ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಅಭೂತಪೂರ್ವ ಗೆಲುವಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಹಾರಾಷ್ಟ್ರ ಕಾಂಗ್ರೆಸ್ ಘಟಕ ಮತ್ತು ಅದರ ಮಿತ್ರ ಪಕ್ಷ ಎನ್ಸಿಪಿ ಭಾನುವಾರ ಶ್ಲಾಘಿಸಿದೆ.
ಇಂದೋರ್ನ 18 ನೇ ಶತಮಾನದ ಆಡಳಿತಗಾರ್ತಿ ಮತ್ತು ಧನಗರ್ ಸಮುದಾಯದ (ಕರ್ನಾಟಕದ ಕುರುಬ ಸಮುದಾಯದ) ಪ್ರಮುಖ ಮುಖ ಅಹಲ್ಯಾ ದೇವಿ ಹೋಳ್ಕರ್ ಅವರ ಜನ್ಮದಿನವನ್ನು ಆಚರಿಸಲು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರಕ್ಕೆ ಭಾನುವಾರ ಭೇಟಿ ನೀಡಿದ್ದರು.
ಈ ವೇಳೆ ಎನ್ಸಿಪಿ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭೆಯ ಸಂಸದೆ ಸುಪ್ರಿಯಾ ಸುಳೆ ಅವರು – ಸಿದ್ದರಾಮಯ್ಯ ಅವರನ್ನು ”ಗೇಮ್ ಚೇಂಜರ್” ಎಂದು ಶ್ಲಾಘಿಸಿದ್ದಾರೆ. ”ನೀವು ಈ ಯುದ್ಧವನ್ನು [ಚುನಾವಣೆಯಲ್ಲಿ] ಹೋರಾಡಿದ ರೀತಿ ನೋಡಿ ನಮಗೆ ಹೆಮ್ಮೆ ಎನಿಸುತ್ತದೆ ಎಂದು ಸುಪ್ರಿಯಾ ಸುಳೆ ಹೇಳಿದರು.
”ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭೂತಪೂರ್ವವಾಗಿ ಗೆಲುವು ಕಂಡಿರುವುದು ನಮಗೆ ಹೆಚ್ಚಿನ ವಿಶ್ವಾಸವನ್ನು ಮೂಡಿಸಿದೆ. ಏಕೆಂದರೆ ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಾಗಿದೆ ಎಂದಾದರೆ, ಮುಂದೆ ಮಹಾರಾಷ್ಟ್ರ ಮತ್ತು ಇಡೀ ದೇಶದಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎನ್ನುವ ವಿಶ್ವಾಸ ಮೂಡಿದೆ. ನೀವು ನಿಜವಾಗಿಯೂ ಗೇಮ್ ಚೇಂಜರ್ ಆಗಿದ್ದೀರಿ” ಎಂದು ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.
ಸುಪ್ರಿಯಾ ಸುಳೆ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ”ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟ ಗೆಲುವು ಸಾಧಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
”ರಾಜ್ಯದಲ್ಲಿ ಉಚಿತ ಬಸ್ ಯೋಜನೆ [ಗುರ್ಹಾ ಶಕ್ತಿ] ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಕುಟುಂಬದ ಮುಖ್ಯಸ್ಥರಿಗೆ [ಗೃಹ ಲಕ್ಷ್ಮಿ] ತಿಂಗಳಿಗೆ 2,000 ರೂ.ಗಳನ್ನು ನೀಡುವ ಕರ್ನಾಟಕದ ಯೋಜನೆಗಳನ್ನು ಅನುಕರಿಸುವಂತೆ ನಾನು ಶರದ್ ಪವಾರ್ ಅವರನ್ನು ಒತ್ತಾಯಿಸುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ವಾಸ್ತು ಧಿಕ್ಕರಿಸಿ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರ ತೆರೆಸಿದ ಸಿದ್ದರಾಮಯ್ಯ
ಮಹಾರಾಷ್ಟ್ರದಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ
ಮಹಾರಾಷ್ಟ್ರದಲ್ಲಿ ರವಿವಾರ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು ಕನ್ನಡದಲ್ಲಿಯೇ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಸಾಂಗ್ಲಿಯಲ್ಲಿ ಮಾತನಾಡಿ, ”ಈ ಭಾಗದಲ್ಲಿ ಸಾಕಷ್ಟು ಕನ್ನಡ ಮಾತನಾಡುವವರಿದ್ದೀರಿ ಮಹಾರಾಷ್ಟ್ರ ಕಾಂಗ್ರೆಸ್ ಅನ್ನು ಒಗ್ಗೂಡಿಸಿ ರಾಜ್ಯದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮತ್ತು ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕರೆ ಕೊಟ್ಟರು.
”1947ರಲ್ಲಿ ಸಾಧಿಸಿದ ಸ್ವಾತಂತ್ರ್ಯಕ್ಕಾಗಿ ನಾವು ಕಾಂಗ್ರೆಸ್ ಸದಸ್ಯರಾಗಿದ್ದೆವು. ಇಂದು ನಾವು ಕೋಮುವಾದಿ ಮತ್ತು ಭ್ರಷ್ಟ ಬಿಜೆಪಿಯ ಹಿಡಿತದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗಿದೆ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದರು.
ಏಕನಾಥ್ ಶಿಂಧೆ-ದೇವೇಂದ್ರ ಫಡ್ನವೀಸ್ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಅವರನ್ನು ಮಹಾರಾಷ್ಟ್ರದಿಂದ ಬೇರು ಸಮೇತ ಕಿತ್ತೊಗೆಯಬೇಕು ಎಂದು ಸಿದ್ದರಾಮಯ್ಯ ಟೀಕಿಸಿದರು.
”ಕರ್ನಾಟಕದಲ್ಲಿ ಬಿಜೆಪಿಯ 40% ಕಮಿಷನ್ ಪಡೆಯುತ್ತಿದ್ದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿಚಾರವನ್ನು ನಾನು ಮತ್ತು ಡಿಕೆ ಶಿವಕುಮಾರ್ ಅವರು ಪ್ರತಿ ಹಳ್ಳಿಗೆ ತಲುಪಿಸಿದೆವು.ಹಾಗಾಗಿ ಕರ್ನಾಟಕದ ಜನತೆ ಬಿಜೆಪಿಯನ್ನು ಬೇರುಸಹಿತ ಕಿತ್ತೊಗೆದು, ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರಲು ನಿರ್ಧರಿಸಿದರು. ಫಡ್ನವಿಸ್ ಶಿಂಧೆ ಸರ್ಕಾರ ಕೂಡ ಅಷ್ಟೇ ಭ್ರಷ್ಟವಾಗಿದೆ. ಹಾಗಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ” ಎಂದು ಸಿದ್ದರಾಮಯ್ಯ ಗುಡಗಿದರು.
”ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಬಂದರೆ, ಕರ್ನಾಟಕದ ಜನರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ಕರ್ನಾಟಕ ಬಿಜೆಪಿ ನಂಬಿತ್ತು. ಆದರೆ ಜನರು ಬುದ್ದಿವಂತರು, ಅವರು ನಮಗೆ ಮತ ನೀಡಿದರು. ವಾಸ್ತವವಾಗಿ, ಮೋದಿ ರ್ಯಾಲಿ ಅಥವಾ ರೋಡ್ಶೋ ನಡೆಸಿದ ಪ್ರತಿಯೊಂದು ಸ್ಥಳದಲ್ಲೂ ಕಾಂಗ್ರೆಸ್ ಗೆದ್ದಿದೆ. ಇದು ಮೋದಿ ಮ್ಯಾಜಿಕ್ ಮರೆಯಾಗುತ್ತಿರುವುದನ್ನು ತೋರಿಸುತ್ತದೆ” ಎಂದು ಸಿದ್ದರಾಮಯ್ಯ ಹೇಳಿದರು.
Great