“ಟಿಪ್ಪುವನ್ನು ಕೊಂದದ್ದು ಉರಿಗೌಡ, ನಂಜೇಗೌಡ ಎಂಬುದು ಕಾಲ್ಪನಿಕ ಎನ್ನುವವರು ಕ್ಷಮೆಯಾಚಿಸಬೇಕು” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಉರಿಗೌಡ, ನಂಜೇಗೌಡ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಭಾನುವಾರ ಪ್ರತಿಕ್ರಿಯಿಸಿ, “ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿರುವವರಿಗೆ ತಿಳಿಹೇಳಲಾಗಿದೆ. ಸಿ.ಟಿ.ರವಿ ಇರಬಹುದು, ಅಶ್ವತ್ಥ ನಾರಾಯಣ ಇರಬಹುದು, ಗೋಪಾಲಯ್ಯ ಇರಬಹುದು. ಇವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಸರಿಯಾಗಿ ಮನದಟ್ಟು ಮಾಡಿಕೊಟ್ಟಿದ್ದರಿಂದ ಸುಮ್ಮನಾಗುತ್ತಾರೆಂದು ಭಾವಿಸುತ್ತೇನೆ” ಎಂದಿದ್ದರು.
ಮುಂದುವರಿದು ಶ್ರೀಗಳು, “ಕಲ್ಪನೆ ಮಾಡಿಕೊಂಡು ಬರೆಯುವಂತಹದ್ದು ಕಾದಂಬರಿಯಾಗುತ್ತದೆ. ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಬರೆದಿರುವಂತಹದ್ದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂಥಹದ್ದು ಯಾವುದು ಕೂಡ ಇಲ್ಲಿಯವರೆಗೂ ಕಂಡುಬಂದಿಲ್ಲ. ಹೀಗಾಗಿ ಇಂತಹ ಹೇಳಿಕೆಗಳ ಮೂಲಕ ಯುವಕರಲ್ಲಿ, ಸಮಕಾಲೀನ ಜಗತ್ತಿನಲ್ಲಿ ಗೊಂದಲ ಸೃಷ್ಟಿ ಮಾಡಿ ಶಕ್ತಿಯನ್ನು ಹಾಳು ಮಾಡಬಾರದು, ಸಮುದಾಯಕ್ಕೆ ಧಕ್ಕೆಯನ್ನು ಉಂಟುಮಾಡಬಾರದು” ಎಂದು ತಿಳಿಸಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಸಿ.ಟಿ.ರವಿ ಹೇಳಿಕೆಯನ್ನು ನೀಡಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಂಗಳವಾರ ಮಾತನಾಡಿದ ಅವರು, “ಟಿಪ್ಪು ಕೊಂದಿದ್ದ ಉರಿಗೌಡ ನಂಜೇಗೌಡರ ದಾಖಲೆ ಸಂಗ್ರಹ ಮಾಡ್ತಿದ್ದೇವೆ. ಶೀಘ್ರದಲ್ಲೇ ಆದಿಚುಂಚನಗಿರಿ ಶ್ರೀಗಳ ಮುಂದೆ ದಾಖಲೆ ಇಟ್ಟು ಅವರಿಗೆ ಸತ್ಯ ಮನವರಿಕೆ ಮಾಡುತ್ತೇವೆ” ಎಂದಿದ್ದಾರೆ.
“ಉರಿಗೌಡ ಮತ್ತು ನಂಜೇಗೌಡ ಅವರು ಕಾಲ್ಪನಿಕ ಪಾತ್ರಗಳಲ್ಲ, ಸತ್ಯದ ಪಾತ್ರಗಳು ಎಂದು ದೇ. ಜವರೇಗೌಡರು ಸುವರ್ಣ ಮಂಡ್ಯ ಪುಸ್ತಕದಲ್ಲಿ ದಾಖಲಸಿದ್ದಾರೆ. ಸುಳ್ಳು ಅಂತ ಹೇಳಿದೋರು, ಕಾಲ್ಪನಿಕ ಅನ್ನೋರು ಕ್ಷಮೆ ಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಟಿಪ್ಪು ಕೊಂದಿದ್ದಕ್ಕೆ ದಾಖಲೆ ಏನಿದೆ ಅಂತ ಹೊಸ ವರಸೆ ತೆಗೆದಿದ್ದಾರೆ. ಇದು ಸಂಶೋಧನೆ ಆಗಬೇಕಾಗಿರುವ ವಿಷಯ. ಟಿಪ್ಪು ಕೊಂದವರು ಯಾರು. ಟಿಪ್ಪು ಕೊಂದವರು ಅಪರಿಚಿತರು ಅಂತಾರೆ. ನಾವು ಅಪರಿಚಿತರಲ್ಲ ಅಂತ ಹೇಳಿದಿವಿ. ಉರಿಗೌಡ, ನಂಜೇಗೌಡರನ್ನ ಇವತ್ತಿನವರೆಗೂ ಇವರೆ ಸೃಷ್ಟಿ ಮಾಡಿದ್ದಾರೆ ಅಂತ ಹೇಳ್ಕೊಂಡು ಬಂದಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ನನ್ನ ಜೊತೆ ಮಾತಾಡಿದ್ದಾರೆ. ಸ್ವಾಮೀಜಿಗಳ ಮಾತಿಗೆ ನಾವು ಗೌರವ ಕೊಡುತ್ತೇವೆ. ಸ್ವಾಮೀಜಿ ಅವರಿಗೆ ವಾಸ್ತವಿಕ ಸತ್ಯವನ್ನ ಮನವರಿಕೆ ಮಾಡಿಕೊಡುತ್ತೇವೆ. ಖಂಡಿತ ದಾಖಲೆ ತಗೊಂಡು ಹೋಗುತ್ತೇವೆ. ಸದ್ಯ ದಾಖಲೆ ಸಂಗ್ರಹಿಸೊ ಕೆಲಸ ಮಾಡ್ತಿದ್ದೇವೆ. ಆ ದಾಖಲೆ ಮುಂದಿಟ್ಟುಕೊಂಡು ಸ್ವಾಮೀಜಿ ಬಳಿ ಚರ್ಚೆ ಮಾಡುತ್ತೇವೆ. ಸ್ವಾಮೀಜಿ ಅವರ ಬಗ್ಗೆ ಶ್ರದ್ದೆ ಗೌರವ ನಮಗೆ ಇದೆ” ಎಂದಿದ್ದಾರೆ.
ಇದನ್ನೂ ಓದಿರಿ: ನಿಲ್ಲದ ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನ; ಸ್ವಾಮೀಜಿ ಮಾತಿಗೆ ಕವಡೆ ಕಿಮ್ಮತ್ತೂ ನೀಡದ ರಂಗಾಯಣ
“ಟಿಪ್ಪು ಮತ್ತು ಉರಿಗೌಡ ನಂಜೇಗೌಡರ ಚರ್ಚೆ ಮುಂದುವರೆಸುತ್ತೇವೆ. ನನನ್ನು ಯಾರಿಗೆ ಬೇಕಾದರೂ ಹೋಲಿಕೆ ಮಾಡಿ, ಐಲೆಟ್ ಮಾಡಿ, ನನಗೆ ಹೆಮ್ಮೆ ಇದೆ. ಉರಿಗೌಡ ನಂಜೇಗೌಡ ಅವರು ಮೈಸೂರು ಸಂಸ್ಥಾನಕ್ಕೆ ನಿಷ್ಠಾವಂತರಾಗಿದ್ದರು. ಅನ್ನೋದಕ್ಕೆ ಹೆಮ್ಮೆ ಇದೆ. ಚುನಾವಣೆ ಇರುವುದರಿಂದ ಉರಿಗೌಡ, ನಂಜೇಗೌಡ ವಿಚಾರ ಬೇರೆ ಬೇರೆ ತಿರುವು ಪಡೆಯುತ್ತಿದೆ. ಆ ರೀತಿ ಆಗಬಾರದು ಅನ್ನೋ ದೃಷ್ಟಿಯಿಂದ ಸ್ವಾಮೀಜಿಗಳು ತಿಳಿ ಹೇಳಿದ್ದಾರೆ” ಎಂದಿದ್ದಾರೆ.
“ಆದಿಚುಂಚನಗಿರಿ ಸ್ವಾಮೀಜಿಯವರಲ್ಲಿ ಎಚ್ಡಿ ಕುಮಾರಸ್ವಾಮಿ ಕ್ಷಮೆಯಾಚಿಸಬೇಕು. ಕುಮಾರಸ್ವಾಮಿಯವರು ಸ್ವಾಮೀಜಿ ಅಪಮಾನ ಮಾಡಿದ್ದಾರೆ, ಅಗೌರವ ತೋರಿದ್ದಾರೆ. ವಾಸ್ತವವಾಗಿ ಟಿಪ್ಪು ಸುಲ್ತಾನ್ ಸ್ವಾತಂತ್ರ ಹೋರಾಟಗಾರ ಅಲ್ಲ. ಮೈಸೂರು ಸಂಸ್ಥಾನಕ್ಕೆ ಮೋಸ ಮಾಡಿದವನು ಅಂತ ಬಿಂಬಿಸಬೇಕಿತ್ತು. ವ್ಯಾಪಾರದ ನೆಪದಲ್ಲಿ ಬಂದಿದ್ದು ಅಂತ ಬ್ರಿಟಿಷರನ್ನ ಚಿತ್ರೀಕರಿಸಿದ್ವಿ. ಹಾಗೆ ಕೂಲಿ ಹಾಗೆ ಬಂದವನು ಮೋಸದಿಂದ ಮೈಸೂರು ಸಂಸ್ಥಾನವನ್ನೆ ಕಬಳಿಸಿದ ಅಂತ ನಾವು ಎಲ್ಲಿ ಹೇಳಿದಿವಿ” ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.