ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರದ ಕುಸಿದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಶುಕ್ರವಾರ ಸಂಜೆ ಮತ್ತೊಂದು ಅಡಚಣೆ ಎದುರಾಗಿದ್ದು, ಸುರಂಗ ಕೊರೆಯುವಿಕೆಯನ್ನು ಸ್ಥಗಿತಗೊಳಿಸಲಾಗಿದೆ.
ಗುರುವಾರ ಸುರಂಗ ಕೊರೆಯುವ ಯಂತ್ರದ ಬಳಿ ಬಿರುಕು ಕಾಣಿಸಿಕೊಂಡು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಹಿರಿಯ ಅಧಿಕಾರಿಗಳು, ಕಾರ್ಯಾಚರಣೆ ಪುನರಾರಂಭಗೊಂಡಿದೆ. ರಕ್ಷಣಾ ತಂಡ ಕಾರ್ಮಿಕರು ಸಿಲುಕಿರುವ ಸ್ಥಳ ತಲುಪಲು ಇನ್ನು ಕೇವಲ 10-12 ಮೀಟರ್ ಬಾಕಿಯಿದೆ. ನಿನ್ನೆ(ನ.25) ಕಾರ್ಮಿಕರು ಹೊರ ಬರುವ ಸಾಧ್ಯತೆ ಇದೆ ಎಂದಿದ್ದರು. ಆದರೆ, ಶುಕ್ರವಾರ ಕೊರೆಯುವ ಯಂತ್ರಕ್ಕೆ ಲೋಹದ ವಸ್ತುಗಳು ಅಡ್ಡಿಯಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ಕೊರೆಯುವ ಯಂತ್ರ ಕುಸಿದು ಬಿದ್ದಿರುವ ಕಲ್ಲು, ಮಣ್ಣಿನ ಮೂಲಕ ಮುಂದಕ್ಕೆ ಸಾಗುತ್ತಿದ್ದಂತೆ ಆರು ಮೀಟರ್ ಉದ್ದದ ಉಕ್ಕಿನ ಪೈಪ್ಗಳನ್ನು ಅಳವಡಿಸಿಕೊಂಡು ಹೋಗುತ್ತದೆ. ರಕ್ಷಣಾ ತಂಡ ಒಂದು ಪೈಪ್ನಿಂದ ಮತ್ತೊಂದು ಪೈಪ್ ವೆಲ್ಡಿಂಗ್ ಹಾಕಿ ಯಂತ್ರದ ಮೂಲಕ ಕಳಿಸುತ್ತಿದ್ದಾರೆ. ಪೈಪ್ ಕಾರ್ಮಿಕರ ಬಳಿ ತಲುಪಿದ ಬಳಿಕ ಚಕ್ರದ ಸ್ಟ್ರೆಚರ್ಗಳನ್ನು ಬಳಸಿ ಪೈಪ್ ಮೂಲಕ ಕಾರ್ಮಿಕರನ್ನು ಹೊರ ತರಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ರಕ್ಷಣಾ ಕಾರ್ಯ ಕೊನೆಯ ಹಂತಕ್ಕೆ ತಲುಪುವ ವೇಳೆ ಎರಡು ಭಾರೀ ಅಡಚಣೆ ಎದುರಾಗಿದೆ. ಇದರಿಂದ ತಮ್ಮವರಿಗಾಗಿ ಸುರಂಗದ ಬಳಿ ಕಾಯುತ್ತಿರುವ ಕಾರ್ಮಿಕರ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ಕಾರ್ಮಿಕರು ಸುರಂಗದೊಳಗೆ ಸಿಲುಕಿ ಎರಡು ವಾರಗಳು ಕಳೆದಿದೆ. ಆದರೆ, ಅವರೆಲ್ಲರೂ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಕಾಶಿಯಿಂದ ಸುಮಾರು 30 ಕಿಮೀ ಮತ್ತು ಡೆಹ್ರಾಡೂನ್ನಿಂದ ಏಳು ಗಂಟೆಗಳ ಪ್ರಯಾಣದ ದೂರದಲ್ಲಿರುವ ಸಿಲ್ಕ್ಯಾರಾ ಸುರಂಗವು ಕೇಂದ್ರ ಸರ್ಕಾರದ ಚಾರ್ ಧಾಮ್ ಸರ್ವಋತು ರಸ್ತೆ ಯೋಜನೆಯ ಅವಿಭಾಜ್ಯ ಅಂಗವಾಗಿದೆ.
ಇದನ್ನೂ ಓದಿ : ರಾಜಸ್ಥಾನ ಚುನಾವಣೆ: ಮತಗಟ್ಟೆಗೆ ನುಗ್ಗಿ ಏಜೆಂಟರ ಮೇಲೆ ಹಲ್ಲೆ