Homeಕರ್ನಾಟಕದಲಿತ ಯುವತಿಯನ್ನು ಪ್ರೀತಿಸಿ, ನಂತರ ಮದುವೆಗೆ ನಿರಾಕರಿಸಿ ಪೆಟ್ರೋಲ್ ಸುರಿದು ಹತ್ಯೆಗೈದ ಆರೋಪ: ಸವರ್ಣೀಯ ಯುವಕನ...

ದಲಿತ ಯುವತಿಯನ್ನು ಪ್ರೀತಿಸಿ, ನಂತರ ಮದುವೆಗೆ ನಿರಾಕರಿಸಿ ಪೆಟ್ರೋಲ್ ಸುರಿದು ಹತ್ಯೆಗೈದ ಆರೋಪ: ಸವರ್ಣೀಯ ಯುವಕನ ವಿರುದ್ಧ ಪ್ರಕರಣ

ಲಕ್ಷಾಂತರ ‘ದಲಿತ್‌ ಫೈಲ್ಸ್‌’ಗೆ ಮತ್ತೊಂದು ದಾರುಣ ಘಟನೆ ಸೇರ್ಪಡೆಯಾಗಿದೆ. ಆರೋಪಿ ಪರಾರಿಯಾಗಿದ್ದು, ಎಸ್‌ಟಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -
- Advertisement -

ದಲಿತ ಯುವತಿಯನ್ನು ಪ್ರೀತಿಸಿ ಆನಂತರ ಮದುವೆಯಾಗಲು ನಿರಾಕರಿಸಿದ ಸವರ್ಣೀಯ ಯುವಕನೊಬ್ಬ ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ. ಹತ್ಯೆಗೊಳಗಾದ ಯುವತಿಯನ್ನು ದಾನೇಶ್ವರಿ (23) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾನೇಶ್ವರಿಯ ತಂಗಿ ತೇಜೇಶ್ವರಿ ನೀಡಿದ ದೂರಿನ ಆಧಾರದ ಮೇಲೆ ಪರಾರಿಯಾಗಿರುವ ಶಿವಕುಮಾರ್ ಚಂದ್ರಶೇಖರ್ ಹಿರೇಹಾಳ ಎಂಬ ಯುವಕನ ಮೇಲೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಲಿಂಗಾಯತ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂದು ತಿಳಿದುಬಂದಿದೆ.

ಹತ್ಯೆಗೊಳಗಾದ ದಾನೇಶ್ವರಿ ಮತ್ತು ಆರೋಪಿ ಶಿವಕುಮಾರ್ ಇಬ್ಬರು ವಿಜಯಪುರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿದ ನಂತರ ಅವರಿಬ್ಬರೂ ಒಟ್ಟಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ವೇಳೆ ಆರೋಪಿ ಶಿವಕುಮಾರ್ ಮದುವೆಯಾಗುವುದಾಗಿ ದಾನೇಶ್ವರಿಗೆ ಮಾತು ಕೊಟ್ಟಿದ್ದ ಎಂದು ಆಕೆಯ ತಂಗಿ ಪೊಲೀಸರಿಗೆ ತಿಳಿಸಿದ್ದಾರೆ.

ದಾನೇಶ್ವರಿಯು ಮದುವೆ ವಿಚಾರವನ್ನು ಶಿವಕುಮಾರ್ ಬಳಿ ಮಾತನಾಡಿದಾಗ ಆತ ತನ್ನ ಪೋಷಕರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದ. ವಿಜಯಪುರಕ್ಕೆ ಹೋಗಿ ಬಂದ ಬಳಿಕ ನಿನ್ನನ್ನು ಮದುವೆಯಾಗುವುದಿಲ್ಲ, ನಮ್ಮ ಮನೆಯವರು ಮದುವೆಗೆ ಒಪ್ಪಿಲ್ಲ, ಏಕೆಂದರೆ ನೀನು ಕೆಳಜಾತಿಗೆ ಸೇರಿರುವೆ ಎಂದು ನಿಂದಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾರ್ಚ್ 15 ರಂದು ದಾನೇಶ್ವರಿಯು ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿದಾಗಲೂ ನೀನು ಕೆಳಜಾತಿ ಎಂದು ಜಾತಿನಿಂದನೆ ಮಾಡಿ ಹೀಯಾಳಿಸಿದ್ದ. ಅಲ್ಲದೆ ಈಗ ಮಾತನಾಡಲು ಸಾಧ್ಯವಿಲ್ಲ ಎಂದು ಯಾರು ಇಲ್ಲದ ಜಾಗಕ್ಕೆ ದಾನೇಶ್ವರಿಯನ್ನು ಕರೆಸಿಕೊಂಡು ಶಿವಕುಮಾರ್ ಮತ್ತು ಆತನ ಸ್ನೇಹಿತರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆ ದಾನೇಶ್ವರಿಯನ್ನು ಆಸ್ಪತ್ರೆಗೆ ಸೇರಿಸಿ ಆರೋಪಿ ಶಿವಕುಮಾರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು ಆತನ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇನ್ನು ಯಾವುದೇ ಬಂಧನವಾಗಿಲ್ಲ.

ಮದುವೆ ವಿಚಾರವಾಗಿ ದಾನೇಶ್ವರಿ ಹಾಗೂ ಶಿವಕುಮಾರ್‌ ನಡುವೆ ಗಲಾಟೆಯಾಗಿತ್ತು. ಈ ವೇಳೆ ಮೂವರು ಯುವಕರು ಹಿಂದಿನಿಂದ ಬಂದು ದಾನೇಶ್ವರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗಾಯಗೊಂಡ ದಾನೇಶ್ವರಿಯವರನ್ನು ಕೂಡ್ಲು ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ದಾನೇಶ್ವರಿ ಮೃತಪಟ್ಟಿದ್ದಾರೆ.

“ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಹುಡುಗ ಬಾದಾಮಿ ಮೂಲದವನೆಂದು ತಿಳಿದುಬಂದಿದೆ. ಅವನು ವಾಸವಿದ್ದ ರೂಮಿಗೆ ಭೇಟಿ ನೀಡಿದಾಗ ಹುಡುಗ ತಲೆಮರೆಸಿಕೊಂಡಿದ್ದು, ಅವನ ಹುಡುಕಾಟ ನಡೆಯುತ್ತಿದೆ” ಎಂದು ಎಸಿಪಿ ರಮೇಶ್‌ ತಿಳಿಸಿರುವುದಾಗಿ ‘ಈ ದಿನ’ ಮಾಧ್ಯಮ ವರದಿ ಮಾಡಿದೆ.

ಯುವತಿಯ ತಂದೆ ಅಶೋಕ್ ಶರ್ಮ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ದಾನೇಶ್ವರಿಗೆ ಮದುವೆ ಮಾಡಲು ನಾವು ಸಿದ್ಧತೆಯಲ್ಲಿದ್ದೆವು. ಆದರೆ ಈ ವೇಳೆ ತನ್ನ ಪ್ರೇಮದ ವಿಚಾರ ನಮಗೆ ತಿಳಿಸಿದ್ದಳು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿಸಿದ್ದಾರೆ. ನಾನು ಅವನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಆದರೆ ಅವನು ಒಪ್ಪಿರಲಿಲ್ಲ. ಮದುವೆಯಾಗಲು ಕೇಳಿದಾಗ ಜಾತಿ ವಿಚಾರ ಹೇಳಿದ್ದಾನೆ. ನಿನ್ನ ಮದುವೆಯಾದರೆ ನನ್ನ ತಂದೆ ತಾಯಿ ಮನೆಗೆ ಸೇರಿಸುವುದಿಲ್ಲ ಎಂದು ಹೇಳಿರುವುದಾಗಿ ಮಗಳು ತಿಳಿಸಿದ್ದಳು” ಎಂದಿದ್ದಾರೆ.

“ನಮ್ಮ ಮಗಳು ಕೆಲಸಕ್ಕೆ ಸೇರಲು ಕೋರ್ಸ್ ಮಾಡುತ್ತಿದ್ದಳು. ಹೀಗಾಗಿ ಬಿಟಿಎಂ ಲೇಔಟ್‌ನ ಪಿಜಿಯಲ್ಲಿ ವಾಸವಿದ್ದಳು. ಇದೇ ತಿಂಗಳ 16ರಂದು ರಾತ್ರಿ ಈ ಘಟನೆ ವಿಚಾರ ನಮಗೆ ತಿಳಿಯಿತು. ಕೂಡಲೇ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ದುಡ್ಡು ಕೂಡ ಹಾಕಿದ್ದೆ. ಹುಡುಗಿಯೇ ಪೆಟ್ರೋಲ್ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಶಿವಕುಮಾರನು ಮುಖ್ಯ ರಸ್ತೆಯ ಖಾಲಿ ಜಾಗದಲ್ಲಿ ಪೆಟ್ರೋಲ್ ಹಾಕಿದ್ದಾನೆ. ಅವನೇ ಬಂದು ಆಸ್ಪತ್ರೆಗೆ ಸೇರಿಸಿ ನಮ್ಮ ನಂಬರ್‌ ಕೊಟ್ಟಿದ್ದಾನೆ” ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.


ಇದನ್ನೂ ಓದಿ; ‘ಗುಜರಾತ್‌ ಫೈಲ್ಸ್‌’ ಸಿನಿಮಾ ಮಾಡುವೆ, ಪಿಎಂ ಸಹಕರಿಸಬೇಕು: ವಿನೋದ್ ಕಾಪ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ರೀ ಪೊಲೀಸರೇ ಸವರ್ಣಿ ಹುಡುಗನ ಕಡೆ ಸಪೋರ್ಟ್ ಮಾಡಿತ್ತಿರ ನೀವು ಯಾವತ್ತು ಉದ್ದಾರ ಆಗಲ್ಲ ಏಕೆಂದರೆ ಹುಡುಗಿಯೇ ಪೆಟ್ರೋಲ್ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಹೇಳುತ್ತಿರಲ್ಲ ನಿಮಗೆ ಮಾನಮರ್ಯಾದೆ ಇಲ್ಲವ

  2. ಯಾಕೆಂದರೆ ಪೋಲೀಸರು ಮತ್ತು ಯಾವುದೇ ಅಧಿಕಾರಿ ವರ್ಗ ಬಲಿಷ್ಠರ ಅಥವಾ ಮೇಲ್ವರ್ಗದವರ ಪರವಾಗಿ ತಾನೆ ಕೆಲಸ ಮಾಡುವುದು

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...