Homeಕರ್ನಾಟಕವರುಣಾ: ಗೆಲುವಿನತ್ತ ಸಿದ್ದರಾಮಯ್ಯ; ಸೋಮಣ್ಣನಿಗೆ ಮುಖಭಂಗ

ವರುಣಾ: ಗೆಲುವಿನತ್ತ ಸಿದ್ದರಾಮಯ್ಯ; ಸೋಮಣ್ಣನಿಗೆ ಮುಖಭಂಗ

- Advertisement -
- Advertisement -

ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾದ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು 8,000 ಮತಗಳ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ.

ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ವಿ.ಸೋಮಣ್ಣನವರಿಗೆ ಎರಡು ಕ್ಷೇತ್ರದಲ್ಲೂ ಮುಖಭಂಗವಾಗಿದೆ. ಎರಡರಲ್ಲೂ ಹಿನ್ನಡೆ ಅನುಭವಿಸಿದ್ದಾರೆ.

ಲಿಂಗಾಯತ ಮತದಾರರು ಹೆಚ್ಚಿದ್ದಾರೆಂಬ ಕಾರಣಕ್ಕೆ ಎರಡು ಕ್ಷೇತ್ರಗಳಲ್ಲಿ ಸೋಮಣ್ಣನವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆದರೆ ಜಾತಿ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ವರುಣಾ ಮತದಾರರು ಗುರುತಿಸಿದ್ದಾರೆ. ಚಾಮರಾಜನಗರದಲ್ಲಿ ಪುಟ್ಟರಂಗಶೆಟ್ಟಿಯವರು ತಮ್ಮ ಪ್ರಾಬಲ್ಯವನ್ನು ಮತ್ತೆ ತೋರಿಸಿದ್ದು ಸತತ ನಾಲ್ಕನೇ ಬಾರಿಗೆ ಗೆಲುವಿನತ್ತ ದಾಪುಗಾಲು ಇರಿಸಿದ್ದಾರೆ.

ಸೋಮಣ್ಣನವರು ಕಾಂಗ್ರೆಸ್‌ಗೆ ಸೇರುತ್ತಾರೆಂಬ ಸುದ್ದಿ ಹಬ್ಬಿತ್ತು. ಆದರೆ ಕೊನೆಯಲ್ಲಿ ಬಿಜೆಪಿಯಲ್ಲೇ ಉಳಿದರು. ಪನಿಷ್‌ಮೆಂಟ್‌ ಎಂಬಂತೆ ವರುಣಾ ಮತ್ತು ಚಾಮರಾಜನಗರಕ್ಕೆ ನಿಲ್ಲಿಸಿದ ಬಿಜೆಪಿ ಹೈಕಮಾಂಡ್‌ – ಸೋಮಣ್ಣನವರ ರಾಜಕೀಯಕ್ಕೆ ಮುಳುವಾಗಿದೆ.

ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯನವರನ್ನು ವರುಣಾ ಜನತೆ ಈವರೆಗೆ ಕೈಬಿಟ್ಟಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯಷ್ಟೇ ಇಲ್ಲಿ ಸದಾ ಸ್ಪರ್ಧೆ ಏರ್ಪಡುತ್ತಾ ಬಂದಿದೆ. ಜೆಡಿಎಸ್ ಪಕ್ಷ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಗೆ ಹಾರಿದ್ದ ಎಲ್.ರೇವಣ್ಣಸಿದ್ದಯ್ಯ ಅವರು ಸಿದ್ದರಾಮಯ್ಯನವರ ಪ್ರತಿಸ್ಪರ್ಧಿಯಾಗಿದ್ದರು. ಆಡಳಿತ ವರ್ಗದ ಹಿನ್ನೆಲೆಯ ಎಲ್.ರೇವಣ್ಣ ಸಿದ್ದಯ್ಯನವರನ್ನು ಕ್ಷೇತ್ರದ ಜನತೆ ಕೈಹಿಡಿಯಲಿಲ್ಲ. 18,837 ಮತದಂತರದಲ್ಲಿ ಸಿದ್ದರಾಮಯ್ಯ (71,908) ಗೆದ್ದರು. 2013ರ ಚುನಾವಣೆಯ ವೇಳೆಗೆ ಬಿಜೆಪಿ ಒಡೆದುಹೋಗಿತ್ತು. ಯಡಿಯೂರಪ್ಪನವರು ಕೆಜೆಪಿಯನ್ನು ಕಟ್ಟಿದ್ದು ಬಿಜೆಪಿಯ ಮತಗಳ ವಿಭಜನೆಗೆ ಕಾರಣವಾಯಿತು. ಕೆಜೆಪಿಯಿಂದ ಸ್ಪರ್ಧಿಸಿದ್ದ ಕಾಪು ಸಿದ್ದಲಿಂಗಸ್ವಾಮಿ ಅವರು 54,744 ಮತಗಳನ್ನು ಪಡೆದರಷ್ಟೇ. 84,385 ಮತಗಳನ್ನು ಪಡೆದ ಸಿದ್ದರಾಮಯ್ಯ 29,641 ಮತಗಳ ಬೃಹತ್ ಅಂತರದಲ್ಲಿ ಗೆದ್ದು ರಾಜ್ಯದ ಮುಖ್ಯಮಂತ್ರಿಯೂ ಆದರು. 2018ರಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗೆದ್ದಿದ್ದರು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ವಕ್ಷೇತ್ರಕ್ಕೆ ಮರಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...