ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ 17 ವರ್ಷದ ಬಾಲಕಿಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಿನ್ನೆ (ಭಾನುವಾರ) ಈ ಘಟನೆ ನಡೆದಿದ್ದು, ಅತ್ಯಾಚಾರ ಎಸಗಿ ಪರಾರಿಯಾಗಿರುವ ಆರೋಪಿಗಳಾದ ಶುಭಂ ಮತ್ತು ಆಶಿಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬಾಬು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯ ತಾಯಿ ಸಲ್ಲಿಸಿದ ದೂರಿನ ಪ್ರಕಾರ ಆರೋಪಿಗಳು ಬಾಲಕಿಗೆ ಹಣ್ಣು ನೀಡುವ ನೆಪದಲ್ಲಿ ಸೀಬೆಹಣ್ಣಿನ ಮರಗಳ ತೋಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ 1 ವರ್ಷ – ಸಂಪೂರ್ಣ ವಿವರ
ಅತ್ಯಾಚಾರ ಎಸಗಿದ ಅಪರಾಧದ ವಿಡಿಯೊವನ್ನು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಮುಜಾಫರ್ ನಗರದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇತ್ತ, ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ರಾಸ್ ಘಟನೆಗೆ ಸೆಪ್ಟೆಂಬರ್ 14 ರಂದು ಒಂದು ವರ್ಷವಾಗಿದೆ. 19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿ, ಮಾರಣಾತಿಂಕ ಹಲ್ಲೆ ನಡೆಸಿದ್ದರು. ಸಂತ್ರಸ್ತೆಗೆ ನ್ಯಾಯದಾನ ವಿಳಂಬವಾಗಿ, ಇಂದಿಗೂ ಸಂತ್ರಸ್ತೆಯ ಕುಟುಂಬ ಜೀವ ಭಯದಲ್ಲಿ ಬದುಕುತ್ತಿದೆ.
ಹತ್ರಾಸ್ ಆರೋಪಿಗಳನ್ನು ರಕ್ಷಿಸಲು “ರಾಷ್ಟ್ರೀಯ ಸವರ್ಣ ಪರಿಷತ್” ಎಂಬ ಸಂಘಟನೆ ಆರೋಪಿಗಳ ಬೆಂಬಲಕ್ಕೆ ನಿಂತಿತ್ತು. ಅಕ್ಟೋಬರ್ 4 ರಂದು ಬಿಜೆಪಿಯ ಮಾಜಿ ಶಾಸಕರಾದ ರಾಜವೀರ್ ಸಿಂಗ್ ಪೆಹೆಲ್ವಾನ್ ಆರೋಪಿಗಳನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದರು. ಈ ರ್ಯಾಲಿಯಲ್ಲಿ ನಾಲ್ವರು ಆರೋಪಿಗಳ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಜೊತೆಗೆ ಈ ಸಭೆಯಲ್ಲಿ ಆರ್ಎಸ್ಎಸ್, ಕರ್ಣಿ ಸೇನೆ ಮತ್ತು ಬಜರಂಗದಳದಂತಹ ಬಲಪಂಥೀಯ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಈ ಸದಸ್ಯರು ಕ್ಷತ್ರಿಯ ಮಹಾಸಭಾ, ರಾಷ್ಟ್ರೀಯ ಸವರ್ಣ ಸಂಘಟನೆ ಮುಂತಾದವುಗಳನ್ನು ಒಳಗೊಂಡಂತೆ ವಿವಿಧ ಮೇಲ್ಜಾತಿಯ ಸಂಘಟನೆಗಳ ಭಾಗವಾಗಿದ್ದರು.
ಇದನ್ನೂ ಓದಿ: 6 ವರ್ಷದ ಸೋದರ ಸೊಸೆ ಮೇಲೆ ನಿರಂತರ ಅತ್ಯಾಚಾರ – ಆರೋಪಿ ಬಂಧನ