ಎನ್ ಆರ್ ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟಿನೆ ನಡೆಸಿದ್ದಕ್ಕಾಗಿ ಭಾರತದಲ್ಲಿ ಬಂಧಿಸಲಾಗಿರುವ ಹಲವಾರು ಸಾಮಾಜಿಕ ಕಾರ್ಯಕರ್ತರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.
“ಸಿಎಎಯ ತಾರತಮ್ಯ ಸ್ವರೂಪವನ್ನು ಟೀಕಿಸಿರುವ ಭಾಷಣಗಳ ಕ್ಷುಲ್ಲಕ ಆಧಾರದ ಮೇಲೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಲಾಗಿರುವ ಮತ್ತು ವಿಚಾರಣಾ ಪೂರ್ವ ಬಂಧನದಲ್ಲಿರುವ ಎಲ್ಲಾ ಮಾನವ ಹಕ್ಕುಗಳ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು” ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಈ ಹೇಳಿಕೆಯಲ್ಲಿ ಮೀರನ್ ಹೈದರ್, ಗುಲ್ಫಿಶಾ ಫಾತಿಮಾ, ಸಫೂರಾ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ, ದೇವಂಗಾನಾ ಕಲಿತಾ, ನತಾಶಾ ನರ್ವಾಲ್, ಖಾಲಿದ್ ಸೈಫಿ, ಶಿಫಾ ಉರ್ ರೆಹಮಾನ್, ಡಾ. ಕಫೀಲ್ ಖಾನ್, ಸರ್ಜಿಲ್ ಇಮಾಮ್ ಮತ್ತು ಅಖಿಲ್ ಗೊಗೋಯ್ ಅವರ 11 ಹೆಸರುಗಳನ್ನು ನಮೂದಿಸಲಾಗಿದ್ದು ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
“ಈ ಪ್ರತಿಭಟನಾಕಾರರಲ್ಲಿ ಅನೇಕರು ವಿದ್ಯರ್ಥಿಗಳಾಗಿದ್ದಾರೆ. ಸಿಎಎ ತಾರತಮ್ಯವನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಇದು ಸರ್ಕಾರವು ತನ್ನ ವಿರುದ್ಧ ಪ್ರಶ್ನೆ ಮಾಡುವುದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಿದೆ. ಪ್ರಶ್ನೆಗಳನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ” ಎಂದು ವಿಶ್ವಸಂಸ್ಥೆ ಅಭಿಪ್ರಾಯ ಪಟ್ಟಿದೆ.
ಯುಎನ್ ಪ್ರಸ್ತಾಪಿಸಿದ 11 ವ್ಯಕ್ತಿಗಳಲ್ಲಿ, ಗೊಗೊಯ್, ಇಮಾಮ್, ರೆಹಮಾನ್, ಕಲಿತಾ, ನಾರ್ವಾಲ್, ತನ್ಹಾ, ಫಾತಿಮಾ ಮತ್ತು ಹೈದರ್ ವಿರುದ್ಧ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಿಸಿದ್ದಾರೆ.
ಸಿಎಎ ವಿರೋಧಿ ಮತ್ತು ಬೆಂಬಲಿತ ಪ್ರತಿಭಟನೆಗಳಲ್ಲಿ ಸರ್ಕಾರ ತಾರತಮ್ಯ ಎಸಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಸಿಎಎ ಬೆಂಬಲಿಗರ ವಿರುದ್ಧ ಮಾಡಿರುವ ದ್ವೇಷ ಮತ್ತು ಹಿಂಸಾಚಾರದ ಆರೋಪಗಳನ್ನು ಅಧಿಕಾರಿಗಳು ತನಿಖೆ ಮಾಡಿಲ್ಲ. “ಭಾರತೀಯ ಕಾರಾಗೃಹಗಳಲ್ಲಿ ವೈರಸ್ ಹರಡಿದೆ ಎಂದು ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ಮಾನವ ಹಕ್ಕು ಹೋರಾಟಗಾರರನ್ನು ತುರ್ತಾಗಿ ಬಿಡುಗಡೆಗೊಳಿಬೇಕು ಎಂದು ವಿಶ್ವಸಂಸ್ಥೆ ಅಧಿಕಾರಿಗಳ ತಂಡ ಹೇಳಿದೆ.