ಸವರ್ಣೀಯ ಮಹಿಳೆಯನ್ನು ದಿಟ್ಟಿಸಿದ ಎಂಬ ಕ್ಷುಲ್ಲಕ ಆರೋಪದ ಮೇಲೆ ಗುಂಡು ಹಾರಿಸಿ ದಲಿತ ಯುವಕನ ಕುಟುಂಬದ ಮೂವರು ಸದಸ್ಯರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ದೇವರಾನ್ ಗ್ರಾಮದಲ್ಲಿ ಜರುಗಿದೆ.
ಮನಾಕ್ ಅಹಿರ್ವಾರ್ ಎಂಬ ದಲಿತ ಯುವಕ ತಮ್ಮ ನೆರಮನೆಯ ಸವರ್ಣೀಯ ಜಗದೀಶ್ ಪಾಟೀಲ್ ಎಂಬಾತನ ಪತ್ನಿಯನ್ನು ದಿಟ್ಟಿಸಿ ನೋಡಿದ ಎಂದು ಆರೋಪಿಸಿ ಸೋಮವಾರ ಸಂಜೆ ಎರಡೂ ಕುಟುಂಬದ ನಡುವೆ ಜಗಳ ನಡೆದಿತ್ತು. ಗ್ರಾಮಸ್ಥರು ಬಂದು ಎರಡೂ ಕುಟುಂಬಗಳನ್ನು ಸಮಾಧಾನಪಡಿಸಿದ್ದರು ಎನ್ನಲಾಗಿದೆ.
ಆದರೆ ಮಂಗಳವಾರ ಬೆಳಿಗ್ಗೆ ಜಗದೀಶ್ ಪಾಟೀಲ್ ಮತ್ತು ಇತರ ಐವರು ಬಂದೂಕುಗಳ ಸಹಿತ ಮನಾಕ್ ಅಹಿರ್ವಾರ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಮನಾಕ್ ಅಹಿರ್ವಾರ್, ಆತನ ತಮ್ಮ ಮಹೇಶ್ ಅಹಿರ್ವಾರ್ ಮತ್ತು ಅವರ ತಂದೆ-ತಾಯಿಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡೇಟಿನಿಂದ ಮನಾಕ್ ಅಹಿರ್ವಾರ್ ಮತ್ತು ಅವರ ತಂದೆ – ತಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಹೋದರ ಮಹೇಶ್ ಅಹಿರ್ವಾರ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಮಹೇಶ್ ಅಹಿರ್ವಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ, ಕೊಲೆಯ ಯತ್ನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ಜಗದೀಶ್ ಪಟೇಲ್ನನ್ನು ಬಂಧಿಸಲಾಗಿದೆ ಮತ್ತು ನಾಪತ್ತೆಯಾಗಿರುವ ಇನ್ನೂ ಐವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ಡಿಆರ್ ತೆನಿವಾರ್ ಹೇಳಿದ್ದಾರೆ.
ದಲಿತರ ಹತ್ಯೆಯನ್ನು ವಿರೋಧಿಸಿ ದಾಮೋಹ್ನಲ್ಲಿ ದಲಿತ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಮಧ್ಯಪ್ರದೇಶ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹೋರಾಟಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ದಾಮೋಹ್ ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅದೇ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಈ ಘಟನೆಯನ್ನು ಕರಾಳ ಎಂದು ಕರೆದಿದ್ದಾರೆ. ಅಲ್ಲದೆ “ರಾಜ್ಯದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ನಡೆದ ದೌರ್ಜನ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಆಗ್ರಹಿಸಿದ್ದಾರೆ.
2. यह अंधकार युग जैसी ताजा घटना मध्यप्रदेश बीजेपी सरकार में कानून-व्यवस्था के साथ-साथ गरीबों, दलितों, आदिवासियों व महिलाओं आदि की सुरक्षा के मामले में सरकारी विफलता की पोल खोलती है। सरकार ऐसे आपराधिक तत्वों के विरुद्ध नरमी नहीं बल्कि सख्त कार्रवाई करे, बीएसपी की यह माँग। 2/2
— Mayawati (@Mayawati) October 25, 2022
ಇದನ್ನೂ ಓದಿ: ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ