ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೆ ಆಗ್ರಹಿಸಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೋಮವಾರ ನಿರ್ಣಯ ಅಂಗೀಕರಿಸಲಾಗಿದೆ.
ಪ್ರತಿ ಬಾರಿಯೂ ನಿರ್ಣಯದ ವಿರುದ್ಧ ಮತ ಚಲಾಯಿಸುತ್ತಿದ್ದ ಅಥವಾ ವೀಟೋ ಆಧಿಕಾರ ಚಲಾಯಿಸಿ ನಿರ್ಣಯ ಅಂಗೀಕಾರಗೊಳ್ಳದಂತೆ ತಡೆಯುತ್ತಿದ್ದ ಯುಎಸ್ ಈ ಬಾರಿ ಮತದಾನಕ್ಕೆ ಗೈರಾಗಿತ್ತು. ಹಾಗಾಗಿ, ಮೊದಲ ಬಾರಿಗೆ ಭದ್ರತಾ ಮಂಡಳಿಯಲ್ಲಿ ನಿರ್ಣಯ ಅಂಗೀಕಾರಗೊಂಡಿದೆ.
ಯುಎಸ್ ಹೊರತುಪಡಿಸಿ ಭದ್ರತಾ ಮಂಡಳಿಯ ಇತರ 14 ಸದಸ್ಯರು ನಿರ್ಣಯದ ಪರ ಮತ ಚಲಾಯಿಸಿದ್ದಾರೆ. ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣ ತಕ್ಷಣ ನಿಲ್ಲಿಸಬೇಕು. ಎಲ್ಲಾ ಒತ್ತೆಯಾಳುಗಳನ್ನು ನಿಶ್ಶರ್ತವಾಗಿ ಬಿಡುಗಡೆ ಮಾಡಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ನೆತನ್ಯಾಹು ಕಿಡಿ
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಿಡಿ ಕಾರಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು. ಈ ಮೂಲಕ ಹಮಾಸ್ ಬಳಿ ಇರುವ ಒತ್ತೆಯಾಳುಗಳ ಬಿಡುಗಡೆಗೆ ಶ್ರಮಿಸಿತ್ತು. ಆದರೆ, ಅದಕ್ಕೆ ಹಿನ್ನಡೆಯಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಮೊದಲ ಬಾರಿಗೆ ವೀಟೋ ಅಧಿಕಾರ ಬಳಸದೆ ಕದನ ವಿರಾಮ ನಿರ್ಣಯ ಅಂಗೀಕರಿಸಲು ಅನುವು ಮಾಡಿಕೊಟ್ಟ ಯುಎಸ್ ವಿರುದ್ಧ ನೆತನ್ಯಾಹು ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಾರ ವಾಷಿಂಗ್ಟನ್ನಲ್ಲಿ ಇಸ್ರೇಲಿ ನಿಯೋಗ ಮತ್ತು ಯುಎಸ್ ಅಧಿಕಾರಿಗಳ ನಡುವೆ ನಡೆಯಬೇಕಿದ್ದ ಮಾತುಕತೆಯನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಹೇಳಿದ್ದಾರೆ.
ಪ್ಯಾಲೆಸ್ತೀನ್ ಸ್ವಾಗತ
ವಿಶ್ವ ಸಂಸ್ಥೆಗೆ ಪ್ಯಾಲೆಸ್ತೀನ್ನ ರಾಯಭಾರಿಯಾಗಿರುವ ರಿಯಾದ್ ಮನ್ಸೂರ್ ಅವರು ಭದ್ರತಾ ಮಂಡಳಿಯ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಆದರೆ, ಅದು ತುಂಬಾ ವಿಳಂಬವಾಯಿತು ಎಂದಿದ್ದಾರೆ.
ಇಸ್ರೇಲ್ ಆಕ್ರಮಣದಿಂದ 1 ಲಕ್ಷಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ, ಗಾಯಗೊಂಡಿದ್ದಾರೆ. ಎರಡು ಮಿಲಿಯನ್ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಗಾಝಾದ ಪರಿಸ್ಥಿತಿ ನರಕ ಸದೃಶ್ಯವಾಗಿದೆ. ಇಷ್ಟೆಲ್ಲಾ ಆಗಿ 6 ತಿಂಗಳ ಬಳಿಕ ವಿಶ್ವ ಸಂಸ್ಥೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ರಿಯಾದ್ ಮನ್ಸೂರ್ ಹೇಳಿದ್ದಾರೆ.
ಹಮಾಸ್ ಸ್ವಾಗತ
ಭದ್ರತಾ ಮಂಡಳಿಯ ನಿರ್ಣಯವನ್ನು ಹಮಾಸ್ ಸ್ವಾಗತಿಸಿದೆ. ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಾವು ಸಿದ್ದರಿದ್ದೇವೆ ಎಂದಿದೆ. ಆದರೆ, ನಾವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಾದರೆ ಇಸ್ರೇಲ್ ಜೈಲಿನಲ್ಲಿರುವ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಬೇಕು ಎಂದು ಷರತ್ತು ವಿಧಿಸಿದೆ.
ಯುಎಸ್ ಪ್ರತಿಕ್ರಿಯೆ
ಮತದಾನದಿಂದ ದೂರ ಉಳಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, ನಿರ್ಣಯ ಅಂಗೀಕರಿಸುವ ವಿಷಯದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಕದನ ವಿರಾಮದ ಪರವಾಗಿಯೇ ಇದ್ದೇವೆ. ಆದರೆ, ನಿರ್ಣಯದಲ್ಲಿ ಹಮಾಸ್ ಅನ್ನು ಖಂಡಿಸುವ ವಿಷಯವಿಲ್ಲ. ಹಾಗಾಗಿ, ಅದರ ಪರ ನಾವು ಮತ ಚಲಾಯಿಸಿಲ್ಲ ಎಂದಿದ್ದಾರೆ.
ತಕ್ಷಣ ನಿರ್ಣಯ ಜಾರಿಗೆ ಗುಟೆರೆಸ್ ಆಗ್ರಹ
ಭದ್ರತಾ ಮಂಡಳಿಯ ನಿರ್ಣಯದಂತೆ ತಕ್ಷಣ ಕದನ ವಿರಾಮ ಜಾರಿಗೊಳಿಸಬೇಕು. ಎಲ್ಲಾ ಒತ್ತೆಯಾಳುಗಳನ್ನು ಯಾವುದೇ ಷರತ್ತು ವಿಧಿಸದೆ ಪರಸ್ಪರ ಬಿಡುಗಡೆಗೊಳಿಸಬೇಕು ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಆಗ್ರಹಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಗಾಝಾದಲ್ಲಿ ಇಸ್ರೇಲ್ ಆಕ್ರಮಣ ನಡೆಸುತ್ತಿದೆ. ಇಸ್ರೇಲ್ ಮಾರಣಹೋಮಕ್ಕೆ ಇದುವರೆಗೆ ಸುಮಾರು 32 ಸಾವಿರ ಪ್ಯಾಲೆಸ್ತೀನ್ ನಾಗರಿಕರು ಬಲಿಯಾಗಿದ್ದಾರೆ. ಪ್ರತಿದಿನ 100-200 ಜನರು ಸಾವನ್ನಪ್ಪುತ್ತಲೇ ಇದ್ದಾರೆ. ಆರಂಭದಲ್ಲಿ ಹಮಾಸ್ ನಮ್ಮ ಗುರಿ ನಾವು ನಾಗರಿಕರಿಗೆ ಏನೂ ಮಾಡುವುದಿಲ್ಲ ಎನ್ನುತ್ತಿಲ್ಲ ಇಸ್ರೇಲ್, ಪ್ರಸ್ತುತ ನಾಗರಿಕರನ್ನು ಗುರಿಯಾಗಿಸಿ ರಕ್ತ ಹರಿಸುತ್ತಿದೆ. ನಿರಾಶ್ರಿತರ ಶಿಬಿರಗಳ ಮೇಲೆ ದಾಳಿ ನಡೆಸುತ್ತಿದೆ. ವಿವಿಧ ರಾಷ್ಟ್ರಗಳು ಯುದ್ಧ ನಿರಾಶ್ರಿತರಿಗೆ ಕಳುಹಿಸುವ ನೆರವು ವಿತರಣೆಗೆ ಅಡ್ಡಿಪಡಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಕುಡಿಯುವ ನೀರು ಪೋಲು; ಬೆಂಗಳೂರಿನ 22 ಕುಟುಂಬಗಳಿಗೆ ತಲಾ ₹5,000 ದಂಡ ವಿಧಿಸಿದ ಜಲ ಮಂಡಳಿ