇ ಕಾರಣ ಎಂದು ಮನಸಾ ದುಡಿಯುವ ಜನಕೆ ವಂದಿಸಿರುವರು.

“ನಡೆ” ಕವಿತೆಯಲ್ಲಿ

ಜೊತೆ ಜೊತೆಗೆ ನಡೆಯುವಾಗ ದೀಪ ಯಾರ ಕೈಯ್ಯಲಿದ್ದರೇನು? ಜೊತೆಗೆ ನಡೆಯುವುದಷ್ಟೇ ಮುಖ್ಯ, ಎನ್ನುತ್ತಾ ನಮ್ಮೆಲ್ಲಾ ಅಂಹಕಾರ, ದುರಹಂಕಾರಗಳ ಮರೆತು ಮನುಷ್ಯರಾಗಿ ಬದುಕುವ. ಹೆಸರಿಗಾಗಿ ಅಧಿಕಾರಕ್ಕಾಗಿ ಮನುಷ್ಯತ್ವವ ಮರೆತು ಬದುಕುವ ಬದಲು, ಜಾತಿ, ಧರ್ಮಗಳೆಲ್ಲಾ ಒಂದಾಗಿ ಎಲ್ಲರೂ ಜೊತೆಯಲೇ ಸಾಗುವಾ, ದೀಪದ ಬೆಳಕಲ್ಲಿ ಎಂಬ ಆಶಾ ಭಾವ ವ್ಯಕ್ತಪಡಿಸಿರುವರು.

ಉಮಾರ ಕವಿತೆಯಲ್ಲಿ ದಿನ ನಿತ್ಯದ ಆಗು-ಹೋಗುಗಳ ಅಭಿವ್ಯಕ್ತಿ ಇದೆ. ಇವೆಲ್ಲವೂ ಬದುಕಿನ ಅನುಭವದಿಂದ ಪುಟಿದೆದ್ದ ಸಾಲುಗಳು. ಮತ್ತೊಬ್ಬರ ಮನದಲಿ ಹೊಕ್ಕಿ ಅವರ ಭಾವನೆಗಳನ್ನು ಹೊರಹಾಕುವ, ಕಾವ್ಯ ಕಟ್ಟುವ ಇವರ ಜೀವಪರ ಮನಸಿಗೆ ಅಭಿನಂದಿಸಿ ಶುಭ ಕೋರುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ‘ಕತ್ತರಿ ಸಾಣೆಯ ಮುದುಕ’ – ಮಿಸ್ರಿಯಾ ಐ. ಪಜೀರ್ ಬರೆದ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...