Homeಮುಖಪುಟಶಿವಮೊಗ್ಗ: ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂಬ ಫ್ಲೆಕ್ಸ್ ಹಾಕಿದ ಬಿಜೆಪಿಯ ಆಯನೂರು ಮಂಜುನಾಥ್!

ಶಿವಮೊಗ್ಗ: ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂಬ ಫ್ಲೆಕ್ಸ್ ಹಾಕಿದ ಬಿಜೆಪಿಯ ಆಯನೂರು ಮಂಜುನಾಥ್!

ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಅವರನ್ನು ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿಬೀಳುತ್ತಾರೊ ಅವರಿಗೆ ಉರಿಗೌಡ ಅನ್ನಿ.

- Advertisement -
- Advertisement -

‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ. ಮುರಿದ ಮನಸ್ಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ–ಸೌಹಾರ್ದತೆ ನೆಲೆಸಲಿ’ ಇದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಯನೂರು ಮಂಜುನಾಥ್‌ರವರು ಯುಗಾದಿ ಹಾಗೂ ರಂಜಾನ್‌ಗೆ ಶುಭಕೋರಿ ಶಿವಮೊಗ್ಗ ನಗರದಾದ್ಯಂತ ಹಾಕಿರುವ ಫ್ಲೆಕ್ಸ್‌ಗಳಲ್ಲಿನ ಬರಹಗಳು. ಕೋಮು ಪ್ರಚೋದನಾಕಾರಿ ಹೇಳಿಕೆಗಳಲ್ಲಿ ಕುಖ್ಯಾತಿ ಪಡೆದಿರುವ ಮಾಜಿ ಸಚಿವ, ಹಾಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಚ್ ಈಶ್ವರಪ್ಪನವರ ಕುರಿತು ಇರುವ ಹೇಳಿಕೆಯಾಗಿದೆ ಎಂಬ ಚರ್ಚೆ ಆರಂಭವಾಗಿದೆ.

ಆಯನೂರು ಮಂಜುನಾಥ್‌ ಇದ್ದಕ್ಕಿದ್ದಂತೆ ಹೀಗೆಕೆ ಆದರು ಎಂಬುದನ್ನು ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಪೈಪೋಟಿಯನ್ನು ಗಮನಿಸಿದರೆ ಉತ್ತರ ಸಿಗುತ್ತದೆ.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಆಕಾಂಕ್ಷಿಗಳ ಸರದಿ ಸಾಲು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ದಿನ ಕಳೆದಂತೆ ಬೆಳೆಯುತ್ತಲೇ ಇದೆ. ಯಾರಿಗೆ ಟಿಕೆಟ್ ಸಿಗಬಹುದೆಂದು ಸಣ್ಣದೊಂದು ಊಹೆ ಕೂಡ ಮಾಡಲಾಗದಷ್ಟು ಗೊಂದಲ ಎರಡೂ ಪಕ್ಷದಲ್ಲಿದೆ. ಸ್ಥಳೀಯ ಹಿಂದುತ್ವ ಸಂಘಟನೆ ಹಾಗು ಬಿಜೆಪಿಯ ಒಂದು ವರ್ಗಕ್ಕೆ ಈಶ್ವರಪ್ಪರ ಬಗ್ಗೆ ಅಸಮಧಾನ-ಆಕ್ರೋಶವಿದೆ; ಈಶ್ವರಪ್ಪರ ವಿಚಿತ್ರ ಮ್ಯಾನರಿಸಂ ಮತ್ತು ಅಸಂಬದ್ಧ ಮಾತುಗಾರಿಕೆಯಿಂದ ಸಂಘ ಪರಿವಾರಕ್ಕೂ ಮುಜುಗರ ಆಗುತ್ತಿದೆ ಎಂಬ ಸುದ್ದಿಗಳು ತೇಲಾಡುತ್ತಿದೆ. 2008-2013ರ ಅವಧಿಯಲ್ಲಿ ಮಂತ್ರಿಯಾಗಿದ್ದಾಗ ಪೊಲೀಸರಿಗೆ ನೋಟು ಎಣಿಸುವ ಯಂತ್ರ ಈಶ್ವರಪ್ಪ ಮನೆಯಲ್ಲಿ ಸಿಕ್ಕಿದ್ದು, ಈಗ ಬಂದಿರುವ 40 ಪರ್ಸೆಂಟ್ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಈಚೆಗೆ ಹತ್ಯೆಗೀಡಾದ ಹಿಂದುತ್ವದ ಸಂಘಟನೆಯಲ್ಲಿದ್ದ ಹುಡುಗ ಹರ್ಷನ ಕೊಲೆ ಮತ್ತು ಆನಂತರ ಕೇಸರಿ ಪಡೆಯಲ್ಲಿ ಸ್ಥಳೀಯ ನಾಯಕತ್ವದ ಬಗ್ಗೆ ಮೂಡಿರುವ ಅನುಮಾನ, ಹರ್ಷನ ಅಕ್ಕ ಈಶ್ವರಪ್ಪ ಬಗ್ಗೆ ಅಸಮಾಧಾನದಿಂದ ಮಾತನಾಡುತ್ತಿರುವುದು ಮತ್ತು 2023ರ ಚುನಾವಣೆ ಹೊತ್ತಲ್ಲಿ ಈಶ್ವರಪ್ಪರಿಗೆ 74 ವರ್ಷ ವಯಸ್ಸಾಗುವುದರಿಂದ ಅವರಿಗೆ ಟಿಕೆಟ್ ಸಿಗಲಾರದೆಂಬ ಲೆಕ್ಕಾಚಾರದ ಚರ್ಚೆ ಬಿಜೆಪಿಯಲ್ಲಿ ಬಿರುಸಾಗಿದೆ.

ಈಶ್ವರಪ್ಪ ಸುಲಭಕ್ಕೆ ಸೀಟು ಬಿಟ್ಟು ಕೊಡುವ ಪೈಕಿಯಲ್ಲ; ತಮ್ಮ ವ್ಯವಹಾರವನ್ನೆಲ್ಲ ನೋಡಿಕೊಳ್ಳುತ್ತಿರುವ-ಜಿಪಂ ಸದಸ್ಯನಾಗಿದ್ದ ಮಗ ಕಾಂತೇಶ್‌ಗೆ ಟಿಕೆಟ್ ಕೇಳುತ್ತಿದ್ದಾರೆ. ಯಡಿಯೂರಪ್ಪರ ಮಗನಿಗೆ ಶಿಕಾರಿಪುರದಲ್ಲಿ ಅವಕಾಶ ಕೊಡುವುದಾದರೆ ತನ್ನ ಮಗನಿಗೇಕೆ ಶಿವಮೊಗ್ಗದಲ್ಲಿ ಟಿಕೆಟ್ ಕೊಡಬಾರದೆಂಬ ವಾದ ಈಶ್ವರಪ್ಪರದು ಎನ್ನಲಾಗುತ್ತಿದೆ. ಯಡಿಯೂರಪ್ಪರಿಗೆ ತಮ್ಮ ಸ್ವಜಾತಿ ಪರಮಾಪ್ತ ರುದ್ರೇಗೌಡರನ್ನು ಅಭ್ಯರ್ಥಿ ಮಾಡುವ ಮನಸ್ಸಿದೆಯಾದರೂ ಅವರಿಗೆ ವಯಸ್ಸಾಗಿರುವುದರಿಂದ ಕಷ್ಟವೆಂಬ ಮಾತಿದೆ. ಸೂಡಾದ ಅಧ್ಯಕ್ಷರಾಗಿದ್ದ ಲಿಂಗಾಯತ ಸಮುದಾಯದ ಜ್ಯೋತಿ ಪ್ರಕಾಶ್ ಹೆಸರು ಕೇಳಿಬರುತ್ತಿದೆ. ಎಮ್ ಆಯನೂರು ಮಂಜುನಾಥ್ ತನಗಿದು ಕೊನೆಯ ಅವಕಾಶ ಟಿಕೆಟ್ ಕೊಡಿಯೆಂದು ಸಂಘ ಶ್ರೇಷ್ಠರಿಗೆ ದುಂಬಾಲು ಬಿದ್ದಿದ್ದಾರಂತೆ.

ಈ ಬಾರಿ ಬ್ರಾಹ್ಮಣ ಸಮುದಾಯ ಬಿಜೆಪಿ ಟಿಕೆಟ್‌ಗೆ ಗಂಭೀರ ಪ್ರಯತ್ನ ಮಾಡುತ್ತಿದೆ; ಮಾಜಿ ಎಮ್ಮೆಲ್ಸಿ ಭಾನುಪ್ರಕಾಶ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ದತ್ತಾತ್ರಿ ಮತ್ತು ಸ್ಥಳೀಯ ಹಿಂದು ಮಹಾ ಸಭಾದ ಅಧ್ಯಕ್ಷ ನಟರಾಜ ಭಾಗ್ವತ್ ಎಮ್ಮೆಲ್ಲೆ ಆಗುವ ಕನಸು ಕಾಣುತ್ತಿದ್ದಾರೆ ಎಂಬುದು ಶಿವಮೊಗ್ಗೆಯಲ್ಲಿ ಬಹಿರಂಗ ರಹಸ್ಯ. ಯಡಿಯೂರಪ್ಪ ವಿರೋಧಿ ಕ್ಯಾಂಪಿನ ಭಾನುಪ್ರಕಾಶ್ ತನಗಲ್ಲದಿದ್ದರು ತಮ್ಮ ಮಗನಿಗಾದರು ಟಿಕೆಟ್ ಕೊಡುವಂತೆ ಕೇಳುತ್ತಿದ್ದಾರಂತೆ. ಆರ್‌ಎಸ್‌ಎಸ್ ಹಿನ್ನೆಲೆಯ ಈ ಮೂವರಿಗೆ ತಮ್ಮಲ್ಲಿ ಯಾರು ಸಂಘ ಸರದಾರರ ನೆಚ್ಚಿನ ಕಪ್ಪು ಕುದುರೆ ಆಗಬಹುದೆಂಬುದು ಅರ್ಥವಾಗದೆ ಗೊಂದಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

ಗರದ ಹೆಸರಾಂತ ವೈದ್ಯ ಡಾ.ಧನಂಜಯ್ ಸರ್ಜಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಪ್ರಯತ್ನದಲ್ಲಿದ್ದಾರೆಂಬ ಸುದ್ದಿ ಸದ್ದು ಮಾಡುತ್ತಿರುವುದು ಕುತೂಹಲಕ್ಕೆಡೆಮಾಡಿದೆ. ಮಾಜಿ ಶಾಸಕ ಪ್ರಸನ್ನಕುಮಾರ್ ಸೋತರೂ ಜನರ ನಡುವಿದ್ದಾರೆ. ಆದರೆ ಬಿಜೆಪಿ ಕಡೆಗೆ ಹೋಗುವ ಸ್ವಜಾತಿ ಮತ ಸೆಳೆಲು ಪ್ರಸನ್ನಕುಮಾರ್‌ರಿಂದ ಆಗದಿರುವುದರಿಂದ ಲಿಂಗಾಯತ ಅಥವಾ ಕುರುಬ ಸಮುದಾಯದವರಿಗೆ ಅವಕಾಶ ಕೊಟ್ಟರೆ ಗೆಲ್ಲುವ ಸಂಭವವಿದೆ ಎಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆದಿದೆಯೆನ್ನಲಾಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಕಾರ್ಪೊರೆಟ್ ಎಚ್.ಸಿ.ಯೋಗೀಶ್ ಮತ್ತು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಸೋತಿರುವ ದಿನೇಶ್ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ದಿನೇಶ್ ಬೆನ್ನಿಗೆ ಲಿಂಗಾಯತ ಪಂಗಡದ ಪ್ರಭಾವಿ ಮುಖಂಡ ಶಾಮನೂರು ಶಿವಶಂಕರಪ್ಪನವರಿದ್ದರೆ ಯೋಗೀಶ್‌ಗೆ ಮಾಜಿ ಶಾಸಕ ಚಂದ್ರಶೇಖರಪ್ಪರ ಮಗನೆಂಬುದೆ ಬಲ ಎನ್ನಲಾಗುತ್ತಿದೆ.

ಈ ನಡುವೆ ಲಿಂಗಾಯತರ ಅನುಕಂಪ ಪಡೆದಿರುವ ಆಯನೂರು ಮಂಜುನಾಥರನ್ನು ಬಿಜೆಪಿಯಿಂದ ಕರೆತಂದು ಅಖಾಡಕ್ಕಿಸುವ ಪ್ರಯತ್ನ ಕಾಂಗ್ರೆಸ್‌ನ ಒಂದು ಒಂದು ವರ್ಗ ಮಾಡುತ್ತಿದೆ. ಮತ್ತೊಂದೆಡೆ ಎರಡು ಸಲ ಅಸೆಂಬ್ಲಿಗೆ ಸ್ಪರ್ಧಿಸಿದಾಗ 19-21 ಸಾವಿರದಷ್ಟು ಮತ ಪಡೆದ ಕುರುಬ ಜನಾಂಗದ ಜನಬಳಕೆ ಮುಖಂಡ ಎಂ.ಶ್ರೀಕಾಂತ್‌ರನ್ನು ಜೆಡಿಎಸ್‌ನಿಂದ ಸೆಳೆಯುವ ಕಾರ್ಯಾಚರಣೆ ಆಗುತ್ತಿದೆ ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ಸಿಗೆ ಈಶ್ವರಪ್ಪರ ಸಂಪನ್ಮೂಲ ಮತ್ತು ಸಂಘ ಪರಿವಾರದ ಅಕ್ರಮಣಕಾರಿ ಹಿಂದುತ್ವ ಕೌಂಟರ್ ಮಾಡುವ ’ಗಟ್ಟಿ’ ಅಭ್ಯರ್ಥಿ ಬೇಕಾಗಿದೆ ಎಂದು ಆ ಪಕ್ಷದ ಕಾರ್ಯಕರ್ತರು ಹೇಳುತ್ತಾರೆ.

ಈಶ್ವರಪ್ಪರಿಗೆ ಬಿಜೆಪಿ ಟಿಕೆಟ್ ಸಿಗುವುದು ಅನುಮಾನ; ಈಗಿನ ಸ್ಥಿತಿಯಲ್ಲಿ ಅವರು ಗೆಲ್ಲುವುದೂ ಕಷ್ಟ; ಮತದಾರರಿಗೂ ಬಿಜೆಪಿ ನಾಯಕರು ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವ ಹಿಂದುತ್ವದಿಂದ ರೋಸಿಹೋಗಿದೆ. ಈ ನಡುವೆ ಆಯನೂರು ಮಂಜುನಾಥ್‌ರವರ ಫ್ಲೆಕ್ಸ್‌ಗಳು ಹೊರಬಿದ್ದಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಯನೂರು ಮಂಜುನಾಥ್, “ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಬಹುವಚನ ಬಳಸಲಾಗಿದೆ. ಹೀಗಾಗಿ ಆ ಮಾತನ್ನು ಈಶ್ವರಪ್ಪ ಒಬ್ಬರಿಗೇ ಅನ್ವಯಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾರ್ಥನೆ ಮಾಡಲು ಮುಂದಾಗುವವರಿಗೂ ಅದು ಅನ್ವಯಿಸುತ್ತದೆ. ಆದರೆ ‘ಯಾವುದೋ ಧರ್ಮದ ದೇವರು ಕಿವುಡನೇ, ಕುರುಡನೇ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮಾತಾಡುವುದು ಬೇಡ. ಅವರೊಬ್ಬ ಪ್ರಬುದ್ಧ ರಾಜಕಾರಣಿ. ಜವಾಬ್ದಾರಿಯಿಂದ ಮಾತಾಡಬೇಕು ಎಂಬ ನಿರೀಕ್ಷೆ ನನಗೂ ಇದೆ’ ಎಂದಿದ್ದಾರೆ.

‘ಬಿಜೆಪಿಗೆ ಧಕ್ಕೆ ಬರುವ ಯಾವುದೇ ಮಾತುಗಳನ್ನು ಯಾವುದೇ ನಾಯಕರು ಹೇಳಿದರೂ ಅದನ್ನು ಸ್ವೀಕಾರ ಮಾಡಬೇಕೆಂಬ ಬಲವಂತ ನಮಗೆ ಯಾರಿಗೂ ಇಲ್ಲ. ಸಂಘಟನೆಯ ಹಿತದೃಷ್ಟಿಯಿಂದ ನೀವು (ಈಶ್ವರಪ್ಪ) ಹೀಗೆ ಮಾತಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ಮಾತಾಡಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಈಶ್ವರಪ್ಪ ಹಾಗೆ ಮಾತಾಡಿದ್ದರೆ ತಿದ್ದಿಕೊಳ್ಳುವುದು ಒಳ್ಳೆಯದು. ಸಣ್ಣ ಘಟನೆ ನಡೆದರೂ ಶಿವಮೊಗ್ಗದಲ್ಲಿ ಏನಾಗುತ್ತದೆ ಎಂಬುದು ಊಹಿಸಿಕೊಳ್ಳಲಿ’ ಎಂದು ಕಿವಿಮಾತು ಎಂದು ಆಯನೂರು ಮಂಜುನಾಥ್‌ ತಿಳಿಸಿದ್ದಾರೆ.

ಬಿಜೆಪಿ ಬಿಡುತ್ತೀರಾ ಎಂಬ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿರುವ ಅವರು, ಮದುವೆಗೆ ನಿಮ್ಮ ಮನೆಯಲ್ಲಿ ಹೆಣ್ಣು ಕೊಟ್ಟರೆ ನಾನೇಕೆ ಪಕ್ಕದ ಮನೆಗೆ ಹೋಗಲಿ ಎಂದು ತನಗೆ ಟಿಕೆಟ್ ಬೇಕೆ ಬೇಕು ಎಂದು ಹಠ ಮುಂದಿಟ್ಟಿದ್ದಾರೆ. ಈಶ್ವರಪ್ಪನವರು ತನ್ನ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಅವರ ಮಗ ಇನ್ನು ಚಿಕ್ಕವರು. ನಾವು ಕ್ಯೂನಲ್ಲಿ ಇಲ್ಲವೆ? ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಅವರನ್ನು ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿಬೀಳುತ್ತಾರೊ ಅವರಿಗೆ ಉರಿಗೌಡ ಅನ್ನಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ: ಮತೋನ್ಮತ್ತ ರಣಕಣದಿಂದ ಈಶ್ವರಪ್ಪ ಕಡ್ಡಾಯ ನಿವೃತ್ತಿ?!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...