ಮತದಾನ ಮಾಡಲು ಮತಗಟ್ಟೆಗೆ ಬಂದ ವ್ಯಕ್ತಿಯೊಬ್ಬರು ಇವಿಎಂ ಕಂಟ್ರೋಲ್ ಯೂನಿಟ್ ಅನ್ನು ಏಕಾಏಕಿ ನೆಲಕ್ಕೆ ಬಡಿದಿರುವ ವಿಡಿಯೋವೊಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಏಪ್ರಿಲ್ 26, 2024ರಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.
ಬಲಪಂಥೀಯ ಎಕ್ಸ್ ಖಾತೆ Megh Updates(@MeghUpdates)ವಿಡಿಯೋ ಹಂಚಿಕೊಂಡಿದ್ದು, “ಚುನಾವಣಾಧಿಕಾರಿಗಳು, ಭದ್ರತಾ ಸಿಬ್ಬಂದಿ ಎಚ್ಚರವಾಗಿರಬೇಕು ಮತ್ತು ಜಾಗರೂಕರಾಗಿರಬೇಕು. ಸೋಲಿನ ಭಯದಿಂದ ಅವರು ಏನು ಬೇಕಾದರೂ ಮಾಡಬಹುದು” ಎಂದು ಬರೆದುಕೊಳ್ಳಲಾಗಿದೆ.
ರಾಷ್ಟ್ರವಾದಿ ಕಿಸಾನ್ (@rashtrawadi_aks)ಎಂಬ ಹಿಂದಿ ಹೆಸರಿನ ಮತ್ತೊಂದು ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಚುನಾವಣಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸೋಲಿನ ಭಯದಿಂದ ಈ ಇಂಡಿ ಅಲಯನ್ಸ್ ನವರು ಏನು ಬೇಕಾದರೂ ಮಾಡಬಹುದು” ಎಂದು ಬರದುಕೊಳ್ಳಲಾಗಿದೆ.
ಫ್ಯಾಕ್ಟ್ಚೆಕ್ : ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೋ ಕುರಿತು ನಾವು ಪರಿಶೀಲನೆ ನಡೆಸಿದಾಗ ಅದು, ಮೇ 10, 2023ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಮೈಸೂರಿನಲ್ಲಿ ನಡೆದ ಘಟನೆಯದ್ದು ಎಂದು ತಿಳಿದು ಬಂದಿದೆ.
ಮೇ 12, 2023ರಂದು ದಿ ಹಿಂದೂ.ಕಾಂ ಈ ಘಟನೆಯ ಕುರಿತು ಸುದ್ದಿ ಪ್ರಕಟಿಸಿತ್ತು. ಸುದ್ದಿಯಲ್ಲಿ “ಮೇ, 10ರಂದು ಮೈಸೂರಿನಲ್ಲಿ ಮತದಾನ ಮಾಡಲು ಬಂದ ವ್ಯಕ್ತಿಯೊಬ್ಬರು ಇವಿಎಂ ಕಂಟ್ರೋಲ್ ಯೂನಿಟ್ಗೆ ಹಾನಿ ಮಾಡಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಮಾನಸಿಕ ಅನಾರೋಗ್ಯ ಇರುವವರು ಎಂದು ಶಂಕಿಸಿದ್ದಾರೆ. ಮತದಾನ ಮಾಡಲು ಬಂದ ವ್ಯಕ್ತಿಯು ಇವಿಎಂ ಕಂಟ್ರೋಲ್ ಯೂನಿಟ್ಗೆ ಹಾನಿ ಮಾಡಿದ ವಿಡಿಯೋ ತಡವಾಗಿ ಬಹಿರಂಗಗೊಂಡಿದ್ದು, ವೈರಲ್ ಆಗಿದೆ” ಎಂದು ಹೇಳಲಾಗಿತ್ತು.
ಇವಿಎಂ ಕಂಟ್ರೋಲ್ ಯೂನಿಟ್ಗೆ ಹಾನಿ ಮಾಡಿದ ವ್ಯಕ್ತಿಯನ್ನು 48 ವರ್ಷದ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿ ಮತಗಟ್ಟೆಯಲ್ಲಿ ಘಟನೆ ನಡೆದಿದೆ ಎಂದು ತಿಳಿಸಲಾಗಿತ್ತು.
ದಿ ಹಿಂದೂ.ಕಾಂ ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಮುತ್ತುರಾಜ್ ಅವರನ್ನು ಮಾತನಾಡಿಸಿದ್ದು, “ಇವಿಎಂ ಕಂಟ್ರೋಲ್ ಯೂನಿಟ್ಗೆ ಹಾನಿ ಮಾಡಿರುವ ವ್ಯಕ್ತಿ ಮಾನಸಿಕ ಅನಾರೋಗ್ಯ ಹೊಂದಿರುವವರಂತೆ ಕಾಣುತ್ತಿದ್ದಾರೆ. ಐಪಿಸಿ ಸೆಕ್ಷನ್ 84ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ದ ಕ್ರಮ ಕೈಗೊಳ್ಳುವ ಮುನ್ನ ಮಾನಸಿಕ ಆರೋಗ್ಯದ ಕುರಿತು ತಪಾಸಣೆ ನಡೆಸುವುದಾಗಿ ತಿಳಿಸಿದ್ದಾರೆ” ಎಂದು ವರದಿಯಲ್ಲಿ ಹೇಳಲಾಗಿತ್ತು.
ಲೋಕಸಭೆ ಚುನಾವಣೆಯ ಮತದಾನದ ದಿನ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೋ ಹಳೆಯದ್ದಾಗಿದ್ದು, ಅದಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಬಲಪಂಥೀಯ ಎಕ್ಸ್ ಖಾತೆಗಳಲ್ಲಿ ಉದ್ದೇಶಪೂರ್ಕವಾಗಿ ಹಳೆಯ ವಿಡಿಯೋ ಹಂಚಿಕೊಂಡು ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ : FACT CHECK : ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತ ಚಲಾಯಿಸಬಹುದೇ?