ಹಿಂಸಾಚಾರದ ನಂತರ ಮಣಿಪುರ ಸಹಜ ಸ್ಥಿತಿಗೆ ಮರಳಲು ಹೆಣಗಾಡುತ್ತಿರುವಾಗ, ಈಶಾನ್ಯ ರಾಜ್ಯದಿಂದ ಮತ್ತೊಂದು ಭಯಾನಕ ವೀಡಿಯೊ ವೈರಲ್ ಆಗಿದೆ, ಇದರಲ್ಲಿ ಬುಡಕಟ್ಟು ಯುವಕನನ್ನು ಕಂದಕದ ಒಳಗೆ ಹಾಕಿ ಬೆಂಕಿ ಹಚ್ಚಿರುವುದು ಕಂಡು ಬಂದಿದೆ.
7 ಸೆಕೆಂಡುಗಳ ವೀಡಿಯೊ ಮಣಿಪುರದ ಹಲವಾರು ವಾಟ್ಸಾಪ್ ಗ್ರೂಪ್ಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ವ್ಯಕ್ತಿಯು ಕಪ್ಪು ಟಿ-ಶರ್ಟ್ ಧರಿಸಿರುವುದು ಆತ ಅಗ್ನಿಯಲ್ಲಿ ದಹನವಾಗುತ್ತಿರುವುದು ಸೆರೆಯಾಗಿದೆ. ವ್ಯಕ್ತಿಯ ಮುಖವನ್ನು ಜಜ್ಜಿ, ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಈ ವ್ಯಕ್ತಿಯನ್ನು ಜೀವಂತವಾಗಿ ದಹಿಸಲಾಗಿದೆಯಾ ಎಂಬ ಬಗ್ಗೆ ಕೂಡ ಸಂಶಯ ಇದೆ. ಆದರೆ ಪ್ರತಿಪಕ್ಷಗಳ INDIA ಒಕ್ಕೂಟ ಈ ಬಗ್ಗೆ ಟೀಕಿಸುವಾಗ ಇದು ಸಜೀವ ದಹನ ಎಂದು ಹೇಳಿದೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬುಡಕಟ್ಟು ವ್ಯಕ್ತಿಯನ್ನು ಕಂದಕಕ್ಕೆ ಹಾಕಿ ಬೆಂಕಿ ಹಚ್ಚಿರುವ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ನಂತರ ಪ್ರತಿಪಕ್ಷಗಳು ತೀವ್ರವಾಗಿ ಪ್ರತಿಕ್ರಿಯಿಸಿವೆ.
ಈ ವೀಡಿಯೊ ಮೇ ತಿಂಗಳ ಆರಂಭದ್ದು ಎಂದು ತಿಳಿದು ಬಂದಿದೆ. ನಾವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕುಕಿ ಸಮುದಾಯದ ವ್ಯಕ್ತಿ ಎಂದು ಗುರುತಿಸಲಾದ ವ್ಯಕ್ತಿಯ ವಿಡಿಯೋವನ್ನು ಅಕ್ಟೋಬರ್ 8ರಂದು ಹಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾಗಿದೆ.
INDIA ಒಕ್ಕೂಟ ಎಕ್ಸ್ನಲ್ಲಿ ವೀಡಿಯೊ ಕ್ಲಿಪ್ ಹಂಚಿಕೊಂಡು ಈ ಕುರಿತು ಪ್ರತಿಕ್ರಿಯಿಸಿದ್ದು, ಇದು ಮಣಿಪುರ! ಮಣಿಪುರದಲ್ಲಿ ಕುಕಿ ಬುಡಕಟ್ಟು ಯುವಕನ ಸಜೀವ ದಹನವಾಗಿದೆ. ಈ ಘಟನೆ ಅತ್ಯಂತ ದುಃಖಕರ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಮೋದಿ ಜಿ ನೆರೆಯ ದೇಶದ ಬಗ್ಗೆ ದುಃಖ ವ್ಯಕ್ತಪಡಿಸುತ್ತಿದ್ದಾರೆ ಆದರೆ ಮಣಿಪುರವನ್ನು ಉಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದೆ.
ಇದನ್ನು ಓದಿ: ಇಸ್ರೇಲ್ ಸಂಘರ್ಷ: ಪ್ಯಾಲೆಸ್ತೀನಿಯರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್