ಉತ್ತರ ಪ್ರದೇಶದ ಅಮೇಥಿಯಲ್ಲಿ 16 ವರ್ಷದ ದಲಿತ ಬಾಲಕಿಗೆ ಅಮಾನವಿಯವಾಗಿ ಥಳಿಸಿ ಕಿರುಕುಳ ನೀಡಿರುವ ಘಟನೆ ನಡೆದಿದೆ ಎಂದು ‘SheThePeople’ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅದು ಉಲ್ಲೇಖಿಸಿದೆ.
ಮೂವರು ಆರೋಪಿಗಳಾದ ಸೂರಜ್ ಸೋನಿ, ಶಿವಂ ಮತ್ತು ಸಕಾಲ್ ವಿರುದ್ಧ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಅಧೀಕ್ಷಕ ಅರ್ಪಿತ್ ಕಪೂರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಪ್ರತಿಭಟನೆ’: ಮೇಲ್ಜಾತಿ ಮಹಿಳೆ ತಯಾರಿಸಿದ ಊಟ ನಿರಾಕರಿಸಿದ ದಲಿತ ವಿದ್ಯಾರ್ಥಿಗಳು
ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದು, ಮೂವರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಅಮೇಥಿ ಜಿಲ್ಲೆಯ ಸಂಗ್ರಾಮ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿಯಾಗಿದ್ದು, ರಾಯ್ಪುರ ಫುಲ್ವಾರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಬಾಲಕಿಯನ್ನು ಮನೆಯೊಂದರ ಒಳಗೆ ಮೂವರು ಥಳಿಸುತ್ತಿದ್ದು, ಇದನ್ನು ಒಬ್ಬರು ವಿಡಿಯೊ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಕನಿಷ್ಠ ಮೂವರು ಮಹಿಳೆಯರು ಕೂಡಾ ಇದ್ದರು. ದುಷ್ಕರ್ಮಿಗಳು ಬಾಲಕಿಗೆ ಥಳಿಸುತ್ತಿರುವಾಗ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಂಡಿದ್ದರೂ, ಅಲ್ಲಿರುವ ಯಾರೂ ಕೂಡಾ ಕರುಣೆ ತೋರಿಸಿಲ್ಲ.
ಈ ಬಗ್ಗೆ ಟ್ವಿಟರ್ನಲ್ಲಿ ಆಕ್ರೊಶ ವ್ಯಕ್ತವಾಗಿದ್ದು, “ಯುಪಿ ದಲಿತರಿಗೆ ಭಯಾನಕ ಸ್ಥಳವಾಗಿದ್ದು, ಭಾರತದ ಜಾತೀಯತೆಯನ್ನು ಹೊಡೆದೋಡಿಸಲು ಈಗ ಅಂತಾರಾಷ್ಟ್ರೀಯ ಹಸ್ತಕ್ಷೇಪ ಅನಿವಾರ್ಯವಾಗಿದೆ” ಎಂದು ಮಿಷನ್ ಅಂಬೇಡ್ಕರ್ನ ಅಧೀಕೃತ ಖಾತೆ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ದೇವಾಲಯವನ್ನೇ ಧಿಕ್ಕರಿಸಿ: ಜಾತಿ ದೌರ್ಜನ್ಯಕ್ಕೆ ಒಳಗಾದ ಹರಿಹರಪುರ ದಲಿತರಿಗೆ ಕೃಷ್ಣಮೂರ್ತಿ ಮನವಿ
ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳು ಹಿನ್ನೆಲೆಗೆ ಸರಿದು, ದುರ್ಬಲರ ಮೇಲೆ ಪ್ರಬಲರು ದೌರ್ಜನ್ಯ ಎಸಗುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವುದು ಶುಬ ಸೂಚನೆ ಅಲ್ಲ.
ಆರೋಪಗಳಿಗೆ ಕಟಿಣ ಶಿಕ್ಷೆ ಆಗಬೇಕು.