ಉತ್ತರ ಪ್ರದೇಶದ ಬರೇಲಿ ಜಿಲ್ಲೆ, ನವಾಬ್ಗಂಜ್ ಪ್ರದೇಶದ ಖಾಸಗಿ ಶಾಲೆಯೊಂದರ ಪ್ರಾಂಶುಪಾಲನೊಬ್ಬ ಹತ್ತನೇ ತರಗತಿಯ ದಲಿತ ವಿದ್ಯಾರ್ಥಿನಿಯ ಮೇಲೆ ತಿಂಗಳುಗಟ್ಟಲೆ ಅತ್ಯಾಚಾರ ನಡೆಸಿರುವ ಪ್ರಕರಣ ಬಯಲಾಗಿದೆ.
ಅತ್ಯಾಚಾರ ಎಸಗಿ, ಕೃತ್ಯವನ್ನು ಚಿತ್ರೀಕರಣ ಮಾಡಿಕೊಂಡು ದಲಿತ ವಿದ್ಯಾರ್ಥಿನಿಗೆ ಬ್ಲಾಕ್ಮೇಲೆ ಮಾಡುತ್ತಾ ಪದೇ ಪದೇ ಅತ್ಯಾಚಾರ ನಡೆಸಿರುವ ಸಂಬಂಧ ಪ್ರಕರಣ ದಾಖಲಿಸಲಾಗಿದೆ. 35 ವರ್ಷದ ಪ್ರಾಂಶುಪಾಲ ಪರಶುರಾಮ್ ಗಂಗ್ವಾರ್ ಮತ್ತು ಮತ್ತೊಬ್ಬ ಅಪರಿಚಿತ ವ್ಯಕ್ತಿ ಈ ಅಪರಾಧದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಕಳೆದ ಫೆಬ್ರುವರಿಯಿಂದ ಆರೋಪಿ ಪರಶುರಾಮ್ ಗಂಗ್ವಾರ್ ಈ ಕೃತ್ಯ ಎಸಗಿದ್ದಾನೆ. “ಹತ್ತನೇ ತರಗತಿಯ ನಿನ್ನ ಅಪ್ಲಿಕೇಷನ್ನಲ್ಲಿ ತಪ್ಪಾಗಿದೆ. ನೀನು ಬೋರ್ಡ್ ಪರೀಕ್ಷೆಗೆ ಕೂರಲು ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದ್ದ ಪ್ರಾಂಶುಪಾಲ, 19 ವರ್ಷ ವಯಸ್ಸಿನ ದಲಿತ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ನಂತರ ಅತ್ಯಾಚಾರವೆಸಗಿ ಘಟನೆಯನ್ನು ಚಿತ್ರೀಕರಿಸಿಕೊಂಡು, ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆಯ ದೂರಿನಲ್ಲಿ ತಿಳಿಸಲಾಗಿದೆ.
ಶಾಲೆ ಆರಂಭವಾದ ನಂತರವೂ ತನ್ನ ಕಚೇರಿಯಲ್ಲಿ ಪ್ರಾಂಶುಪಾಲ ಪರಶುರಾಮ್ ವಿದ್ಯಾರ್ಥಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ನವಾಬ್ಗಂಜ್ನ ಪೊಲೀಸ್ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಈ ವಿಷಯದ ಬಗ್ಗೆ ಭಾನುವಾರ ದೂರು ನೀಡಲಾಗಿದೆ. ಪ್ರಾಥಮಿಕ ತನಿಖೆಯ ನಂತರ, ಐಪಿಎಸ್ ಸೆಕ್ಷನ್ 376-2ಎನ್ (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು ‘ಎಸ್ಸಿ, ಎಸ್ಟಿ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಅಡಿಯಲ್ಲಿ ಆರೋಪಿ ಪರಶುರಾಮ್ ಗಂಗ್ವಾರ್ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ: ಎರಡು ಬಾರಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ನಿರ್ಲಕ್ಷ್ಯ ತಾಳಿದ್ದ ಯುಪಿ ಪೊಲೀಸರು
“ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಆಕೆಯ ಸಹೋದರನ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮಂಗಳವಾರ ವಿದ್ಯಾರ್ಥಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಶಾಲೆಯ ಪ್ರಾಂಶುಪಾಲನ ವಿರುದ್ಧ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಆರೋಪಿ ವಿವಾಹಿತನಾಗಿದ್ದು, ಅವರ ಕುಟುಂಬ ಪಿಲಿಭಿತ್ನಲ್ಲಿ ವಾಸವಿದೆ” ಎಂದು ಪೊಲೀಸ್ ಅಧಿಕಾರಿ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಕೃತ್ಯದಲ್ಲಿ ಮತ್ತೊಬ್ಬ ಭಾಗಿಯಾಗಿರುವುದು ತಿಳಿದುಬಂದಿದೆ. ಎಂಟು ಅಶ್ಲೀಲ ವಿಡಿಯೊಗಳನ್ನು ಪತ್ತೆ ಹಚ್ಚಿದ್ದೇವೆ. ಅವುಗಳನ್ನು ಮತ್ತೊಬ್ಬನ ಸಹಕಾರದಿಂದ ಚಿತ್ರೀಕರಿಸಲಾಗಿದೆ ಎಂಬುದು ಗೊತ್ತಾಗಿದೆ. ಆ ಅಪರಿಚಿತ ವ್ಯಕ್ತಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಈ ಇಬ್ಬರು ಆರೋಪಿಗಳು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ರಾತ್ರಿ ವೇಳೆ ಶಾಲೆಗೆ ಬರುವಂತೆ ಬೆದರಿಕೆ ಹಾಕುತ್ತಿದ್ದರು. “ಘಟನೆಯನ್ನು ಚಿತ್ರೀಕರಣ ಮಾಡಿಕೊಂಡಿದ್ದರಿಂದ ಮೌನವಾಗಿದ್ದೆ” ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.