ನಟ ಉಪೇಂದ್ರ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಕನಿಷ್ಠ 5 ವರ್ಷ ನಿಷೇಧ ಹೇರಬೇಕು ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಗೌಡ ಎಂಬವರು ಆಗ್ರಹಿಸಿದ್ದಾರೆ.
ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿರುವ ನವೀನ್ ಗೌಡ, ದಲಿತ ಸಮುದಾಯವನ್ನು ನಿಂದಿಸುವ ಮತ್ತು ಸಮುದಾಯಗಳನ್ನು ಜಾತಿಗಳನ್ನು ಎತ್ತಿಕಟ್ಟಿ ಅಶಾಂತಿ, ಗಲಭೆ ಹುಟ್ಟಿಸುವ ಉದ್ದೇಶದಿಂದ ದಲಿತ ನಿಂದನೆ ಮಾಡಿರುವ ಉಪೇಂದ್ರ ಅಲಿಯಾಸ್ ಉಪೇಂದ್ರರಾವ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಕನಿಷ್ಠ 5ವರ್ಷ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡದ ನಟ ಎಂದು ಹೇಳಿಕೊಳ್ಳುತ್ತಿರುವ ಉಪೇಂದ್ರ ಅಲಿಯಾಸ್ ಉಪೇಂದ್ರರಾವ್ ಅಲಿಯಾಸ್ ಉಪ್ಪಿ ಮೊನ್ನೆ (12.08.2023) ತನ್ನದೇ ಫೇಸ್ ಬುಕ್ ಖಾತೆಯಲ್ಲಿ ತನ್ನದೇ ಮಾತುಗಳ ವಿಡಿಯೋವನ್ನು ಪ್ರಸಾರ ಮಾಡಿರುತ್ತಾರೆ. ಅವರು ತನ್ನ ವಿಡಿಯೋದಲ್ಲಿ ಕೆಟ್ಟ ಜನಗಳು ಎಂಬುದಕ್ಕೆ ಉದಾಹರಣೆಯಾಗಿ “ಊರು ಅಂದೇಲೆ ಹೊಲಗೇರಿ ಇರುತ್ತದೆ” ಎಂದು ಹೇಳಿದ್ದಾರೆ.
ಉಪೇಂದ್ರ ಅಲಿಯಾಸ್ ಉಪೇಂದ್ರ ರಾವ್ ಅಲಿಯಾಸ್ ಉಪ್ಪಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಸಾಮಾನ್ಯವಾಗಿ ದಲಿತರು ವಾಸ ಮಾಡುವ ಪ್ರದೇಶವನ್ನು ಹೊಲಗೇರಿ ಎಂದು ಹೇಳಿದ್ದಾರೆ. ಅಂದರೆ ಈ ರೀತಿ ದಲಿತರು ವಾಸ ಮಾಡುವ ಪ್ರದೇಶಗಳು ಕೆಟ್ಟ, ಪುದೇಶಗಳಾಗಿದ್ದು, ಊರು ಅಂದರೆ ಕೆಟ್ಟ ಪ್ರದೇಶಗಳೂ, ಕೆಟ್ಟ ಜನರೂ ಇರುತ್ತಾರೆ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಜನ ಕೆಟ್ಟದರ ವಿರುದ್ಧ ಇರಬೇಕು ಎಂದರೆ ಹೊಲಗೇರಿ ವಿರುದ್ಧ ಇರಬೇಕು ಎಂದು ಸಮುದಾಯಗಳನ್ನು ಹೊಲೆಯರ ವಿರುದ್ಧ ಎತ್ತಿಕಟ್ಟಿದ್ದಾರೆ. ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶದಿಂದ, ಅಥವಾ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಪ್ರೇರೇಪಿಸಬಹುದಾಗಿದೆ. ಜೊತೆಗೆ ಈ ಕುರಿತು ಹಲಸೂರು ಗೇಟ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ವಾಣಿಜ್ಯ ಮಂಡಳಿ ಗಂಭೀರವಾಗಿ ಪರಿಗಣಿಸಿ ಇತಿಹಾಸವುಳ್ಳ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವವನ್ನು ಎತ್ತಿ ಹಿಡಿದು ಶೋಷಿತರ ಜೊತೆಗೆ ವಾಣಿಜ್ಯ ಮಂಡಳಿ ನಿಲ್ಲುತ್ತದೆ ಎಂಬ ಸಂದೇಶ ಕೊಡಲು ನಟ ಎಂದು ಹೇಳಿಕೊಳ್ಳುವ ಈತನನ್ನು ಈ ಕೂಡಲೇ ಕನಿಷ್ಠ 5 ವರ್ಷ ನಿಷೇದ ಹೇರಬೇಕೆಂದು ನವೀನ್ ಗೌಡ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಇದನ್ನು ಓದಿ: ಮಣಿಪುರ ಹಿಂಸಾಚಾರಕ್ಕೆ ಸುಳ್ಳು ಕಾರಣಗಳನ್ನು ನೀಡಿದ ಅಮಿತ್ ಶಾ: ಕುಕಿ ಸಂಘಟನೆಗಳ ಆಕ್ರೋಶ