ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್ಪಿ) 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಸಲಾದ ಪ್ರಮುಖ ಮುಖಗಳಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಜೈಲಿನಲ್ಲಿರುವ ಪಕ್ಷದ ಸಂಸದ ಅಜಂ ಖಾನ್ ಸೇರಿದ್ದಾರೆ.
ವಿಧಾನಸಭಾ ಚುನಾವಣಾ ಕದನದಲ್ಲಿ ಪಾಲ್ಗೊಳ್ಳಲು ತಾನು ಸಂಸದರಾಗಿರುವ ಅಜಂಪುರದ ಜನರ ಅನುಮತಿ ಪಡೆಯಬೇಕು ಎಂದು ಈ ಹಿಂದೆ ಹೇಳಿದ್ದ ಅಖಿಲೇಶ್ ಯಾದವ್, ಮೈನ್ಪುರಿಯಲ್ಲಿ ಕರ್ಹಾಲ್ನಿಂದ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲ್ಪಟ್ಟಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಉಪ ಮುಖ್ಯಮಂತ್ರಿಗೆ ಘೇರಾವ್ ಹಾಕಿ, ಸ್ವ ಕ್ಷೇತ್ರದಿಂದ ವಾಪಸ್ ಕಳುಹಿಸಿದ ಮಹಿಳೆಯರು
ಅಖಿಲೇಶ್ ಅವರು ಕರ್ಹಾಲ್ನಿಂದ ಸ್ಪರ್ಧಿಸುವುದಾಗಿ ಎರಡು ದಿನಗಳ ಹಿಂದೆ ಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್ ಘೋಷಣೆ ಮಾಡಿದ್ದರು. ಆದರೆ ಅದು ಅಧೀಕೃತವಾಗಿ ಇರಲಿಲ್ಲ.
“ನಾನೀಗ ಔಪಚಾರಿಕ ಅಧಿಕೃತ ಘೋಷಣೆ ಮಾಡುತ್ತಿದ್ದೇನೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೈನ್ಪುರಿ ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಅವರು ಭಾರಿ ಜನಾದೇಶದೊಂದಿಗೆ ಗೆಲ್ಲುತ್ತಾರೆ” ಎಂದು ರಾಮಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಈ ಮಧ್ಯೆ, ಫೆಬ್ರವರಿ 2020 ರಿಂದ ಸೀತಾಪುರ್ ಜೈಲಿನಲ್ಲಿರುವ ಅಜಂ ಖಾನ್, ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. 23 ತಿಂಗಳು ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರಗಿರುವ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಕೂಡ ಮುಂಬರುವ ವಿಧಾನಸಭಾ ಚುನಾವಣೆಗೆ ಕಣದಲ್ಲಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ